ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?
ಮಹಾನಗರಿ ಬೆಂಗಳೂರಲ್ಲಿ ಹೊಟೇಲ್ ಗಳಿಗೇನು ಬರವೇ? ಎಡವಿ ಬಿದ್ದರೊಂದು ಸಿಗುತ್ತೆ ಹೊಟೇಲು! ಅಂಥ ಎಷ್ಟೋ ಹೊಟೇಲ್ ಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಮಲ್ಲೇಶ್ವರದ ಸಿಟಿಆರ್!
ಬೆಂಗಳೂರಿನ ಹೃದಯಭಾಗದಲ್ಲಿರುವ ಮಲ್ಲೇಶ್ವರದ ಶ್ರೀಸಾಗರ ಅಥವಾ ಸಿಟಿಆರ್ (ಸೆಂಟ್ರಲ್ ಟಿಫಿನ್ ರೂಮ್) ಹೊಟೇಲ್ ನ ಬೆಣ್ಣೆ ದೋಸೆ ಮತ್ತು ಮಂಗಳೂರು ಬಜ್ಜಿ ರುಚಿ ಸವಿದವನೇ ಬಲ್ಲ! ಕನಿಷ್ಠ ಅರ್ಧಗಂಟೆಯಾದರೂ ಕಾಯಬೇಕಲ್ಲ ಎಂಬ ಬೇಸರವನ್ನು ಬಿಟ್ಟರೆ ಇಲ್ಲಿನ ಬೆಣ್ಣೆ ದೋಸೆ ಬಗ್ಗೆ ಎರಡು ಮಾತಿಲ್ಲ. ಆಗಾಗ ಬೆಂಗಳೂರಿಗೆ ಬಂದು ಹೋಗುವ ಪರವೂರಿನವರ ಪ್ರವಾಸದ ಪಟ್ಟಿಯ ಒಂದು ಗಂಟೆಯಾದರೂ ಸಿಟಿಆರ್ ಗಾಗಿ ಮೀಸಲಾಗಿರುತ್ತದೆ!
ಚಪ್ಪಲಿ ಕಳಚಿಟ್ಟು ಊಟಕ್ಕೆ ಬನ್ನಿ, ಇದು ಮೈಸೂರಿನ ಮಧ್ವ ಭವನ!
ಮಲ್ಲೇಶ್ವರಂ ಸರ್ಕಲ್ ಗೆ(ಮಾರ್ಗೋಸಾ ರಸ್ತೆ) ಎಡತಾಕಿಕೊಂಡಿರುವ ಸಿಟಿಆರ್ ಏಳನೇ ಅಡ್ಡರಸ್ತೆಯ ಕಾರ್ನರ್ ನಲ್ಲೇ ಇದೆ. ಸದಾ ಕಿಕ್ಕಿರಿದು ತುಂಬಿರುವ ಜನರಿಂದಾಗಿ ಹೊಟೇಲ್ ತುಂಬಾ ಚಿಕ್ಕದೇನೋ ಅನ್ನಿಸೋದು ಸುಳ್ಳಲ್ಲ!
ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಬೆಣ್ಣೆ ದೋಸೆ!
ಶ್ರೀಸಾಗರ ಹೊಟೇಲ್ ಗೆ ಹೋಗಿ ಮಸಾಲ್ ದೋಸೆ ತಿನ್ನದೆ ಬಂದರೆ ಅದೊಂದು ದುರಂತವೇ ಸರಿ! ಮೇಲೆಲ್ಲ ಬೆಣ್ಣೆ ಹರವಿದ, ಕೆಂಪು ಕೆಂಪಾದ ಕ್ರಿಸ್ಪಿ ದೋಸೆಯನ್ನು ನಾಲಿಗೆ ಮೇಲಿಟ್ಟರೆ ಸಿಟಿಆರ್ ಗೆ ಸಿಟಿಆರ್ ಮಾತ್ರವೇ ಸಾಟಿ ಎನ್ನಿಸಲಿಕ್ಕೆ ಸಾಕು! ಅಷ್ಟರ ಮಟ್ಟಿಗೆ ರುಚಿ, ಶುಚಿ.
ದೋಸೆಯೊಂದಿಗೆ ಹುರಿಗಡಲೆ ಬೆರೆಸಿದ ಕಾಯಿ ಚಟ್ನಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿದ ಹಸಿರು ಚಟ್ನಿ ಒಳ್ಳೆ ಕಾಂಬಿನೇಶನ್ ಅದರೊಟ್ಟಿಗೆ ರುಚಿ ರುಚಿ ಆಲೂಗಡ್ಡೆ ಪಲ್ಯ! ಒಂದು ದೋಸೆಗೆ 50-60 ರೂಪಾಯಿ ತೆತ್ತರೂ ಜೇಬಿಗೆ ಮೋಸವಾಗಿಲ್ಲ ಅನ್ನಿಸೋದು ಸಹಜ.
ಯಮ್ಮಿ ಹಮ್ಮಿ ಮಂಗಳೂರು ಬಜ್ಜಿ!
ಆರ್ಡರ್ ಮಾಡಿದ ನಂತರ ದೋಸೆಗಾಗಿ ಕನಿಷ್ಠ 10 ನಿಮಿಷವಾದರೂ ಕಾಯಬೇಕು. ಅಷ್ಟು ಹೊತ್ತಿನ ಬಾಯಿ ಖರ್ಚಿಗಂತ ಮಂಗಳೂರು ಬಜ್ಜಿಗೆ ಆರ್ಡರ್ ಮಾಡಿದರೆ ಮುಗೀತು. ಎರಡು ನಿಮಿಷದೊಳಗೆ ಟೇಬಲ್ ಮೇಲೆ ಬಂದು ಕೂರುತ್ತೆ ಐದು ಮಂಗಳೂರು ಬಜ್ಜಿ ತುಂಬಿದ ಪ್ಲೇಟು! ಗೋಲಿ ಬಜೆ ಎಂದೂ ಕರೆಯುವ ಈ ಖಾದ್ಯಕ್ಕೂ ಅಷ್ಟೇ, ಸಿಟಿ ಆರ್ ನಲ್ಲಿ ವಿಶೇಷ ರುಚಿ!
ಶಿವಮೊಗ್ಗದ ಮೀನಾಕ್ಷಿ ಭವನ್ ಪಡ್ಡು, ಕಡುಬು ಸವಿಯದ ಜೀವ ವ್ಯರ್ಥವೋ!
ಅರ್ಧಗಂಟೆ ಕಾದಿದ್ದಕ್ಕೆ ಮೋಸವಿಲ್ಲ!
ಶ್ರೀಸಾಗರದ ದೋಸೆಯ ಗಮ್ಮತ್ತು ತಿಳಿಯಬೇಕಂದ್ರೆ ಕನಿಷ್ಠ ಅರ್ಧ ಗಂಟೆಯಾದರೂ ಕ್ಯೂನಲ್ಲಿ ನಿಂತು ಕಾಯಲೇಬೇಕು! ಆದರೆ ಅಷ್ಟು ಹೊತ್ತು ಕಾದಿದ್ದೂ ಸಾರ್ಥಕವಾಯ್ತು ಅನ್ನಿಸೋದು ಹಸಿರು ಚಟ್ನಿ ಮತ್ತು ಆಲೂಗಡ್ಡೆ ಪಲ್ಯ ಮೆತ್ತಿದ ದೋಸೆಯ ತುತ್ತೊಂದು ನಾಲಿಗೆ ಮೇಲೆ ಬಿದ್ದಾಗಲೇ! ರವಾ ಇಡ್ಲಿ, ಮದ್ದೂರು ಒಡೆ ಕಾಫಿ, ಟೀ ಸೇರಿದಂತೆ ಉಳಿದೆಲ್ಲ ಹೊಟೇಲ್ ಗಳಲ್ಲಿರುವಂಥದೇ ಸೌತ್ ಇಂಡಿಯನ್ ಖಾದ್ಯಗಳೆಲ್ಲ ಸಿಕ್ಕರೂ, ಜನರು ಇಲ್ಲಿಗೆ ಬರುವುದೇ ದೋಸೆ ಮತ್ತು ಮಂಗಳೂರು ಬಜ್ಜಿಗಾಗಿ!
ಹೆಸರು ಬರೆಸಿ, ಶಾಪಿಂಗ್ ಗೆ ಹೋಗಿಬನ್ನಿ!
ಹೊಟೇಲ್ ಬೆಳಿಗ್ಗೆ 7.30 ಕ್ಕೆ ತೆರೆದರೆ 12:30 ಕ್ಲೋಸ್ ಆಗುತ್ತೆ. ಅಲ್ಲಿಯವರೆಗೂ ಜನರಿಗೇನು ಬರವಿಲ್ಲ. ಮತ್ತೆ ಸಂಜೆ 4 ಗಂಟೆಗೆ ತೆರೆದರೆ ವೀಕೆಂಡ್, ವೀಕ್ ಡೇ ಎಂಬ ಭೇದವಿಲ್ಲದೆ 9:00, 9:30 ರವರೆಗೆ ಕಿಕ್ಕಿರಿವ ಜನ. ವೀಕೆಂಡ್ ಆದರೆ ಮತ್ತಷ್ಟು ಹೆಚ್ಚು! ಈ ಹೊಟೇಲ್ ಗೆ ಬರುವವರು ಕಾಯುವ ತಾಳ್ಮೆ ಇಟ್ಟುಕೊಂಡು ಬಂದರೆ ಒಳಿತು. ಹೊಟೇಲ್ ತೆರೆಯುವ ಹೊತ್ತಿಗೆ ಬಂದರೆ ಕಾಯುವ ಪ್ರಮೇಯವಿರುವುದಿಲ್ಲ. ಆದರೆ ಎಷ್ಟೋ ಬಾರಿ ಹೊಟೇಲ್ ತೆರೆಯುವ ಮೊದಲೇ ಅದರ ಮುಂದೆ ಜನ ಕ್ಯೂ ನಿಂತಿರುತ್ತಾರೆ! ಹೊಟೇಲ್ ಗೆ ತೆರಳಿ ನಿಮ್ಮ ಹೆಸರನ್ನು ಬರೆಸಿ ಒಂದು ರೌಡ್ 8th ಕ್ರಾಸ್ ನಲ್ಲಿ ಶಾಪಿಂಗ್ ಮಾಡಿಕೊಂದು ಬರುವ ಹೊತ್ತಿಗೆ ನಿಮ್ಮ ಸರದಿ ಬಂದಿರುತ್ತದೆ! ನಿಂತು ಕಾಯುವ ಬೇಸರವನ್ನು ಬಿಟ್ಟರೆ ಬೆಣ್ಣೆ ದೋಸೆ ಮಟ್ಟಿಗೆ ಸಿಟಿಆರ್ ಬೆಂಗಳೂರಿನಲ್ಲಿ ಅಗ್ರಸ್ಥಾನ ಕಾಯ್ದುಕೊಂದಿದೆ ಎಂದರೆ ತಪ್ಪಿಲ್ಲ.
ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?
ಭೇಷ್ ಎಂದಿದ್ದರು ಮೈಸೂರು ಮಹಾರಾಜರು!
ಈ ಹೊಟೇಲ್ ಅನ್ನು 1920 ರ ದಶಕದಲ್ಲಿ ವೈ.ವಿ ಸುಬ್ರಹ್ಮಣ್ಯ ಮತ್ತು ಅವರ ಸಹೋದರರಾದ ವೈ ವಿ ಶ್ರೀಕಂಠೇಶ್ವರನ್, ವೈ ವಿ ಕೃಷ್ಣ ಐಯರ್, ವೈ ವಿ ರಾಮಚಂದ್ರಮ್ ಅವರು ಆರಂಭಿಸಿದರು. ಕೋಲಾರ ಮೂಲದವರಾದ ಈ ಸಹೋದರರು ಆರಂಭಿಸಿದ ವಿಭಿನ್ನ ಶೈಲಿಯ ಬಣ್ಣೆ ಮಸಾಲೆ ದೋಸೆಯನ್ನು ಮೈಸೂರಿನ ಮಹಾರಾಜರು ಸಹ ಮೆಚ್ಚಿಕೊಂಡಿದ್ದರು ಎಂಬ ಉಲ್ಲೇಖವಿದೆ. ಒಂದು ಕಾಲದಲ್ಲಿ ಪ್ರಸಿದ್ಧ ಸಾಹಿತಿಗಳ ಚರ್ಚೆಯ ಸ್ಥಳವಾಗಿ ಸಿಟಿಆರ್ ಹೆಸರುವಾಸಿಯಾಗಿತ್ತು.