12 ಕೋಟಿ ಕಾರಿನಿಂದ ಸುದ್ದಿಯಾದ ಎಂಟಿಬಿ ನಾಗರಾಜ್ ಯಾರು?
"ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ" ಎಂದು ಹೇಳಿಕೆ ಕೊಟ್ಟಿದ್ದ ಎಂಟಿಬಿ ನಾಗರಾಜ್ ಸದ್ಯ ಕರ್ನಾಟಕದ ಅನರ್ಹಗೊಂಡ ಶಾಸಕರು. ಸಾಲದ್ದಕ್ಕೆ ಕಾಂಗ್ರೆಸ್ ಪಕ್ಷದಿಂದಲೂ ಉಚ್ಛಾಟನೆಯಾಗಿದ್ದಾರೆ. ಹಾಗಂತ ಅವರು ತೆರೆಮರೆಗೆ ಸರಿಯುವ ಸನ್ನಾಹದಲ್ಲಿ ಇದ್ದಂತೆ ಕಾಣಿಸುತ್ತಿಲ್ಲ.
ಹೊಸಕೋಟೆ ಕ್ಷೇತ್ರದ ಈ ಅನರ್ಹ ಶಾಸಕರು ಬುಧವಾರ ರಾಜ್ಯದ ಸುದ್ದಿ ಮಾಧ್ಯಮಗಳ ಕೇಂದ್ರ ಬಿಂದು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ಕೊಡಲು ಬಿ. ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಕ್ಕೆ 12 ಕೋಟಿ ಕೊಟ್ಟು ಖರೀದಿಸಿರುವ ಹೊಸ ಕಾರಿನಲ್ಲಿ ಬಂದಿಳಿದರು.
ದುಬಾರಿ ಕಾರು ಖರೀದಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್
69 ವರ್ಷದ ಎಂಬಿಟಿ ನಾಗರಾಜ್ ವಿಶ್ವದ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರು ಖರೀದಿಯನ್ನೂ ಇದೇ ವೇಳೆಯಲ್ಲಿ ಮಾಡಿ ಮುಗಿಸಿದ್ದಾರೆ. ಅವರು ಶಕ್ತಿಸೌಧಕ್ಕೆ ಬಂದ ಗತ್ತು ಹೇಗಿತ್ತು ಎಂದರೆ, ಮುಖ್ಯಮಂತ್ರಿಗಳ ಕಚೇರಿಯಲ್ಲಿದ್ದವರು ಕೆಳಗೆ ಬಂದು ಕಾರಿನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಎಂಟಿಬಿ ಎದೆ ಬಗೆದು ನೋಡೋಕೆ ಆಗುತ್ತದೆಯೇ? : ಸಿದ್ದರಾಮಯ್ಯ
"ಹಲವು ದಿನದಿಂದ ರೋಲ್ಸ್ ರಾಯಲ್ಸ್ ಕಾರು ಖರೀದಿ ಮಾಡಬೇಕು ಎಂಬ ಆಸೆ ಇತ್ತು. ಈಗ ಅದನ್ನು ಖರೀದಿ ಮಾಡಿದ್ದಾನೆ" ಎಂದು ಮಾಧ್ಯಮಗಳಿಗೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್ ಯಡಿಯೂರಪ್ಪ ಭೇಟಿಯಾಗಿ 1 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದಾರೆ.
ಶಿಷ್ಯರ ವಿರುದ್ಧ ಸಿದ್ದರಾಮಯ್ಯ ಸಮರ, ಶಾಸಕರ ಅನರ್ಹತೆಗೆ ಮನವಿ!
ಕುರುಬ ಸಮುದಾಯಕ್ಕೆ ಸೇರಿದ ಎಂಟಿಬಿ ನಾಗರಾಜ್ ಮೂರು ಬಾರಿ ಶಾಸಕರಾಗಿ ಹೊಸಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಅವರು ಈಗ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
2004, 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಂಟಿಬಿ ನಾಗರಾಜ್ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು. ಆದರೆ, ಬದಲಾದ ರಾಜಕೀಯ ಚಿತ್ರಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರ್ಕಾರವೇ ಪತನಗೊಂಡು ಸಚಿವ ಸ್ಥಾನವೂ ಹೋಯಿತು.
ಇಟ್ಟಿಗೆ ಕಾರ್ಖನೆ ಮಾಲೀಕರಾಗಿದ್ದ ಎಂಬಿಟಿ ನಾಗರಾಜ್ ರಿಯಲ್ ಎಸ್ಟೇಟ್ ಉದ್ಯಮಿ. 2018ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ 1,115 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದರು. 9ನೇ ತರಗತಿ ವ್ಯಾಸಂಗ ಮಾಡಿರುವ ಎಂಟಿಬಿ ನಾಗರಾಜ್ ರಾಜ್ಯದ ಶ್ರೀಮಂತ ಶಾಸಕರಲ್ಲಿ ಒಬ್ಬರು.
2013ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಎಂಟಿಬಿ ನಾಗರಾಜ್ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಾಗರಾಜ್ ಪುತ್ರ ನಿತಿನ್ ಪುರುಷೋತ್ತಮ್ ಮುಂದಿನ ಚುನಾವಣೆಗೆ ನಿಲ್ಲಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
"ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ" ಎಂದು ಹೇಳಿದ್ದ ಎಂಟಿಬಿ ನಾಗರಾಜ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಆದರೆ, ಅವರ ಸಂಧಾನಕ್ಕೂ ಬಗ್ಗದೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು.
ಇದೀಗ ಅಧಿಕಾರವನ್ನೂ ಕಳೆದುಕೊಂಡು, ಅನರ್ಹತೆಯ ಕಳಂಕವನ್ನೂ ಕಟ್ಟಿಕೊಂಡು ಓಡಾಡುತ್ತಿರುವ ಎಂಟಿಬಿ ಬಿಳಿ ಬಣ್ಣ ರೋಲ್ಸ್ರಾಯ್ನಲ್ಲಿ ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ.