ಬಿಜೆಪಿಗೆ ಸೆಡ್ಡು ಹೊಡೆದು ಹಣ ಬಲವನ್ನು ಮಣಿಸಿದ ಶರತ್ ಬಚ್ಚೇಗೌಡ ಯಾರು?
Recommended Video
ಹಣ ನೀರಿನಂತೆ ಹರಿದ ಹೊಸಕೋಟೆ ಉಪಚುನಾವಣೆಯಲ್ಲಿ ಅಂತಿಮವಾಗಿ 'ಸ್ವಾಭಿಮಾನ' ಗೆದ್ದಿದೆ. ಬೃಹತ್ ಪಕ್ಷ ಬಿಜೆಪಿಯನ್ನು, ಸಾವಿರ ಕೋಟಿಗಳ ಒಡೆಯನನ್ನು ಎದುರು ಹಾಕಿಕೊಂಡು 37 ರ ಹರೆಯದ ಯುವಕ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದಾರೆ.
1982 ರಲ್ಲಿ ಹೊಸಕೋಟೆಯ ಬೆಂಡಿಗಾನಹಳ್ಳಿಯಲ್ಲಿ ಜನಿಸಿದ ಶರತ್ ಬಚ್ಚೇಗೌಡ ರಾಜಕೀಯ ಹಿನ್ನೆಲೆ ಉಳ್ಳವರೇ. ಅವರ ತಂದೆ ಬಿ.ಎನ್.ಬಚ್ಚೇಗೌಡ ಮಾಜಿ ಸಚಿವರು, ಹಾಲಿ ಸಂಸದರು. ಬಿಜೆಪಿಯ ಹಿರಿಯ ನಾಯಕರು.
ಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲ
ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೂ ರಾಜಕೀಯವನ್ನು ತಾಕದೇ, ಶಿಕ್ಷಣ, ಉದ್ಯೋಗ, ಕುಟುಂಬ ವ್ಯವಹಾರ ಎಂದೇ ಇದ್ದ ಶರತ್ ಬಚ್ಚೇಗೌಡ ರಾಜಕೀಯಕ್ಕೆ ಸಕ್ರಿಯವಾಗಿ ಪಾದಾರ್ಪಣೆ ಮಾಡಿದ್ದು ಎರಡು-ಮೂರು ವರ್ಷದ ಹಿಂದೆಯಷ್ಟೆ.
ಓದಿನಲ್ಲಿ ಪ್ರತಿಭಾಶಾಲಿಯಾಗಿದ್ದ ಶರತ್ ಬಚ್ಚೇಗೌಡ, ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ನಂತರ ಉನ್ನತ ಶಿಕ್ಷಣವನ್ನು ಅಮೆರಿಕದ ಮಿಷಿಗನ್ ವಿಶ್ವವಿದ್ಯಾನಿಲಯದಲ್ಲಿ 2006 ರಲ್ಲಿ ಮುಗಿಸಿದರು.
ಕುಟುಂಬ ವ್ಯವಹಾರ ನೋಡಿಕೊಂಡಿದ್ದ ಶರತ್ ಬಚ್ಚೇಗೌಡ
ಬೆಂಗಳೂರಿಗೆ ವಾಪಸ್ಸಾದ ಶರತ್ ಬಚ್ಚೇಗೌಡ ರಾಜಕೀಯದ ಕಡೆಗೆ ಸುಳಿಯದೇ ಕೆಲವು ಸಂಸ್ಥೆಗಳಲ್ಲಿ ಸಿಇಓ ಆಗಿ, ಮ್ಯಾನೆಜರ್ ಆಗಿ ಕೆಲಸ ಮಾಡಿ, ನಂತರ ತಮ್ಮದೇ ಕುಟುಂಬದ ವ್ಯವಹಾರಗಳನ್ನು ಸಂಭಾಳಿಸತೊಡಗಿದರು. ತಂದೆ ಬಿ.ಎನ್.ಬಚ್ಚೇಗೌಡ ಅವರು 2014 ರಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದಾಗ ಸ್ವಲ್ಪ ಸನಿಹದಿಂದ ರಾಜಕೀಯವನ್ನು ಗಮನಿಸಿದರು. ಆಗಲೂ ನೇರವಾಗಿ ಪ್ರಚಾರದಲ್ಲಾಗಲಿ, ಇನ್ನಿತರೆ ಕಾರ್ಯಗಳಲ್ಲಿ ಭಾಗವಹಿಸಿರಲಿಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಾದಾರ್ಪಣೆ
ಒಂದೂವರೆ ವರ್ಷದ ಹಿಂದೆ ನಡೆದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜು ಗೆಲುವಿನ ಓಟಕ್ಕೆ ತಡೆ ಒಡ್ಡಲು ಯಡಿಯೂರಪ್ಪ ಶರತ್ ಬಚ್ಚೇಗೌಡ ರನ್ನು ಆಯ್ಕೆ ಮಾಡಿದರು. ಟಿಕೆಟ್ ದೊರಕುವಲ್ಲಿ ಬಿ.ಎನ್.ಬಚ್ಚೇಗೌಡ ಪಾತ್ರವೂ ಇತ್ತೆಂಬುದರಲ್ಲಿ ಅನುಮಾನವಿಲ್ಲ. ಶರತ್ ಬಚ್ಚೇಗೌಡ ಬಿಟ್ಟರೆ ಬಿಜೆಪಿಗೆ ಬೇರೆ ಆಯ್ಕೆಯೂ ಆಗ ಇರಲಿಲ್ಲ.
ಹಣದ ಬದಲಿಗೆ ಸ್ವಾಭಿಮಾನಕ್ಕೆ ಮತ ನೀಡಿದ ಹೊಸಕೋಟೆ ಮತದಾರರು
ಸಾವಿರ ಕೋಟಿಗಳ ಒಡೆಯನ ವಿರುದ್ಧ ಶರತ್ ಬಚ್ಚೇಗೌಡ
2018 ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದ ಶರತ್ ಬಚ್ಚೇಗೌಡ ಹಿರಿಯ ರಾಜಕಾರಿಣಿ ಕೋಟ್ಯಧಿಪತಿ ಎಂಟಿಬಿ ನಾಗರಾಜ್ ಗೆ ಭಾರಿ ಪೈಪೋಟಿ ನೀಡಿದ್ದರು. ಕೇವಲ 7597 ಮತಗಳ ಅಂತರದಿಂದ ಸೋತ ಶರತ್ ಯುವಕರನ್ನು ತಮ್ಮತ್ತ ಸೆಳೆಯಲು ಯಶಸ್ವಿ ಆಗಿದ್ದರು.
ಯಡಿಯೂರಪ್ಪ ಅವರ ನೆಚ್ಚಿನ ಯುವ ನಾಯಕ ಆಗಿದ್ದ ಶರತ್
ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಭಾರಿ ಪೈಪೋಟಿ ನೀಡಿದ ಶರತ್ ಬಚ್ಚೇಗೌಡ ಯಡಿಯೂರಪ್ಪ ಮೆಚ್ಚಿನ ಯುವ ನಾಯಕನಾಗಿಯೂ ಗುರುತಿಸಿಕೊಂಡಿದ್ದರು. ಅಷ್ಟೆ ಅಲ್ಲ ಬಿಜೆಪಿ ಯುವ ಮೋರ್ಚದ ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು.
ಉಪ ಚುನಾವಣೆ; ಜೆಡಿಎಸ್ ಸೋಲಿಗೆ ಕಾರಣಗಳೇನು?
ರಾಜಕೀಯ ಎದುರಾಳಿಯೊಂದಿಗೆ ಮಿತ್ರತ್ವಕ್ಕೆ ಒಲ್ಲೆ ಎಂದ ಶರತ್
ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಯಡಿಯೂರಪ್ಪ ಅವರು ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬದ ರಾಜಕೀಯ ಎದುರಾಳಿ ಎಂಟಿಬಿ ಕೈಗಿತ್ತರು. ದಶಕಗಳಿಂದ ರಾಜಕೀಯ ಹಗೆತನ ಸಾಧಿಸಿಕೊಂಡು ಬಂದಿದ್ದ ವ್ಯಕ್ತಿಯೊಡನೆ ಸ್ನೇಹ ಸಾಧ್ಯವಾಗದೆ ಶರತ್ ಬಚ್ಚೇಗೌಡ ಪಕ್ಷೇತರವಾಗಿ ಕಣಕ್ಕೆ ಇಳಿದರು.
ನಾಯಕರ ಮಾತು ಕೇಳದೆ 'ಸ್ವಾಭಿಮಾನ' ಮೆರೆದ ಶರತ್
ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ನಾಯಕರು ಶರತ್ ಬಚ್ಚೇಗೌಡ ಅವರೊಂದಿಗೆ ಸಂಧಾನದ ಪ್ರಯತ್ನ ಮಾಡಿದರಾದರೂ ಯಾವುದಕ್ಕೂ ಬಗ್ಗದೆ. 'ಸ್ವಾಭಿಮಾನ' ಹೋರಾಟ ಪ್ರಾರಂಭಿಸಿ ಕ್ಷೇತ್ರದಲ್ಲಿ ಯುವ ಅಲೆ ಎಬ್ಬಿಸಿದರು.
ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ; ಯಾರು, ಏನು ಹೇಳಿದರು?
ಕಠಿಣ ಸ್ಪರ್ಧೆ ಒಡ್ಡಿದ್ದರೂ ಗೆದ್ದು ಬಂದ ಶರತ್
ಎದುರಾಳಿ ಅಭ್ಯರ್ಥಿ ಎಂಟಿಬಿ ನಾಗರಾಜು ಕೋಟ್ಯಂತರ ಹಣ ಖರ್ಚು ಮಾಡಿ, ಹಳೆಯ ರಾಜಕೀಯ ಪಟ್ಟುಗಳನ್ನೆಲ್ಲಾ ಬಳಸಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದರೂ, ಶರತ್ ಬಚ್ಚೇಗೌಡ ಪ್ರಚಾರದ ವೇಳೆಯಲ್ಲೆಲ್ಲಾ ಮತದಾರರ 'ಸ್ವಾಭಿಮಾನ' ಬಡಿದೆಬ್ಬಿಸುವ ಮಾತುಗಳಾಡಿ ಮತದಾರರನ್ನು ಸೆಳೆದರು. ಅದರ ಫಲಿತವಾಗಿಯೇ ಇಂದು ಗೆಲುವಿನ ನಗೆ ಬೀರಿದ್ದಾರೆ.
ಕುತೂಹಲ ಕೆರಳಿಸಿದ ಶರತ್ ಮುಂದಿನ ನಡೆ
ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜು ವಿರುದ್ಧ ಶರತ್ ಬಚ್ಚೇಗೌಡ 11484 ಮತಗಳ ಅಂತರದಿಂದ ಜಯಿಸಿದ್ದಾರೆ. ಆ ಮೂಲಕ ಈ ವಿಧಾನಸಭೆಯ ಎರಡನೇ ಪಕ್ಷೇತರ ಶಾಸಕ ಆಗಿದ್ದಾರೆ. ಅವರ ಮುಂದಿನ ನಡೆ ಬಗ್ಗೆ ಕುತೂಹಲ ಹುಟ್ಟುಕೊಂಡಿದ್ದು, ಯಾವುದಾದರೂ ರಾಜಕೀಯ ಪಕ್ಷದ ಆಶ್ರಯ ಪಡೆದುಕೊಳ್ಳುತ್ತಾರೋ ಅಥವಾ ಪಕ್ಷೇತರವಾಗಿಯೇ ಉಳಿಯುತ್ತಾರೆಯೋ ಕಾದು ನೋಡಬೇಕಿದೆ.