ಮೈಸೂರಿನ ಗಾಣಗಳ ಇತಿಹಾಸದಲ್ಲೊಂದು ಸುತ್ತು...
ಹೊರಗಿನಿಂದ ಬದುಕು ಕಟ್ಟಿಕೊಳ್ಳಲು ಬಂದವರಿಗೆ ಮೈಸೂರು ನೆಲೆ ನೀಡಿದೆ. ಇವತ್ತಿಗೂ ಇಲ್ಲಿ ಹೊರಜಿಲ್ಲೆ, ರಾಜ್ಯ, ವಿದೇಶಗಳ ಜನರು ಕಾಣಸಿಗುತ್ತಾರೆ. ಹಿಂದಿನ ಕಾಲದಲ್ಲಿ ರಾಜರ ಆಡಳಿತವಿದ್ದ ವೇಳೆ ಹಲವು ರೀತಿಯ ಜನರು ತಮ್ಮ ಕುಲಕಸುಬಿಗೆ ಆಸರೆಯನ್ನರಸಿ ಮೈಸೂರಿಗೆ ಬಂದಿದ್ದು, ಹಲವರು ತಮ್ಮ ಕಸುಬು ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹವರ ಪೈಕಿ ಎಣ್ಣೆ ತೆಗೆಯುವ ಗಾಣಿಗ ಸಮುದಾಯವೂ ಒಂದಾಗಿದೆ.
ಸುಮಾರು ಎಂಬತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ತಮಿಳುನಾಡಿನ ಈರೋಡ್ ಜಿಲ್ಲೆಯ ಚಿತ್ತೋಡ್ ನಿಂದ ಸುಮಾರು 40 ಕುಟುಂಬಗಳು ಮೈಸೂರಿಗೆ ವಲಸೆ ಬಂದಿದ್ದವು. ಎಲ್ಲ ಕುಟುಂಬಗಳೂ ಎಣ್ಣೆ ತೆಗೆಯುವ ಕಾಯಕ ಮಾಡುತ್ತಿದ್ದವು. ತಮ್ಮ ಬದುಕಿಗೆ ಅನುಕೂಲವಾಗುವಂತೆ ಈ ಕುಟುಂಬಗಳು ಅಗ್ರಹಾರ, ಸುಬ್ಬರಾಯನ ಕೆರೆ ಆಸುಪಾಸಿನಲ್ಲಿ ಗಾಣಗಳನ್ನು ನಿರ್ಮಿಸಿ ಬದುಕು ನಡೆಸಲು ಆರಂಭಿಸಿದವು. ಮುಂದೆ ಓದಿ...
ಎಣ್ಣೆಯನ್ನು ಗಾಣದಿಂದ ತೆಗೆಯುತ್ತಿದ್ದರು
ಆ ಕಾಲದಲ್ಲಿ ಸರ್ವ ರೀತಿಯಲ್ಲೂ ಸಮೃದ್ಧವಾಗಿದ್ದ ಮೈಸೂರಿನಲ್ಲಿ ಎಣ್ಣೆಯನ್ನು ಗಾಣದಿಂದಲೇ ತೆಗೆಯಲಾಗುತ್ತಿತ್ತು. ನಗರದಲ್ಲಿ ಬೀದಿ ದೀಪವಾಗಿ ಎಣ್ಣೆಯ ದೀಪಗಳನ್ನು ಬಳಸಲಾಗುತ್ತಿತ್ತು. ಇದಾದ ನಂತರ ಅಡುಗೆ ಸೇರಿದಂತೆ ಇತರೆ ಉಪಯೋಗಗಳಿಗೆ ಗಾಣಗಳನ್ನು ಬಳಸಿ ಎಣ್ಣೆ ತೆಗೆಯಲಾಗುತ್ತಿತ್ತು. ಹೀಗಾಗಿ ಮೈಸೂರಿನ ಬೀದಿಗಳಲ್ಲಿ ಎಲ್ಲೆಂದರಲ್ಲಿ ಗಾಣ ಹೊತ್ತು ತಿರುಗುವ ಎತ್ತುಗಳು, ಎಣ್ಣೆ ತೆಗೆಯುವಲ್ಲಿ ನಿರತರಾದ ಹೆಂಗಸರು, ಗಂಡಸರು ಕಂಡು ಬರುತ್ತಿದ್ದರು.
ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ಒಡ್ಡಿದ ಅರಿವು ಶಾಲೆ
ಕಾರ್ಖಾನೆಗಳು ಹುಟ್ಟಿಕೊಂಡವು
ಆಧುನಿಕತೆ ಮುಂದುವರೆದಂತೆಲ್ಲ ಗಾಣಗಳು ಒಂದೊಂದಾಗಿ ಮುಚ್ಚುತ್ತಾ ಹೋದವು. ಇತ್ತೀಚೆಗಿನ ವರ್ಷಗಳವರೆಗೂ ನಗರದ ಹೃದಯ ಭಾಗದ ಶಾಂತಲಾ ಚಿತ್ರಮಂದಿರ ಬಳಿಯಲ್ಲಿ ಗಾಣವೊಂದು ಪಳೆಯುಳಿಕೆಯಾಗಿ ತಿರುಗುತ್ತಿತ್ತು. ಈಗ ಎಣ್ಣೆ ತೆಗೆಯಲು ಕಾರ್ಖಾನೆಗಳು ಹುಟ್ಟಿಕೊಂಡಿವೆ. ಆದ್ದರಿಂದ ಗಾಣಗಳ ಅವಶ್ಯಕತೆ ಜನರಿಗೆ ಕಾಣುತ್ತಿಲ್ಲ. ಜತೆಗೆ ಗಾಣ ನಡೆಸುವವರಿಗೂ ಯಾವುದೇ ರೀತಿಯ ಆದಾಯಗಳು ಬರುತ್ತಿಲ್ಲ.
ಅವತ್ತಿನ ದಿನಮಾನದಲ್ಲಿ ಎಣ್ಣೆಯನ್ನು ಗಾಣಗಳ ಮೂಲಕವೇ ತೆಗೆಯಲಾಗುತ್ತಿತ್ತು. ಹಾಗಾಗಿ ಕೆಲವರು ತಮ್ಮ ಹೊಟ್ಟೆಪಾಡನ್ನು ಗಾಣ ನಡೆಸುವುದರೊಂದಿಗೆ ಕಳೆಯುತ್ತಿದ್ದರು. ಇದರಲ್ಲಿ ಶಾಂತಲ ಚಿತ್ರಮಂದಿರದ ಬಳಿಯಿದ್ದ ಗಾಣವೂ ಒಂದಾಗಿತ್ತು.
ಗಾಣಗಳಿಗೆ ಏಳೆಂಟು ದಶಗಳ ಇತಿಹಾಸ
ಈ ರಸ್ತೆಯ ಮಾರ್ಗವಾಗಿ ತೆರಳುತ್ತಿದ್ದವರಿಗೆ ಗಾಣ ಹೊತ್ತು ತಿರುಗುವ ಎತ್ತುಗಳು ಮತ್ತು ಎಣ್ಣೆ ತೆಗೆಯುವಲ್ಲಿ ನಿರತರಾದ ಜನ ಕಾಣುತ್ತಿದ್ದರು. ಕೆಲವರು ಆ ದೃಶ್ಯವನ್ನು ಕುತೂಹಲದಿಂದ ನೋಡುತ್ತಿದ್ದರು. ಅವತ್ತು ನಡೆಯುತ್ತಿದ್ದ ಆ ಗಾಣಕ್ಕೂ ಏಳೆಂಟು ದಶಕಗಳ ಇತಿಹಾಸವಿತ್ತು. ಅದು ಸುಮಾರು ಎಂಬತ್ತು ವರ್ಷಗಳ ಹಿಂದೆ ಕೃಷ್ಣಶೆಟ್ಟಿಯಾರ್ ಎಂಬುವರು ನಿರ್ಮಿಸಿದ್ದ ಎಣ್ಣೆ ಗಾಣವಾಗಿತ್ತು. ಅದನ್ನು ಅವರ ಮೊಮ್ಮಗ ಪರಮೇಶ್ವರ ಎಂಬುವರು ನಡೆಸಿಕೊಂಡು ಹೋಗುತ್ತಿದ್ದರು. ಈ ಗಾಣದಲ್ಲಿ ಹುಚ್ಚೆಳ್ಳು ಎಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಕಡಲೆಕಾಯಿ ಎಣ್ಣೆಯನ್ನು ತೆಗೆದು ಮಾರಾಟ ಮಾಡುತ್ತಿದ್ದರು. ಆದರೆ ಅದರಲ್ಲಿ ಕ್ರಮೇಣ ಲಾಭವೇ ಸಿಗದ ಕಾರಣಕ್ಕೆ ಮತ್ತು ಒಂದಷ್ಟು ಸಮಸ್ಯೆಗಳು ತಲೆದೋರಿದ್ದರಿಂದ ಆಧುನಿಕತೆಗೆ ತೆರೆದುಕೊಂಡ ಪರಮೇಶ್ವರರವರು ಮೆಷಿನ್ ಗಾಣಾದತ್ತ ಮುಖ ಮಾಡಿ ತಮ್ಮ ಎಣ್ಣೆ ವ್ಯಾಪಾರ ಮುಂದುವರೆಸಿದರು.
ವಿದೇಶ ತೊರೆದು ಬಂದು ಹುಟ್ಟೂರಲ್ಲೆ ಕಬ್ಬು ಅರೆಯುವ ಭೂಗರ್ಭ ತಜ್ಞ ನಿರಂಜನ್
ನೇಪಥ್ಯಕ್ಕೆ ಸರಿದು ಹೋದ ಗಾಣಗಳು
ಕೊಕ್ಕೆ, ಅರೆಗೋಲು, ಗೂಟ, ಹಲಗೆ. ಇವು ಗಾಣದ ಪ್ರಮುಖ ಸಾಧನಗಳಾಗಿದ್ದವು. ಆ ಪೈಕಿ ಅರೆಗೋಲು ವಿಶೇಷ ಸಾಧನವಾಗಿತ್ತು. ಇದು ನೂರು ವರ್ಷದ ಕಾಡು ಬಾಗೇ ಮರದಿಂದ ತಯಾರಾದ ಸಾಧನವಾಗಿದ್ದು ಸುಮಾರು 60 ಕೆ.ಜಿ.ಯಷ್ಟು ತೂಕವಿತ್ತು. ಗೂಟಕ್ಕೆ ಕಟ್ಟಿ ಎತ್ತುಗಳ ಮೂಲಕ ಎಣ್ಣೆ ಬೀಜಗಳನ್ನು ಅರೆದು ಎಣ್ಣೆಯನ್ನು ತೆಗೆಯಲಾಗುತ್ತಿತ್ತು. ಇದೀಗ ಇದೆಲ್ಲವೂ ನೆನಪಷ್ಟೆ.
ಒಟ್ಟಾರೆ ಮೈಸೂರಿನ ಗಾಣದ ಪಳೆಯುಳಿಕೆಯಾಗಿ ಇತ್ತೀಚೆಗಿನ ವರ್ಷಗಳ ಕಾಲ ಉಳಿದುಕೊಂಡಿದ್ದ ಗಾಣವೂ ಇದೀಗ ನೇಪಥ್ಯಕ್ಕೆ ಸರಿದಿದೆ. ಒಂದು ಕಾಲದಲ್ಲಿ ಮೈಸೂರಿನ ಬೀದಿಯ ದೀಪಗಳನ್ನು ಬೆಳಗಲು ವಿವಿಧ ಎಣ್ಣೆಗಳನ್ನು ತೆಗೆಯಲು ಸಹಕಾರಿಯಾಗಿದ್ದ ಗಾಣಗಳು ಮೈಸೂರಿನಿಂದಲೇ ಕಣ್ಮರೆಯಾಗುತ್ತಿರುವುದು ಮಾತ್ರ ದುರಂತವೇ ಸರಿ.