ಬಂಗಾರಪೇಟೆಯ "ಬೂದಿಕೋಟೆ" ಹೇಳುತ್ತಿದೆ ಮತ್ತೊಂದು ಕಥೆ...
ಕೋಲಾರ, ಫೆಬ್ರುವರಿ 1: ಸುತ್ತಲೂ ಸುಂದರವಾದ ಕೋಟೆ. ಕೋಟೆಯ ಮೇಲೆ ನಿಂತು ನೋಡಿದರೆ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ. ಜೊತೆಗೆ ಇತಿಹಾಸದ ಕಥೆಯೊಂದನ್ನು ಹೇಳುತ್ತಿರುವಂತೆ ಕಾಣುವ ಸ್ಮಾರಕಗಳು... ಇವೆಲ್ಲ ಕಾಣಸಿಗುವುದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯಲ್ಲಿ.
ಹೈದರಾಲಿ ಹುಟ್ಟಿದ ಸ್ಥಳ ಎಂದೇ ಪ್ರಸಿದ್ಧಿ ಪಡೆದಿರುವ ಬೂದಿಕೋಟೆಗೆ ಹೈದರಾಲಿ ಕೋಟೆ ಎಂದೂ ಕರೆಯುತ್ತಾರೆ. ಬೃಹತ್ತಾದ ಕೋಟೆಗಳು, ಕಲ್ಯಾಣಿ ಹಾಗೂ ಆಗಿನ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳು ಈ ಊರಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಹಳ್ಳಿಗಳಿಗೆ ತೆರಳಿ ಜನಪದ ಅಧ್ಯಯನ; ಕಲಿಯುವಿಕೆಯ ಹೊಸ ಜಮಾನ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೂ ಈ ಸ್ಥಳವನ್ನು 'ರಾಷ್ಟ್ರೀಯ ಮಹತ್ವದ ಸ್ಮಾರಕ' ಎಂದು ಘೋಷಿಸಿದೆ. ಆದರೆ ಇದನ್ನು ಒಂದು ಪ್ರವಾಸಿಕೇಂದ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಮಾತ್ರ ವೈಫಲ್ಯ ಕಾಣುತ್ತಿದೆ. ಬೂದಿಕೋಟೆಯ ಇತಿಹಾಸದ ಮೆಲುಕು ಇಲ್ಲಿದೆ...
ವಿಭೂತಿಪುರ ಬೂದಿಕೋಟೆ ಆಗಿದ್ದು ಹೀಗೆ...
ಬೂದಿಕೋಟೆಗೆ ಮೊದಲು ವಿಭೂತಿಪುರ ಎಂದು ಕರೆಯುತ್ತಿದ್ದರು. ಆಗಿನ ಕಾಲದಲ್ಲಿ ಋಷಿ ಮುನಿಗಳು ಇಲ್ಲಿ ಯಾವಾಗಲೂ ಯಾಗ ಯಜ್ಞ ಮಾಡುತ್ತಿದ್ದರ ಪರಿಣಾಮವಾಗಿ ಎಲ್ಲಿ ನೋಡಿದರೂ ಬೂದಿ ಇರುತ್ತಿತ್ತು. ಅದಕ್ಕಾಗಿ ಇದನ್ನು ವಿಭೂತಿಪುರ ಎಂದು ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ವಿಭೂತಿಪುರದ "ಬೂದಿ" ಮಾತ್ರ ಉಳಿದು, ಇಲ್ಲಿ ಕೋಟೆಯೂ ಇದ್ದಿದ್ದರಿಂದ ಎರಡನ್ನೂ ಸೇರಿಸಿ ಬೂದಿಕೋಟೆ ಎಂದು ನಾಮಕರಣ ಮಾಡಿದರು. ಅಂದಿನಿಂದ ಈ ಜಾಗವನ್ನು ಬೂದಿಕೋಟೆ ಎಂದೇ ಕರೆಯಲಾಗುತ್ತಿದೆ.
ಹೈದರಾಲಿಯ ನೆನಪು ಮರಳಿಸುವ ಕೋಟೆ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಈ ಕೋಟೆಯು ಹೈದರಾಲಿ ಸರ್ವಧರ್ಮ ಸಮನ್ವಯಿಯಾಗಿದ್ದು, ರಾಜ್ಯದ ದೇವಾಲಯಗಳಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದ ಎಂಬುದಕ್ಕೆ ನಿದರ್ಶನಗಳನ್ನು ನೀಡಿದೆ. ಈ ಗ್ರಾಮವು ಬಾಣರು ಸೇರಿದಂತೆ ಹಲವು ರಾಜವಂಶಗಳಲ್ಲಿ ಆಳ್ವಿಕೆಯಲ್ಲಿ ಇತ್ತು ಎಂಬುದಕ್ಕೆ ಇಲ್ಲಿ ದೊರೆತಿರುವ ಶಾಸನಗಳು ಸಾಕ್ಷಿಯಾಗಿವೆ. ಕೋಟೆ ಪ್ರವೇಶ ದ್ವಾರದಲ್ಲಿ ‘ಹೈದರಾಲಿ ಹುಟ್ಟಿದ ಸ್ಥಳ' (1720- 1782) ಎಂಬ ಕಲ್ಲಿನ ಫಲಕ ನಿಲ್ಲಿಸಲಾಗಿದೆ. ಒಳಗೆ ಪುರಾತನ ಕಾಲದ ವೇಣುಗೋಪಾಲಸ್ವಾಮಿ ದೇಗುಲ, ಸುಗ್ರೀವ ಗುಡಿಗಳಿವೆ. ಪುರಾತನ ಕಾಲದ ಕೊಳ ಇದೆ. ಮಧ್ಯದಲ್ಲಿ ಹೈದರಾಲಿ ಹುಟ್ಟಿದ ಸ್ಥಳ ಎಂಬ ಸ್ಮಾರಕ ಶಿಲೆ ಇಡಲಾಗಿದ್ದು, ಸುತ್ತ ಸುಮಾರು 5 ಅಡಿ ಗೋಡೆ ಕಟ್ಟಿ ಕಬ್ಬಿಣದ ಬಾಗಿಲು ಅಳವಡಿಸಲಾಗಿದೆ.
ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!
ಅಧ್ಯಯನ ವಸ್ತುವಾಗಬೇಕಿದ್ದ ಕೋಟೆ ಹೀಗಿದೆ...
ಕಾಲಕ್ರಮೇಣ ಈ ಕೋಟೆ ಶಿಥಿಲಗೊಂಡಿದೆ. ಬೂದಿಕೋಟೆಯಲ್ಲಿ ಈಗ ಕೋಟೆಯ ಅವಶೇಷಗಳು ಮಾತ್ರ ಕಾಣಸಿಗುತ್ತಿವೆ. ಕೋಟೆಯ ಸುತ್ತಲ ಗೋಡೆ ನೆಲಕ್ಕೆ ಉರುಳಿವೆ. ನಾಲ್ಕು ಮೂಲೆಯಲ್ಲಿ ಕಟ್ಟಲಾಗಿದ್ದ ವೀಕ್ಷಣಾ ಗೋಪುರಗಳು ಕುಸಿದಿವೆ. ಕೋಟೆ ಅಂಚಿನಲ್ಲಿಯೇ ಕಟ್ಟಡಗಳನ್ನು ನಿರ್ಮಿಸಿದ್ದು, ಮನೆ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಗತವೈಭವ ಬಿಂಬಿಸುವ ಇಲ್ಲಿನ ಸ್ಮಾರಕಗಳೂ ಮರೆಯಾಗುತ್ತಿವೆ. ಸೂಕ್ತ ನಿರ್ವಹಣೆ ಕೊರತೆ ಕೋಟೆಯಲ್ಲಿ ಕಾಣುತ್ತಿದೆ. ಹೀಗಾಗಿ ಇತಿಹಾಸಕಾರರಿಗೆ ಒಂದು ಅಧ್ಯಯನ ವಸ್ತುವಾಗಬೇಕಿದ್ದ ಬೂದಿಕೋಟೆ ಇಂದು ನಿರ್ಲ್ಯಕ್ಷ ಸ್ಥಳವಾಗಿ ನಿಂತಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ಸ್ಥಳವನ್ನು ‘ರಾಷ್ಟ್ರೀಯ ಮಹತ್ವದ ಸ್ಮಾರಕ' ಎಂದು ಘೋಷಿಸಿದೆ. ಸುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಸೂಚಿಸಿ, ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ ಎಂದು ಬರೆಯಲಾಗಿದೆ. ಆದರೆ ಇದೆಲ್ಲವೂ ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ.
ಪ್ರವಾಸಿಗರಿ ಕನಿಷ್ಠ ಸೌಲಭ್ಯವೂ ಇಲ್ಲ
ಕೋಟೆ ನೋಡಲೆಂದೇ ಆಗಾಗ ಜಿಲ್ಲೆಯ ಶಾಲಾ ಮಕ್ಕಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಇತಿಹಾಸದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಹಲವರು ಬಂದು ಹೋಗುತ್ತಿರುತ್ತಾರೆ. ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರು ಬರುತ್ತಾರೆ. ಆದರೆ ಪ್ರವಾಸಿಗರ ಅನುಕೂಲಕ್ಕಾಗಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಕನಿಷ್ಠ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕೂಡ ಇಲ್ಲ. ಇತಿಹಾಸಕ್ಕೆ ಸಾಕ್ಷೀಭೂತವಾಗಿ ನಿಲ್ಲುವ ಸ್ಮಾರಕಗಳನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.