ಆಸ್ತಿಕ-ನಾಸ್ತಿಕರೆಲ್ಲರಿಗೂ ಮೆಚ್ಚುಗೆಯಾಗುವ ದ್ವೀಪನಗರಿ ಈ ಶ್ರೀರಂಗಪಟ್ಟಣ
ಮೈಸೂರಿಗೆ ಪ್ರವಾಸ ಬಂದವರು ಕೆಲವೇ ಕಿ.ಲೋ. ಅಂತರದಲ್ಲಿರುವ ಐತಿಹಾಸಿಕ ಪಟ್ಟಣಗಳಲ್ಲೊಂದಾದ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡದೆ ಹೋದರೆ ಪ್ರವಾಸ ಅಪೂರ್ಣವಾದಂತೆಯೇ. ಅಷ್ಟೇ ಅಲ್ಲ ಅತ್ಯುತ್ತಮವಾದ ಪ್ರವಾಸಿ ತಾಣವನ್ನು ನೋಡುವ ಭಾಗ್ಯದಿಂದ ವಂಚಿತರಾದಿರಿ ಎಂದರ್ಥ.
ಏಕೆಂದರೆ ಶ್ರೀರಂಗಪಟ್ಟಣದ ವಿಶೇಷತೆಯೇ ಹಾಗಿದೆ. ಇಲ್ಲಿನ ದೇವಸ್ಥಾನಗಳು ಪೌರಾಣಿಕ ಕಥೆ ಹೇಳಿದರೆ, ಸಮಾಧಿ, ಕೋಟೆ ಕೊತ್ತಲಗಳು ಇತಿಹಾಸವನ್ನು ತೆರೆದಿಡುತ್ತವೆ. ಅದರಾಚೆಗಿನ ಸುಂದರ ನಿಸರ್ಗ ಕಣ್ತುಂಬುತ್ತದೆ.
ಮೈಸೂರಿಗೆ ಹದಿನಾರು ಕಿ.ಮೀ.ದೂರದಲ್ಲಿದ್ದರೂ ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಗೆ ಸೇರಿದ್ದು, ತಾಲೂಕು ಕೇಂದ್ರವಾಗಿದೆ. ಹೀಗಾಗಿ ಮಂಡ್ಯದಿಂದ 30 ಕಿ.ಮೀ. ಬೆಂಗಳೂರಿನಿಂದ 122ಕಿ.ಮೀ. ದೂರದಲ್ಲಿದೆ. ಕೊಡಗಿನಿಂದ ಹರಿದು ಬರುವ ಕಾವೇರಿ ನದಿ ಇಲ್ಲಿ ಎರಡು ಕವಲಾಗಿ ಹರಿಯುವುದರೊಂದಿಗೆ ಶ್ರೀರಂಗಪಟ್ಟಣವನ್ನು ದ್ವೀಪವಾಗಿಸಿದ್ದು ವಿಶೇಷ.
ಕಾವೇರಿ ನದಿ ಸೃಷ್ಟಿಸಿದ ಪಟ್ಟಣ
ಶ್ರೀರಂಗಪಟ್ಟಣದಲ್ಲಿ ನಾವು ಹೆಜ್ಜೆಹಾಕುತ್ತಾ ಹೋದರೆ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್ ನೆನಪಾಗುವುದರೊಂದಿಗೆ ಮೈಸೂರಿನ ಇತಿಹಾಸ, ರಾಜ ಮಹಾರಾಜರು, ಅವರ ಆಡಳಿತ ಹೀಗೆ ಎಲ್ಲದರ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ. ಇವತ್ತಿನ ಶ್ರೀರಂಗಪಟ್ಟಣ ಪೌರಾಣಿಕ ಯುಗದಲ್ಲಿ 'ಆದಿರಂಗ'ವಾಗಿ, ಚಾರಿತ್ರಿಕವಾಗಿ 'ಅಷ್ಟಗ್ರಾಮ'ವಾಗಿ ಕರೆಯಲ್ಪಡುತ್ತಿತ್ತು ಎನ್ನಲಾಗಿದೆ. ಕಾವೇರಿ ನದಿ ಸುತ್ತುವರಿದು ಸೃಷ್ಟಿಯಾದ ಈ ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು ಮೂರು ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲ ಹೊಂದಿದೆ.
ಮೈಸೂರು ದಸರಾಕ್ಕೆ ಮುನ್ನುಡಿ ಬರೆದದ್ದು ಶ್ರೀರಂಗಪಟ್ಟಣದಲ್ಲಿ...
ಭಾರತದ ಎರಡನೇ ಅತ್ಯಂತ ಬಲಿಷ್ಠ ಕೋಟೆ
ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಶ್ರೀರಂಗಪಟ್ಟಣವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯನು ಕ್ರಿ.ಶ. 1120ರಲ್ಲಿ ನಿರ್ಮಿಸಿದ್ದರೆ, ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣನೆಂಬುವನು ಶ್ರೀರಂಗಪಟ್ಟಣಕ್ಕೆ ಸುತ್ತಲೂ ಕೋಟೆಯನ್ನು ಕಟ್ಟಿಸಿದ್ದಾನೆ. ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರಿದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಠ ಕೋಟೆಯೆಂದು ಪರಿಗಣಿತವಾಗಿದೆ. ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿದ್ದ ಇದು ಅವರ ಸಾಮಂತ ಶ್ರೀರಂಗರಾಯನ ನಂತರ 1610ರಲ್ಲಿ ಮೈಸೂರರಸರ ಕೈವಶವಾಗಿತ್ತು. ಆಗವರ ರಾಜಧಾನಿಯಾಗಿ ಬಹು ವೈಭವದಿಂದ ಮಿಂಚಿತ್ತು. ಟಿಪ್ಪುವಿನ ಮರಣಾನಂತರ ಬ್ರಿಟಿಷರ ಅಧಿಪತ್ಯಕ್ಕೊಳಪಟ್ಟ ಶ್ರೀರಂಗಪಟ್ಟಣ ತನ್ನ ರಾಜಧಾನಿ ಪಟ್ಟವನ್ನು ಮೈಸೂರಿಗೆ ಬಿಟ್ಟುಕೊಟ್ಟಿತ್ತು.
ಪೌರಾಣಿಕ ಹಿರಿಮೆಯೂ ಇಲ್ಲಿಗಿದೆ
ಪೌರಾಣಿಕ ಹಿರಿಮೆಯೊಂದಿಗೆ ತನ್ನ ಗತವೈಭವವನ್ನು ಸಾರುತ್ತಿರುವ ಶ್ರೀರಂಗಪಟ್ಟಣದಲ್ಲಿ ಪುರಾಣೇತಿಹಾಸ ಪ್ರಸಿದ್ಧ ಗಗನ ಚುಂಬಿಸುವ ಬೃಹತ್ ರಾಜಗೋಪುರವುಳ್ಳ, ಕ್ರಿ.ಶ. 894ರಲ್ಲಿ ಗಂಗರ ತಿರುಮಲೈ ಕಟ್ಟಿಸಿದನೆಂಬ ಐತಿಹ್ಯವಿರುವ ಮಲಗಿರುವ ಶ್ರೀರಂಗನಾಥಸ್ವಾಮಿ ದೇವಸ್ಥಾನ, ಗಂಗಾಧರೇಶ್ವರ, ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿರ್ಮಹೇಶ್ವರಿ, ವಿಘ್ನೇಶ್ವರ, ನಗರೇಶ್ವರ, ಆಂಜನೇಯಸ್ವಾಮಿ, ಜನಾರ್ಧನಸ್ವಾಮಿ, ಅಯ್ಯಪ್ಪಸ್ವಾಮಿ, ಸುಬ್ರಹ್ಮಣ್ಯಸ್ವಾಮಿ, ಗೋಪಾಲಕೃಷ್ಣಸ್ವಾಮಿ, ಶಕ್ತಿದೇವತೆಗಳಾದ ಅಂಕಾಳಮ್ಮ, ಮಾರಮ್ಮ, ಕಾಳಮ್ಮ ಮುಂತಾದ ದೇವಾನುದೇವತೆಗಳ ಸಾಲು ಸಾಲು ದೇವಾಲಯಗಳು, ರಾಮಮಂದಿರ, ಕಾವೇರಿ ತೀರದಲ್ಲಿರುವ ಸಾಯಿಮಂದಿರ, ಉತ್ತರಾಧಿಮಠ, ರಾಘವೇಂದ್ರಮಠ, ಯತಿರಾಜಮಠ ಇತ್ಯಾದಿ ಮಠ ಮಾನ್ಯಗಳು, ಮಂದಿರಗಳು ಇಲ್ಲಿರುವುದನ್ನು ನಾವು ಕಾಣಬಹುದಾಗಿದೆ.
ಪ್ರವಾಸಿಗರಿಗೆ ಡಬಲ್ ಡೆಕ್ಕರ್ ಬಸ್ ನಲ್ಲಿ ಮೈಸೂರು ಸುತ್ತುವ ಮೋಜು...
ಆಕರ್ಷಕ ಮಿನಾರುಗಳ ಜುಮ್ಮಾ ಮಸೀದಿ
1781ರಲ್ಲಿ ನಿರ್ಮಾಣಗೊಂಡಿರುವ, ಟಿಪ್ಪು ಪ್ರಾರ್ಥನೆ ಮಾಡುತ್ತಿದ್ದ ಆಕಾಶ ಮುಟ್ಟುವ ನೂರಡಿ ಎತ್ತರದ ಆಕರ್ಷಕವಾದ ಎರಡು ಮಿನಾರುಗಳುಳ್ಳ ಐತಿಹಾಸಿಕ 'ಜುಮ್ಮಾ ಮಸೀದಿ', ದೂರದ ಸ್ಥಳಗಳನ್ನು ವೀಕ್ಷಿಸಲು ಟಿಪ್ಪು ಬಳಸುತ್ತಿದ್ದ ಬಹು ಎತ್ತರದ 'ಬತ್ತೇರಿ', ಬ್ರಿಟಿಷರನ್ನು ಮತ್ತು ಮತ್ತಿತರೆ ತನ್ನ ವೈರಿಗಳನ್ನು ಟಿಪ್ಪು ಬಂಧಿಸುತ್ತಿದ್ದ ನೆಲಮಾಳಿಗೆಯ ಬಂದೀಖಾನೆಯಾದ 'ಬೇಲಿಡಂಜನ್', ಇದರ ಮಧ್ಯದಲ್ಲಿರುವ ಹತ್ತು ಅಡಿ ಉದ್ದದ ಟಿಪ್ಪು ಕಾಲದ 'ಫಿರಂಗಿ', ಇದರ ಹತ್ತಿರದಲ್ಲೇ ಇರುವ ಮೈಸೂರಿನ ನಾಲ್ಕನೇ ಮಹಾಯುದ್ಧದಲ್ಲಿ ಹೋರಾಡಿ ಮಡಿದ ಸೈನಿಕರನ್ನು ಸ್ಮರಿಸುವ 'ಸೈನಿಕ ಸ್ಮಾರಕ ಸ್ತಂಭ' ನೋಡುಗರನ್ನು ಆಕರ್ಷಿಸುತ್ತದೆ. ಅಷ್ಟೇ ಗತಕಾಲದ ಇತಿಹಾಸವನ್ನು ಮತ್ತೊಮ್ಮೆ ಸ್ಮರಿಸುವಂತೆ ಮಾಡುತ್ತದೆ.
ಕಾವೇರಿಗೆ ಅಡ್ಡಲಾಗಿರುವ 'ವೆಲ್ಲೆಸ್ಲಿ ಸೇತುವೆ’
ಕಾವೇರಿ ನದಿಯ ಎಡಕವಲಿಗೆ ಅಡ್ಡವಾಗಿ ನಿರ್ಮಿಸಿರುವ ಕರ್ನಾಟಕದ ಅತ್ಯಂತ ಪ್ರಾಚೀನ ಸೇತುವೆಯಾದ 'ವೆಲ್ಲೆಸ್ಲಿ ಸೇತುವೆ', 1784ರಲ್ಲಿ ಕಟ್ಟಲ್ಪಟ್ಟಿರುವ 1959ರಿಂದ ವಸ್ತು ಸಂಗ್ರಹಾಲಯವಾಗಿರುವ ಟಿಪ್ಪುವಿನ ಅಂದದ ಬೇಸಿಗೆ ಅರಮನೆ 'ದರಿಯಾ ದೌಲತ್', ಟಿಪ್ಪು ಸುಲ್ತಾನ್ ಮತ್ತು ಆತನ ತಂದೆ-ತಾಯಿ ಮತ್ತವರ ಕುಟುಂಬದವರ ಸಮಾಧಿಗಳಿರುವ 1784ರಲ್ಲಿ ನಿರ್ಮಾಣಗೊಂಡಿರುವ ಗೋಳಗುಮ್ಮಟದಾಕಾರದ 'ಗುಂಬಜ್' ಇಲ್ಲೇ ಸಮೀಪದಲ್ಲಿ ಕಾವೇರಿ ನದಿ ಇಬ್ಭಾಗವಾಗಿ ಒಡೆದು ಮುಂದೆ ಸಾಗಿ ಒಂದಾಗಿ ಸೇರುವ ಸಂಗಮ, ಅಲ್ಲೇ ಸಮೀಪದಲ್ಲಿ ರಮಣೀಯ 'ಗೋಸಾಯಿ ಘಾಟ್' ಕಣ್ಮನ ತಣಿಸುತ್ತದೆ.
ದೇಗುಲ- ಚರ್ಚ್- ಮಸೀದಿಗಳು
ಕಾವೇರಿ ನದಿಯ ಉತ್ತರ ದಡದ ಕಡೆಗೆ ಹೋದರೆ ಅಲ್ಲಿ ಗಂಜಾಂನ ಪ್ರಸಿದ್ಧ 'ನಿಮಿಷಾಂಬ ದೇವಸ್ಥಾನ' ತುಸು ದೂರದಲ್ಲೇ ಇರುವ ಶ್ರೀರಾಮ, ಕಾಶಿವಿಶ್ವನಾಥ, ಕನ್ಯಕಾ ಪರಮೇಶ್ವರಿ, ಗೌರಿ ದೇಗುಲಗಳು ಹಾಗೂ ಫ್ರೆಂಚ್ನ ಕ್ರೈಸ್ತ ಪಾದ್ರಿ ಅಬ್ಬಿದುಬುವಾ ಸ್ಥಾಪಿಸಿರುವ 'ಅಬ್ಬಿದುಬುವಾ ಚರ್ಚ್' ಕಾವೇರಿ ನದಿಯ ಮಧ್ಯ ಭಾಗದಲ್ಲಿರುವ ವಿಶ್ವವಿಖ್ಯಾತ 'ರಂಗನತಿಟ್ಟು ಪಕ್ಷಿಧಾಮ', ನಂದಿ ಬಸಪ್ಪ ಛತ್ರ, ಅಂಡಾಪುರದ ರಂಗಾಚಾರ್ಯ ಛತ್ರ, ಗಾಡಿಚೆಲುವರಾಯಶೆಟ್ಟಿ ಛತ್ರ, ಮಹಾರಾಜರ ಛತ್ರಗಳು ಹೀಗೆ ಹಲವಾರು ಛತ್ರಗಳ ಪುಣ್ಯ ಸಂಗಮವೇ ಆಗಿರುವ 'ಪಶ್ಚಿಮವಾಹಿನಿ' ಎಲ್ಲವೂ ನೋಡುಗರನ್ನು ಆಕರ್ಷಿಸುತ್ತದೆ.
ಕಣ್ಮನ ತಣಿಸುವ ರಮಣೀಯ ನೋಟ
ಸುಂದರ ನಿಸರ್ಗದ ನಡುವೆ ವಿಹರಿಸುವ ಮನಸ್ಸು ಮಾಡಿದರೆ ಇಲ್ಲಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ಬನ್ನೂರು ರಸ್ತೆಯಲ್ಲಿರುವ 'ಕರಿಘಟ್ಟ ಗಿರಿಧಾಮ', ಅಲ್ಲಿಂದ ಒಂದಷ್ಟು ದೂರ ಹೋದರೆ 'ಗೆಂಡೆಹೊಸಹಳ್ಳಿ ಪಕ್ಷಿಧಾಮ' (ಬಂಡೀಸಿದ್ದೇಗೌಡ ಪಕ್ಷಿಧಾಮ) ಇದರ ಪಕ್ಕದಲ್ಲೇ ಇರುವ 'ಬೋರೇದೇವರಗುಡಿ', ಚಿತ್ರನಗರಿ ಎಂದೇ ಖ್ಯಾತವಾಗಿರುವ 'ಮಹದೇವಪುರ' ದಂತಹ ಸುಂದರ ಸ್ಥಳಗಳ ತಮ್ಮ ಜಂಜಾಟವನ್ನು ಮರೆಯಿಸಿ ಮನಸ್ಸಿಗೆ ಮುದ ನೀಡುತ್ತವೆ. ಶ್ರೀರಂಗಪಟ್ಟಣವು ತನ್ನೊಡಲಲ್ಲಿ ಹತ್ತು ಪ್ರವಾಸಿ ತಾಣಗಳನ್ನಿಟ್ಟುಕೊಂಡಿದ್ದಲ್ಲದೆ ಸುತ್ತಮುತ್ತಲೂ ಪ್ರೇಕ್ಷಣೀಯ ತಾಣಗಳನ್ನು ಸೃಷ್ಟಿಸಿದೆ. ಅದಕ್ಕಿಂತ ಹೆಚ್ಚಾಗಿ ಸುಂದರ ನಿಸರ್ಗ ನೋಟವನ್ನು ಸದಾ ಉಣಬಡಿಸುತ್ತಲೇ ಇದೆ.