ಹಿಂದಿ ಏರಿಕೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷಿಕರಲ್ಲಿ ಗಣನೀಯ ಇಳಿಕೆ
ಉಡುಗೆ-ತೊಡುಗೆ, ಆಚಾರ-ವಿಚಾರ, ಸಾಹಿತ್ಯ-ಸಂಸ್ಕೃತಿ, ವೈಚಾರಿಕತೆಯಲ್ಲಿ ಮಾತ್ರವಲ್ಲ ವೈವಿಧ್ಯಮಯ ಭಾಷೆಗಳಿಂದಲೂ ಭಾರತ ಸಮೃದ್ಧ. ನಮ್ಮ ದೇಶದಲ್ಲಿರುವ ಭಾಷೆಗಳು ಬಹುಶಃ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಸಿಗಲಾರದು. ಒಂದೊಂದು ಭಾಷೆಯಲ್ಲಿ ಒಂದೊಂದು ಸೊಗಡಿದೆ.
ಉಳಿದ ರಾಷ್ಟ್ರಗಳಲ್ಲಿ ಅದರದೇ ಆದ ವಿಶಿಷ್ಟ ಭಾಷೆಯ ಅಸ್ತಿತ್ವವಿದೆ. ಆ ಭಾಷೆಯಿಂದಲೇ ಆ ರಾಷ್ಟ್ರವೂ ಗುರುತಿಸಿಕೊಳ್ಳಲು ಇಚ್ಛಿಸುತ್ತದೆ. ಆದರೆ, ಭಾರತ ಹಾಗಲ್ಲ. ಇಲ್ಲಿ ಪ್ರತಿಯೊಂದು ಭಾಷೆಯೂ ಅವರವರಿಗೆ ವಿಶೇಷವೇ. ಹಾಗೆಯೆ, ತಮ್ಮ ಪ್ರಾಂತೀಯ ಭಾಷೆಯ ಮೇಲೆ ಹೆಮ್ಮೆಯೂ ಇದೆ.
ಭಾರತದಲ್ಲಿ 19,500ಕ್ಕೂ ಅಧಿಕ ಆಡುಭಾಷೆಗಳು : ಗಣತಿ ವರದಿ
ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮ್ಮ ಕನ್ನಡವೂ ಸೇರಿದಂತೆ 22 ಭಾಷೆಗಳನ್ನು ಸೇರಿಸಲಾಗಿದೆ. ಕನ್ನಡ ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ನಾವು ಸಾಕಷ್ಟು ಹೋರಾಟವನ್ನೂ ಮಾಡಬೇಕಾಯಿತು. ಇನ್ನೂ 41 ಭಾಷೆಗಳನ್ನು ಸೇರಿಸಬೇಕೆಂಬ ಬೇಡಿಕೆಯೂ ಇದೆ.
ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿದೆ ಹಿಂದಿ, ಬೆಂಗಾಲಿ, ಒಡಿಯಾ ಭಾಷಿಕರ ಸಂಖ್ಯೆ
ಇಲ್ಲಿ ಭಾಷೆ ಎಷ್ಟು ವೈವಿಧ್ಯಮಯವಾಗಿದೆಯೆಂದರೆ, ಭಾಷೆಗಳು ಮತ್ತು ಉಪಭಾಷೆಗಳನ್ನು ಸೇರಿಸಿದರೆ ಮಾತೃಭಾಷೆಗಳ ಸಂಖ್ಯೆ 19 ಸಾವಿರವನ್ನೂ ದಾಟುತ್ತದೆ. 2011ರಲ್ಲಿ ನಡೆಸಲಾದ ಭಾಷೆ ಗಣತಿ ಹಲವಾರು ವಿಶಿಷ್ಟ ಸಂಗತಿಗಳನ್ನು ಹೊರಹಾಕಿದೆ. ಅದರಲ್ಲಿ ಕೆಲವೊಂದು ಸಂತಸದ ಮತ್ತು ಹಲವಾರು ಆಘಾತಕಾರಿ ಸಂಗತಿಗಳು ಕೂಡ ಅಡಕವಾಗಿವೆ.
ಹಿಂದಿ ಅತ್ಯಧಿಕವಾಗಿ ಬಳಸಲಾಗುವ ಭಾಷೆ
ಭಾರತದಲ್ಲಿ ಹಿಂದಿ ಅತ್ಯಧಿಕವಾಗಿ ಬಳಸಲಾಗುವ ಭಾಷೆ. ಗಣತಿಯ ಪ್ರಕಾರ ಶೇ.44ರಷ್ಟು ಹಿಂದಿ ಭಾಷಿಕರು ದೇಶದಲ್ಲಿದ್ದಾರೆ. ಇದನ್ನು ರಾಷ್ಟ್ರಭಾಷೆಯನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆಯೂ ಇದೆ, ಅದಕ್ಕೆ ಭಾರೀ ಪ್ರತಿರೋಧವೂ ಇದೆ. ಹಿಂದಿಯನ್ನು ದೇಶದಾದ್ಯಂತ ಬಳಸಲಾಗುತ್ತಿದ್ದರೂ, ಉತ್ತರ ಭಾರತ ಮತ್ತು ಮಧ್ಯ ಭಾರತದಲ್ಲಿ ಅಧಿಕವಾಗಿ ಉಪಯೋಗಿಸಲಾಗುತ್ತಿದೆ. ಉಳಿದ ಭಾಗಗಳಲ್ಲಿ ಹಿಂದಿ ಪ್ರೇಮ ಅಷ್ಟಕ್ಕಷ್ಟೇ. ಆದರೂ ವಲಸೆಯಿಂದಾಗಿ ಉತ್ತರದಿಂದ ದಕ್ಷಿಣಕ್ಕೆ ಹಿಂದಿ ಭಾಷಿಕರ ಸಂಖ್ಯೆ ಹರಿದುಬರುತ್ತಿದೆ.
ದಕ್ಷಿಣ ಭಾಷಿಕರ ಹಿಂದಿ ಪ್ರೇಮ
ಶೇ.44ರಷ್ಟು ಹಿಂದಿ ಭಾಷೆಯಲ್ಲಿ ಮಾತನಾಡುವ ಜನ ಭಾರತದಲ್ಲಿದ್ದಾರೆ. ಇದರಲ್ಲಿ ಪ್ರತ್ಯೇಕತೆಗೆ ಹೋರಾಟ ನಡೆಸಿರುವ ಭೋಜಪುರಿ ಭಾಷೆಯೂ ಸೇರಿದೆ. 2001ರಿಂದ 2011ರೊಳಗೆ ಶೇ.25ರಷ್ಟು ಅಂದರೆ 10 ಕೋಟಿಯಷ್ಟು ಹಿಂದಿ ಭಾಷಿಕರು ಹೆಚ್ಚಾಗಿದ್ದಾರೆ. ಭಾರತದ 10 ಹೆಚ್ಚು ಮಾತನಾಡಲಾಗುವ ಭಾಷೆಗಳಲ್ಲಿ ಅತೀಹೆಚ್ಚು ಬೆಳವಣಿಗೆ ಕಂಡಿದ್ದು ಹಿಂದಿ. ಇದಕ್ಕೆ ಕಾರಣ, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತ, ಪಶ್ಚಿಮ ಭಾರತದ ಹಲವಾರು ನಗರಗಳಲ್ಲಿ ಹೆಚ್ಚುತ್ತಿರುವ ಹಿಂದಿ ಪ್ರೇಮ. ಇಬ್ಬರು ಸ್ಟೈಲಾಗಿ ಹಿಂದಿಯಲ್ಲಿ ಸಂಭಾಷಣೆ ಮಾಡುತ್ತಿದ್ದಾರೆಂದರೆ, ಅವರಲ್ಲಿ ಒಬ್ಬರದು ಇಲ್ಲ ಇಬ್ಬರದೂ ಮಾತೃಭಾಷೆ ಕನ್ನಡವಾಗಿರುತ್ತದೆ. ಬೆಂಗಳೂರಿನಲ್ಲಿ ಹೀಗಿದೆ ಪರಿಸ್ಥಿತಿ.
ದಕ್ಷಿಣ ಭಾರತದ ಭಾಷಿಕರ ಸಂಖ್ಯೆ ಇಳಿಕೆ
ದೇಶದಾದ್ಯಂತ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ದಕ್ಷಿಣ ಭಾರತದ ಭಾಷಿಕರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿರುವುದು ನಿಜಕ್ಕೂ ಕಳವಳಕಾರಿ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಬಳಕೆ ಕಡಿಮೆಯಾಗುತ್ತಿರುವುದು 2011ರ ಗಣತಿಯಲ್ಲಿ ಕಂಡುಬಂದಿದೆ. 1971ರಿಂದ 2011ರವರೆಗೆ ಹಿಂದಿ ಭಾಷೆಯ ಬಳಕೆ ಶೇ.161ರಷ್ಟು ಏರಿಕೆ ಕಂಡರೆ, ಅದೇ ಅವಧಿಯಲ್ಲಿ ದಕ್ಷಿಣ ಭಾರತದ ಈ ನಾಲ್ಕು ಭಾಷೆಗಳು ಶೇ.81ರಷ್ಟು ಇಳಿಕೆ ಕಂಡಿವೆ. ಕರ್ನಾಟಕದಲ್ಲಿ ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದಂಥ ಪರಿಸ್ಥಿತಿ ಉದ್ಭವವಾಗಿರುವುದು ಸುಳ್ಳಲ್ಲ.
ಹಿಂದಿ ದಬ್ಬಾಳಿಕೆ ವಿರುದ್ಧ ಕನ್ನಡಿಗರ ಹೋರಾಟ
ದಕ್ಷಿಣ ಭಾರತದ ಭಾಷೆಗಳು ಅವನತಿಯ ಹಾದಿ ಹಿಡಿದಿರುವುದು ಮಾತ್ರವಲ್ಲ, ಈ ಐದು ರಾಜ್ಯಗಳಲ್ಲಿ ಹಿಂದಿ ಭಾಷಿಕರ ಸಂಖ್ಯೆ ಗಣನೀಯವಾಗಿ ಏರಿರುವುದು ಕಂಡುಬಂದಿದೆ. ಇದಕ್ಕೆ ವಲಸೆಯೂ ಸಾಕಷ್ಟು ಪಾಲುದಾರಿಕೆ ನೀಡಿದೆ. ತಮಿಳುನಾಡಿನಲ್ಲಿ ಹಿಂದಿ ಭಾಷಿಕರ ಸಂಖ್ಯೆ ದ್ವಿಗುಣವಾಗಿದ್ದರೆ, ಬೆಂಗಳೂರಿನಲ್ಲಿ ಹಿಂದಿ ಹಾವಳಿ ಎಷ್ಟು ಹೆಚ್ಚಿದೆಯೆಂದರೆ, ನಮ್ಮ ಮೆಟ್ರೋ ಸೇರಿದಂತೆ ಹಿಂದಿ ನಾಮಫಲಕಗಳನ್ನು ತೆಗೆದುಹಾಕಲು ಕನ್ನಡಿಗರು ಚಳವಳಿಯನ್ನೇ ಮಾಡಬೇಕಾಯಿತು. ತಮಿಳುನಾಡು ಮತ್ತು ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ. ನಮಗೆ ಹಿಂದಿಯವ ಸಿಕ್ಕರೆ ಆತನೊಂದಿಗೆ ಹಿಂದಿಯಲ್ಲಿಯೇ ಮಾತನಾಡುತ್ತೇವೆಯೇ ಹೊರತು ಕನ್ನಡ ಕಲಿಸಲು ಹಿಂಜರಿಯುತ್ತೇವೆ. ಇದು ನಮ್ಮ ಕನ್ನಡಿಗರ ದುರ್ದೈವ.
ಮುಸ್ಲಿಂ ಸಂಖ್ಯೆ ಏರಿಕೆ, ಉರ್ದು ಭಾಷಿಕರ ಇಳಿಕೆ
ಹಿಂದಿ ಭಾಷಿಕರಲ್ಲಿ ಸಾಕಷ್ಟು ಏರಿಕೆ ಕಂಡಿದ್ದರೆ, ಭಾರತದ ವೋಟ್ ಬ್ಯಾಂಕ್ ಆಗಿರುವ ಮುಸ್ಲಿಂರ ಮಾತೃಭಾಷೆಯಾದ ಉರ್ದು ಭಾಷಿಕರಲ್ಲಿ ಇಳಿಕೆಯಾಗಿದೆ. 2001ರಿಂದೀಚೆಗೆ ಶೇ.1.5ರಷ್ಟು ಇಳಿಕೆಯಾಗಿದೆ. ಉರ್ದು ಭಾಷಿಕರು ಇಡೀ ದೇಶದಾದ್ಯಂತ ಹರಡಿಕೊಂಡಿದ್ದಾರೆ. ಅತೀಹೆಚ್ಚು ಉರ್ದು ಭಾಷಿಕರಿರುವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿಯೂ ಇಳಿಕೆ ಕಂಡಿರುವುದು ಕಳವಳಕಾರಿಯಾಗಿದೆ. ತಮಾಷೆ ಅಂದ್ರೆ ಈ ಎರಡು ರಾಜ್ಯಗಳಲ್ಲಿ ಮುಸ್ಲಿಂ ಜನಸಂಖ್ಯೆ ಇದೇ ಅವಧಿಯಲ್ಲಿ ಏರಿಕೆಯಾಗಿದೆ. ಹಿಂದಿ ದಬ್ಬಾಳಿಕೆಯ ಮುಂದೆ ಉರ್ದು ಕೂಡ ಹೊಡೆತ ತಿಂದಿದೆ. ಜೊತೆಗೆ 8ನೇ ಪರಿಚ್ಛೇದದಲ್ಲಿರುವ, ಕರ್ನಾಟಕದ ಉಪಭಾಷೆಯಾಗಿರುವ ಕೊಂಕಣಿ ಭಾಷಿಕರಲ್ಲಿಯೂ ಇಳಿಕೆಯಾಗಿದೆ.
ದಕ್ಷಿಣದಲ್ಲಿ ಬಂಗಾಳಿಗಳ ಸಂಖ್ಯೆ ಏರಿಕೆ
ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಬಂಗಾಳಿಗಳ ಸಂಖ್ಯೆ ಏರಿಕೆಯಾಗಿರುವುದು. ಕೆಲಸವನ್ನರಸಿಕೊಂಡೋ ಭವಿಷ್ಯವನ್ನು ಹುಡುಕಿಕೊಂಡೋ ದಕ್ಷಿಣ ಭಾರತಕ್ಕೆ ಬರುವ ಬಂಗಾಳಿಗಳು 2001ರಿಂದೀಚೆಗೆ ಹೆಚ್ಚಾಗಿದ್ದಾರೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿ ಬಂಗಾಳಿ ಭಾಷಿಕರ ಏರಿಕೆಯಾಗಿದೆ. ಬೆಂಗಳೂರಿನ ಹಲವಾರು ಅಪಾರ್ಟ್ಮೆಂಟುಗಳಲ್ಲಿ ಬಂಗಾಳಿಗಳು ಬಂದು ಠಿಕಾಣಿ ಹೂಡುತ್ತಿರುವುದು ಕಂಡುಬರುತ್ತಿದೆ. ನಂತರದ ಸ್ಥಾನ ಗುಜರಾತ್ ಮತ್ತು ಕೇರಳಕ್ಕೆ ಸಲ್ಲುತ್ತದೆ ಎಂದು ಸ್ಕ್ರೋಲ್ ವರದಿ ಮಾಡಿದೆ.