ವಿವಾದಿತ ಕೃಷಿ ಕಾಯ್ದೆ ಮತ್ತು ರೈತರ ಹೋರಾಟದ ಹಾದಿಯ ಚಿತ್ರಣ
ನವದೆಹಲಿ, ಜನವರಿ.12: ದೇಶದ ರೈತರ ಕೆಂಗಣ್ಣಿಗೆ ಗುರಿಯಾಗಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧದ ಹೋರಾಟ ಇಂದು ನಿನ್ನೆಯದ್ದಲ್ಲ. ಮೈಕೊರೆಯುವ ಚಳಿ ನಡುವೆ ನ್ಯಾಯಕ್ಕಾಗಿ ರಸ್ತೆಗಿಳಿದ ಅನ್ನದಾತರ ಹೋರಾಟಕ್ಕೆ ಸರ್ವೋಚ್ಛ ನ್ಯಾಯಾಲಯದ ಆದೇಶ ಹೊಸ ಭರವಸೆ ಮೂಡಿಸಿದೆ.
ಕೇಂದ್ರ ಸರ್ಕಾರವು ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳಿಗೆ ನೀವೇ ತಡೆ ನೀಡುತ್ತೀರೋ ಅಥವಾ ನಾವು ತಡೆ ನೀಡಬೇಕೋ ಎಂದು ಕೋರ್ಟ್ ಪ್ರಶ್ನೆ ಮಾಡಿದ್ದಾಗಿದೆ. ಕಳೆದ ಸಪ್ಟೆಂಬರ್.27ರಂದು ಕೇಂದ್ರ ಸರ್ಕಾರವು ಮೂರು ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೊಳಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದರು.
ಕೃಷಿ ಕಾಯ್ದೆ: ರೈತರನ್ನು ಪ್ರತಿನಿಧಿಸುವ ಸಮಿತಿ ಸದಸ್ಯರ ಕಿರು ಪರಿಚಯ
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ಹೋರಾಟಕ್ಕೆ ಪ್ರಮುಖ ಕಾರಣಗಳಾಗಿವೆ. ಹಾಗಿದ್ದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳು ಮತ್ತು ಅಂದಿನಿಂದ ಇಂದಿನವರೆಗೂ ನಡೆದ ರೈತರ ಹೋರಾಟದ ಹಾದಿ ಹೇಗಿತ್ತು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಕೃಷಿ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ
- ಜೂನ್.05: ಕೇಂದ್ರ ಸರ್ಕಾರವು ಕೃಷಿ ಸಂಬಂಧಿತ ಮೂರು ಮಸೂದೆಗಳನ್ನು ಕಾಯ್ದೆಗಳಾಗಿ ಪರಿವರ್ತಿಸಲು ಅಗತ್ಯವಾದ ಸುಗ್ರೀವಾಜ್ಞೆಯನ್ನು ಹೊರಡಿಸಿತು.
- ಜೂನ್.14: ಕೇಂದ್ರ ಸರ್ಕಾರವು ಹೊರಡಿಸಿದ ಸುಗ್ರೀವಾಜ್ಞೆ ವಿರುದ್ಧ ಭಾರತೀಯ ಕಿಸಾನ್ ಯೂನಿಯನ್(ಉಗ್ರಹಾನ್) ಧ್ವನಿ ಎತ್ತಿತು.
- ಜೂನ್.14 ರಿಂದ 30: ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಕೃಷಿ ಸಂಬಂಧಿತ ಕಾಯ್ದೆ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದರು. ಬಂಡವಾಳಶಾಹಿ ಕಂಪನಿಗಳ ಮುಲಾಜಿಗೆ ಬಿದ್ದ ಸರ್ಕಾರವು ಈ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ವ್ಯವಸ್ಥೆಗೆ ಭಾರಿ ಹೊಡತ ಬೀಳುವ ಅಪಾಯವಿದೆ ಎಂದು ಪ್ರತಿಭಟನಾನಿರತ ರೈತರು ದೂಷಿಸಲು ಶುರು ಮಾಡಿದರು. ಪಂಜಾಬ್ ನಲ್ಲಿ ಮೊದಲ ಹಂತದ ಹೋರಾಟ ಅಂದಿನಿಂದಲೇ ಆರಂಭವಾಯಿತು.
ಬಿಜೆಪಿಯಿಂದ ದೂರ ಸರಿದ ಶಿರೋಮಣಿ ಅಕಾಲಿ ದಳ
- ಸಪ್ಟೆಂಬರ್.17: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ ದೀರ್ಘಕಾಲದವರೆಗೂ ಗುರುತಿಸಿಕೊಂಡಿದ್ದ ಶಿರೋಮಣಿ ಅಕಾಲಿ ದಳವು ಕೃಷಿ ಸಂಬಂಧಿತ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಮೈತ್ರಿಕೂಟದಿಂದ ಹೊರ ನಡೆಯಿತು. ಕೇಂದ್ರ ಆಹಾರ ಸಚಿವ ಸ್ಥಾನಕ್ಕೆ ಹರ್ ಸಿಮ್ರಾತ್ ಕೌರ್ ಅವರು ರಾಜೀನಾಮೆ ಸಲ್ಲಿಸಿದರು.
- ಸಪ್ಟೆಂಬರ್.24: ಪಂಜಾಬ್ ನಲ್ಲಿ ಮೊದಲು ಮೂರು ದಿನಗಳವರೆಗೂ "ರೈಲು ತಡೆ" ಚಳುವಳಿಯನ್ನು ಆರಂಭಿಸಲಾಯಿತು. ಫೆರೋಜಿಪುರ್ ವಿಭಾಗದಲ್ಲಿ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಯಿತು. ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ಆರಂಭಿಸಿದ ಹೋರಾಟಕ್ಕೆ ತದನಂತರದಲ್ಲಿ ಹಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿದವು.
- ಸಪ್ಟೆಂಬರ್.27: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ್ದ ಮೂರು ಕೃಷಿ ಸಂಬಂಧಿತ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ಮೂಲಕ ಅನುಮೋದನೆ ನೀಡಿದರು.
ಭಾರತದಾದ್ಯಂತ ರಸ್ತೆ ತಡೆಗೆ ರೈತರ ಕರೆ
- ನವೆಂಬರ್.03: ಭಾರತದಾದ್ಯಂತ ಕೃಷಿ ಸಂಬಂಧಿತ ಕಾಯ್ದೆ ಜಾರಿ ವಿರೋಧಿಸಿ ರಸ್ತೆ ತಡೆ(ಛಕ್ಕಾ ಜಾಮ್) ನಡೆಸುವಂತೆ ರೈತ ಸಂಘಟನೆಗಳು ಕರೆ ನೀಡಿದವು.
- ನವೆಂಬರ್.25: ಪಂಜಾಬ್ ಮತ್ತು ಹರಿಯಾಣದ ರೈತರ ಪರ ಸಂಘಟನೆಗಳು "ದೆಹಲಿ ಚಲೋ" ಚಳುವಳಿಗೆ ಕರೆ ಕೊಟ್ಟವು.
- ನವೆಂಬರ್.27: ಎರಡು ದಿನಗಳ ನಂತರ ದೆಹಲಿ ಚಲೋ ಆರಂಭಿಸಿದ ರೈತರು ನವದೆಹಲಿ ಪ್ರವೇಶಿಸಿದರು. ಇದಕ್ಕೂ ಮೊದಲು ರೈತರು ಮತ್ತು ಪೊಲೀಸರ ನಡುವೆ ಮುಖಾಮುಖಿಯಾಗಿದ್ದು, ಗಡಿ ಪ್ರದೇಶದಲ್ಲಿಯೇ ಪ್ರತಿಭಟನಾನಿರತ ರೈತರನ್ನು ತಡೆ ಹಿಡಿಯಲಾಗಿತ್ತು.
- ನವೆಂಬರ್.28: ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಸಾವಿರಾರು ಪ್ರತಿಭಟನಾನಿರತ ರೈತರು ಟ್ರ್ಯಾಕ್ಟರ್, ಟ್ರ್ಯಾಲಿ ಸೇರಿದಂತೆ ನೂರಾರು ವಾಹನಗಳಲ್ಲಿ ರಾಷ್ಟ್ರ ರಾಜಧಾನಿಯನ್ನು ತಲುಪಿದರು.
- ನವೆಂಬರ್.29: ರೈತರ ಹೋರಾಟದ ನಡುವೆ ಮನ್ ಕೀ ಬಾತ್ ನಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದರು. ಎಲ್ಲ ರಾಜಕೀಯ ಪಕ್ಷಗಳು, ಸರ್ಕಾರಗಳು ರೈತರಿಗೆ ಆಶ್ವಾಸನೆಗಳನ್ನು ನೀಡುತ್ತಿದ್ದವು. ಆದರೆ ಇಂದು ರೈತರಿಗೆ ನೀಡಿದ ಭರವಸೆಗಳು ಈಡೇರುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದರು. ಅಂದು ಮಹಾರಾಷ್ಟ್ರದ ಒಬ್ಬ ರೈತನ ಬಗ್ಗೆ ಪ್ರಧಾನಿ ಮೋದಿ ಉದಾಹರಣೆ ನೀಡಿದ್ದರು. ರೈತ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಿದ ನಾಲ್ಕು ತಿಂಗಳವರೆಗೂ ಮಧ್ಯವರ್ತಿಯು ರೈತನಿಗೆ ಹಣ ಸಂದಾಯ ಮಾಡಿರಲಿಲ್ಲ ಎಂದು ಹೇಳಿದ್ದರು.
ಕೃಷಿ ಕಾಯ್ದೆ ತಿದ್ದುಪಡಿ ಪ್ರಸ್ತಾಪ ತಿರಸ್ಕರಿಸಿದ ರೈತರು
- ಡಿಸೆಂಬರ್.09: ವಿವಾದಾತ್ಮಕ ಕೃಷಿ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಕೇಂದ್ರ ಸರ್ಕಾರವು ನೀಡಿದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದರು. ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಇಲ್ಲದಿದ್ದರೆ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು.
- ಡಿಸೆಂಬರ್.13: ಹರಿಯಾಣದ ಗಡಿಯಲ್ಲಿ ರಾಜಸ್ಥಾನದಿಂದ ದೆಹಲಿಗೆ ಹೊರಟಿದ್ದ ಸಾವಿರಾರು ಪ್ರತಿಭಟನಾನಿರತ ರೈತರನ್ನು ಪೊಲೀಸರು ತಡೆದರು. ರಾಜಸ್ಥಾನ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಂದ ತೆರಳಿದ ರೈತರನ್ನು ಪೊಲೀಸರು ಅಡ್ಡಗಟ್ಟಿದ್ದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲೇ ಕುಳಿತರು.
- ಜನವರಿ.11: ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೊಬ್ದೆ, ಎ.ಎಸ್.ಬೋಪಣ್ಣ ಮತ್ತು ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.