ಮಳೆ ಬಂದರೆ ಶೃಂಗೇರಿಯ ಹೆಮ್ಮಿಗೆ ಗ್ರಾಮದ ಹೊರ ಜಗತ್ತಿನ ಸಂಪರ್ಕವೇ ಬಂದ್
ಮಳೆಗಾಗಿ ಎದುರು ನೋಡುತ್ತಾ, ಆಕಾಶದ ಕಡೆ ಕಣ್ಣು ನೆಟ್ಟು ಕಾಯುವವರ ಸಂಖ್ಯೆಯೇ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಹಾಗೊಂದು ವೇಳೆ ಮಳೆ ಬಾರದಿದ್ದರೆ ಕಂಡ- ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಾರೆ. ಆದರೆ ಅದೊಂದು ಗ್ರಾಮಕ್ಕೆ ಮಾತ್ರ ಮಳೆ ಅಂದರೆ ಸಾಕ್ಷಾತ್ ಯಮ ಬಂದಷ್ಟೇ ಭಯ. ಮಕ್ಕಳು ಶಾಲೆಗೆ ಹೋಗುವ ದಾರಿ ಕೂಡ ಆ ಯಮನನ್ನು ತಲುಪಿಸುವ ಮಾರ್ಗದಂತೆ ಕಾಣುತ್ತದೆ. ಒಂದೊಂದು ಹೆಜ್ಜೆಯನ್ನು ನಾಜೂಕಾಗಿಯೇ ಇಡಬೇಕು.
ಎಚ್ಚರ ತಪ್ಪಿ, ಒಂದು ಹೆಜ್ಜೆ ಆಚೀಚೆ ಆದರೂ ಕಥೆ ಮುಗಿಯಿತು. ಮಳೆ ಕಂಡು ಜಗತ್ತೇ ಖುಷಿಪಟ್ಟರೂ ಅದೊಂದು ಗ್ರಾಮದ ಸ್ಥಿತಿ ಮಾತ್ರ ಹಾಗಿರುವುದಿಲ್ಲ. ಮಳೆ ಬಂದರೆ ಭಯ ಪಡುವ ಆ ಗ್ರಾಮವಾದರೂ ಯಾವುದು ಹಾಗೂ ಆ ರೀತಿ ಭಯ ಪಡುವುದಕ್ಕೆ ಕಾರಣವಾದರೂ ಏನು ಎಂಬ ಕುತೂಹಲಕ್ಕಾಗಿ ಈ ವರದಿಯನ್ನು ಓದಿ.
ಮಡಿಕೇರಿಯಲ್ಲಿ ಆಶಾಭಾವ ಮೂಡಿಸಿದೆ ಮುಂಗಾರು ಮಳೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೆಮ್ಮಿಗೆ ಗ್ರಾಮದವರ ಮಳೆಗಾಲದ ಬದುಕು, ಮಳೆ ಬಂದಾಗಲೆಲ್ಲ ಪಡುವ ಬವಣೆಯನ್ನು ನೋಡಿದರೆ ಕರುಳು ಚುರ್ ಎನ್ನುತ್ತದೆ. ಕಟ್ಟಿಗೆಯಿಂದ ಸ್ಥಳಿಯರೇ ಮಾಡಿಕೊಂಡ ಸೇತುವೆಯೊಂದಿದೆ. ಅದರ ಮೇಲೆ ಇಡಲೋ-ಬೇಡವೋ ಅಂತ ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಪುಟಾಣಿಗಳು ಕಾಣಿಸುತ್ತಾರೆ. ಮಕ್ಕಳನ್ನು ಸೇತುವೆ ದಾಟಿಸಲು ಹೆಣಗಾಡುತ್ತಿರುವ ಪೋಷಕರು ಒಂದು ಕಡೆ, ಹಿರಿಯರು ಜೊತೆಗಿದ್ದರೂ ಭಯದಿಂದಲೇ ಹೆಜ್ಜೆ ಹಾಕುತ್ತಿರುವ ಮಕ್ಕಳು ಮತ್ತೊಂದು ಕಡೆ ಕಂಡುಬರುತ್ತಾರೆ.
ಹೆಮ್ಮಿಗೆ ಗ್ರಾಮಸ್ಥರಿಗೆ 70 ವರ್ಷಗಳಿಂದ ಇದೇ ಸ್ಥಿತಿ
ಒಮ್ಮೆ ಸೇತುವೆ ದಾಟಿದರೆ, "ಅಬ್ಬಾ, ಬದುಕುದ್ವಿ" ಎಂದು ನಿಟ್ಟುಸಿರುಬಿಟ್ಟಂತಾಗುತ್ತದೆ. - ಇದು ಇಂದು-ನಿನ್ನೆಯ ಸ್ಥಿತಿಯಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇದೇ ಪರಿಸ್ಥಿತಿ ಇದೆ. ಪ್ರತಿ ಮಳೆಗಾಲದಲ್ಲೂ ಹೀಗೇ ಆಗುತ್ತದೆ. ವಯಸ್ಸಿನ ಭೇದ ಇಲ್ಲದೆ ಚಿಕ್ಕವರು- ದೊಡ್ಡವರು ಎಲ್ಲರದ್ದೂ ಇಂಥದ್ದೇ ಪರಿಸ್ಥಿತಿ. ಇಂತಹ ಸ್ಥಿತಿಯು ಹೆಮ್ಮಿಗೆ ಗ್ರಾಮಸ್ಥರಿಗೆ 70 ವರ್ಷಗಳಿಂದ ಪುನರಾವರ್ತನೆ ಆಗುತ್ತಲೇ ಇದೆ. ಈ ನದಿಯಿಂದ ಆಚೆಗೆ 25ಕ್ಕೂ ಹೆಚ್ಚು ಮನೆಗಳಿದ್ದು, ಅವರು ಈ ಸೇತುವೆ ಮೇಲೆ ನಿತ್ಯ ನರಕದ ದರ್ಶನ ಕಾಣುತ್ತಿದ್ದಾರೆ. ಮಳೆಗಾಲದಲ್ಲಿ ಹೊರಬಂದವರು ಮನೆಗೆ ಹೋದಮೇಲೆ ಜೀವಂತ ಇದ್ದಾರೆ ಎಂಬ ಖಾತ್ರಿ.
ಆರು ತಿಂಗಳ ಕಾಲ ಸಾಮಾನು- ಸರಂಜಾಮು ಶೇಖರಿಸುತ್ತಾರೆ
ಸೇತುವೆ ಮೇಲೆ ಸಾಗುವಾಗ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ದಾಟಬೇಕು. ಸ್ವಾತಂತ್ರ್ಯ ಪಡೆದು ಏಳು ದಶಕಗಳೇ ಕಳೆದರೂ ಈ ಊರಿನ ಜನಕ್ಕೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕೇ ಇಲ್ಲ. ಇಲ್ಲಿನ ಗ್ರಾಮಸ್ಥರು ಮಳೆಗಾಲ ಆರಂಭಕ್ಕೂ ಮುನ್ನವೇ ಆರು ತಿಂಗಳಿಗೆ ಬೇಕಾಗುವ ಸಾಮಾನು- ಸರಂಜಾಮುಗಳನ್ನು ಶೇಖರಿಸಿಕೊಳ್ಳುತ್ತಾರೆ. ತೀರಾ ತುರ್ತು, ಅನಿವಾರ್ಯ ಅಂದಾಗ ಮಾತ್ರ ಊರನ್ನು ಬಿಟ್ಟು ಹೊರಗೆ ಬರುತ್ತಾರೆ. ಇಲ್ಲವಾದರೆ ಗ್ರಾಮವೇ ಅವರಿಗೆ ಜಗತ್ತು. ಮಳೆ ಜೋರಿದ್ದು, ಹಳ್ಳವೂ ಜೋರಿದ್ದರೆ ಮಕ್ಕಳಿಗೆ ಶಾಲೆ ರಜಾ. ಈ ರೀತಿ ರಜಾ ಸರಕಾರ ಕೊಡೋದಲ್ಲ; ಇವರೇ ತೆಗೆದುಕೊಳ್ಳುವುದು. ಆ ರಜಾ ಎಷ್ಟು ದಿನ ಬೇಕಾದರೂ ಆಗಬಹುದು.
ಮಡಿಕೇರಿಯಲ್ಲಿ ಭಾರೀ ಮಳೆ; ನಾಪೋಕ್ಲು-ಭಾಗಮಂಡಲ ರಸ್ತೆ ಮೇಲೆ ನೀರು
ಸರಕಾರ 65 ಲಕ್ಷ ಹಣ ಬಿಡುಗಡೆ ಮಾಡಿತ್ತು
ಹಳ್ಳಕ್ಕೆ ಒಂದು ಸೇತುವೆ ನಿರ್ಮಿಸಿಕೊಡುವಂತೆ ಸ್ಥಳಿಯರು ಬೇಡಿಕೊಳ್ಳದ ರೀತಿ ಇಲ್ಲ. 70 ವರ್ಷಗಳ ಬಳಿಕ ಸರಕಾರ 65 ಲಕ್ಷ ಹಣ ಬಿಡುಗಡೆ ಮಾಡಿ, ಸೇತುವೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಮತ್ತದೇ ಸರಕಾರವು ಆ ಸೇತುವೆ ಯೋಜನೆಗೆ ಎಳ್ಳು-ತುಪ್ಪ-ಹಾಲು-ನೀರು ಎಲ್ಲವನ್ನೂ ಬಿಟ್ಟಿತು. 65 ಲಕ್ಷದಲ್ಲಿ 15 ಲಕ್ಷದ ಕೆಲಸ ಆಗುತ್ತಿದ್ದಂತೆ ಅರಣ್ಯ ಇಲಾಖೆ ಕೊಕ್ಕೆ ಹಾಕಿ, ಈ ಜಾಗ ನಮ್ಮದು ಎಂದು ಹೇಳಿದೆ. ಅಲ್ಲಿಗೆ ಕೆಲಸಕ್ಕೆ ಕಲ್ಲು ಬಿದ್ದಿದೆ. ಒಟ್ಟಾರೆ, ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದ್ದು ಜೋಗಿಗೆ ಎಂಬಂತೆ ಗ್ರಾಮಸ್ಥರಿಗೆ ಕೊನೆಗೆ ಉಳಿದಿದ್ದು ಮತ್ತದೇ ಕಾಲುಸಂಕ.
ಕಾಲು ಸಂಕ ಯಾವಾಗ ಬೀಳುವುದೋ ಎಂದು ನಿತ್ಯ ಆತಂಕ
ಸೇತುವೆಯಾಗುತ್ತದೆ ಎಂದಾಗ ಗ್ರಾಮಸ್ಥರಲ್ಲಿ ಖುಷಿ ಮನೆ ಮಾಡಿತು. "ಅರಣ್ಯ ಇಲಾಖೆ ಕಲ್ಲಾಕ್ದಾಗ ನಮ್ ಹಣೆಬರಹ ಇಷ್ಟೆ" ಎಂದು ಸುಮ್ಮನಾದೆವು ಎನ್ನುತ್ತಾರೆ ಗ್ರಾಮಸ್ಥರು. ಇದೀಗ ಮತ್ತದೇ ಕಾಲುಸಂಕದಲ್ಲಿ ಬೆಳಗ್ಗೆ ಬೀಳತ್ತೋ, ಸಂಜೆ ಬೀಳತ್ತೋ ಎಂಬ ಆತಂಕದಲ್ಲೇ ಜೀವನ ಸವೆಸುತ್ತಿದ್ದಾರೆ. ವೇದಿಕೆ ಮೇಲೆ ಅಭಿವೃದ್ಧಿಯ ಜಪ ಪಠಿಸುವ ಸರಕಾರ ಇಂತಹ ಗ್ರಾಮಗಳಿಗೆ ಮೂಲಸೌಲಭ್ಯ ಒದಗಿಸಿಕೊಟ್ಟರೆ ಅದರ ಅಸ್ತಿತ್ವಕ್ಕೊಂದು ಅರ್ಥ ಬರುತ್ತದೆ. ಅಂದ ಹಾಗೆ ಎಲ್ಲ ಸಚಿವರು ಸಹ ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿ, ರಾಜ್ಯ ಸರಕಾರ ಉಳಿಸುವುದಕ್ಕೆ ಶ್ರಮಿಸುತ್ತಿದ್ದಾರೆ. ಹೆಮ್ಮಿಗೆ ಗ್ರಾಮದ ನೆನಪು ಒಮ್ಮೆಗೆ ಆಗಬೇಕು ಅಂದರೆ ಹೇಗೆ, ಅಲ್ಲವೆ?