ಹೀಟ್ ವೇವ್ನಿಂದ ದೇಹದ ಮೇಲಾಗುವ ಪರಿಣಾಮಗಳೇನು?
ಭಾರತದ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿದ್ದು ಹೆಚ್ಚಿನ ಭಾಗಗಳಲ್ಲಿ ಬೇಸಿಗೆಯ ಬಿಸಿ ಹೆಚ್ಚಾಗಿದೆ. ಸೂರ್ಯನ ಶಾಖಕ್ಕೆ ಜನ ಮನೆ ಬಿಟ್ಟು ಹೊರಬರಲಾಗುತ್ತಿಲ್ಲ. ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಜನ ಮನೆ ತೊರೆಯಲಾಗುತ್ತಿಲ್ಲ. ಸುಡು ಬಿಸಿಲಿಗೆ ಜನ ಬೆಂದು ಹೈರಾಣಾಗಿದ್ದಾರೆ. ಛತ್ರಿ, ದುಪ್ಪಟ್ಟ್, ಕ್ಯಾಪ್ಗಳೊಂದಿಗೆ ಹೊರಬರಬೇಕಾದಂತ ಸ್ಥಿತಿ ಇದೆ.
ಜೊತೆಗೆ ಭಾರತದ ಹೆಚ್ಚಿನ ಭಾಗಗಳಲ್ಲಿ ಈ ಬಾರಿ ಶಾಖದ ವಾತಾವರಣ ಹೆಚ್ಚಿರುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಭಾರತದ ಹವಾಮಾನ ಇಲಾಖೆಯು ಏಪ್ರಿಲ್ 27ರಿಂದ ಮೇ 2ರವರೆಗೆ ಕನಿಷ್ಠ ಮುಂದಿನ ಐದು ದಿನಗಳವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆ ಎಚ್ಚರಿಕೆ ನೀಡಿದೆ. ಮಾರ್ಚ್ ಆರಂಭದಿಂದಲೂ ತೀವ್ರ ಶಾಖದ ಅಲೆಯು ದೇಶವನ್ನು ಸುಡಲಾರಂಭಿಸಿದೆ. ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಇದನ್ನೂ ಮೀರುವ ಸಾಧ್ಯತೆ ಇದೆ. ವಾಯುವ್ಯ ಭಾರತವು ಕಳೆದ ವಾರದಿಂದ ಮಾರ್ಚ್ನಿಂದ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಿದೆ. ಹವಾಮಾನ ತಜ್ಞರು ಇದು ಲಘು ಮಳೆ ಮತ್ತು ಗುಡುಗು ಸಹಿತ ಮಳೆಯ ಅನುಪಸ್ಥಿತಿಗೆ ಕಾರಣವೆಂದು ಹೇಳುತ್ತಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯಕ್ಕಿಂತ ಐದು ಪಟ್ಟು ಹೆಚ್ಚಾದ ತಾಪಮಾನ
ಶಾಖದ ಅಲೆ ಎಂದರೇನು?
ಹೀಟ್ವೇವ್ ಅಥವಾ ಶಾಖದ ಅಲೆ ಅತಿಯಾದ ಬಿಸಿ ವಾತಾವರಣದ ಅವಧಿಯಾಗಿದ್ದು ಅದು ಎರಡು ದಿನಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಈ ಹೀಟ್ವೇವ್ ಅಧಿಕ ಪ್ರದೇಶವನ್ನು ಆವರಿಸುತ್ತದೆ. ಈ ವೇಳೆ ಹೆಚ್ಚಿನ ಜನರು ಅಪಾಯಕಾರಿ ಶಾಖದ ಪರಿಸ್ಥಿತಿಗಗಳಿಗೆ ಎದುರಿಸಬೇಕಾಗುತ್ತದೆ. ಶಾಖದ ಅಲೆಯಿಂದಾಗಿ ನಿರ್ಜಲೀಕರಣ ಮತ್ತು ಬಾಯಾರಿಕೆ, ಬಳಲಿಕೆ ಎದುರಿಸಬಹುದು.
ಒಂದು ಪ್ರದೇಶಕ್ಕೆ ಶಾಖದ ಅಲೆಯನ್ನು ಘೋಷಿಸಲು ಭಾರತೀಯ ಹವಾಮಾನ ಇಲಾಖೆ (IMD) ನಿಗದಿಪಡಿಸಿದ ಹಲವಾರು ಮಾನದಂಡಗಳಿವೆ. ಗರಿಷ್ಠ ತಾಪಮಾನವು ಬಯಲು ಪ್ರದೇಶದಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್, ಕರಾವಳಿಯಲ್ಲಿ ಕನಿಷ್ಠ 37 ಡಿಗ್ರಿ ಸೆಲ್ಸಿಯಸ್ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ಅದನ್ನು ಶಾಖದ ಅಲೆ ಎಂದು ಘೋಷಿಸಲಾಗುತ್ತದೆ.
ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್ ಮತ್ತು 6.4 ಡಿಗ್ರಿ ಸೆಲ್ಸಿಯಸ್ ನಡುವೆ ಏರಿದಾಗಲೂ ಸಹ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ. ಜೊತೆಗೆ ಒಂದು ಪ್ರದೇಶವು ಯಾವುದೇ ದಿನದಲ್ಲಿ 45 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಮತ್ತು 47 ಡಿಗ್ರಿ ಸೆಲ್ಸಿಯಸ್ವರೆಗೆ ಗರಿಷ್ಠ ತಾಪಮಾನವನ್ನು ದಾಖಲಿಸಿದಾಗ ಹೀಟ್ವೇವ್ಗೆ ಮೂರನೇ ಸ್ಥಿತಿ ಉಂಟಾಗುತ್ತದೆ.
ಶಾಖದ ಅಲೆಗಳು ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
*ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ತಾಪಮಾನ ದೈಹಿಕ ಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ನಿರ್ಲಕ್ಷಿಸಿದರೆ ಮಾರಣಾಂತಿಕವಾಗಬಹುದು. ಒಬ್ಬ ವ್ಯಕ್ತಿಯು ಹೆಚ್ಚಿದ ತಾಪಮಾನದಲ್ಲಿ ಹೆಚ್ಚು ಕಾಲ ಉಳಿದರೆ ಅವನ ದೇಹದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗಬಹುದು.
*ದೇಹದ ಉಷ್ಣತೆಯು ಹೆಚ್ಚಾದಂತೆ, ರಕ್ತನಾಳಗಳು ಸಹ ತೆರೆದುಕೊಳ್ಳುತ್ತವೆ. ಇದು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ದೇಹದಾದ್ಯಂತ ರಕ್ತವನ್ನು ಪರಿಚಲನೆ ಮಾಡಲು ಹೃದಯವು ಹೆಚ್ಚು ಕೆಲಸ ಮಾಡುತ್ತದೆ.
*ಕಡಿಮೆ ರಕ್ತದೊತ್ತಡದ ಪರಿಣಾಮಗಳನ್ನು ತಲೆತಿರುಗುವಿಕೆ, ತಲೆನೋವು ಮತ್ತು ವಾಕರಿಕೆ ಮೂಲಕ ಅನುಭವಿಸಬಹುದು.
*ಶಾಖದ ವಿರುದ್ಧ ಹೋರಾಡಲು, ದೇಹವು ಹೆಚ್ಚು ಬೆವರುತ್ತದೆ. ಇದು ದೇಹದಲ್ಲಿ ಉಪ್ಪು ಮತ್ತು ದ್ರವಗಳ ನಷ್ಟಕ್ಕೆ ಕಾರಣವಾಗುತ್ತದೆ. ಜೊತೆಗೆ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
*ಕಡಿಮೆ ರಕ್ತದೊತ್ತಡ ಮತ್ತು ನಿರ್ಜಲೀಕರಣವು ಸ್ನಾಯು ಸೆಳೆತ, ಗೊಂದಲ ಮತ್ತು ಮೂರ್ಛೆಗೆ ಕಾರಣವಾಗಬಹುದು. ರಕ್ತದೊತ್ತಡ ತುಂಬಾ ಕಡಿಮೆಯಾದರೆ, ಅದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಸುರಕ್ಷಿತವಾಗಿರಲು ಏನು ಮಾಡಬೇಕು?
*ದೇಹದಲ್ಲಿ ದ್ರವ, ಉಪ್ಪಿನ ಸಮತೋಲನವನ್ನು ಕಾಪಾಡಿಕೊಳ್ಳಲು ನೀರನ್ನು ಕುಡಿಯಬೇಕು ಮತ್ತು ಹೆಚ್ಚಿನ ನೀರಿನ ಅಂಶವಿರುವ ಆಹಾರವನ್ನು ಸೇವಿಸಬೇಕು.
*ಹೊರಹೋಗುವಾಗ ಸಡಿಲವಾದ ಬಟ್ಟೆಗಳನ್ನು ಧರಿಸಿ ಮತ್ತು ಪ್ರಯಾಣ ಮಾಡುವಾಗ ಸಾಧ್ಯವಾದಷ್ಟು ನೆರಳಿನಲ್ಲಿ ಇರಲು ಪ್ರಯತ್ನಿಸಿ. ಶಾಖದ ಅಲೆಯ ಸಮಯದಲ್ಲಿ ಪ್ರಯಾಣ ಮತ್ತು ವ್ಯಾಯಾಮವನ್ನು ಮಿತಿಗೊಳಿಸಬೇಕು.
*ಯಾರಿಗಾದರೂ ಶಾಖದ ಪ್ರಭಾವ ಕಂಡುಬಂದರೆ, ತಕ್ಷಣ ಅವರನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಮಲಗಿಸಬೇಕು. ಪೀಡಿತ ವ್ಯಕ್ತಿಗೆ ಕುಡಿಯಲು ಸಾಕಷ್ಟು ನೀರು ಅಥವಾ ಪುನರ್ಜಲೀಕರಣ ದ್ರವವನ್ನು ನೀಡಬೇಕು.