ಇದು 'ಹೃದಯ'ದ ವಿಷಯ: ಮಧ್ಯಮ ವಯಸ್ಕರಿಗೆ ಹೆಚ್ಚು 'ಆಘಾತ'!
ಬೆಂಗಳೂರು, ಅಕ್ಟೋಬರ್ 30: ತೀವ್ರ ಹೃದಯಾಘಾತ. ಕರ್ನಾಟಕದ ಕೋಟಿ ಕೋಟಿ ಕನ್ನಡಿಗರಿಗೆ ಇದೊಂದು ಕಾಯಿಲೆ ಬಗ್ಗೆ ಈಗ ಕೆಂಡದಷ್ಟು ಕೋಪ. ಏಕೆಂದರೆ ಲಕ್ಷಾಂತರ ಅಭಿಮಾನಿ ಬಳಗವನ್ನು ಸಂಪಾದಿಸಿದ ದೊಡ್ಮನೆ ಹುಡುಗ, ಅಣ್ಣಾವ್ರ ಮಗ ಹಾಗೂ ಖ್ಯಾತ ನಟರ ಸಾಲಿನಲ್ಲಿ ನಿಲ್ಲುವ ಪುನೀತ್ ರಾಜಕುಮಾರ್ ತಮ್ಮ 46ನೇ ವಯಸ್ಸಿನಲ್ಲಿ ಪ್ರಾಣ ಬಿಡುವುದಕ್ಕೆ ಇದೇ ಹೃದಯಾಘಾತ ಕಾರಣವಾಗಿದೆ.
ಆರೋಗ್ಯವಂತ ವ್ಯಕ್ತಿಗಳಲ್ಲೂ ಹೃದಯಾಘಾತ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ವೈದ್ಯರ ಪ್ರಕಾರ ಹಲವು ಕಾರಣಗಳಿವೆ. ಪುನೀತ್ ರಾಜಕುಮಾರ್ ಸಾವಿನ ಬೆನ್ನಲ್ಲೇ ಹೃದಯಾಘಾತ ಹೆಚ್ಚಾಗಿ ಸಂಭವಿಸುವುದಕ್ಕೆ ಕಾರಣವೇನು ಎಂಬುದರ ಕುರಿತಾದ ಪ್ರಶ್ನೆಗಳಿಗೆ ತಜ್ಞ ವೈದ್ಯರು ಉತ್ತರಿಸಿದ್ದಾರೆ.
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿಮಾನಿಗಳ ನೆಚ್ಚಿನ ಅಪ್ಪು
"ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎನ್ನುವುದು ಹೃದಯದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಅಥವಾ ರಕ್ತ ಹೆಪ್ಪುಗಟ್ಟುವಿಕೆ ಬಗ್ಗೆ ಸೂಚಿಸುತ್ತದೆ, ಅಲ್ಲದೇ ಇದು ಹೃದಯಕ್ಕೆ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ," ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ ಮಂಜುನಾಥ್ ಸಿಎನ್ ತಿಳಿಸಿದ್ದಾರೆ.
ದಿಢೀರ್ ಹೃದಯಾಘಾತಕ್ಕೆ ಕಾರಣ?
"ಪ್ಲೇಕ್ಗಳ ರಚನೆಯಿಂದಾಗಿ ರಕ್ತದ ಹರಿವು ಇದ್ದಕ್ಕಿದ್ದಂತೆ ನಿರ್ಬಂಧಿಸಲ್ಪಟ್ಟಾಗ, ಕೊಲೆಸ್ಟ್ರಾಲ್ ಸೇರಿದಂತೆ ಕೊಬ್ಬಿನ ಅಂಶ ಹೊರ ಬರುತ್ತದೆ. ಅದರಿಂದ ಪರಿಧಮನಿ ಮತ್ತು ಅಪಧಮನಿಗಳು ಕಿರಿದಾಗಬಹುದು, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ," ಎಂದು ತಜ್ಞರು ಹೇಳಿದ್ದಾರೆ.
ಮಧ್ಯಮ ವಯಸ್ಸಿನವರಲ್ಲಿ ಹೃದಯ ಸಂಬಂಧಿ ಕಾಯಿಲೆ
ಕಳೆದ ಇತ್ತೀಚಿನ ವರ್ಷಗಳಲ್ಲಿ ಮಧ್ಯಮ ವಯಸ್ಕರಿಗೆ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದರ ಜೊತೆ ಯುವಕರಲ್ಲೂ ಹೃದ್ರೋಗ ಸಮಸ್ಯೆಗಳು ಹೆಚ್ಚಾಗಿ ಗೋಚರಿಸುತ್ತಿವೆ. ರಾಜ್ಯವಲ್ಲ ದೇಶಾದ್ಯಂತ ಹೃದಯ ಸಂಬಂಧಿ ರೋಗಗಳನ್ನು ಹೊಂದಿರುವವರಲ್ಲಿ ಶೇ.25ರಷ್ಟು ಮಂದಿ 45 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ ಎಂದು ಗೊತ್ತಾಗಿದೆ.
ಶುಗರ್, ಬಿಪಿ ಇರುವವರಿಗೂ ಹೃದ್ರೋಗ ಕಾಯಿಲೆ
ಮಧ್ಯಮ ವಯಸ್ಕರು ಮತ್ತು ಯುವಕರಲ್ಲಿ ಅತಿಹೆಚ್ಚು ಹೃದಯಾಘಾತದ ಸಮಸ್ಯೆಗಳು ಗೋಚರಿಸುತ್ತಿವೆ. ಈ ಪೈಕಿ ಶೇ.30ರಷ್ಟು ಯುವಕರಲ್ಲಿ ಧೂಮಪಾನ, ರಕ್ತದೊತ್ತಡ(ಬಿಪಿ), ಸಕ್ಕರೆ ಕಾಯಿಲೆ(ಶುಗರ್) ಹಾಗೂ ಇತರೆ ಸಮಸ್ಯೆಗಳಿಲ್ಲದವರೇ ಆಗಿದ್ದಾರೆ. "ಇಂತಹ ತೀವ್ರ ಹೃದಯಾಘಾತದ ಘಟನೆಗಳಿಗೆ ಯಾವುದೇ ನಿಖರವಾದ ಕಾರಣವಿಲ್ಲದಿದ್ದರೂ, "ಜೀವನಶೈಲಿಯ ವಿಧಾನ, ನಿಮ್ಮ ಆಹಾರ ಸೇವನೆ ರೀತಿ, ದಿನಚರಿಯ ವ್ಯಾಯಾಮ ಮತ್ತು ಒತ್ತಡದ ಮಟ್ಟವನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದರ ಮೇಲೆ ಹೃದಯಾಘಾತದ ಪ್ರಭಾವ ನಿರ್ಧಾರವಾಗುತ್ತದೆ," ಎಂದು ಅಪೋಲೋ ಆಸ್ಪತ್ರೆಗಳ ಹೃದ್ರೋಗ ತಜ್ಞ ಡಾ ಅಭಿಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಏಕಾಏಕಿ ಹೃದಯಾಘಾತ
"ಅನೇಕ ಜನರಲ್ಲಿ ಹೃದಯಾಘಾತಕ್ಕೂ ಪೂರ್ವದಲ್ಲಿ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಎದೆಯ ಅಸ್ವಸ್ಥತೆ, ಹಿಂದಿನ ಹೃದಯ ಕಂಡೀಷನಿಂಗ್ ಮುಂತಾದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಆದರೆ ಪುನೀತ್ ರಾಜಕುಮಾರ್, ಸಿದ್ಧಾರ್ಥ್ ಶುಕ್ಲಾ ಮತ್ತು ಚಿರಂಜೀವಿ ಸರ್ಜಾ ಅವರಂತಹ ಕೆಲವು ಸನ್ನಿವೇಶಗಳಲ್ಲಿ ಯಾವುದೇ ರೀತಿ ಎಚ್ಚರಿಕೆ ಲಕ್ಷಣಗಳು ಗೋಚರಿಸದೇ ಏಕಾಏಕಿ ಹೃದಯಾಘಾತ ಸಂಭವಿಸುತ್ತದೆ," ಎಂದು ಡಾ ಮಂಜುನಾಥ್ ಹೇಳಿದ್ದಾರೆ.
ಜಿಮ್ನಲ್ಲಿ ತೀವ್ರವಾದ ವ್ಯಾಯಾಮ, ಪ್ರೋಟೀನ್ ಶೇಕ್ಸ್ ಮತ್ತು ಇತರ ಅಂಶಗಳು ಹೃದಯಾಘಾತಕ್ಕೆ ಪ್ರಚೋದಿಸಬಹುದು. ತೂಕವನ್ನು ಎತ್ತುವಂತಹ ಐಸೊಮೆಟ್ರಿಕ್ ವ್ಯಾಯಾಮಗಳನ್ನು ತಪ್ಪಿಸುವುದು ಯಾವಾಗಲೂ ಉತ್ತಮವಾಗಿದೆ. ಅದರ ಬದಲಿಗೆ ವಾಕಿಂಗ್ ಮತ್ತು ಸೈಕ್ಲಿಂಗ್ನಂತಹ ಐಸೊಟೋನಿಕ್ ವ್ಯಾಯಾಮಗಳನ್ನು ಮಾಡಿ. ಐಸೊಮೆಟ್ರಿಕ್ ವ್ಯಾಯಾಮವು ಸ್ನಾಯುಗಳಿಗೆ ಒತ್ತಡ ನೀಡುತ್ತದೆ, ಇದು ಹೃದಯದಲ್ಲಿನ ಪ್ಲೇಕ್ಗಳನ್ನು ಛಿದ್ರಗೊಳಿಸುತ್ತದೆ ಎಂದು ಡಾ ಮಂಜುನಾಥ್ ಹೇಳಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ
* ನಿಯಮಿತ ಹೃದಯ ತಪಾಸಣೆ
* ಕೌಟುಂಬಿಕವಾಗಿ ಹೃದಯ ಸಂಬಂಧಿತ ಕಾಯಿಲೆಗಳನ್ನು ಹೊಂದಿದ್ದರೆ ಹೃದ್ರೋಗ ಶಾಸ್ತ್ರಜ್ಞರನ್ನು ಭೇಟಿ ಮಾಡಿ
* ಜಡವಾದ ಜೀವನಶೈಲಿಯನ್ನು ಬದಲಾಯಿಸಬೇಕು
* ಹೆಚ್ಚುವರಿ ಸಕ್ಕರೆ ಸೇವನೆಯನ್ನು ಬಿಡಿ, ಲಿಪಿಡ್ಗಳನ್ನು ಪರೀಕ್ಷಿಸಿಕೊಳ್ಳಿ ಹಾಗೂ ಕೊಬ್ಬಿನಾಂಶ ಹೆಚ್ಚಿಸುವ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿರಿಸಿ.
* ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು
* ಐಸೊಮೆಟ್ರಿಕ್ ವ್ಯಾಯಾಮ ತಪ್ಪಿಸಿ, ಹೆಚ್ಚು ಐಸೊಟೋನಿಕ್ ವ್ಯಾಯಾಮಗಳನ್ನು ಮಾಡಿ
* ಅನಗತ್ಯವಾಗಿ ಪೂರಕ ಅಂಶಗಳನ್ನು ತೆಗೆದುಕೊಳ್ಳಬೇಡಿ