ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ದೈವಬಲದಿಂದನಾ?
Recommended Video
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮತದಾರರು ನೀಡಿದ ಮತದಿಂದಲ್ಲ ದೈವ ಬಲದಿಂದಲೆ? ಮುಖ್ಯಮಂತ್ರಿ ಆಗಿದ್ದು ಮಾತ್ರವಲ್ಲ, ಆ ಸ್ಥಾನದಲ್ಲಿ ಮುಂದುವರಿದಿರುವುದು ಕೂಡ ದೈವ ಬಲದಿಂದ ಎನ್ನುವುದು ಕೂಡ ಅಷ್ಟೇ ಅಚ್ಚರಿಯ ಮತ್ತು ಸತ್ಯ ಸಂಗತಿ.
ಹೀಗಾಗಿ ಅವರು ಸದಾ ದೇಗುಲ, ಹೋಮ ಹವನ ಮೊದಲಾದ ಕಾರ್ಯಗಳಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ. ಶ್ರೀ ಕಾಲಭೈರವೇಶ್ವರ ಸ್ವಾಮಿಯ ಭಕ್ತರಾಗಿರುವ ಕುಮಾರಸ್ವಾಮಿ ಅವರು ದೇವರ ದಯೆಯಿಂದಲೇ ಎಲ್ಲ ರೀತಿಯ ಅಡೆತಡೆಗಳಿಂದ ಪಾರಾಗುತ್ತಾ ಮುಂದೆ ಸಾಗುತ್ತಿದ್ದಾರೆ ಎನ್ನುವುದು ಅಷ್ಟೇ ಸತ್ಯ.
ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದ ಇಲ್ಲಿವರೆಗೆ ಗೊಂದಲ, ಆತಂಕ, ಭಯದಲ್ಲಿಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಡಳಿತ ನಡೆಸುತ್ತಿದ್ದಾರೆ. ಅವರು ನೇತೃತ್ವದ ಸರ್ಕಾರ ಇನ್ನೇನು ಬಿದ್ದು ಹೋಯಿತು ಎನ್ನುವಾಗಲೇ ಯಾವುದಾದರೊಂದು ರೀತಿಯಿಂದ ಪಾರಾಗಿ ಮುನ್ನಡೆಯುತ್ತಿದ್ದಾರೆ.
ನಿಖಿಲ್ ಮದುವೆ, ಪ್ರತ್ಯಂಗಿರ ಯಾಗ: ಏಕಾಗಿ ಎಚ್ ಡಿಕೆ ಶೃಂಗೇರಿ ಭೇಟಿ?
ಕಾಂಗ್ರೆಸ್ ಮತ್ತು ಜೆಡಿಎಸ್ನ ಘಟಾನುಘಟಿ ನಾಯಕರು ಸಚಿವ ಸಂಪುಟದಲ್ಲಿದ್ದರೂ ಎಲ್ಲ ಸಮಸ್ಯೆಗಳನ್ನು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎನ್ನುವುದು ಇಲ್ಲಿನವರೆಗಿನ ಬೆಳವಣಿಗೆಗಳನ್ನು ನೋಡಿದ ರಾಜ್ಯದ ಜನತೆಗೆ ಅರ್ಥವಾಗಿರುತ್ತದೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೇ ಬೇಕೆಂಬ ಬಯಕೆ ಹೊಂದಿದ್ದರು. ಆದರೆ ಅವರು ಪಕ್ಷ ಸಂಘಟನೆ ಮಾಡಿ ಆಡಳಿತಕ್ಕೆ ಬೇಕಾದ ಮ್ಯಾಜಿಕ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರೂ ಮುಖ್ಯಮಂತ್ರಿ ಆಗುವಲ್ಲಿ ಸಫಲರಾಗಿರುವುದು ದೈವ ಬಲದಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾಲಭೈರವೇಶ್ವರನಿಗೆ ಅಮಾವಾಸ್ಯೆಯಂದು ಪೂಜೆ
ವಿಧಾನಸಭಾ ಚುನಾವಣೆ ಮೊದಲೇ ಅವರು ರಾಜ್ಯ ಮತ್ತು ಹೊರ ರಾಜ್ಯದಲ್ಲಿರುವ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರಲ್ಲದೆ, ಹೋಮ ಹವನಗಳನ್ನು ಮಾಡಿದ್ದರು ಎನ್ನುವುದನ್ನು ಕೂಡ ಇಲ್ಲಿ ಸ್ಮರಿಸಬಹುದು. ಇನ್ನು ಸಿಎಂ ಕುಮಾರಸ್ವಾಮಿ ಅವರು ಆದಿ ಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಪರಮ ಭಕ್ತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಹಿಂದೆ ಪ್ರತಿ ಅಮಾವಾಸ್ಯೆಯಂದು ಆದಿ ಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಬರುತ್ತಿದ್ದರು. ಅಮವಾಸ್ಯೆಯಂದು ಯಾವುದಾದರೂ ಕಾರ್ಯ ಕೈಗೊಂಡರೆ ಅದು ನೆರವೇರುತ್ತದೆ ಎಂಬುದನ್ನು ಬಲವಾಗಿ ನಂಬಿರುವ ಸಿಎಂ ಕೆಲವು ಕೆಲಸಗಳನ್ನು ಅಮಾವಾಸ್ಯೆಯಂದೇ ಮಾಡುತ್ತಾರೆ ಎನ್ನುವುದು ಕೂಡ ಅಷ್ಟೇ ಸತ್ಯ ಅದಕ್ಕೆ ಉದಾಹರಣೆ ಪಾಂಡವಪುರದ ಸೀತಾಪುರ ಗ್ರಾಮದಲ್ಲಿ ನಾಟಿ ಕಾರ್ಯಕ್ಕೆ ಮತ್ತು ಕೊಯ್ಲಿಗೆ ಚಾಲನೆ ನೀಡಿದ್ದು ಸಾಕ್ಷಿಯಾಗಿದೆ.
ಮಾಟ-ಮಂತ್ರ ಕುಮಾರಸ್ವಾಮಿ ಮೇಲೆ ಪರಿಣಾಮ ಬೀರಲ್ಲ: ರೇವಣ್ಣ
ನಂಜುಂಡೇಶ್ವರನಿಗೆ ಹುಣ್ಣಿಮೆಯಂದು ಪೂಜೆ
ಆದಿಚುಂಚನಗಿರಿಯ ಶ್ರೀ ಕಾಲಬೈರವೇಶ್ವರ ಸ್ವಾಮಿಗೆ ಅಮವಾಸ್ಯೆಯಂದು, ನಂಜನಗೂಡಿನ ನಂಜುಂಡೇಶ್ವರನಿಗೆ ಹುಣ್ಣಿಮೆಯಂದು ಪೂಜೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯಿದೆ. ಅದರಂತೆ ಚುನಾವಣೆಗೆ ಮುನ್ನ ಕುಮಾರಸ್ವಾಮಿ ಅವರು ಇದೆರಡು ದೇಗುಲಕ್ಕೆ ಕುಟುಂಬ ಸಹಿತ ಆಗಮಿಸಿ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಚುನಾವಣೆ ಫಲಿತಾಂಶದ ಬಳಿಕ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಾಗ ಅಯ್ಯೋ ಮುಗಿದೇ ಹೋಯಿತು, ಅವರು ಮಾಡಿದ ವ್ರತ ಕಾಪಾಡಲಿಲ್ಲವಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಅಭಯವೋ ಏನೋ? ಕಾಂಗ್ರೆಸ್ನ ನಾಯಕರೇ ಅವರ ಬಳಿಗೆ ತೆರಳಿ ನೀವೇ ಮುಖ್ಯ ಮಂತ್ರಿ ಆಗಿ ಎಂಬ ಆಹ್ವಾನ ನೀಡಿದ್ದರು. ಆ ಮೂಲಕ ನಂಬಿದ ಕಾಲಭೈರವೇಶ್ವರ ಅವರ ಕೈಹಿಡಿದಿದ್ದನು.
ಮಲೆ ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲೇ ಮೆಟ್ಟಿಲು: ಸಿಎಂ ಭರವಸೆ
ಅಮಾವಾಸ್ಯೆ ಮೇಲೆ ಒಂದು ರೀತಿಯ ನಂಬಿಕೆ
ಸಾಮಾನ್ಯವಾಗಿ ಹಲವರು ಅಮಾವಾಸ್ಯೆ ಎಂದರೆ ಭಯಪಡುತ್ತಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಅಂದೇ ತನ್ನ ಒಳ್ಳೆಯ ಕಾರ್ಯಗಳಿಗೆ ಪ್ರಸ್ತುತ ಎಂದು ನಂಬುತ್ತಾರೆ. ಹೀಗಾಗಿ ಅವರು ಆಗಸ್ಟ್ 11ರ ಅಮಾವಾಸ್ಯೆಯಂದು ಆದಿ ಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆ ನಂತರ ಪಾಂಡವಪುರದ ಸೀತಾಪುರ ಗ್ರಾಮಕ್ಕೆ ಆಗಮಿಸಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆ ನಂತರ ಭತ್ತದ ಬೆಳೆ ಕೊಯ್ಲುಗೆ ಸಿದ್ದವಾದಾಗ ಅಲ್ಲಿ ಕಾರ್ಯಕ್ರಮ ಏರ್ಪಡಿಸಿ ಚಾಲನೆ ನೀಡುವ ವಿಚಾರ ಬಂದಾಗ. ಡಿ.7ನ್ನು ಗೊತ್ತು ಮಾಡಿದ್ದರು. ಕಾರಣ ಅಂದು ಅಮಾವಾಸ್ಯೆಯಾಗಿತ್ತು. ಜತೆಗೆ ಅಂದು ಶೃಂಗೇರಿಯ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಬಂದು ಭತ್ತ ಕೊಯ್ಲಿಗೆ ಚಾಲನೆ ನೀಡಿದ್ದರು. ಇದೆಲ್ಲವನ್ನು ಗಮನಿಸಿದಾಗ ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಅಮಾವಾಸ್ಯೆ ಮೇಲೆ ಏನೋ ಒಂದು ರೀತಿಯ ನಂಬಿಕೆಯಿದೆ ಎಂಬುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ.
ದೈವ ಪ್ರೇರಣೆಯಿಂದಲಾ? ಅಥವಾ ಕಾಕತಾಳಿಯವೆ?
ದೈವದ ಮೇಲೆ ನಂಬಿಕೆ ಇಟ್ಟಿರುವವರು ದೈವ ಬಲದಿಂದಲೇ ಇದನ್ನೆಲ್ಲ ಸಾಧಿಸಿದ್ದು ಎಂದು ಹೇಳುವುದು ಸ್ವಾಭಾವಿಕ. ದೇವರ ಮೇಲೆ ಎಳ್ಳಷ್ಟು ನಂಬಿಕೆ ಇಲ್ಲದ ಸಿದ್ದರಾಮಯ್ಯನವರು ಕೂಡ ಹಲವು ಬಾರಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ, ಹಣೆಗೆ ಕುಂಕುಮ ಹಚ್ಚಿಸಿಕೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿ, ನರೇಂದ್ರ ಮೋದಿ, ಅಮಿತ್ ಶಾ ಅವರ ಟೆಂಪಲ್ ರನ್ ಗಳು ಜಗದ್ವಿಖ್ಯಾತವಾಗಿವೆ. ಹೋದಲ್ಲೆಲ್ಲ ಅಲ್ಲಿನ ಸುಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡುತ್ತಲೇ ಬಂದಿದ್ದಾರೆ. ಹೋದಾಗಲೆಲ್ಲ ದೇಗುಲಕ್ಕೆ ಹೋಗುವುದು ಬೇರೆ, ಸಂಕಷ್ಟಗಳು ನಿವಾರಣೆಯಾಗಲೆಂದೇ ಇಂತಹ ದೇವಸ್ಥಾನಗಳಿಗೆ ಹೋಗುವುದು ಬೇರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದಾಗಿನಿಂದಲೂ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಅವೆಲ್ಲವೂ ಆಯಾ ಕಾಲಘಟ್ಟದಲ್ಲಿ ನಿವಾರಣೆಯಾಗುತ್ತಲೇ ಬಂದಿವೆ. ಇದೂ ದೈವ ಪ್ರೇರಣೆಯಿಂದಲಾ? ಅಥವಾ ಕಾಕತಾಳಿಯವೆ? ಇದು ಅವರವರ ಭಾವಭಕುತಿಗೆ ಬಿಟ್ಟ ವಿಚಾರ.
ಚಳಿಗಾಲದ ಅಧಿವೇಶನದಲ್ಲಿ ಎಚ್ಡಿಕೆಗೆ ಅಗ್ನಿಪರೀಕ್ಷೆ
ನಾಲ್ಕೂವರೆ ತಿಂಗಳು ಪೂರೈಸಿರುವ ಕುಮಾರಸ್ವಾಮಿ ಸರಕಾರಕ್ಕೆ ಚಳಿಗಾಲದ ಅಧಿವೇಶನ ಅಗ್ನಿ ಪರೀಕ್ಷೆ ತಂದೊಡ್ಡಲಿದೆ. ರೈತರ ಸಾಲಮನ್ನಾ, ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರ ಬಾಕಿ, ಸಂಪುಟ ವಿಸ್ತರಣೆ ಮುಂತಾದ ವಿಷಯಗಳು ರಾಜಕಾರಣಿಗಳ ಚಳಿ ಬಿಡಿಸಲಿವೆ. ಸಂಪುಟ ವಿಸ್ತರಣೆ ಮೈತ್ರಿ ಸರಕಾರಕ್ಕೆ ಭಾರೀ ಕಗ್ಗಂಟಾಗಿ ಪರಿಣಮಿಸಿದೆ. ಅರ್ಧ ಡಜನ್ ಗೂ ಹೆಚ್ಚು ಹಿರಿಯ ಕಾಂಗ್ರೆಸ್ ನಾಯಕರು ಸಂಪುಟ ಸೇರಲು ಅಥವಾ ಸಂಪುಟದಲ್ಲಿ ಉನ್ನತ ಸ್ಥಾನ ಗ್ರಹಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಸಂಪುಟದಲ್ಲಿ ಅವಕಾಶ ಸಿಗದಿದ್ದರೆ ಭಿನ್ನಮತ ಸ್ಫೋಟ ಗ್ಯಾರಂಟಿ. ಡಿಸೆಂಬರ್ 22ರೊಳಗೆ ಸಂಪುಟ ವಿಸ್ತರಣೆ ಆಗುತ್ತದೆಂದು ಭರವಸೆ ನೀಡಲಾಗಿದೆ. ಕೆಲವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಈಗಾಗಲೆ ಹಲವಾರು ಇಂತಹ ತೊಂದರೆಗಳನ್ನು ಎದುರಿಸಿರುವ ಕುಮಾರಸ್ವಾಮಿ ಅವರು ಇದನ್ನೂ ನಿಭಾಯಿಸುವ ವಿಶ್ವಾಸ ಹೊಂದಿದ್ದಾರೆ.