ಮಧ್ಯಂತರ ಚುನಾವಣೆ ಗ್ಯಾರಂಟಿ ಎಂದು ದೇವೇಗೌಡರು ಹೇಳಿದ್ದೇಕೆ?
Recommended Video
ಬೆಂಗಳೂರು, ಜೂನ್ 21: "ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದೆ. ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ಹೇಳುವುದು ಕಷ್ಟ. ಕರ್ನಾಟದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು" ಎಂದು ಮಾಜಿ ಪ್ರಧಾನಿ, ಜೆಡಿಎಸ್ ಸುಪ್ರಿಮೋ ಎಚ್ ಡಿ ದೇವೇಗೌಡ ಅವರು ಹೇಳಿರುವುದು ಇದೀಗ ಭಾರೀ ಅಚ್ಚರಿ ಸೃಷ್ಟಿಸಿದೆ.
ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರದ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳು ಜೆಡಿಎಸ್ ಗೆ ಇರಿಸುಮುರಿಸುಂಟು ಮಾಡಿದ್ದು, ಈಗಾಗಲೇ ನಾಯಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವಂತೆ ದೇವೇಗೌಡರು ಕಾಂಗ್ರೆಸ್ ಹೈಕಮಾಂಡಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರ ಮಾಡಲು ನಾನು ಹೇಳಿರಲಿಲ್ಲ: ದೇವೇಗೌಡ ಅಸಮಾಧಾನ
ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಮರುದಿನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಹೈಕಮಾಂಡ್ ಮುಂದೆ ಇಬ್ಬರು ನಾಯಕರೂ ಸಮ್ಮಿಶ್ರ ಸರ್ಕಾರದ ಕುರಿತು ದೂರು ನೀಡಿದ್ದಾರೆ ಎನ್ನಲಾಗಿದೆ.
ಆದರೆ ದೇವೇಗೌಡರು ಏಕಾಏಕಿ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿರುವುದು ರಾಜ್ಯ ಸರ್ಕಾರಕ್ಕೆ ಕಂಟಕ ತಂದೊಡ್ಡಬಹುದು ಎಂಬ ಅನುಮಾನವನ್ನು ಹೆಚ್ಚಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಮೇಲೆ ಗೌಡರಿಗೇಕೆ ಮುನಿಸು?
ಗೌಡರ ಹೇಳಿಕೆ ಏನು?
"ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದು ನನಗೆ ಗೊತ್ತಿಲ್ಲ. ಕಳೆದ ಎರಡು ತಿಂಗಳುಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಅನಿವಾರ್ಯ ಎನ್ನಿಸುತ್ತಿದೆ. ಜನರಿಗೆ ಎಲ್ಲವೂ ಅರ್ಥವಾಗುತ್ತದೆ. ಮುಂದೇನಾಗುತ್ತದೆ ಎಂಬುದನ್ನು ನೋಡೋಣ" ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೇವೇಗೌಡರು ಹೇಳಿದ್ದರು.
ಲೋಕಸಭೆ ಫಲಿತಾಂಶ
ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ರಾಜ್ಯದ ಹಲವು ಕಾಂಗ್ರೆಸ್ ನಾಯಕರು, "ಜೆಡಿಎಸ್ ಜೊತೆ ಮೈತ್ರಿ ಇಲ್ಲದೆ, ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲುತ್ತಿತ್ತು" ಎಂಬ ಹೇಳಿಕೆ ನೀಡಿದ್ದರು. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಗೆ ಟಿಕೆಟ್ ನೀಡದೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದು, ಅವರು ಸೋತಿದ್ದು, ತುಮಕೂರಿನಲ್ಲಿ ಸ್ವತಃ ದೇವೇಗೌಡರೇ ಸೋತಿದ್ದು ಇತ್ಯಾದಿ ಬೆಳವಣಿಗೆಗಳು ಕಾಂಗ್ರೆಸ್ ಗೆ ಜೆಡಿಎಸ್ ಮೇಲಿದ್ದ ವಿಶ್ವಾಸವನ್ನು ಕಡಿಮೆ ಮಾಡಿದೆ. ಕಾಂಗ್ರೆಸ್ ನ ಕಳಪೆ ಪ್ರದರ್ಶನಕ್ಕೆ ಪರೋಕ್ಷವಾಗಿ ಜೆಡಿಎಸ್ ಕಾರಣ ಎಂದು ದೂರುತ್ತಿರುವುದು ದೇವೇಗೌಡರಿಗೂ ಬೇಸರವನ್ನುಂಟು ಮಾಡಿದೆ. ಅದೂ ಅಲ್ಲದೆ, ಇಂಥ ಹೇಳಿಕೆಗಳು ಜೆಡಿಎಸ್ ವರ್ಚಸ್ಸನ್ನು ಕುಗ್ಗಸಿಬಿಡುವ ಆತಂಕವಿದೆ ಎಂಬುದು ದೇವೇಗೌಡರಿಗೆ ಗೊತ್ತಿಲ್ಲದ ವಿಷಯವಲ್ಲ.
ನಮಗೇನು ಆಸೆ ಇರಲಿಲ್ಲ, ದೆಹಲಿ ನಾಯಕರು ನಿಮ್ಮ ಮಗನನ್ನು ಸಿಎಂ ಮಾಡ್ಬೇಕು ಅಂದಿದ್ರು: ದೇವೇಗೌಡ
ದುರ್ಬಲವಾದ ಕಾಂಗ್ರೆಸ್ ಹೈಕಮಾಂಡ್
ಮೈತ್ರಿ ಸರ್ಕಾರ ರಚನೆಯಾದ ಹೊತ್ತಲ್ಲಿ ಕಾಂಗ್ರೆಸ್ ಹೈಕಮಾಂಡ್ ಪ್ರಬಲವಾಗಿದ್ದಿದ್ದರಿಂದ ನೇರವಾಗಿ ಇಂಥ ಹೇಳಿಕೆಗಳನ್ನು ಕಾಂಗ್ರೆಸ್ ವಿರುದ್ಧ ನೀಡುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ದೇವೇಗೌಡರೇ ಹೇಳುವಂತೆ, ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರಿಗೂ ಈ ವಿಷಯ ಗೊತ್ತಿದೆ. ಲೋಕಸಭೆ ಚುನಾವಣೆಯ ಕಳಪೆ ಪ್ರದರ್ಶನ, ಮುಂಗಾರು ಅಧಿವೇಶನ, ಅಧ್ಯಕ್ಷರ ಬದಲಾವಣೆ ಇವೇ ವಿಷಯಗಳ ಬಗ್ಗೆ ಚಿಂತಿಸುತ್ತಿರುವ ಕಾಂಗ್ರೆಸ್ ಗೆ ರಾಜ್ಯ ನಾಯಕರು ಆಗಾಗ ತೆಗೆದುಕೊಂಡು ಹೋಗುವ ದೂರನ್ನು ಕೇಳುತ್ತ ಕೂರುವುದಕ್ಕೆ ಸಮಯವಾದರೂ ಎಲ್ಲಿದೆ? ಈ ಎಲ್ಲವೂ ಗೊತ್ತೇ ಇರುವುದರಿಂದ ದೇವೇಗೌಡರು 'ಮಧ್ಯಂತರ ಚುನಾವಣೆಯ' ಬಾಂಬ್ ಸಿಡಿಸಿದ್ದಾರೆ.
ಸರ್ಕಾರ ನಿಜಕ್ಕೂ ಬೀಳುತ್ತಾ?
ದೇವೇಗೌಡರ ಮಾತಿನಂತೆ ಸರ್ಕಾರ ನಿಜಕ್ಕೂ ಬೀಳುತ್ತಾ? ಖಂಡಿತ ಇಲ್ಲ. ಹಾಗೆ ನೋಡುವುದಕ್ಕೆ ಹೋದರೆ ಮೈತ್ರಿ ಸರ್ಕಾರದಲ್ಲಿ ದೇವೇಗೌಡರು ಮತ್ತು ಅವರ ಕುಟುಂಬ, ಪಕ್ಷಕ್ಕೆ ಸಿಕ್ಕಷ್ಟು ಮಹತ್ವ ಬೇರೆ ಯಾರಿಗೂ ಸಿಕ್ಕಿಲ್ಲ. ಸ್ವಂತ ಬಲದಿಂದ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸುವುದು ಸಾಧ್ಯವಿಲ್ಲದ ಮಾತು. ಹೀಗಿರುವಾಗ ಕಾಂಗ್ರೆಸ್ ಬೆಂಬಲ ತಾನಾಗಿಯೇ ಸಿಕ್ಕಿರುವಾಗ, ತಮ್ಮ ಆಸೆಯಂತೆ ಪುತ್ರನಿಗೇ ಮುಖ್ಯಮಂತ್ರಿ ಪಟ್ಟ ಸಿಕ್ಕಿರುವಾಗ ಸರ್ಕಾರವನ್ನು ಬೀಳಿಸುವಂಥ ಹೇಳಿಕೆಯನ್ನು ದೇವೇಗೌಡರೇಕೆ ಕೊಡುತ್ತಾರೆ?
ಮಧ್ಯಂತರ ಚುನಾವಣೆ: ದೇವೇಗೌಡರ ಮಾತನ್ನು ಪರಿಗಣಿಸುತ್ತೇವೆ ಎಂದ ಪರಮೇಶ್ವರ್
ದೇವೇಗೌಡರ ಹೇಳಿಕೆಯ ಉದ್ದೇಶವೇನು?
ಹಾಗಾದರೆ ದೇವೇಗೌಡರ ಈ ಅಚ್ಚರಿಯ ಹೇಳಿಕೆಯ ಉದ್ದೇಶವೇನು? ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ(ಮೈತ್ರಿ ಮಾಡಿಕೊಂಡಾದರೂ) ಏಕೈಕ ರಾಜ್ಯ ಕರ್ನಾಟಕ. ಈ ರಾಜ್ಯದಲ್ಲೂ ಅಧಿಕಾರ ಕಳೆದುಕೊಳ್ಳುವುದಕ್ಕೆ ಕಾಂಗ್ರೆಸ್ ಗೆ ಇಷ್ಟವಿಲ್ಲ. ಹೈ ಕಮಾಂಡ್ ಸಹ ಸಿದ್ದರಾಮಯ್ಯ ಸೇರಿದಂತೆ ದೂರು ಹೊತ್ತಯ್ದ ನಾಯಕರಿಗೆ 'ಹೊಂದಿಕೊಂಡು ಹೋಗಿ' ಎಂಬ ಸಲಹೆಯನ್ನೇ ನೀಡಿದೆ. ಆದ್ದರಿಂದ ಸರ್ಕಾರದಿಂದ ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂಬುದು ದೇವೇಗೌಡರಿಗೆ ಗೊತ್ತು. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಆತಂಕ ಸೃಷ್ಟಿಸಿ, ಸರ್ಕಾರ, ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರ ಕುರಿತು ಕಾಂಗ್ರೆಸ್ ನಾಯಕರು ವೃಥಾ ಹೇಳಿಕೆಗಳನ್ನು ನೀಡದಂತೆ ಬಾಯಿಗೆ ಬೀಗ ಹಾಕಿಸುವುದಷ್ಟೆ ಗೌಡರ ಉದ್ದೇಶವಾಗಿದ್ದಿರಬಹುದು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಯಸ್ಸಿಗಿಂತಲೂ ಹೆಚ್ಚು ವರ್ಷದ ರಾಜಕೀಯ ಅನುಭವ ಪಡೆದ ದೇವೇಗೌಡರ ರಾಜಕೀಯ ಪಟ್ಟುಗಳನ್ನು ಬಲ್ಲವರ್ಯಾರು!?