ಗಂಡು ಕಲೆ ಡೊಳ್ಳು ಕುಣಿತ ಕರಗತ ಮಾಡಿಕೊಂಡ ಯುವತಿಯರು
ಡೊಳ್ಳು ಕುಣಿತ ಗಂಡು ಕಲೆ ಎಂದೇ ಖ್ಯಾತಿ ಪಡೆದಿದೆ. ಹಾವೇರಿ ಜಿಲ್ಲೆಯ ಶ್ಯಾಡಂಬಿ ಯುವತಿಯರು ಡೊಳ್ಳು ಕುಣಿತ ಕರಗತ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿಯೂ ಡೊಳ್ಳು ಕುಣಿತದ ಪ್ರದರ್ಶನವನ್ನು ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಡೊಳ್ಳು ಕುಣಿತ ಕೇವಲ ಪುರುಷರಿಗೆ ಮಾತ್ರವೇ ಸಾಧ್ಯ. ಒಳ್ಳೆಯ ಮೈಕಟ್ಟು ಮತ್ತು ಶಕ್ತಿಶಾಲಿಗಳು ಮಾತ್ರ ಡೊಳ್ಳು ಕುಣಿತ ಪ್ರದರ್ಶಿಸಬಲ್ಲರು ಎಂಬ ನಂಬಿಕೆ ಇತ್ತು. ಈ ನಂಬಿಕೆಯನ್ನು ಹುಸಿಮಾಡಿರುವ ಯುವತಿಯರು ಸಾಧಿಸುವ ಛಲ ಮತ್ತು ಬದ್ದತೆ ಇದ್ದರೆ ಡೊಳ್ಳು ಕುಣಿತ ಕರಗತ ಮಾಡಿಕೊಳ್ಳಬಹುದು ಎಂದು ಸಾಧಿಸಿ ತೋರಿಸಿದ್ದಾರೆ.
ರಾಷ್ಟ್ರೀಯ ಜಾನಪದ-ಸಾಂಸ್ಕೃತಿಕ ಕೇಂದ್ರವಾಗಿ ಜಾನಪದ ಲೋಕ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದ ಯುವತಿಯರು ಡೊಳ್ಳು ಕುಣಿತ ಅಭ್ಯಾಸ ಮಾಡಿ ಹೊರ ರಾಜ್ಯದಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಇವರೆಲ್ಲರೂ 10 ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.
ವಿಡಿಯೋ: ಡೊಳ್ಳು ಬಾರಿಸುತ್ತಾ ಡ್ಯಾನ್ಸ್ ಮಾಡಿದ ರಾಹುಲ್ ಗಾಂಧಿ
ಇಂದಿನ ಯುವ ಪೀಳಿಗೆಗೆ ನಾಡಿನ ಹೆಮ್ಮೆಯ ಜಾನಪದ ಕಲೆ ಬಗ್ಗೆ ಆಸಕ್ತಿ ಇಲ್ಲ ಎಂದು ಜನರು ದೂರುತ್ತಾರೆ. ಸುಶಿಕ್ಷಿತ ಯುವತಿಯರು ಜನಪದ ಕಲೆ ಡೊಳ್ಳುಕುಣಿತದ ಬಗ್ಗೆ ಆಸಕ್ತಿ ಹೊಂದಿ, ರಾಜ್ಯ ಮತ್ತು ಹೊರರಾಜ್ಯದಲ್ಲಿ ಪ್ರದರ್ಶನ ನೀಡುತ್ತಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ.
ಹಳ್ಳಿಗಳಿಗೆ ತೆರಳಿ ಜನಪದ ಅಧ್ಯಯನ; ಕಲಿಯುವಿಕೆಯ ಹೊಸ ಜಮಾನ
ಯುವತಿಯರ ತಂಡ
ವಿದ್ಯಾರ್ಥಿನಿಯರಾದ ಸರಸ್ವತಿ ಓಲೇಕಾರ, ಪ್ರಭಾವತಿ ಹಿರೇಪ್ಪನವರ, ಮಿನಾಕ್ಷಿ ಸಂಜೀವಣ್ಣನವರ, ಚೈತ್ರಾ ಭೀಮನವರ, ಶೈಲಾ ಸಂಜೀವಣ್ಣನವರ, ನೀಲಮ್ಮ ಕಿವಡನವರ, ಗದಿಗೆಮ್ಮಾ ಪೂಜಾರ, ಪುಷ್ಪಾ ಸನದಿ, ಸೌಭಾಗ್ಯ ಕಾಳಿ, ಅಶ್ವಿನಿ ಭೀಮನವರ, ಅಕ್ಕಮ್ಮ ಮಾಕಪ್ಪನವರ ಒಳಗೊಂಡಂತೆ 11 ಯುವತಿಯರು ಶಿಕ್ಷಣದ ಜೊತೆಗೆ ಡೊಳ್ಳು ಕುಣಿತ ಕರಗತ ಮಾಡಿಕೊಂಡಿದ್ದಾರೆ.
ಹೊರ ರಾಜ್ಯದಲ್ಲಿಯೂ ಪ್ರದರ್ಶನ
ಈ ತಂಡ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಡೊಳ್ಳು ಕುಣಿತದ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಚರ್ಮವಾದ್ಯದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ತರಬೇತಿ ಪಡೆದಿರುವ ಈ ಯುವತಿಯರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಪ್ಪನವರಲ್ಲಿ ಹೆಚ್ಚುವರಿ ತರಬೇತಿ ಪಡೆದು ಪ್ರದರ್ಶನ ನೀಡುತ್ತಿದ್ದಾರೆ.
ಹಲವಾರು ಪ್ರಶಸ್ತಿ ಸಿಕ್ಕಿವೆ
ಮೈಸೂರ ದಸರಾ, ಜಾನಪದ ಜಾತ್ರೆ ಒಳಗೊಂಡಂತೆ ರಾಜ್ಯದ 15ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಆಯೋಜಿಸಿದ ಉತ್ಸವ, ಯುವಜನ ಮೇಳಗಳು ಹಾಗೂ ಸ್ಪರ್ಧೆಗಳಲ್ಲಿ ಪ್ರದರ್ಶನ ಈ ತಂಡ ಪ್ರದರ್ಶನ ನೀಡಿದೆ. ಜನರ ಮೆಚ್ಚುಗೆ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕೇರಳದಲ್ಲಿ ತಂಡ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಜಾನಪದ ಕಲೆ ಮರೆಯಬಾರದು
"ಇಂದಿನ ಜಾಗತೀಕರಣದ ದಿನಗಳಲ್ಲಿ ದೇಸಿ ಜನಪದ ಪರಂಪರೆ ಡೊಳ್ಳು ಕುಣಿತ ಮರೆಯಬಾರದು. ಈ ಡೊಳ್ಳು ಕಲಿಕೆಯಿಂದ ದೈಹಿಕವಾಗಿ ಮಾನಸಿಕವಾಗಿ ನಾವುಗಳು ಸದೃಡವಾಗಿದ್ದೆವೆ ಹಾಗೂ ಆರ್ಥಿಕವಾಗಿಯು ನಮಗೆ ಸಾಕಷ್ಟು ಅನುಕೂಲವಾಗಿದೆ" ಎಂಬುದು ತಂಡದ ನಾಯಕಿ ಸರಸ್ವತಿ ಓಲೇಕಾರ ಹೇಳಿದ್ದಾರೆ.
ಕರ್ನಾಟಕದ ಗದಗ, ಸಾಗರ, ಮೈಸೂರಿ ಮಹಿಳಾ ಡೊಳ್ಳು ಕಲಾ ತಂಡಗಳು ಈಗಾಗಲೇ ರಾಜ್ಯದ ಗಮನ ಸೆಳದಿವೆ. ಈ ಸಾಲಿಗೆ ಹಾವೇರಿಯ ಶ್ಯಾಡಂಬಿ ಯುವತಿಯರ ಕಲಾ ತಂಡವು ಸೇರ್ಪಡೆಗೊಂಡಿದೆ.