ಅ.28ರಿಂದ ಹಾಸನಾಂಬ ಜಾತ್ರೆ; ದರ್ಶನಕ್ಕೆ ಅವಕಾಶ ಕೊಡಿ ಎಂದು ಭಕ್ತರ ಒತ್ತಾಯ
ಹಾಸನ, ಅಕ್ಟೋಬರ್ 23: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ತಾಯಿ ದೇವಾಲಯದ ಬಾಗಿಲು ತೆರಯಲು ದಿನಗಣನೆ ಆರಂಭವಾಗಿದ್ದು, ಕೊರೊನಾ ಕಾರಣದಿಂದ ಈ ಬಾರಿಯೂ ಸಾರ್ವಜನಿಕರ ಪ್ರವೇಶಕ್ಕೆ ಹಾಸನ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಆದರೆ ವಿವಿಐಪಿಗಳಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಮಗೂ ಅವಕಾಶ ಕೊಡಿ, ಇಲ್ಲ ವಿವಿಐಪಿಗಳ ದರ್ಶನಕ್ಕೂ ನಿರ್ಬಂಧ ಹೇರಿ ಎಂದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ಅಕ್ಟೋಬರ್ 28ರಿಂದ 10 ದಿನಗಳ ಕಾಲ ಹಾಸನದ ತಾಯಿ ಹಾಸನಾಂಬೆಯ ದೇಗುಲದ ಬಾಗಿಲು ತೆರೆಯಲಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಮಹೋತ್ಸವ ಇದೇ ಅ.28ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ತಿರುಪತಿ, ಧರ್ಮಸ್ಥಳದಂತೆ ಅವಕಾಶ ನೀಡಿ
ಕೊರೊನಾ ಕಾರಣದಿಂದ ತಾಯಿಯ ದರ್ಶನಕ್ಕೆ ಸಾರ್ವಜನಿಕರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿ ವಿವಿಐಪಿಗಳಿಗೆ ಮಾತ್ರ ಅವಕಾಶವನ್ನು ಕಲ್ಪಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಐಪಿಗಳಿಗೆ ಮಾತ್ರ ಏಕೆ, ನಮಗೂ ಅವಕಾಶ ಕೊಡಿ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಸನ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿರುಪತಿ, ಧರ್ಮಸ್ಥಳ ಸೇರಿದಂತೆ ಅನೇಕ ದೊಡ್ಡ ದೊಡ್ಡ ದೇವಾಲಯಗಳಲ್ಲಿ ಈಗಾಗಲೇ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಅದೇ ಮಾದರಿಯಲ್ಲಿ ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ಅವಕಾಶ ನೀಡಬೇಕೇಂಬ ಒತ್ತಾಯ ಕೇಳಿ ಬರುತ್ತಿದೆ. ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡರಿಗೆ ಅಥವಾ ಕೊರೊನಾ ನೆಗೆಟಿವ್ ರಿಪೋರ್ಟ್ ತಂದವರಿಗೆ ಎಂಬ ನಿಯಮವನ್ನಿಟ್ಟು ಅವಕಾಶವನ್ನು ನೀಡಲಿ. ಕೊರೊನಾ ಪ್ರಮಾಣವೂ ಕೂಡಾ ತಗ್ಗಿದೆ, ಹೀಗಿದ್ದೂ ಜಿಲ್ಲಾಡಳಿತ ಎಲ್ಲರಿಗೂ ಪ್ರವೇಶ ನೀಡಲು ಯಾಕೆ ಮೀನಾಮೇಶ ಎಣಿಸುತ್ತಿದೆ ಎಂದು ಹಾಸನಾಂಬೆ ಭಕ್ತರು ಪ್ರಶ್ನಿಸುತ್ತಿದ್ದಾರೆ.
ದರ್ಶನಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹ
ಇನ್ನು ಇದೇ ವೇಳೆ ಮಾತಾನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಅಮಿತ್, "ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಿತ್ಯ 25 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಧರ್ಮಸ್ಥಳ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲೂ ಭಕ್ತರಿಗೂ ಅವಕಾಶ ಕೊಟ್ಟಿದ್ದಾರೆ. ಆದರೆ ನಮ್ಮ ನಗರ ದೇವತೆ ಹಾಸನಾಂಬೆ ದರ್ಶನಕ್ಕೆ ಯಾಕೆ ಅವಕಾಶ ಕೊಟ್ಟಿಲ್ಲ. ಮುಜಾಗ್ರತಾ ಕ್ರಮ ಕೈಗೊಂಡು ಜಿಲ್ಲಾಡಳಿತ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂಬುದು ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿಹಾರದ ಆಗ್ರಹವಾಗಿದೆ."
ದೇವಾಲಯದ ಎದುರು ಪ್ರತಿಭಟನೆ
"ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಹಾಸನ ಶಾಸಕ ಪ್ರೀತಂಗೌಡರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದೇವೆ. ಸಾರ್ವಜನಿಕರಿಗೆ ಅವಕಾಶ ಕೊಡಲಿಲ್ಲ ಅಂದರೆ ದೇವಾಲಯದ ಎದುರು ಪ್ರತಿಭಟನೆ ಮಾಡುತ್ತೇವೆ. ಹಾಗಾಗಿ ಇನ್ನೊಮ್ಮೆ ಕೋವಿಡ್ ನಿಯಮ ಪರಿಶೀಲನೆ ಮಾಡಿ ಜಿಲ್ಲಾಡಳಿತ ಭಕ್ತರಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ," ಎಂದರು.
ಇನ್ನು ಸ್ಥಳೀಯ ಶಾಸಕ ಪ್ರೀತಂಗೌಡ ಮಾತನಾಡಿ, "ರಾಷ್ಟ್ರೀಯ ಪಕ್ಷಗಳು, ಜನಸಾಮಾನ್ಯರು ಹಾಗೂ ವಿಶ್ವ ಹಿಂದೂ ಪರಿಷತ್ನ ಮುಖಂಡರು ಸಾರ್ವಜನಿಕರಿಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ರಜೆಯಲ್ಲಿದ್ದಾರೆ, ಬಂದ ತಕ್ಷಣ ಮಾತನಾಡಿ ಸಾರ್ವಜನಿಕರಿಗೆ ಅವಕಾಶ ಕೊಡಬಹುದಾ ಚರ್ಚಿಸಲು ತೀರ್ಮಾನ ಕೈಗೊಳ್ಳುತ್ತೇವೆ," ಎಂದರು.
ಅಡಕತ್ತರಿಯಲ್ಲಿ ಸಿಲುಕಿರುವ ಹಾಸನ ಜಿಲ್ಲಾಧಿಕಾರಿ
ವಿವಿಐಪಿಗಳಿಗೆ ಅವಕಾಶ ಕೊಟ್ಟು, ಸಾರ್ವಜನಿಕರಿಗೆ ಅವಕಾಶ ನೀಡದೇ ಹೋದರೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳಿಂದ ಜಿಲ್ಲಾಡಳಿತ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ. ಒಂದು ವೇಳೆ ಅನುಮತಿ ನೀಡಿ, ಕೊರೊನಾ ದೊಡ್ಡ ಪ್ರಮಾಣದಲ್ಲಿ ಸ್ಪೋಟವಾದರೆ ಅದರ ಹೊಣೆಯನ್ನೂ ಜಿಲ್ಲಾಡಳಿತ ಹೊರಬೇಕಾಗುತ್ತೆ. ಒಟ್ಟಿನಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ಜಿಲ್ಲಾಧಿಕಾರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.