'ಅಂಬ್ಲಿ ರಾಶಿಗೆ ಮುತ್ತಿನ ಗಿಣಿ ಸಂಪಾದೀತಲೇ ಪರಾಕ್': ಚಿಕ್ಕಮೈಲಾರ ಕಾರ್ಣಿಕ
ಹೊಸಪೇಟೆ, ಫೆ 17: ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೊರ ವಲಯದಲ್ಲಿರುವ ಚಿಕ್ಕ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ, ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಭರತ ಹುಣ್ಣಿಮೆಯ ದಿನವಾದ ಫೆಬ್ರವರಿ ಹದಿನಾರರಂದು ನಡೆದಿದೆ.
ಭರತ ಹುಣ್ಣಿಮೆಯಂದು ನಡೆಯುವ ಕಾರ್ಣಿಕೋತ್ಸವವನ್ನು ಈ ಭಾಗದ ರೈತರು ಹೆಚ್ಚಾಗಿ ನಂಬುತ್ತಾರೆ. ರಾಜ್ಯದಲ್ಲಿ ಮಳೆಬೆಳೆಯ ಬಗ್ಗೆ ನುಡಿಯಲಾಗುವ ಕಾರ್ಣಿಕವಿದು ಎನ್ನುವುದು ರೈತ ಸಮುದಾಯದ ನಂಬಿಕೆ.
ಮತ್ತೆ ನಿಜವಾಯಿತು ಬೆಂಕಿ ಬಬಲಾದಿ ಸಿದ್ದು ಮುತ್ಯಾ ಕಾಲಜ್ಞಾನ
ಧಾರ್ಮಿಕ ಸಂಪ್ರದಾಯದ ಪ್ರಕಾರ ಪೂಜಾ ವಿಧಿವಿಧಾನದ ನಂತರ ಗೊರವಪ್ಪ ಕೋಟೆಪ್ಪ ಕಾರ್ಣಿಕವನ್ನು ನುಡಿದಿದ್ದಾರೆ. ಕಾರ್ಣಿಕದ ನಂತರ ರೈತ ಸಮುದಾಯ ಉಘೇ..ಉಘೇ.. ಎಂದು ಕಾರ್ಣಿಕವನ್ನು ಸ್ವಾಗತಿಸಿದ್ದಾರೆ.
"ಅಂಬ್ಲಿ ರಾಶಿಗೆ ಮುತ್ತಿನ ಗಿಣಿ ಸಂಪಾದೀತಲೇ ಪರಾಕ್"ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದಾರೆ. ಇದನ್ನು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸಮೃದ್ದ ಬೆಳೆ ಮತ್ತು ಮಳೆಯಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಚಿಕ್ಕ ಮೈಲಾರನ ಕಾರ್ಣಿಕದ ಎರಡು ದಿನದ ನಂತರ ಹೂವಿನ ಹಡಗಲಿ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ನಡೆಯಲಿದೆ. ಈ ಕಾರ್ಣಿಕೋತ್ಸವ ಫೆಬ್ರವರಿ ಹದಿನೆಂಟರಂದು ನಡೆಯಲಿದೆ. ಹಲವು ನಿರ್ಬಂಧಗಳ ನಡುವೆಯೂ ಭಕ್ತ ಸಮುದಾಯ ಈಗಾಗಲೇ ಡೆಂಕನಮರಡಿ ತಲುಪಿದ್ದಾರೆ.
ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಫೆ.8ರಿಂದ ಈಗಾಗಲೇ ಆರಂಭವಾಗಿದ್ದು ಫೆ.19ರವರೆಗೆ ನಡೆಯಲಿದೆ. "ದೇವಸ್ಥಾನದ ರೂಢಿ, ಸಂಪ್ರದಾಯದ ಪೂಜಾ ಕಾರ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಯಾವುದೇ ರೀತಿಯ ಆಡಚಣೆ ಇಲ್ಲದಂತೆ ಸುಸೂತ್ರವಾಗಿ ಜರುಗಲಿವೆ, ಆದರೆ ಕೋವಿಡ್ ನಿಂದಾಗಿ ಭಕ್ತರಿಗೆ ನಿರ್ಬಂಧವಿರಲಿದೆ" ಎಂದು ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಹೇಳಿದ್ದಾರೆ.
ಪ್ರಸಿದ್ಧ ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವಕ್ಕೆ ಈ ಬಾರಿಯೂ ಭಕ್ತರ ನಿರ್ಬಂಧ
ಕುರುವತ್ತಿ, ಹ್ಯಾರಡ, ಹೊಳಲು, ಹಾವೇರಿ, ಹೊಳಕಡೆ, ಡೆಂಕನಮರಡಿಯ ಎಲ್ಲ ದಾರಿಗಳಿಗೆ ಸೂಕ್ತ ಬ್ಯಾರಿಕೆಡ್ ವ್ಯವಸ್ಥೆ ಮಾಡಿಕೊಂಡು ಮೈಲಾರ ಗ್ರಾಮಕ್ಕೆ ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಸೂಚಿಸಿದ್ದಾರೆ.
Recommended Video