ದೇವೇಗೌಡರ ಡಯಟ್, ಫಿಟ್ನೆಸ್: 90ರ ಜನ್ಮ ದಿನ ಸಂಭ್ರಮದಲ್ಲಿರುವ ಗೌಡರ ದಿನಚರಿ
ಬೆಂಗಳೂರು, ಮೇ. 18: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು 90 ನೇ ಜನ್ಮ ದಿನಾಚರಣೆ ಸಂಭ್ರಮದಲ್ಲಿದ್ದಾರೆ. ಭಾರತದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ ದಕ್ಷಿಣ ಭಾರತದ ಇಬ್ಬರು ಮುತ್ಸದಿ ರಾಜಕರಣಿಗಳಲ್ಲಿ ದೇವೇಗೌಡರು ಕೂಡ ಒಬ್ಬರು. ಮಾಜಿ ಪ್ರಧಾನಿ ದೇವೇಗೌಡರು ಕೇವಲ ರಾಜಕಾರಣಿಗಳಿಗೆ ಮಾತ್ರ ಮಾದರಿ ಅಲ್ಲ, ಅವರ ದಿನಚರಿ ಬದುಕು, ಅವರ ಶಿಸ್ತುಬದ್ಧ ಜೀವನ ಶೈಲಿ ಜನ ಸಾಮಾನ್ಯರಿಗೂ ಅನುಕರಣೀಯ. ಮಾಜಿ ಪ್ರಧಾನಿ ದೇವೇಗೌಡರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಯಾರಿಗೂ ಗೊತ್ತಿಲ್ಲದ ಅವರ ದಿನಚರಿ ಕುರಿತ ವಿಶೇಷ ವಿವರ ಇಲ್ಲಿ ನೀಡಲಾಗಿದೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಬೆಳಗ್ಗೆ 5.30 ರಿಂದ 6 ಗಂಟೆ ಒಳಗೆ ನಿದ್ದೆಯಿಂದ ಏಳುತ್ತಾರೆ. ನಿದ್ದೆಯಿಂದ ಎದ್ದ ಕೂಡಲೇ ಅವರು 45 ನಿಮಿಷ ವ್ಯಾಯಾಮ ಮತ್ತು ಯೋಗ ಮಾಡುತ್ತಾರೆ. ವ್ಯಾಯಾಮ ಕಲಿಸುವರು ಬಂದರೂ ಮಾಡುತ್ತಾರೆ. ಒಂದು ವೇಳೆ ಬರಲಿಲ್ಲ ಅಂದರೂ ಒಬ್ಬರೇ ಈ ವಯಸ್ಸಿನಲ್ಲೂ ನಿಭಾಯಿಸುತ್ತಾರೆ.
ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ
ದೇವರ ಕೋಣೆಯಲ್ಲಿ ಮಂತ್ರ ಪಠಣ:
ಯೋಗ ಮುಗಿದ ಕೂಡಲೆ ಶುಭ್ರ ಸ್ನಾನ ಮಾಡಿ ಕಾಫಿ ಕುಡಿಯುತ್ತಾರೆ. ಇದಾದ ನಂತರ ದೇವರಿಗೆ ಪೂಜೆ ಮಾಡಿ ಅಷ್ಟೋತ್ತರ ಮಾಲ ಸೇರಿದಂತೆ ಭಕ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ದೇವರ ಜ್ಞಾನದಲ್ಲಿ ಕೆಲ ಕಾಲ ಕಳೆಯುತ್ತಾರೆ.
ಪತ್ರಿಕೆಗಳ ಓದು: ಮಾಜಿ ಪ್ರಧಾನಿ ದೇವೇಗೌಡರು ಸುಮಾರು ಒಂದು ತಾಸು ದಿನ ಪತ್ರಿಕೆಗಳನ್ನು ಓದುತ್ತಾರೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಎಲ್ಲಾ ಪತ್ರಿಕೆಗಳನ್ನು ಓದುತ್ತಾರೆ. ಮಹತ್ವದ ವಿಚಾರ ಇದ್ದರೆ ಅದನ್ನು ಪ್ರತ್ಯೇಕವಾಗಿ ಇಡುತ್ತಾರೆ.
ಮಧ್ಯಾಹ್ನ ಊಟ ಮಾಡಲ್ಲವಂತೆ:
ಮಾಜಿ ಪ್ರಧಾನಿ ದೇವೇಗೌಡರು ತಿಂಡಿ ಊಟದಲ್ಲಿ ಯಾವುದೇ ಮಿತಿ ಇಲ್ಲ. ಅವರು ಮಾಂಸಹಾರವನ್ನು ಸೇವಿಸುವುದಿಲ್ಲವಂತೆ. ಸೊಪ್ಪು- ತರಕಾರಿ , ಮುದ್ದೆ ಅನ್ನ ಊಟ, ಮಜ್ಜಿಗೆ ಅವರ ಅಚ್ಚುಮೆಚ್ಚು. ಬೆಳಗ್ಗೆ ಮತ್ತು ರಾತ್ರಿ ಊಟ ಬಿಟ್ಟರೆ ಅವರು ಮಧ್ಯಾಹ್ನ ಊಟ ಮಾಡುವುದಿಲ್ಲ ಎಂದು ಹೇಳುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
ಸರ್ವರಿಗೂ ಸಮಾನ ಗೌರವ:
ಮಾಜಿ ಪ್ರಧಾನಿಗಳನ್ನು ಭೇಟಿ ಮಾಡಲು ಜನ ಸಾಮಾನ್ಯರಿರಲಿ, ರಾಜಕಾರಣಿಗಳು ಇರಲಿ ಬಂದರೆ ಎಲ್ಲರನ್ನೂ ಕೂರಿಸಿ ಸಮಾಧಾನದಿಂದ ಮಾತನಾಡುತ್ತಾರೆ. ಅವರ ಮನವಿ ಆಲಿಸಿ ಸಲಹೆ ನೀಡುತ್ತಾರೆ. ಏನಾದರೂ ಕರೆ ಮಾಡಿ ಮಾತನಾಡುವುದಿದ್ದರೆ, ಅಲ್ಲಿಯೇ ಕರೆ ಮಾಡಿ ಮಾತನಾಡಿ ಆ ಕೆಲಸ ಅಲ್ಲಿಯೇ ಮುಗಿಸುತ್ತಾರೆ. ಇದರ ಮಧ್ಯೆ ಏನಾದರೂ ಕಾರ್ಯಕ್ರಮ, ಭೇಟಿ ಇದ್ದರೆ ಮಾಡುತ್ತಾರೆ. ಒಮ್ಮೆ ಹೊರಗೆ ಹೊದ್ರೆ ಸಂಜೆ ಬರುತ್ತಾರೆ. ಇಲ್ಲ ತಡ ರಾತ್ರಿ ಬರುತ್ತಾರೆ.
ಮಿತ ಆಹಾರ, ಶಿಸ್ತುಬದ್ಧ ಜೀವನ
ಮಾಜಿ ಪ್ರಧಾನಿಗಳು ಸಂಜೆ ವೇಳೆ ಕಡ್ಡಾಯವಾಗಿ ಒಂದು ಲೋಟ ಕಾಫಿ ಕುಡಿಯುತ್ತಾರೆ. ಅದನ್ನು ಬಿಟ್ಟರೆ ಬೇರೆ ಏನನ್ನೂ ಸೇವಿಸುವುದಿಲ್ಲ. ಮಿತ ಆಹಾರ ಸೇವನೆ, ಶಿಸ್ತು ಬದ್ಧ ಜೀವನದಿಂದ ಈಗಲೂ ಮಾಜಿ ಪ್ರಧಾನಿಗಳು ಕನ್ನಡಕ ಕೂಡ ಧರಿಸದೇ ಪತ್ರಿಕೆಗಳನ್ನು ಓದುತ್ತಾರೆ ಎಂಬುದು ಅವರ ಅಪ್ತ ಸೇವೆಯಲ್ಲಿ ತೊಡಗಿರುವ ವ್ಯಕ್ತಿ ಹೇಳಿದ ಸತ್ಯ.
ಪುಸ್ತಕ ಓದಿನಲ್ಲಿ ಲೀನ:
ಮಾಜಿ ಪ್ರಧಾನಿಗಳು ಮನೆಯಲ್ಲಿದ್ದರೆ ಕನಿಷ್ಠ ಎರಡು ತಾಸು ಪುಸ್ತಕಗಳನ್ನು ಓದುತ್ತಾರೆ. ಅತಿ ಹೆಚ್ಚಾಗಿ ರಾಮಾಯಣ ಮಹಾ ಭಾರತ ಓದುತ್ತಾರೆ. ಈಗಾಗಲೇ ಅನೇಕ ಸಲ ಓದಿದರೂ ಮತ್ತೆ ಮತ್ತೆ ಅವನ್ನೇ ಓದುತ್ತಾರೆ. ಇವುಗಳ ಜತೆಗೆ ಬೇರೆ ಪುಸ್ತಕಗಳನ್ನು ಓದುತ್ತಾರೆ. ರಾಮಾಯಣ ಮಹಾಭಾರತ ಪದೇ ಪದೇ ಓದುತ್ತಾರೆ. ಯಾಕೆಂದರೆ ಪ್ರತಿ ಸಲ ಓದುವಾಗಲೂ ಭಿನ್ನತೆಯಿಂದ ಕೂಡಿರುತ್ತದೆ ಎಂಬ ಕಾರಣಕ್ಕೆ. ದೇವೇಗೌಡರು ಪುಸ್ತಕ ಓದುವಾಗ ಅವರ ಆಪ್ತ ಸಹಾಯಕ ಸೇರಿದಂತೆ ಯಾರೂ ಅವರನ್ನು ಭೇಟಿ ಮಾಡಿ ಅಡಚಣೆ ಉಂಟು ಮಾಡಬಾರದು. ಕನಿಷ್ಠ ಎರಡು ತಾಸು ಅವರು ಓದಿನಲ್ಲಿ ತಲ್ಲೀನರಾಗಿರುತ್ತಾರೆ. ಈ ಮೂಲಕ ಈಗಲೂ ಜ್ಞಾನಾರ್ನನೆ ಮಾಡುತ್ತಾರೆ.
ದೊಡ್ಡ ಗೌಡರ ಬಗ್ಗೆ ಅಧಿಕಾರಿ ಹೇಳಿದ ಸತ್ಯ:
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ರಾಜಕಾರಣಿಗಳ ಪಾಲಿಗೆ ಆಪ್ತ ಸಲಹೆಗಾರರು. ಜೆಡಿಎಸ್ ಅಲ್ಲ, ಯಾವುದೇ ಪಕ್ಷದ ರಾಜಕಾರಣಿಗಳು ಓದರೂ ಗೌರವದಿಂದಲೇ ಕಾಣುತ್ತಾರೆ. ಅವರ ಮಾತು ಅಲಿಸಿ ಅವರಿಗೆ ಹೃದಯಂತರಾಳದಿಂದ ಸಲಹೆ ಮಾಡುತ್ತಾರೆ. ಕೋಪ ಮಾಡಿಕೊಳ್ಳಬೇಡಿ. ಸಮಾಜದ ಮುಂದೆ ಏನೇ ಮಾತನಾಡಿದರೂ ಪ್ರಬುದ್ಧತೆಯಿಂದ ಆಲೋಚನೆ ಮಾಡಿ ಮಾತನಾಡಿ ಎಂಬ ಸಲಹೆ ಕೊಡುತ್ತಾರಂತೆ. " ನಾನು ಕಂಡಂತೆ ಅವರನ್ನು ನಾಲ್ಕು ಮಂದಿ ರಾಜಕಾರಣಿಗಳು ಭೇಟಿ ಮಾಡಲು ಬಂದಿದ್ದರು. ಅವರು ಯಾರೂ ಜೆಡಿಎಸ್ ಪಕ್ಷದವರು ಅಲ್ಲ. ಆದ್ರೆ ಅವರನ್ನು ಕೂರಿಸಿ ನಿಜವಾಗಿಯೂ ಸಲಹೆ ಮಾಡಿ ಕಳಿಸಿದ್ರು. ಅವರ ಈ ಪ್ರಭುದ್ಧತೆಯ ನಡೆ ನಾನು ಯಾವ ರಾಜಕಾರಣಿಯಲ್ಲೂ ಕಾಣಲಿಲ್ಲ" ಎನ್ನುತ್ತಾರೆ ಅವರ ಹತ್ತಿರವಿದ್ದ ಅಧಿಕಾರಿ.
90 ವರ್ಷ ವಯಸ್ಸಿನಲ್ಲೂ ದಿನಚರಿಯಲ್ಲಿ ಮಾಜಿ ಪ್ರಧಾನಿಗಳು ಇವತ್ತಿಗೂ ರಾಜಿಯಾಗಿಲ್ಲ. ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿಲ್ಲ. ಜೆಡಿಎಸ್ ಪಕ್ಷದ ಅಧಿಕಾರಕ್ಕೆ ತರುವ ಕನಸು ಅವರದ್ದು. ಅದಕ್ಕಾಗಿ ಬಡಿದಾಡಬಹುದು. ಅದರೆ ಒಬ್ಬ ಸಾಮಾನ್ಯ ವ್ಯಕ್ತಿ ಎಂಬ ದೃಷ್ಟಿಕೋನದಲ್ಲಿ ನೋಡಿದ್ರೆ ಅವರ ನಡೆ ನುಡಿ ಮಾತ್ರವಲ್ಲ ಅವರ ದಿನಚರಿ ಕೂಡ ಜನ ಸಾಮಾನ್ಯರಿಗೆ ಅನುಕರಣೀಯ. ದೇವೇಗೌಡರು ಶಾಂತಿ ಪ್ರಿಯ ಮುತ್ಸದಿ ರಾಜಕಾರಣಿ. ಅಸೂಹೆ, ದ್ವೇಷ ಅವರ ಬಳಿಯೂ ಸುಳಿಯಲ್ಲ.