ಕಾಂಗ್ರೆಸ್ ಪಕ್ಷಕ್ಕೆ ''ಹಸ್ತ''ದ ಗುರುತು ಸಿಕ್ಕಿದ್ದು ಈ ಕ್ಷೇತ್ರದಿಂದಲೇ!
ಕೇರಳ ವಿಧಾನಸಭೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪಾಲಕ್ಕಾಡ್ ಕ್ಷೇತ್ರ ಕೇವಲ ಶ್ರೀಧರನ್ ಸ್ಪರ್ಧೆಯಿಂದ ಮಾತ್ರ ಕುತೂಹಲ ಕೆರಳಿಸಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷಕ್ಕೆ ''ಹಸ್ತ''ದ ಗುರುತು ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
Recommended Video
ಎನ್ಡಿಎ ಅಭ್ಯರ್ಥಿಯಾಗಿ ಇ ಶ್ರೀಧರನ್ ಅವರನ್ನು ಕಣಕ್ಕಿಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಲಾಗಿದೆ. ಜೊತೆಗೆ ಈ ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ಹಳೆ ಕಥೆಯೊಂದನ್ನು ಮತ್ತೆ ಹಂಚಿಕೊಳ್ಳಲಾಗಿದೆ.
ಕೇರಳ: ಪಾಲಕ್ಕಾಡ್ನಿಂದ ಮೆಟ್ರೋ ಮ್ಯಾನ್ ಶ್ರೀಧರನ್ ಸ್ಪರ್ಧೆ
ಎಲ್ಲರಿಗೂ ತಿಳಿದಿರುವಂತೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್ಸಿ) ಈ ಹಿಂದೆ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಣದಿಂದ ಕಾಂಗ್ರೆಸ್ ಐ ಆಗಿತ್ತು. ಹಸ್ತದ ಗುರುತನ್ನು ಚುನಾವಣಾ ಚಿಹ್ನೆಯಾಗಿ ಇಂದಿರಾಗಾಂಧಿ ಅವರು ಬಳಸಿದ್ದು ಇಂದಿಗೂ ಬಳಕೆಯಲ್ಲಿದೆ. ಅಭ್ಯರ್ಥಿ ಯಾರೆಂದು ತಿಳಿಯದಿದ್ದರೂ ಹಳ್ಳಿಗಳ ಕಡೆ ಹಸ್ತಕ್ಕೆ ಮತ ದೇಶಕ್ಕೆ ಹಿತ ಎಂಬ ಮಾತು ಜನಜನಿತವಾಗಿ ಬೆಳೆದುಬಿಟ್ಟಿತು.
ನಾಲ್ಕು ಅಂಬಿಕೆ ದೇವಿ ದೇಗುಲಗಳು
ಈ ಹಸ್ತದ ಚಿಹ್ನೆ ಬಳಸಲು ಇಂದಿರಾ ಗಾಂಧಿ ಅವರು ನಿರ್ಧರಿಸಲು ಕೇರಳದ ಪಾಲಕ್ಕಾಡ್ ಪ್ರದೇಶದ ಹೇಮಾಂಬಿಕಾ ಭಗವತಿ ದೇಗುಲವೇ ಕಾರಣ ಎಂಬ ಪ್ರತೀತಿ ಇದೆ. ಎಮೂರ್ ಭಗವತಿ ದೇಗುಲ ಕೂಡಾ ಪರಶುರಾಮ ಕ್ಷೇತ್ರವಾಗಿ ಪರಿಗಣಿಸಲಾಗುತ್ತದೆ. ಮಲಬಾರ್ ದೇಗುಲ ದೇವಸ್ವಂ ಮಂಡಳಿಗೆ ಒಳಪಡುತ್ತದೆ. ಇಡೀ ದೇಶದಲ್ಲಿ ಇದೊಂದೇ ದೇಗುಲದಲ್ಲಿ ದೇವಿಯ ಕೈಪ್ರತಿ(ಹಸ್ತ)ಯನ್ನು ಪೂಜಿಸಲಾಗುತ್ತದೆ. ಒಮ್ಮೆ ಭಕ್ತನಿಗೆ ಕನಸಿನಲ್ಲಿ ಬಂದ ದೇವಿ ಕೊಳದಲ್ಲಿ ಹಸ್ತ ರೂಪದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳುತ್ತಾಳೆ. ಅದರಂತೆ ಪ್ರಾತಃ ಕಾಲದಲ್ಲಿ ಕೊಳದಲ್ಲಿ ದೇವಿಯ ಚಿನ್ನದ ಬಣ್ಣದ ಕೈ ನೋಡಿದ ಭಕ್ತ ನೀರಿಗೆ ಹಾರಿ ಅದನ್ನು ಮುಟ್ಟುತ್ತಿದ್ದಂತೆ ಕಲ್ಲಾಗುತ್ತದೆ. ಇದೇ ಹಸ್ತಗಳನ್ನು ಈಗ ಪೂಜಿಸಲಾಗುತ್ತಿದೆ.
ಇಂದಿರಾ ಕರೆಸಿ, ದೇಶ ಉಳಿಸಿ ಎಂಬ ಕರೆ
ತುರ್ತುಪರಿಸ್ಥಿತಿ ನಂತರ 1977ರಲ್ಲಿ ಇಂದಿರಾಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಭಾರಿ ಹಿನ್ನಡೆ ಅನುಭವಿಸಿತ್ತು. ಜನತಾ ಪಕ್ಷ ಅಧಿಕಾರಕ್ಕೆ ಬಂದರೂ ಹೊಸ ಪ್ರಯೋಗ, ಸಾಧ್ಯತೆಯನ್ನು ಜನತೆ ಒಪ್ಪಿಕೊಳ್ಳಲಿಲ್ಲ. ಇಂದಿರಾ ಕರೆಸಿ, ದೇಶ ಉಳಿಸಿ ಎಂಬ ಕರೆ ಮೂಲಕ ದೇಶದೆಲ್ಲೆಡೆ ಮತ್ತೊಮ್ಮೆ ಕಾಂಗ್ರೆಸ್ ಅಭಿಯಾನ ಆರಂಭಿಸಿತು.
1980ರಲ್ಲಿ ಏಳನೇ ಲೋಕಸಭೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ ಚಿಹ್ನೆ ಕೂಡಾ ಗೊಂದಲವಾಯಿತು. ನಂತರ ಚುನಾವಣಾ ಆಯೋಗದಿಂದ ಹಸ್ತ, ಸೈಕಲ್ ಹಾಗೂ ಆನೆ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಇಂದಿರಾ ಗಾಂಧಿ ಅವರಿಗೆ ಸೂಚಿಸಲಾಗಿತ್ತು.
ಇಂದಿರಾ ಗಾಂಧಿ ಹಸ್ತದ ಗುರುತು ಬಳಸಲು ನಿರ್ಧರಿಸಿದರು
ಅಂದು ಇಂದಿರಾ ಗಾಂಧಿ ಅವರು ಹಸ್ತದ ಗುರುತನ್ನು ಆಯ್ಕೆ ಮಾಡಿಕೊಂಡರು. ಕೇರಳದ ಭಗವತಿ ದೇಗುಲದ ಭಕ್ತೆಯಾಗಿದ್ದ ಇಂದಿರಾ ಗಾಂಧಿ ಅವರು ಇಲ್ಲಿನ ವಿಶಿಷ್ಟ ಹಸ್ತ ಗುರುತಿನ ದೇವಿಯನ್ನು ನೋಡಿದ್ದರು ಹಾಗೂ ಇದೇ ಗುರುತು ಮುಂದಿನ ಚುನಾವಣೆಗಳಲ್ಲಿ ಬಳಸಲು ಇಚ್ಛಿಸಿದ್ದರು.
ಕೇಪ್ ಕೊಮರೆನ್ನಲ್ಲಿರುವ ಬಾಲಾಂಬಿಕಾ, ಬಡಗರ ಲೋಕನಾರ್ಕಾವು ಬಳಿಯ ಲೋಕಾಂಬಿಕಾ, ಕೊಲ್ಲೂರಿನ ಮೂಕಾಂಬಿಕಾ ಹಾಗೂ ಪಾಲಕ್ಕಾಡ್ ಎಮೂರಿನ ಹೇಮಾಂಬಿಕಾ ಎಲ್ಲವೂ ಪರಶುರಾಮ ನಿರ್ಮಿತ ದೇಗುಲವಾಗಿದ್ದು, ಮಲಬಾರ್ ರಾಜವಂಶಸ್ಥರು ದೇಗುಲ ಸಂರಕ್ಷಿಸಿದ್ದಾರೆ.
ಕೇರಳ ಭಗವತಿ ದೇಗುಲ ಕನೆಕ್ಷನ್
ನೆಹರೂ ಕುಟುಂಬಕ್ಕೆ ಆಪ್ತರಾಗಿದ್ದ ಸುಪ್ರೀಂಕೋರ್ಟ್ ನಿವೃತ್ತ ಜಸ್ಟೀಸ್ ಪಿಎಸ್ ಕೈಲಾಸಂ ಅವರ ಪತ್ನಿ ಸೌಂದರ್ಯ ಕೈಲಾಸಂ ಅವರು ಈ ಬಗ್ಗೆ ಮಾತನಾಡಿ, ಇಂದಿರಾ ಅವರಿಗೆ ಈ ದೇಗುಲದ ವೈಶಿಷ್ಟ್ಯ, ಹೇಮಾಂಬಿಕಾ ಭಗವತಿ ದೇಗುಲದ ಮಹಿಮೆ ಬಗ್ಗೆ ಇಂದಿರಾ ಅವರಿಗೆ ತಿಳಿಸಿದ್ದೆ. ಅವರು ಕೂಡಾ ದೇಗುಲಕ್ಕೆ ಭೇಟಿ ನೀಡಿ ಕಣ್ಣಾರೆ ನೋಡಿ ಅಚ್ಚರಿ ಪಟ್ಟಿದ್ದರು. ಭಕ್ತರನ್ನು ಶುಭಕರದ ಮೂಲಕ ಆಶೀರ್ವದಿಸುವ ದೇವಿಯು ಇಡೀ ದೇಶಕ್ಕೆ ತನ್ನ ಅಭಯವನ್ನು ನೀಡುವಂತಾಗಲಿ, ಕಾಂಗ್ರೆಸ್ ಪಕ್ಷ ಅಭಯ ಹಸ್ತವನ್ನೇ ಬಳಸುವಂತಾಗಲಿ ಎಂಬ ಇರಾದೆಯಿಂದ ಹಸ್ತ ಚಿಹ್ನೆಯನ್ನು ಇಂದಿರಾ ಆಯ್ಕೆ ಮಾಡಿಕೊಂಡರು ಎಂದಿದ್ದಾರೆ.
ದೇಗುಲಕ್ಕೆ ಗಂಟೆ ದಾನ ಮಾಡಿದ್ದ ಇಂದಿರಾ ಗಾಂಧಿ
1977ರಲ್ಲಿ ಕೈ ಪಕ್ಷ 286 ಸ್ಥಾನ ಗಳಿಸಿತ್ತು. ಕೇರಳದಲ್ಲಿ ಕೆ ಕರುಣಾಕರನ್ ಸಿಎಂ ಆಗಿದ್ದಾಗ ಇಂದಿರಾಗಾಂಧಿ ಅವರು ಎಮೂರ್ ಭಗವತಿ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗಂಟೆಯೊಂದನ್ನು ದೇಗುಲಕ್ಕೆ ಅರ್ಪಿಸಿದ್ದರು ಎಂದು ಸ್ಥಳೀಯರು ಇಂದಿಗೂ ಸ್ಮರಿಸುತ್ತಾರೆ. ದೇಗುಲದ ಸ್ಮರಣಿಕೆ ರೂಪದಲ್ಲಿ ಮಲಬಾರ್ ರಾಜಮನೆತನದ ವತಿಯಿಂದ ಇಂದಿರಾ ಅವರಿಗೆ ಹಸ್ತ ಗುರುತುಳ್ಳ ಲಾಕೆಟ್ ನೀಡಲಾಗಿತ್ತು.
ಕೇರಳದಲ್ಲಿ ಇದೀಗ ಗಮನ ಸೆಳೆದಿರುವ ಚುನಾವಣೆ
ಕೇರಳದಲ್ಲಿ 140 ಕ್ಷೇತ್ರಗಳ ಪೈಕಿ ಬಿಜೆಪಿ 115 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮಿಕ್ಕ 25 ಸ್ಥಾನಗಳು ನಾಲ್ಕು ಮಿತ್ರಪಕ್ಷಗಳಿಗೆ ಹಂಚಿಕೆಯಾಗಿದೆ. ಏಪ್ರಿಲ್ 6 ರಂದು ಕೇರಳದಲ್ಲಿ 140 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮಲಪ್ಪುರಂ ಉಪ ಚುನಾವಣೆಗೂ ಅಂದೇ ಮತದಾನ ನಿಗದಿಯಾಗಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
2020ರಲ್ಲಿ 140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ.