ಉಪ ಚುನಾವಣೆ: ಇರುವ ಸತ್ಯವನ್ನು ಇದ್ದಹಾಗೇ ಒಪ್ಪಿಕೊಂಡ ಎಚ್.ಡಿ.ಕುಮಾರಸ್ವಾಮಿ
ವಿಜಯಪುರ, ಅ 21: ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ವೇಗವನ್ನು ಪಡೆದುಕೊಳ್ಳುತ್ತಿದೆ. ಹಾನಗಲ್ ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಮತ್ತು ಸಿಂದಗಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಸಿಂದಗಿಯಲ್ಲಿ ಪಕ್ಷದ ಅಭ್ಯರ್ಥಿ ನಾಜೀಯಾ ಅಂಗಡಿ ಪರ ದಳಪತಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ. ಅವರಿಗೆ, ಮೊಮ್ಮಗ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾಥ್ ನೀಡುತ್ತಿದ್ದಾರೆ.
ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದ ಬಿಜೆಪಿ: ಕುಮಾರಸ್ವಾಮಿ ದ್ವಿಪತ್ನಿ ವಿಚಾರ ಪ್ರಸ್ತಾಪ
"ಬೆಂಗಳೂರಿನಿಂದ ದುಡ್ಡು ತಂದು ಇಲ್ಲಿ ಚುನಾವಣೆ ಎದುರಿಸುವುದಿಲ್ಲ. ನಾನು ಯಾವ ಪಕ್ಷದ ವಿರುದ್ದವಾಗಿಯೂ ಮಾತನಾಡುವುದಿಲ್ಲ, ನಮ್ಮ ಪಕ್ಷ, ನಾನು ಪ್ರಧಾನಿಯಾಗಿದ್ದಾಗ ಮಾಡಿರುವ ಅಭಿವೃದ್ದಿ ಕೆಲಸವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇನೆ" ಎಂದು ದೇವೇಗೌಡ್ರು ಹೇಳಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಜೆಡಿಎಸ್ ಪ್ರಮುಖರು ಸಿಂದಗಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಗುರುವಾರ (ಅ 21) ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿರುವ ಎಚ್.ಡಿ.ಕುಮಾರಸ್ವಾಮಿ, ಹಾನಗಲ್ ನಲ್ಲಿ ಹೆಚ್ಚಿನ ಪ್ರಚಾರಕ್ಕೆ ಹೋಗದೇ ಇರುವುದಕ್ಕೆ ಕಾರಣವನ್ನು ನೀಡಿದ್ದಾರೆ.
ಸೋನಿಯಾ ಗಾಂಧಿ ಮನೆ ಮುಂದೆ ಇದ್ದ 'ಕತ್ತೆ'ಯನ್ನು ಸಿದ್ದರಾಮಯ್ಯ ಓಡಿಸಿದ ಕಥೆ
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ. ಮನಗೂಳಿ
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ. ಮನಗೂಳಿಯವರು, ಬಿಜೆಪಿಯ ರಮೇಶ ಭೂಸನೂರ ವಿರುದ್ದ ಜಯಗಳಿಸಿದ್ದರು. ಮನಗೂಳಿ ನಿಧನದ ನಂತರ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ ಮನಗೂಳಿಯವರ ಪುತ್ರ ರಮೇಶ್ ಮನಗೂಳಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿಯ ಸೋತ ಅಭ್ಯರ್ಥಿ ರಮೇಶ ಭೂಸನೂರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಶೇ. 14.22 ಮತವನ್ನು ಪಡೆದಿತ್ತು. ಜೆಡಿಎಸ್ ಈ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿ ಇರುವುದರಿಂದ, ಹಾನಗಲ್ ಗಿಂತ ಹೆಚ್ಚಾಗಿ ಸಿಂದಗಿಗೆ ಎಚ್ಡಿಕೆ, ದೇವೇಗೌಡ್ರು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಇರುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. "ನಾಡಿದ್ದು ಹಾನಗಲ್ ಗೆ ಹೋಗುತ್ತಿದ್ದೇನೆ, ಮೂರು ದಿನಗಳ ಕಾಲ ಅಲ್ಲಿ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ. ಹಾನಗಲ್ ನಲ್ಲಿ ನಮಗೆ ಶಕ್ತಿಯಿಲ್ಲ. ಕಳೆದ ಬಾರಿ ನಾವು 1,200 ಮತಗಳನ್ನು ಪಡೆದಿದ್ದೇವೆ, ಕೊನೇ ಪಕ್ಷ ಅಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಬೇಕೆಂದು ಅಲ್ಲಿ ಅಭ್ಯರ್ಥಿಯನ್ನು ಹಾಕಿದ್ದೇವೆ"ಎಂದು ಎಚ್ಡಿಕೆ ಹೇಳುವ ಮೂಲಕ, ಹಾನಗಲ್ ನಲ್ಲಿ ಜೆಡಿಎಸ್ಸಿಗೆ ಅಸ್ತಿತ್ವ ಇಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಮತಕ್ಕಾಗಿ ಅವರು ಮಾಡುತ್ತಿರುವ ರಾಜಕಾರಣ. ಗರ್ಭಗುಡಿ ಸಂಸ್ಕೃತಿ ಬಿಜೆಪಿಯಲ್ಲಿದೆ
"ನಾವೂ ಹಿಂದೂಗಳೇ, ಹಿಂದುತ್ವವನ್ನು ಪಾಲಿಸುತ್ತಿದ್ದೇವೆ, ಅವರು ಮಾತ್ರ (ಬಿಜೆಪಿ) ಹಿಂದೂಗಳಲ್ಲ. ಇದು, ಮತಕ್ಕಾಗಿ ಅವರು ಮಾಡುತ್ತಿರುವ ರಾಜಕಾರಣ. ಗರ್ಭಗುಡಿ ಸಂಸ್ಕೃತಿ ಬಿಜೆಪಿಯಲ್ಲಿದೆ, ಅನ್ಯಾಯಕ್ಕೆ ಒಳಗಾದ ಸಮಾಜವನ್ನು ಮೇಲೆತ್ತುವ ಕೆಲಸವನ್ನು ಅವರು ಮಾಡುತ್ತಿಲ್ಲ. ಅವರಿಗೆ, ಹಿಂದೂ ಎಂದರೆ ವೋಟ್ ಬ್ಯಾಂಕ್. ಸಮಾಜದಲ್ಲಿ ಇರುವಂತಹ ತಾರತಮ್ಯವನ್ನು ಸರಿ ಪಡಿಸಲು ಬಿಜೆಪಿಯವರ ಕೊಡುಗೆ ಏನು" ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಬಿಜೆಪಿಯ ಸಿ.ಎಂ.ಉದಾಸಿಯವರು ಗೆಲುವು ಸಾಧಿಸಿದ್ದರು
ಕಳೆದ ಹಾನಗಲ್ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಂ.ಉದಾಸಿಯವರು ಕಾಂಗೆಸ್ಸಿನ ಶ್ರೀನಿವಾಸ ಮಾನೆ ವಿರುದ್ದ ಸುಮಾರು ಆರು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಬೊಮ್ಮನಹಳ್ಳಿ ಬಾಬು ಅವರು ಕೇವಲ 1,028 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡಿದ್ದರು. ಪಕ್ಷೇತರ ಅಭ್ಯರ್ಥಿಗಳು, ಜೆಡಿಎಸ್ ಅಭ್ಯರ್ಥಿಗಿಂತ ಹೆಚ್ಚಿನ ಮತವನ್ನು ಪಡೆದಿದ್ದರು. ಹಾಗಾಗಿ, ಹಾನಗಲ್ ನಲ್ಲಿ ತಮ್ಮ ಅಸ್ತಿತ್ವ ಇಲ್ಲ ಎನ್ನುವ ಸತ್ಯವನ್ನು ಎಚ್.ಡಿ.ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ.