ಹಾನಗಲ್ ಬಿಜೆಪಿ ಅಭ್ಯರ್ಥಿ: ಗಮನಿಸಬೇಕಾದ ಕುತೂಹಲಕಾರಿ ಸಂಗತಿ
ಎರಡು ಕ್ಷೇತ್ರದ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ಕುಟುಂಬ ರಾಜಕಾರಣಕ್ಕೆ ಪಕ್ಷ ಹೆಚ್ಚಿನ ಒತ್ತು ನೀಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಎರಡೂ ಅಭ್ಯರ್ಥಿಗಳು ಇಂದು (ಅ 8) ನಾಮಪತ್ರ ಸಲ್ಲಿಸಲಿದ್ದಾರೆ.
ಹಿಂದೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಶರಣು ಸಲಗರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ಪಕ್ಷದಲ್ಲಿ ಉಂಟಾದ ಗೊಂದಲದಂತೆ ಹಾನಗಲ್ ನಲ್ಲೂ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಆದರೆ, ಇವೆಲ್ಲವನ್ನೂ ಮೀರಿ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ.
ಹಾನಗಲ್ ಉಪ ಚುನಾವಣೆ: ಮತ್ತೊಮ್ಮೆ ಸ್ಪಷ್ಟ ಸಂದೇಶ ರವಾನಿಸಿದ ಬಿಜೆಪಿ ಹೈಕಮಾಂಡ್!
ಪಕ್ಷದ ಮತ್ತು ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ನಿಮ್ಮದೇನೂ ಇಲ್ಲ, ಎಲ್ಲಾ ನಮ್ಮದೇ ಎಂದು ಮತ್ತೊಮ್ಮೆ ರುಜುವಾತು ಪಡಿಸಿರುವ ಬಿಜೆಪಿ ಹೈಕಮಾಂಡ್, ರಾಜ್ಯ ಕೋರ್ ಕಮಿಟಿ ಆಯ್ಕೆಯನ್ನು ಸಾರಾಸಗಾಟವಾಗಿ ತಿರಸ್ಕರಿಸಿ, ಹಾನಗಲ್ ಕ್ಷೇತ್ರಕ್ಕೆ ಶಿವರಾಜ್ ಸಜ್ಜನರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಹಾನಗಲ್, ಸಿಂಧಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೊಷಣೆ
ಹಾವೇರಿಯ ಸಂಸದ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿ ಉದಾಸಿಗೆ ಟಿಕೆಟ್ ಸಿಗುವುದು ಖಚಿತ ಎನ್ನುವ ಮಾತಿತ್ತು. ಆದರೆ, ಬಿಜೆಪಿ ವರಿಷ್ಠರು ತಮ್ಮ ಆಯ್ಕೆ ಬೇರೆಯದ್ದೇ ಎಂದು 2023ರ ಅಸೆಂಬ್ಲಿ ಚುನಾವಣೆಗೆ ಈಗಲೇ ಆಖಾಡ ಸಿದ್ದಪಡಿಸಿದಂತಿದೆ. ಶಿವರಾಜ್ ಸಜ್ಜನರ್ ಆಯ್ಕೆಯ ಹಿಂದೆ ಒಂದು ಕುತೂಹಲಕಾರಿ ಸಂಗತಿ ಹೀಗಿದೆ..
ಶಿವರಾಜ ಸಜ್ಜನರ್ ಅವರು ದಿವಂಗತ ಸಿ.ಎಂ.ಉದಾಸಿಯ ಆಪ್ತರು
ಹಾನಗಲ್ ಕ್ಷೇತ್ರದಲ್ಲಿ ಲಿಂಗಾಯಿತ ಮತಗಳು ನಿರ್ಣಾಯಕವಾಗಲಿದೆ. ಹಾಗಾಗಿ, ಅದೇ ಸಮುದಾಯದ ಶಿವರಾಜ್ ಸಜ್ಜನರ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಮೇಲ್ನೋಟದ ರಾಜಕೀಯವಾದರೂ, ಸಜ್ಜನರ್ ಅವರು ದಿವಂಗತ ಸಿ.ಎಂ.ಉದಾಸಿಯ ಆಪ್ತರು. ಇದಕ್ಕಿಂತಲೂ ಹೆಚ್ಚಾಗಿ ಇವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಶಿಷ್ಯವೃಂದದವರು ಎನ್ನುವುದು ಗಮನಿಸಬೇಕಾದ ವಿಚಾರ.
ಯಡಿಯೂರಪ್ಪ ಹಾಕಿದ ಗೆರೆಯನ್ನು ದಾಟದ ಸಜ್ಜನರ್
ಯಡಿಯೂರಪ್ಪ ಮತ್ತು ಪಕ್ಷದ ಮೇಲಿನ ನಿಷ್ಠೆಯೇ ಶಿವರಾಜ ಸಜ್ಜನರ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದೆ. ಯಡಿಯೂರಪ್ಪ ಹಾಕಿದ ಗೆರೆಯನ್ನು ದಾಟದ ಸಜ್ಜನರ್ ಅವರು ಈ ಹಿಂದೆ, ಬಿಎಸ್ವೈ ಕೆಜೆಪಿ ಕಟ್ಟಿದಾಗ ಅವರ ಜೊತೆಗೆ ಹೋಗಿದ್ದರು. ಒಂದು ಬಾರಿ ಶಾಸಕರು ಮತ್ತು ಎರಡು ಬಾರಿ ಪರಿಷತ್ ಸದಸ್ಯರಾಗಿದ್ದ ಸಜ್ಜನರ್ ಅವರು ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೆ ಹೊಂದಿಕೊಂಡು ಹೋಗುವ ಸ್ವಭಾವದವರು. ಸಜ್ಜನರ್, ಕೆಜೆಪಿಯಿಂದ ಬ್ಯಾಡಗಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದಾಗ, ಸಜ್ಜನರ್ ಕೂಡಾ ಬಿಜೆಪಿಗೆ ಸೇರ್ಪಡೆಗೊಂಡರು
ಇದಾದ ನಂತರ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದಾಗ, ಸಜ್ಜನರ್ ಕೂಡಾ ಬಿಜೆಪಿಗೆ ಸೇರ್ಪಡೆಗೊಂಡರು. ಕಳೆದ ಚುನಾವಣೆಯಲ್ಲಿ ಬ್ಯಾಡಗಿಯಿಂದ ಸ್ಪರ್ಧಿಸಲು ಸಜ್ಜನರ್ ಕಸರತ್ತು ನಡೆಸಿದ್ದರೂ, ಯಡಿಯೂರಪ್ಪನವರ ಮಾತಿಗೆ ಬೆಲೆಕೊಟ್ಟು ಪಕ್ಷದ ಪರವಾಗಿ ಪ್ರಚಾರ ನಡೆಸಿದರು. ಈಗ, ಸಜ್ಜನರ್ ಅಭ್ಯರ್ಥಿಯಾಗಿರುವುದರಿಂದ ತಮ್ಮ ಶಿಷ್ಯನನ್ನು ಗೆಲ್ಲಿಸುವ ಗುರುತರ ಜವಾಬ್ದಾರಿ ಯಡಿಯೂರಪ್ಪನವರ ಮೇಲಿದೆ.
ಸಿಎಂ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯಾದ ಹಾವೇರಿ ವ್ಯಾಪ್ತಿ
ಲಿಂಗಾಯತ ಮತ ಹಾನಗಲ್ ಕ್ಷೇತ್ರದಲ್ಲಿ ಪ್ರಮುಖವಾಗಿರುವುದರಿಂದ, ಯಡಿಯೂರಪ್ಪನವರ ಆಪ್ತ ವಲಯದವರನ್ನು ಬಿಜೆಪಿ ವರಿಷ್ಠರು ಆಯ್ಕೆ ಮಾಡಿರಬಹುದು. ಜೊತೆಗೆ, ಹಾನಗಲ್ ಕ್ಷೇತ್ರವು ಸಿಎಂ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯಾದ ಹಾವೇರಿ ವ್ಯಾಪ್ತಿಯಲ್ಲಿ ಬರುವುದರಿಂದ, ಶಿವರಾಜ ಸಜ್ಜನರ್ ಅವರನ್ನು ಗೆಲ್ಲಿಸಿಕೊಂಡು ಬರುವುದು ಸಿಎಂಗೆ ಕೂಡಾ ಮುಖ್ಯವಾಗಲಿದೆ.
ಆದರೆ, ಬಿಜೆಪಿ ನಾಯಕರು ಸ್ಥಳೀಯ ಮಟ್ಟದ ಗೊಂದಲವನ್ನು ಸರಿಪಡಿಸಿಕೊಂಡು ಮುಂದಕ್ಕೆ ಹೋಗಬೇಕಿದೆ.ಯಾಕೆಂದರೆ, ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಉದಾಸಿ ಕುಟುಂಬಕ್ಕೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಸಿಟ್ಟಾಗಿದ್ದಾರೆ.