ಅವತ್ತಿನ ರುಚಿಯಲ್ಲೇ ಇವತ್ತಿನ ಮೈಸೂರ್ ಪಾಕ್... ಇದೇ ಇಲ್ಲಿನ ಸ್ಪೆಷಲ್
ಮೈಸೂರು ಎಂದ ಕೂಡಲೇ ನಮ್ಮ ಕಣ್ಣಮುಂದೆ ಹಲವು ದೃಶ್ಯಗಳು ಸರಿದು ಹೋದರೂ, ತಿನಿಸುಗಳ ವಿಚಾರ ಬಂದಾಗ ಮೈಸೂರ್ ಪಾಕ್ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆ ನೋಡಿದರೆ ಒಂದೊಂದು ಊರು ಕೂಡ ತನ್ನದೇ ಆದ ತಿನಿಸುಗಳಿಂದ ಹೆಸರುವಾಸಿ. ಊರಿನ ಹೆಸರು ಹೇಳುತ್ತಿದ್ದಂತೆಯೇ ಅಲ್ಲಿನ ಪ್ರಮುಖ ತಿನಿಸು ಕೂಡ ನಮ್ಮ ಮನಪಟಲದಲ್ಲಿ ಬಂದು ನಿಲ್ಲುತ್ತದೆ. ಇವತ್ತಿಗೂ ಮೈಸೂರು ಎಂದಾಕ್ಷಣ ಮೈಸೂರ್ ಪಾಕ್ ಎಲ್ಲರ ಕಣ್ಣಮುಂದೆ ಹಾದುಹೋಗುತ್ತದೆ.
ಮೈಸೂರು ನಂಜನಗೂಡಿನ ರಸಬಾಳೆಗೆ, ವೀಳ್ಯದೆಲೆಗೆ, ರೇಷ್ಮೆಸೀರೆಗಳಿಗೆ, ಅಗರಬತ್ತಿ ಹೀಗೆ ಹಲವು ರೀತಿಯ ವಸ್ತು, ಹಣ್ಣು, ತಿನಿಸುಗಳಿಗೆ ಪ್ರಸಿದ್ಧ. ಇವುಗಳ ನಡುವೆ ಮೈಸೂರ್ ಪಾಕ್ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದು, ಮೈಸೂರಿಗೆ ಕಳೆ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಇಷ್ಟಕ್ಕೂ ಮೈಸೂರಿಗೂ ಮೈಸೂರ್ ಪಾಕ್ಗೂ ಏನು ಸಂಬಂಧ, ಇಲ್ಲಿ ತಯಾರಾಗಿದ್ದಾದರೂ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಪ್ರತಿಯೊಬ್ಬರನ್ನೂ ಕಾಡದಿರದು. ಆದರೆ ಮೈಸೂರ್ ಪಾಕ್ ಗೆ ತನ್ನದೇ ವಿಶಿಷ್ಟ ಇತಿಹಾಸವಿರುವುದನ್ನು ಕಾಣಬಹುದಾಗಿದೆ. ಮೈಸೂರು ಮಹಾರಾಜರ ಪಾಕಶಾಲೆಯಲ್ಲಿ ಆಕಸ್ಮಿಕವಾಗಿ ತಯಾರಾದ ಪಾಕವೊಂದು ಮೈಸೂರ್ ಪಾಕ್ ಆಗಿದ್ದು, ಅದರ ಸೃಷ್ಟಿಯ ಕಥೆ ಇವತ್ತಿಗೂ ಕುತೂಹಲಕಾರಿ.
ಕಾಕಾಸುರ ಮಾದಪ್ಪರ ಪಾಕ ಮೈಸೂರ್ ಪಾಕ್ ಆಯ್ತು-ಮೈಸೂರ್ ಪಾಕ್ ಹಿಂದಿನ ಪುಟ್ಟ ಕಥೆ
ಮೈಸೂರು ಪಾಕ್ ತಯಾರಿಸಿದವರು ಕಾಕಾಸುರ ಮಾದಪ್ಪ
ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು. ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು.
ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರದ ತಿಂಡಿಯನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು.ಬೆನ್ನು ತಟ್ಟಿ ಪ್ರಶಂಸಿಸಿದರು
ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು ಕಾಕಾಸುರ ಮಾದಪ್ಪ ಮುಂದಾದರು. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು.
ಮೈಸೂರಿನ ಕಕಾಸುರ ಮಾದಪ್ಪ ಮೈಸೂರು ಪಾಕ್ ಜನಕಮೈಸೂರು ಪಾಕ ಬಂದಿದ್ದು ಹೀಗೆ...
ಆದರೆ ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ 'ಮೈಸೂರು ಪಾಕ' ಎಂದು ಹೆಸರಿಡೋಣ ಎಂದು ನಿರ್ಧರಿಸಿದರು.
ಅವತ್ತಿನಿಂದಲೇ ಆ ತಿಂಡಿಯನ್ನು ಮೈಸೂರು ಪಾಕ ಎಂದು ಕರೆಯಲಾಯಿತು. ಮುಂದೆ ಅದು ಮೈಸೂರ್ ಪಾಕ್ ಆಗಿ ಎಲ್ಲೆಡೆ ಗಮನಸೆಳೆಯಲು ಆರಂಭಿಸಿದ್ದು ಎಲ್ಲರಿಗೂ ಗೊತ್ತೇ ಇದೆ.ಮೈಸೂರು ಪಾಕ್ ಗೆ ಫೇಮಸ್ "ಗುರು ಸ್ವೀಟ್ ಮಾರ್ಟ್"
ಇವತ್ತು ಮೈಸೂರಿನ ಬಹುತೇಕ ಎಲ್ಲ ಸ್ವೀಟ್ ಸ್ಟಾಲ್ ಗಳಲ್ಲಿ ಮೈಸೂರ್ ಪಾಕ್ ದೊರೆಯುತ್ತದೆಯಾದರೂ ಮೈಸೂರ್ ಪಾಕ್ ತಯಾರಕರಾದ ಕಾಕಾಸುರ ಮಾದಪ್ಪ ಅವರ ತಲೆಮಾರಿನವರು ಇವತ್ತಿಗೂ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ದೇವರಾಜ ಮಾರುಕಟ್ಟೆ ಕಟ್ಟಡದಲ್ಲಿ ಗುರು ಸ್ವೀಟ್ ಮಾರ್ಟ್ ಎಂಬ ಸಿಹಿತಿನಿಸಿನ ಬೇಕರಿ ನಡೆಸುತ್ತಿದ್ದಾರೆ.
ಇಲ್ಲಿ ಹಿಂದಿನ ಕಾಲದ ಮೈಸೂರ್ ಪಾಕ್ ಅದೇ ರುಚಿಯಲ್ಲಿ ಗ್ರಾಹಕರಿಗೆ ದೊರೆಯುತ್ತಿರುವುದು ವಿಶೇಷ. ಮೈಸೂರು ಪಾಕ್ ಕೊಳ್ಳಲು ಜನ ಬೇಕರಿಗೆ ಮುಗಿ ಬೀಳುತ್ತಾರೆ. ನೀವೂ ಮೈಸೂರಿಗೆ ಬಂದರೆ, ಒಮ್ಮೆ ರುಚಿ ನೋಡಿ ಬನ್ನಿ...