ಖಾಸಗೀಕರಣ: 8 ಸಚಿವಾಲಯಗಳಿಂದ ಆಸ್ತಿ ಮಾರಾಟಕ್ಕೆ ಪಟ್ಟಿ ಸಿದ್ಧ!
ಕೇಂದ್ರ ಸರ್ಕಾರವು ತನ್ನ ಒಡೆತನದಲ್ಲಿರುವ ಆಸ್ತಿಗಳ ಮಾರಾಟದಿಂದ ಮುಂದಿನ ಹಣಕಾಸು ವರ್ಷದಲ್ಲಿ 2.5 ಲಕ್ಷ ಕೋಟಿ ರೂ ಆದಾಯ ಸಂಗ್ರಹಿಸಲು ಮುಂದಾಗಿದೆ. ವಿವಿಧ ವಲಯಗಳಲ್ಲಿನ ಸರ್ಕಾರದ ಹೂಡಿಕೆಯನ್ನು ವಾಪಸ್ ಪಡೆದು, ಅವುಗಳನ್ನು ಸಂಪೂರ್ಣವಾಗಿ ಖಾಸಗಿಗಳಿಗೆ ಒಪ್ಪಿಸುವ ಮೂಲಕ ಕೈತೊಳೆದುಕೊಳ್ಳುವುದು ಸರ್ಕಾರದ ಉದ್ದೇಶ. ಈ ಖಾಸಗೀಕರಣ ನೀತಿ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಎರಡು ದಿನ ನಡೆದ ಬ್ಯಾಂಕ್ ಮುಷ್ಕರ ಕೂಡ ಇದೇ ಕಾರಣದಿಂದ ಆಗಿತ್ತು.
ಅದಾಯ ಸಂಗ್ರಹದ ಗುರಿಯಲ್ಲಿ ಆಸ್ತಿಗಳ ಮಾರಾಟಕ್ಕಾಗಿ ಕೇಂದ್ರ ಸರ್ಕಾರ ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿದೆ. ರಸ್ತೆಗಳು, ವಿದ್ಯುತ್ ಪ್ರಸರಣಗಳು, ತೈಲ ಮತ್ತು ಅನಿಲ ಪೈಪ್ಲೈನ್, ಕ್ರೀಡಾಂಗಣ, ದೂರಸಂಪರ್ಕ ಟವರ್ಗಳು, ಹೀಗೆ ಅನೇಕ ಕೇಂದ್ರದ ಹಣಗಳಿಕೆಯ ಪಟ್ಟಿಯಲ್ಲಿ ವಿವಿಧ ಸಂಸ್ಥೆಗಳಿವೆ. ಎಂಟು ಸಚಿವಾಲಯಗಳು ತಮ್ಮ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಯೋಗ್ಯವಾದ ಸಂಪತ್ತನ್ನು ಗುರುತಿಸಿವೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಎಲ್ಲ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡೊಲ್ಲ: ನಿರ್ಮಲಾ ಸೀತಾರಾಮನ್
ದೇಶದಲ್ಲಿ ಈಗಾಗಲೇ ಖಾಸಗಿ ರೈಲುಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ರೈಲ್ವೆ ಇಲಾಖೆ ಸಂಪೂರ್ಣವಾಗಿ ಖಾಸಗೀಕರಣಗೊಳ್ಳಲಿದೆ ಎಂಬ ಹೇಳಿಕೆಗಳನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಅಲ್ಲಗಳೆದಿದ್ದಾರೆ. ಆದರೆ ಕೇಂದ್ರದ ಸಂಪತ್ತು ಮಾರಾಟ ಯೋಜನೆಯಲ್ಲಿ 150 ಪ್ರಯಾಣಿಕ ರೈಲುಗಳನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವ ಉದ್ದೇಶವೂ ಒಳಗೊಂಡಿದೆ. ಮುಂದೆ ಓದಿ.
ವಿಮಾನ ನಿಲ್ದಾಣ ಖಾಸಗಿಗೆ
ಈಗಾಗಲೇ ದೆಹಲಿ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿನ ತನ್ನ ಜಂಟಿ ಪಾಲುದಾರಿಕೆಯ ಹೂಡಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಧರಿಸಿದೆ. ಜತೆಗೆ ನವದೆಹಲಿಯ ಜವಹರಲಾಲ್ ನೆಹರೂ ಕ್ರೀಡಾಂಗಣವನ್ನು ಲೀಸ್ಗೆ ನೀಡಲು ಮುಂದಾಗಿದೆ.
ನೀತಿ ಆಯೋಗದ ಸಿದ್ಧತೆ
2021-24ರ ಹಣಕಾಸು ವರ್ಷದವರೆಗೆ 'ರಾಷ್ಟ್ರೀಯ ಹಣಗಳಿಕೆ ಪೈಪ್ಲೈನ್'ನ ಪ್ರಕ್ರಿಯೆಯನ್ನು ಸಿದ್ಧಗೊಳಿಸುವಲ್ಲಿ ನೀತಿ ಆಯೋಗ ತೊಡಗಿಸಿಕೊಂಡಿದೆ. ಈ ಪೈಪ್ಲೈನ್ನಲ್ಲಿ ಯಾವ ಯಾವ ಅಸ್ತಿಗಳನ್ನು ಸೇರಿಸಬಹುದು ಎಂದು ಗುರುತಿಸಿ ಅವುಗಳ ಮಾಹಿತಿ ಹಂಚಿಕೊಳ್ಳುವಂತೆ ಎಲ್ಲ ಸಚಿವಾಲಯಗಳಿಗೂ ಸೂಚನೆ ನೀಡಿದೆ. 2021-22ನೇ ಸಾಲಿಗೆ ಗುರುತಿಸಲಾದ ಆಸ್ತಿಯ ಅಂತಿಮ ಪಟ್ಟಿಯ ಬಗ್ಗೆ ಕಳೆದ ತಿಂಗಳು ಆಸ್ತಿ ಹಣಗಳಿಕೆಯ ಕುರಿತಾದ ಕಾರ್ಯದರ್ಶಿಗಳ ತಂಡ ಸಭೆ ನಡೆಸಿತ್ತು.
ಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರ
ರೈಲ್ವೆ ಸಚಿವಾಲಯ
ರೈಲ್ವೇ ಸಚಿವಾಲಯವು ತನ್ನ 50 ನಿಲ್ದಾಣಗಳ ಮರು ಅಭಿವೃದ್ಧಿಗೆ ಪ್ರಸ್ತಾವನೆಯ ಮನವಿ ಮತ್ತು ಅರ್ಹತೆ ಮನವಿ ಹೊರಡಿಸುವ ನಿರೀಕ್ಷೆಯಿದೆ. ಇದು ಖಾಸಗಿ ಕಂಪೆನಿಗಳಿಂದ ನಡೆಯಲಿದೆ. ಜತೆಗೆ 150 ಪ್ರಯಾಣಿಕ ರೈಲುಗಳನ್ನು ಖಾಸಗಿ ವ್ಯಕ್ತಿಗಳಿಗೆ ಒಪ್ಪಿಸಲಿದೆ. ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ 90,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ.
ಬಿಎಸ್ಎನ್ಎಲ್ ಆಸ್ತಿ ಮಾರಾಟ
ದೂರಸಂಪರ್ಕ ಕ್ಷೇತ್ರದ ಅಸ್ತಿಗಳಿಂದಲೂ ಕೇಂದ್ರ ಸರ್ಕಾರದ ಈ ಸಾಲಿನಲ್ಲಿ ದೊಡ್ಡ ಮಟ್ಟದ ಆದಾಯ ಗಳಿಕೆ ನಿರೀಕ್ಷಿಸಿದೆ. ಬಿಎಸ್ಎನ್ಎಲ್ ಟವರ್ಗಳ ಆಸ್ತಿಯ ಮಾರಾಟ ಮತ್ತು ಭಾರತ್ನೆಟ್ ಅಡಿಯಲ್ಲಿನ ಆಪ್ಟಿಕಲ್ ಫೈಬರ್ಗಳು ಮತ್ತು ಎಂಟಿಎನ್ಎಲ್ ಆಸ್ತಿಗಳ ಮಾರಾಟಕ್ಕೆ ಈಗಾಗಲೇ ಕೈಯಿರಿಸಿದೆ. ಇದರಿಂದ 40,000 ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿದೆ.
ರೈಲ್ವೆಯನ್ನು ಎಂದಿಗೂ ಖಾಸಗೀಕರಣಗೊಳಿಸುವುದಿಲ್ಲ; ಗೋಯಲ್
ರಸ್ತೆ ಸಾರಿಗೆ ಮತ್ತು ಹೆದ್ದಾರಿಯಿಂದ ಹಣ ಸಂಗ್ರಹ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (ಐಎನ್ವಿಟಿ), ಟೋಲ್ ಆಪರೇಟ್-ಟ್ರಾನ್ಸ್ಫರ್ (ಟಿಒಟಿ) ಮತ್ತು ಭದ್ರತಾ ಠೇವಣಿ ಸೇರಿದಂತೆ ಪಿಜಿಸಿಐಎಲ್ ಆಸ್ತಿಗಳನ್ನು ಆರ್ಥಿಕ ಮೂಲವನ್ನಾಗಿ ಪರಿವರ್ತಿಸಲು, ಇದರ ಮೂಲಕ 7,200 ಕಿಮೀ ರಸ್ತೆ ಮಾರ್ಗದಿಂದ 30,000 ಕೋಟಿ ರೂ ಸಂಗ್ರಹಿಸಲು ಯೋಜಿಸಿದೆ.
ಕ್ರೀಡಾಂಗಣ ಭೋಗ್ಯಕ್ಕೆ
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೂಲಕವೂ ಸರ್ಕಾರ ಆದಾಯ ಎತ್ತುವ ಗುರಿ ಹೊಂದಿದೆ. ಇದರಲ್ಲಿ ಮೊದಲು ಖಾಸಗಿ ನಿರ್ವಹಣೆಗೆ ಪಾಲಾಗುವುದು ದೆಹಲಿಯ ಜವಹರಲಾಲ್ ನೆಹರೂ ಕ್ರೀಡಾಂಗಣ. ಕ್ರೀಡಾಂಗಣಗಳಿಂದ 20,000 ಕೋಟಿ ರೂ.ಸಂಗ್ರಹದ ಗುರಿ ಇದೆ. ಕ್ರೀಡಾಂಗಣಗಳನ್ನು ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಖಾಸಗಿ ವಲಯಕ್ಕೆ ಲೀಸ್ಗೆ ನೀಡಲಾಗುತ್ತದೆ.
Recommended Video
ಇತರೆ ವಲಯಗಳು
- ವಿದ್ಯುತ್: ಪವರ್ ಗ್ರಿಡ್ಗಳ ಪ್ರಸರಣ ಆಸ್ತಿಯಿಂದ 27,000 ಕೋಟಿ ರೂ.
- ನಾಗರಿಕ ವಿಮಾನಯಾನ: ಎಎಐನ 13 ವಿಮಾನ ನಿಲ್ದಾಣಗಳು, ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ ಷೇರುಗಳಿಂದ 20,000 ಕೋಟಿ ರೂ.
- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ: ಜಿಎಐಎಲ್, ಐಒಸಿಎಲ್ ಮತ್ತು ಎಚ್ಪಿಸಿಎಲ್ ಕೊಳವೆ ಮಾರ್ಗದಿಂದ 17,000 ಕೋಟಿ ರೂ.
- ಹಡಗು, ಬಂದರು ಮತ್ತು ಜಲಮಾರ್ಗ: 30ಕ್ಕೂ ಹೆಚ್ಚಿನ ಬರ್ತ್ಗಳಿಂದ 4,000 ಕೋಟಿ ರೂ ಗುರಿ ಹೊಂದಲಾಗಿದೆ.