ಗೋವಾ ಚುನಾವಣೆ; ಭಂಡಾರಿ ಸಮುದಾಯದ ರಾಜಕೀಯ ಮಹತ್ವ!
ಪಣಜಿ, ಜನವರಿ 25; ಚುನಾವಣೆ ಬಂದರೆ ಸಾಕು ಗೋವಾದ ರಾಜಕೀಯ ಪಕ್ಷಗಳು ಯಾವಾಗಲೂ ಸಂಖ್ಯಾತ್ಮಕವಾಗಿ ಪ್ರಬಲವಾಗಿರುವ ಭಂಡಾರಿ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತವೆ. ಕೆಲವರು ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ಕೊಡುತ್ತಾರೆ. ಈ ಬಾರಿಯ ಗೋವಾ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ.
ಗೋವಾ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ 45 ವರ್ಷದ ಹಾಗೂ ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿರುವ ಅಮಿತ್ ಪಾಲೇಕರ್ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ವಕೀಲರಾಗಿದ್ದ ಪಾಲೇಕರ್ ಇದೀಗ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದು, ಭಂಡಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗೋವಾ; ಉತ್ಪಲ್ ಪರಿಕ್ಕರ್ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್ ನಾಯಕ
ಭಂಡಾರಿ ಸಮುದಾಯ ಗೋವಾದ ಅತಿದೊಡ್ಡ ಜಾತಿ ಗುಂಪಾಗಿದ್ದು, ಹಿಂದೂ ಜನಸಂಖ್ಯೆಯಲ್ಲಿ ಗಮನಾರ್ಹ ಶೇಕಡಾವಾರು ಪ್ರಮಾಣವನ್ನು ಹೊಂದಿದೆ. ಎಎಪಿಯು ಈ ಹಿಂದೆ ಭಂಡಾರಿ ಸಮುದಾಯದವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿತ್ತು. ಹಾಗಾಗಿ ಪಾಲೇಕರ್ ಹೆಸರು ತೆಗೆದುಕೊಳ್ಳಲಾಗಿದೆ ಎಂದು ಆಯ್ಕೆಯನ್ನು ಸಮರ್ಥಿಸಿಕೊಂಡಿದೆ.
ಗೋವಾ: ಟಿಎಂಸಿ ಸೇಡಿನ ರಾಜಕೀಯ, ಕಾಂಗ್ರೆಸ್, ಜಿಎಫ್ಪಿ ಟಾರ್ಗೆಟ್!
ಜನವರಿ 19 ರಂದು ಅಮಿತ್ ಪಾಲೇಕರ್ರನ್ನು ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, "ತಮ್ಮ ಪಕ್ಷವು ಯಾವುದೇ ಕಾರಣಕ್ಕೂ ಜಾತಿ ರಾಜಕಾರಣವನ್ನು ಆಶ್ರಯಿಸಿಲ್ಲ. ಬದಲಿಗೆ ಭಂಡಾರಿ ಸಮುದಾಯಕ್ಕೆ ಗೋವಾದ ಪ್ರಮುಖ ಪಕ್ಷಗಳಿಂದ ದೀರ್ಘಕಾಲದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಸಿಎಂ ಅಭ್ಯರ್ಥಿಯಾಗಿ ಪಾಲೇಕರ್ ಹೆಸರು ಘೋಷಿಸಲಾಗಿದೆ. ಸಂಖ್ಯಾಬಲದ ದೃಷ್ಟಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಪಕ್ಷಾಂತರದಲ್ಲಿ ದಾಖಲೆ ಬರೆದ ಗೋವಾ
ಭಂಡಾರಿಗಳು ಯಾರು?
ಭಂಡಾರಿ ಸಮುದಾಯದ ಸಾಂಪ್ರಾಯಿಕ ಉದ್ಯೋಗವೆಂದರೆ ತೊಗರಿಬೇಳೆ ಬೆಳೆಯುವುದು ಮತ್ತು ಬಟ್ಟಿ ಇಳಿಸುವುದು, ಹೊಲದಲ್ಲಿ ಉಳುಮೆ ಮಾಡುವುದು ಮತ್ತು ತೋಟಗಳಲ್ಲಿ ಕೆಲಸ ಮಾಡುವುದು. ಇವರನ್ನು ಗೋವಾದಲ್ಲಿ ಇತರೆ ಹಿಂದುಳಿದ ವರ್ಗ (ಒಬಿಸಿ)ಗೆ ಸೇರಿಸಲಾಗಿದೆ. ಈ ಸಮುದಾಯವು ರತ್ನಗಿರಿ ಮತ್ತು ಸಿಂಧುದುರ್ಗದ ಭಾಗಗಳನ್ನು ಒಳಗೊಂಡಂತೆ ಗೋವಾ ಮತ್ತು ಮಹಾರಾಷ್ಟ್ರದ ಕೊಂಕಣ ವ್ಯಾಪ್ತಿವರೆಗೆ ಹರಡಿಕೊಂಡಿದೆ.
ಗೋಮಾಂತಕ ಭಂಡಾರಿ ಸಮಾಜ (ಜಿಬಿಎಸ್) ಅಧ್ಯಕ್ಷ ಅಶೋಕ್ ನಾಯಕ್ ಮಾತನಾಡಿ, "ಗೋವಾದಲ್ಲಿ ಭಂಡಾರಿ ಸಮುದಾಯದವರು ಎಷ್ಟು ಪ್ರಮಾಣದಲ್ಲಿ ಇದ್ದಾರೆ ಎಂದು ಜನಸಂಖ್ಯೆಯ ಸಮೀಕ್ಷೆ ನಡೆದಿಲ್ಲ. ಆದರೆ, ಗೋವಾ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ದಾಖಲಿಸಿರುವ ಅಂಕಿ-ಅಂಶಗಳನ್ನು ಸಮುದಾಯದ ನಾಯಕರು ವಿರೋಧಿಸುತ್ತಾರೆ.
ಅಕ್ಟೋಬರ್ 2021ರಲ್ಲಿ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ಉತ್ತರಿಸಿ, "2014ರಲ್ಲಿ ಗೋವಾ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಒಬಿಸಿ ಸಮೀಕ್ಷೆಯನ್ನು ನಡೆಸಿದೆ ಎಂದು ಹೇಳಿದ್ದರು. ಈ ಸಮೀಕ್ಷಾ ವರದಿಯ ಪ್ರಕಾರ, ಒಬಿಸಿ ಜನಸಂಖ್ಯೆಯು 3,58,517 ಆಗಿತ್ತು, ಇದು ಒಟ್ಟು ಜನಸಂಖ್ಯೆಯ ಶೇ. 27ರಷ್ಟು ಆಗಿತ್ತು. ಈ ಸಮೀಕ್ಷೆಯ ಪ್ರಕಾರ ಭಂಡಾರಿ ಸಮುದಾಯದ ಒಟ್ಟು ಸಂಖ್ಯೆ 2,19,052 ಆಗಿದ್ದು, ಇದು ಒಬಿಸಿಯಲ್ಲಿ 61.10% ರಷ್ಟಿದೆ" ಎಂದು ಮಾಹಿತಿ ನೀಡಿದ್ದರು.
ಸರಿಯಾದ ಸಮೀಕ್ಷೆ ನಡೆದಿಲ್ಲ
ಆದರೆ ಭಂಡಾರಿಗಳು ಒಬಿಸಿಯಲ್ಲಿ ಮಾತ್ರವಲ್ಲದೆ ರಾಜ್ಯದ ಬಹುಪಾಲು ಹಿಂದೂ ಜನಸಂಖ್ಯೆಯಲ್ಲೂ ಪ್ರಧಾನ ಪಾತ್ರ ವಹಿಸುತ್ತಾರೆ. 2011ರ ಜನಗಣತಿಯ ಪ್ರಕಾರ ಗೋವಾದ ಒಟ್ಟು ಜನಸಂಖ್ಯೆಯು 14.59 ಲಕ್ಷವಾಗಿದ್ದು, ಅದರಲ್ಲಿ ಶೇ 66.08 ರಷ್ಟು ಹಿಂದೂಗಳು. ಶೇ 25.10 ರಷ್ಟು ಕ್ರಿಶ್ಚಿಯನ್ನರು, ಶೇ 3.66 ಮುಸ್ಲಿಮರು ಮತ್ತು ಉಳಿದವರು ಇತರ ಧರ್ಮದವರು ಇದ್ದಾರೆ.
"ಭಂಡಾರಿಗಳ ಜನಸಂಖ್ಯೆಯ ಸರಿಯಾದ ಸಮೀಕ್ಷೆ ಎಂದಿಗೂ ನಡೆದಿಲ್ಲ. 2 ಲಕ್ಷ ಎಂದು ಸರಕಾರ ಹೇಳುತ್ತಿರುವುದು ಸರಿಯಲ್ಲ. ಪ್ರಸ್ತುತ ಈ ಸಂಖ್ಯೆಯು ಸುಮಾರು 5.29 ಲಕ್ಷ ಆಗಿರಬೇಕು. ರಾಜ್ಯದ ಜನಸಂಖ್ಯೆಯಲ್ಲಿ ಕನಿಷ್ಠ ಶೇ.30 ರಷ್ಟು ಭಂಡಾರಿಗಳು ಇದ್ದಾರೆ" ಎಂದು ಎಂದು ಅಶೋಕ ನಾಯಕ್ ಹೇಳಿದ್ದಾರೆ.
ಸಂಖ್ಯಾತ್ಮಕವಾಗಿ ಪ್ರಬಲವಾದ ಭಂಡಾರಿಗಳನ್ನು ಗೋವಾದ ರಾಜಕೀಯ ಪಕ್ಷಗಳು ಯಾವಾಗಲೂ ಮತಕ್ಕಾಗಿ ಓಲೈಸಲು ಪ್ರಯತ್ನಿಸುತ್ತವೆ. ಈ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಮೀಸಲಾತಿಯನ್ನು ನೀಡಲು ಯಾರೂ ಬಯಸುತ್ತಾರೋ ಹಾಗೂ ಚುನಾವಣೆಯಲ್ಲಿ ಸಮುದಾಯದ ಅಭ್ಯರ್ಥಿಗಳಿಗೆ ಯಾರು ಗರಿಷ್ಠ ಟಿಕೆಟ್ ನೀಡುತ್ತಾರೋ ಆ ಪಕ್ಷವನ್ನು ಭಂಡಾರಿ ಸಮಾಜ ಬೆಂಬಲಿಸುತ್ತದೆ ಎಂದು ಜಿಬಿಎಸ್ ಮುಖ್ಯಸ್ಥರು ಈ ಹಿಂದೆ ಹೇಳಿದ್ದರು.
ಒಬ್ಬರು ಮಾತ್ರ ಸಿಎಂ ಆಗಿದ್ದಾರೆ
ಈ ಸಮುದಾಯಕ್ಕೆ ರಾಜ್ಯ ವಿಧಾನಸಭೆಯಲ್ಲಿ ಪ್ರಾತಿನಿಧ್ಯವಿದ್ದರೂ ಗೋವಾದಲ್ಲಿ ಇದುವರೆಗೆ ಒಬ್ಬರು ಮಾತ್ರ ಸಿಎಂ ಸ್ಥಾನ ಅಲಂಕರಿಸಿದ್ದಾರೆ. ಕಾಂಗ್ರೆಸ್ನಲ್ಲಿದ್ದ ರವಿ ನಾಯ್ಕ್ ಇದೀಗ ಬಿಜೆಪಿಯಲ್ಲಿದ್ದಾರೆ. 40 ಕ್ಷೇತ್ರಗಳ ಗೋವಾ ರಾಜ್ಯ ವಿಧಾನಸಭೆಯಲ್ಲಿ ಭಂಡಾರಿ ಸಮುದಾಯದ ನಾಲ್ವರು ಶಾಸಕರಷ್ಟೇ ಇದ್ದಾರೆ.
ಅಶೋಕ್ ನಾಯಕ್ ಅವರು ಹೇಳುವಂತೆ, "ಒಬಿಸಿ ವರ್ಗಕ್ಕೆ ಭಂಡಾರಿ ಸಮುದಾಯ ಸೇರ್ಪಡೆಯಾದ ನಂತರ ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಭಂಡಾರಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು, ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ನಮ್ಮ ಸಮುದಾಯದ ಶೇ 5ರಷ್ಟು ಶ್ರೀಮಂತರಾಗಿದ್ದರೆ, ಉಳಿದ ಶೇ. 95 ರಷ್ಡು ಮಂದಿ ಇನ್ನೂ ಬಡವರಾಗಿಯೇ ಉಳಿದಿದ್ದಾರೆ. ಅವರು ಜೀವನೋಪಾಯಕ್ಕಾಗಿ ಇಂದಿಗೂ ಕಷ್ಟಪಡುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಎಎಪಿಗೆ ಬಲ ಸಿಗಲಿದೆಯೇ?
"ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದು ನಮ್ಮ ಬಳಿ ಬಂದು ಭಂಡಾರಿ ಸಮುದಾಯದ ಒಬ್ಬರನ್ನು ಸಿಎಂ ಮಾಡುವುದಾಗಿ ಹೇಳಿದೆ. ಅವರು ಗೆಲ್ಲುತ್ತಾರೋ ಇಲ್ಲವೋ ಎಂಬುದು ಬೇರೆ ಕಥೆ. ಆದರೆ ಅವರು ನಮ್ಮ ನಾಡಿಮಿಡಿತವನ್ನು ಅರ್ಥೈಸಿಕೊಂಡು ನಮ್ಮ ಸಮುದಾಯಕ್ಕೆ ಸಿಗಬೇಕಾದ ಅರ್ಹತೆಯನ್ನು ಗುರುತಿಸಿದ್ದಾರೆ" ಎಂದು ಅಶೋಕ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ. (ಚಿತ್ರ; ಎಎಪಿ ಸಿಎಂ ಅಭ್ಯರ್ಥಿ)
ಎಎಪಿಯ ಸಿಎಂ ಅಭ್ಯರ್ಥಿಯನ್ನು ಸಮುದಾಯದ ಮುಖಂಡರು ಬೆಂಬಲಿಸುತ್ತಾರೆ. ಸೇಂಟ್ ಕ್ರೂಜ್ ಕ್ಷೇತ್ರದಲ್ಲಿ ಭಂಡಾರಿ ಜನಸಂಖ್ಯೆ ಹೆಚ್ಚಿಲ್ಲ, ಆದರೂ ಪಾಲೇಕರ್ ಅವರು ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ರಾಜಕೀಯ ವೀಕ್ಷಕರು ಹೇಳುವಂತೆ ಜಿಬಿಎಸ್ (ಗೋಮಾಂತಕ ಭಂಡಾರಿ ಸಮಾಜ) ಪಾಲೇಕರ್ ಹಿಂದೆ ಸಮುದಾಯದ ಛಾಯೆ ಇದ್ದರೂ, ಕಳೆದ 20 ವರ್ಷಗಳಿಂದ ಭಂಡಾರಿ ಸಮುದಾಯವು ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದೆ.
ಜಾತಿ ಆಧಾರದ ಮೇಲೆ ಮತ ಕೇಳಲ್ಲ
ದೈನಿಕ ಗೋಮಾಂತಕ್ ಆಗ ಗೋವಾದಲ್ಲಿ ಬಹಳ ಪ್ರಭಾವಶಾಲಿಯಾಗಿತ್ತು ಮತ್ತು ಆ ಸಮಯದಲ್ಲಿ ಹಿಂದೂ ಮನೆಗಳನ್ನು ತಲುಪುತ್ತಿದ್ದ ಏಕೈಕ ಮರಾಠಿ ಭಾಷೆಯ ಪತ್ರಿಕೆಯಾಗಿತ್ತು. ದಿನಪತ್ರಿಕೆಯ ಬೆಂಬಲದೊಂದಿಗೆ ಭಂಡಾರಿ ಮುಖಂಡರಾದ ಕೆ. ಬಿ. ನಾಯ್ಕ್ ಜಾತಿ ಕಾರ್ಡ್ ಆಡುವ ಮೂಲಕ ಚುನಾವಣಾ ಲಾಭ ಗಳಿಸಲು ಪ್ರಯತ್ನಿಸಿದರು. ಹಿಂದಿನ ಎರಡು ಚುನಾವಣೆಗಳಲ್ಲಿ ಭೌಸಾಹೇಬರ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು 16 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ 1972 ರ ಚುನಾವಣೆಯಲ್ಲಿ ಅದು 18 ಸ್ಥಾನಗಳನ್ನು ಗೆದ್ದಿತು. ಅಂದಿನಿಂದ ಗೋವಾದಲ್ಲಿ ಜಾತಿ ರಾಜಕೀಯ ಕೆಲಸ ಮಾಡಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಗೋವಾದ ವಿವಿಧ ಕ್ಷೇತ್ರಗಳಿಂದ ಗೆಲ್ಲುವ ಅಭ್ಯರ್ಥಿಗಳು ಸಾಮಾನ್ಯವಾಗಿ ತಮ್ಮ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರವನ್ನೇ ಪ್ರತಿನಿಧಿಸುತ್ತಾರೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಉದಾಹರಣೆಗೆ ಕ್ರಿಶ್ಚಿಯನ್ ಜನಸಂಖ್ಯೆಯಿರುವ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಅಭ್ಯರ್ಥಿ ಗೆಲ್ಲಬಹುದು ಅಥವಾ ಭಂಡಾರಿ ಮತದಾರರಿರುವ ಸ್ಥಾನಗಳಲ್ಲಿ ಭಂಡಾರಿ ಸಮುದಾಯದ ಅಭ್ಯರ್ಥಿ ಗೆಲ್ಲಬಹುದು. ಆದರೆ ಈ ಕಾರಣಕ್ಕಾಗಿ ಜಾತಿ ಆಧಾರದ ಮೇಲೆ ಮತಗಳನ್ನು ಕೇಳಲಾಗುವುದಿಲ್ಲ.