Explained: ಹೈದರಾಬಾದ್ನ 'ಭಾಗ್ಯನಗರ್' ಹೆಸರಿನ ಮೂಲ ಯಾವುದು?
'ಮುತ್ತಿನ ನಗರಿ' ಎಂದು ಜನಪ್ರಿಯವಾಗಿರುವ ಹೈದರಾಬಾದ್ ಈಗ ದೇಶದೆಲ್ಲೆಡೆ ಚರ್ಚೆಯಲ್ಲಿದೆ. ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆ ದೊಡ್ಡ ನಗರಗಳು, ಸ್ಥಳಗಳ ಹೆಸರು ಬದಲಾವಣೆಯಾಗುತ್ತಿರುವಾಗ ಹೈದರಾಬಾದ್ ಹೆಸರನ್ನು ಕೂಡ ಬದಲಿಸುವ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದೆ. ನಿಜಾಮರ ಕಾಲದಲ್ಲಿ ನಾಮಕರಣವಾದ 'ಹೈದರಾಬಾದ್' ಎಂಬ ಹೆಸರನ್ನು ಅದರ ಮೂಲ ಹೆಸರಾದ 'ಭಾಗ್ಯ ನಗರ' ಎಂದು ಬದಲಿಸುವುದಾಗಿ ಬಿಜೆಪಿ ಶಪಥ ಮಾಡಿದೆ.
ಹೈದರಾಬಾದ್ ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಹಾಗೆಯೇ ಹೈದರಾಬಾದ್ನಲ್ಲಿಪ್ರಚಾರ ನಡೆಸುತ್ತಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಗರದ ಹೆಸರನ್ನು ಭಾಗ್ಯನಗರ ಎಂದು ಬದಲಿಸುವುದಾಗಿ ಹೇಳಿದರು. ಇವುಗಳಿಗೂ ಮುನ್ನ ಹೈದರಾಬಾದ್ ಹೆಸರನ್ನು ಭಾಗ್ಯನಗರ್ ಎಂದು ಟ್ವಿಟ್ಟರ್ನಲ್ಲಿ ಬರೆದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.
GHMC Polls: ಹೈದರಾಬಾದ್ ಚುನಾವಣೆಗೆ ಯಾಕಿಷ್ಟು ಮಹತ್ವ?
ಹೈದರಾಬಾದ್ಗೆ ಮೊದಲು ಇದ್ದ ಹೆಸರು ಭಾಗ್ಯನಗರ್ ಎಂದು ಬಿಜೆಪಿ ಪ್ರತಿಪಾದಿಸಿದೆ. 'ಕೆಲವು ಜನರು ಹೈದರಾಬಾದ್ ಹೆಸರನ್ನು ಭಾಗ್ಯನಗರ್ ಎಂದು ಬದಲಿಸಬಹುದೇ? ಎಂದು ಕೇಳಿದ್ದರು. ನಾನು ಹೇಳಿದೆ- ಯಾಕಾಗುವುದಿಲ್ಲ?' ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು. ಬಿಜೆಪಿಯ ಅನೇಕ ನಾಯಕರು ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಾಗ್ಯಲಕ್ಷ್ಮಿ ದೇವಸ್ಥಾನದಿಂದಲೇ ನಗರಕ್ಕೆ ಭಾಗ್ಯನಗರ ಎಂಬ ಹೆಸರು ಬಂದಿತ್ತು ಎಂದು ಅನೇಕರು ಪ್ರತಿಪಾದಿಸಿದ್ದಾರೆ. ಮುಂದೆ ಓದಿ.
ದೇವಸ್ಥಾನದ ಹಿನ್ನೆಲೆ ಮಾಹಿತಿ ಇಲ್ಲ
ಲಕ್ಷ್ಮಿ ದೇವತೆಯ ಸಣ್ಣ ದೇವಾಲಯ ಚಾರ್ಮಿನಾರ್ನ ಆಗ್ನೇಯ ಭಾಗದ ಮಿನಾರ್ನ ಪಕ್ಕದಲ್ಲಿದೆ. ಬಿದಿರಿನ ಕಂಬಗಳು ಮತ್ತು ಟಾರ್ಪಲಿನ್ಗಳಿಂದ ಮಾಡಿದ ದೇವಸ್ಥಾನಕ್ಕೆ ತವರದ ಕಳಶ ಇದೆ. ಆಗ್ನೇಯ ದಿಕ್ಕಿನ ಮಿನಾರ್ ಅದರ ಹಿಂಬದಿಯ ಗೋಡೆಯಾಗಿದೆ. ಈ ದೇವಸ್ಥಾನವನ್ನು ಯಾವಾಗ ಮತ್ತು ಹೇಗೆ ನಿರ್ಮಿಸಿದರು ಎಂಬುದಕ್ಕೆ ನಿಖರವಾದ ಮಾಹಿತಿಗಳಿಲ್ಲ. ಆದರೆ ಅದು ಇಲ್ಲಿ 1960ರಿಂದಲೂ ಇದೆ. ಸಿಕಂದರಾಬಾದ್ನ ಬಿಜೆಪಿ ಸಂಸದ ಜಿ. ಕೃಷನ್ ರೆಡ್ಡಿ ಅವರು ಇದು ಚಾರ್ಮಿನಾರ್ಗೂ ಹಳತು, 1591ರಲ್ಲಿ ನಿರ್ಮಾಣವಾದ ದೇವಸ್ಥಾನ ಎಂದಿದ್ದಾರೆ.
ಚಾರ್ಮಿನಾರ್ನ ಸಂರಕ್ಷಿತ ಪರಿಧಿಯನ್ನು ಈ ದೇವಸ್ಥಾನ ಒತ್ತುವರಿ ಮಾಡಿದೆ ಎನ್ನುತ್ತವೆ ಭಾರತೀಯ ಪುರತತ್ವ ಇಲಾಖೆಯ ಮೂಲಗಳು. ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಐತಿಹಾಸಿಕ ಮಹತ್ವ ಇದೆ ಎಂಬ ವಾದವನ್ನು ಅನೇಕ ಇತಿಹಾಸಕಾರರು ನಿರಾಕರಿಸಿದ್ದಾರೆ.
ಕಂಬವೇ ದೇವರಾಗಿ ಬದಲಾಯ್ತು
ವಾಹನಗಳಿಂದ ಚಾರ್ಮಿನಾರ್ ಸ್ಮಾರಕಕ್ಕೆ ಧಕ್ಕೆಯಾಗದಂತೆ ತಡೆಯಲು ನಿರ್ಮಿಸಲಾಗಿದ್ದ ಸಣ್ಣದೊಂದು ಕಂಬಕ್ಕೆ 1960ರ ದಶಕದಲ್ಲಿ ಕೇಸರಿ ಬಣ್ಣ ಬಳಿದಿರುವುದು ಕಂಡುಬಂದಿತ್ತು. ಅದಕ್ಕೆ ಜನರು ಆರತಿ ಬೆಳಗಲು ಆರಂಭಿಸಿದರು. ರಾಜ್ಯ ಸಾರಿಗೆ ಬಸ್ ಆ ಕಂಬಕ್ಕೆ ಡಿಕ್ಕಿ ಹೊಡೆದು ಅದು ಹಾನಿಗೊಳಗಾದ ಬಳಿಕ ಅಲ್ಲಿ ರಾತ್ರೋರಾತ್ರಿ ಬಿದಿರಿನಿಂದ ಮಾಡಿದ ಸಣ್ಣದೊಂದು ಕಟ್ಟಡ ತಲೆಎತ್ತಿತು. ಅದರೊಳಗೆ ದೇವತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು ಎನ್ನುತ್ತಾರೆ ಅಧಿಕಾರಿಗಳು.
ಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆ
ವಿಸ್ತರಿಸಿಕೊಳ್ಳುತ್ತಿರುವ ದೇವಾಲಯ
'ಈ ಘಟನೆ ಬಳಿಕ ಆ ದೇವಾಲಯ ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಒಂದೆರಡು ಅಡಿ ವಿಸ್ತರಿಸಿಕೊಳ್ಳುತ್ತಲೇ ಹೋಗಿದೆ. 2013ರಲ್ಲಿ ದೇವಾಲಯ ಯಾವುದೇ ರೀತಿ ವಿಸ್ತರಿಸಿಕೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡುವವರೆಗೂ ಅದು ಬೆಳೆಯುತ್ತಲೇ ಇತ್ತು' ಎನ್ನುತ್ತಾರೆ ತೆಲಂಗಾಣ ವಿಧಾನಪರಿಷತ್ನ ವಿರೋಧಪಕ್ಷದ ನಾಯಕ ಮೊಹಮ್ಮದ್ ಶಬ್ಬೀರ್ ಅಲಿ.
ಚಾರ್ಮಿನಾರ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಅಂಗಡಿಗಳನ್ನು ಹೊಂದಿರುವ ಅಪಾರ ಸಂಖ್ಯೆಯ ಹಿಂದೂಗಳು ಈ ದೇವಾಲಯದ ಭಕ್ತರಾಗಿದ್ದಾರೆ. ಹಬ್ಬಗಳಲ್ಲಿ, ಅದರಲ್ಲಿಯೂ ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆಯುತ್ತಾರೆ.
ಭಾಗಮತಿ ಎಂಬ ನೃತ್ಯಗಾರ್ತಿ
ಹೈದರಾಬಾದ್ ಸಂಸ್ಥಾಪಕ ಮತ್ತು ಆಡಳಿತಗಾರ ಕುಲಿ ಕುತುಬ್ ಶಾನಿಗೆ ಭಾಗಮತಿ ಎಂಬ ನೃತ್ಯಗಾತಿಯ ಮೇಲೆ ಪ್ರೀತಿಯಿತ್ತು. ಆಕೆಯ ಮೇಲಿನ ವ್ಯಾಮೋಹದಿಂದ ನಗರಕ್ಕೆ ಭಾಗ್ಯನಗರ ಎಂಬ ಹೆಸರಿಟ್ಟಿದ್ದ. ಬಳಿಕ ಭಾಗಮತಿ ರಾಜನನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರವಾಗಿ 'ಹೈದರ್ ಮಹಲ್' ಎಂಬ ಹೆಸರು ಪಡೆದಳು. ಬಳಿಕ ನಗರದ ಹೆಸರನ್ನು ಹೈದರಾಬಾದ್ ಎಂದು ಮರುನಾಮಕರಣ ಮಾಡಲಾಯಿತು ಎಂಬ ಕಥೆಯಿದೆ.
ತಾಕತ್ತಿದ್ದರೆ ಮೊದಲು ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ: ಬಿಜೆಪಿಗೆ ಓವೈಸಿ ಸವಾಲು
ಹೀಗಾಗಿ ಭಾಗ್ಯನಗರ ಹೆಸರು ಮತ್ತು ಭಾಗ್ಯಲಕ್ಷ್ಮಿ ದೇವಸ್ಥಾನ ಎರಡರ ಕುರಿತೂ ಅನೇಕ ವಾದ ವಿವಾದಗಳಿವೆ. ಹಾಗೆಂದು ಇವುಗಳ ಮೂಲ ಅಸ್ತಿತ್ವದ ಪ್ರತಿಪಾದನೆಯನ್ನು ಪುಷ್ಟೀಕರಿಸುವ ಯಾವುದೇ ಪುರಾವೆಗಳು ಲಭ್ಯವಿಲ್ಲ ಎನ್ನುತ್ತಾರೆ ಇತಿಹಾಸಕಾರರು. 'ಭಾಗಮತಿ' ಎಂಬ ಹೆಸರು ಜಾನಪದದಲ್ಲಿ ಬಳಕೆಯಲ್ಲಿದೆ. ಆದರೆ ಆ ಹೆಸರಿನಾಕೆ ಇದ್ದಳು ಎಂಬುದಕ್ಕೂ ಸೂಕ್ತ ಸಾಕ್ಷ್ಯಗಳಿಲ್ಲ. ಯಾವುದೇ ಐತಿಹಾಸಿಕ ದಾಖಲೆಗಳಲ್ಲಿಯೂ ಆಕೆಯ ಪ್ರಸ್ತಾಪವಿಲ್ಲ. ಆದರೆ ಕುತುಬ್ ಶಾಹಿಗಳ ಗೋರಿಗಳ ಜತೆಗೆ ಪ್ರೆಮ್ಮಾತಿ ಮತ್ತು ತಾರಾಮತಿ ಎಂಬಿಬ್ಬರ ಸಮಾಧಿಗಳು ಸಿಕ್ಕಿದ್ದವು.
ದೇವಾಲಯ ಅಕ್ರಮ
ಆದರೂ ಭಾಗಮತಿ ಹೆಸರು ಕಾಲ್ಪನಿಕ ಎಂದು ಸಾರಾಸಗಟಾಗಿ ಹೇಳಲು ಸಾಧ್ಯವಿಲ್ಲ. ಕೆಲವು ಫ್ರೆಂಚ್ ಪ್ರವಾಸಿಗರು ಮತ್ತು ಮೊಘಲರ ದಾಖಲೆಗಳಲ್ಲಿ ಭಾಗಮತಿ ಎಂಬ ಹೆಸರಿನ ಉಲ್ಲೇಖವಿದೆ. ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ತಮಗೆ ಅದೃಷ್ಟ ಮತ್ತು ಒಳಿತು ಉಂಟುಮಾಡುತ್ತದೆ ಎಂದು ಭಕ್ತರು ನಂಬಿದ್ದಾರೆ. ದೇವಸ್ಥಾನ ಇರುವ ಜಾಗ ಅನೇಕ ದಶಕಗಳಿಂದ ವಿವಾದದಲ್ಲಿದೆ. ದೇವಾಲಯವು ಅನಧಿಕೃತವಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಪುರತತ್ವ ಇಲಾಖೆ 1960ರಿಂದಲೂ ಸ್ಥಳೀಯ ಆಡಳಿತಕ್ಕೆ ಪತ್ರ ಬರೆಯುತ್ತಲೇ ಇದೆ.
ಕೋಮು ಗಲಭೆಗಳ ಘಟನೆಗಳು
ಭಾಗ್ಯಲಕ್ಷ್ಮಿ ದೇವಸ್ಥಾನ ಮತ್ತು ಭಾಗ್ಯನಗರ ಎರಡರ ಅಸ್ತಿತ್ವದ ಗೊಂದಲ ಬಗೆಹರಿಯುವ ಸಾಧ್ಯತೆ ಕಾಣಿಸುತ್ತಿಲ್ಲ. ದೇವಸ್ಥಾನ ಅಕ್ರಮ ಎಂದು ಪುರತತ್ವ ಇಲಾಖೆ ಹೇಳಿದರೂ ಅದನ್ನು ತೆರವುಗೊಳಿಸುವುದು ಸುಲಭವಲ್ಲ. ಏಕೆಂದರೆ ದೇವಾಲಯದ ವಿಚಾರವಾಗಿ ಈಗಾಗಲೇ ಕೋಮುಗಲಭೆಗಳು ನಡೆದಿವೆ. 1979ರಲ್ಲಿ ಮೆಕ್ಕಾದಲ್ಲಿ ಪವಿತ್ರ ಮಸೀದಿಯನ್ನು ಸಶಸ್ತ್ರಧಾರಿಗಳ ಗುಂಪೊಂದು ಆಕ್ರಮಿಸಿದಾಗ ಹೈದರಾಬಾದ್ನಲ್ಲಿ ಎಂಐಎಂ ಬಂದ್ಗೆ ಕರೆ ನೀಡಿತ್ತು. ದೀಪಾವಳಿ ಸಂದರ್ಭವಾಗಿದ್ದರಿಂದ ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತೆ ಅನೇಕ ಅಂಗಡಿ ಮಾಲೀಕರು ಎಂಐಎಂ ಗೆ ಮನವಿ ಮಾಡಿದ್ದರು. ಕೊನೆಗೆ ಅದು ಸಂಘರ್ಷಕ್ಕೆ ಕಾರಣವಾಗಿ, ಭಾಗ್ಯಲಕ್ಷ್ಮಿ ದೇವಾಲಯದ ಮೇಲೆ ದಾಳಿ ನಡೆದಿತ್ತು.
1983ರ ಸೆಪ್ಟೆಂಬರ್ನಲ್ಲಿ ಗಣೇಶ ಹಬ್ಬದ ಬ್ಯಾನರ್ಗಳನ್ನು ದೇವಸ್ಥಾನದ ಮೇಲೆ ಅಳವಡಿಸಿದ್ದು ಕೂಡ ಉದ್ವಿಗ್ನ ಸ್ಥಿತಿಗೆ ಕಾರಣವಾಗಿತ್ತು. ಆಗ ದೇವಸ್ಥಾನ ಮತ್ತು ಮಸೀದಿಗಳ ಮೇಲೆ ದಾಳಿಗಳು ನಡೆದಿದ್ದವು. 2012ರಲ್ಲಿ ದೇವಸ್ಥಾನದ ಮಂಡಳಿ ಬಿದಿರಿನ ರಚನೆಯನ್ನು ತೆಗೆದು ಶೀಟ್ಗಳನ್ನು ಅಳವಡಿಸಲು ಮುಂದಾದಾಗಲೂ ಘರ್ಷಣೆ ನಡೆದಿತ್ತು. ಆಗಿನ ಆಂಧ್ರಪ್ರದೇಶ ಹೈಕೋರ್ಟ್, ದೇವಸ್ಥಾನದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ನಡೆಯದಂತೆ ತಡೆ ನೀಡಿತ್ತು.