ಇದು ಸಲಿಂಗಕಾಮಿಗಳ ಜಗತ್ತು; ಮಾನಸಿಕ ತಜ್ಞರು ನೀಡಿದ ಉದಾಹರಣೆಗಳು
ಸುಪ್ರೀಂ ಕೋರ್ಟ್ ಸಹಮತದ ಸಲಿಂಗಕಾಮಕ್ಕೆ ಒಪ್ಪಿಗೆ ಸೂಚಿಸಿ, ಐಪಿಸಿ ಸೆಕ್ಷನ್ 377ರ ಒಂದು ಭಾಗಕ್ಕೆ ಬದಲಾವಣೆ ತಂದಿದೆ. ಈಗ ಭಾರತದಲ್ಲಿ ಸಲಿಂಗಿಗಳ ಮದುವೆಗೂ ಬದಲಾವಣೆ ತಂದುಬಿಡಬಹುದಾ ಎಂಬ ಬಗ್ಗೆಯೂ ನಿರೀಕ್ಷೆ ಶುರುವಾಗಿದೆ. ಈಗಲೂ ಭಾರತದಲ್ಲಿ ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಹಾಗೂ ಅವಕಾಶವೂ ಇಲ್ಲ.
ಆದರೆ, ಈಗ ಸುಪ್ರೀಂ ಕೋರ್ಟ್ ತೀರ್ಪು ಬಂದಿರುವುದು ಏನೆಂದರೆ, ವಯಸ್ಕರರಾಗಿದ್ದಲ್ಲಿ ಸಲಿಂಗಿಗಳು ಖಾಸಗಿಯಾಗಿ ಸಂಬಂಧ ಇರಿಸಿಕೊಳ್ಳಬಹುದು. ಈ ತೀರ್ಪಿಗೆ ದೇಶದಾದ್ಯಂತ ಅಷ್ಟೇ ಅಲ್ಲ, ಜಗತ್ತಿನ ವಿವಿಧೆಡೆ ಮೆಚ್ಚುಗೆ ಕೇಳಿಬಂದಿದೆ. ಈ ತೀರ್ಪನ್ನು ಆರೆಸ್ಸೆಸ್ ನಂಥ ಸಂಘಟನೆಯೂ ಬೆಂಬಲಿಸಿ, ಇದು ಇಲ್ಲಿಗೇ ನಿಲ್ಲಬೇಕು ಎಂದು ಹೇಳಿದೆ.
ಎಲ್ ಜಿಬಿಟಿ ಅಂದರೇನು, ಕಾಮನಬಿಲ್ಲಿನ ಬಾವುಟ ಏಕೆ?
ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದಂಥ ಐಪಿಸಿ ಸೆಕ್ಷನ್ 377ರಲ್ಲಿ ವಯಸ್ಕರರ ಸಲಿಂಗ ಕಾಮವನ್ನು ಅಪರಾಧ ಅಂತಲೇ ಪರಿಗಣಿಸಲಾಗುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್ ಆ ಅಂಶದಿಂದ ವಿನಾಯಿತಿ ನೀಡಿದೆ. ತೀರ್ಪಿನ ಹಿನ್ನೆಲೆಯಲ್ಲಿ ತುಮಕೂರು ಮೂಲದ ಮಾನಸಿಕ ಸಲಹಾತಜ್ಞ ಡಾ.ಸಂಜಯ್ ರಾಜ್ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿದೆ. ಅವರು ತಿಳಿಸಿದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗುತ್ತಿದೆ.
ಸಾಂದರ್ಭಿಕ ಚಿತ್ರಗಳು
ಹನ್ನೆರಡು-ಹದಿಮೂರನೇ ವರ್ಷಕ್ಕೆ ಗೊತ್ತಾಗುತ್ತದೆ
ಗಂಡು ಅಥವಾ ಹೆಣ್ಣಿಗೆ ಯಾರ ಮೇಲೆ ದೈಹಿಕ ಆಕರ್ಷಣೆ ಇದೆ ಎಂಬ ಸಂಗತಿ ಹನ್ನೆರಡು-ಹದಿಮೂರನೇ ವರ್ಷಕ್ಕೆ ಗೊತ್ತಾಗುತ್ತಾ ಹೋಗುತ್ತದೆ. ಕೆಲವು ಸಲ ಗಂಡಿಗೆ ಮತ್ತೊಬ್ಬ ಗಂಡಿನ ಮೇಲೇ ಅಥವಾ ಹೆಣ್ಣಿಗೆ ಮತ್ತೊಂದು ಹೆಣ್ಣಿನ ಮೇಲೇ ಆ ರೀತಿಯ ಆಕರ್ಷಣೆ ಏರ್ಪಡುತ್ತದೆ. ಅವರ ಲೈಂಗಿಕ ಆಸಕ್ತಿ ಸಲಿಂಗಿಗಳ ಮೇಲೆ ಮಾತ್ರ ಇರುತ್ತದೆ. ಇನ್ನು ಮತ್ತೊಂದು ಬಗೆಯೆಂದರೆ ಉಭಯ ಲಿಂಗಿಗಳು. ಅವರಿಗೆ ಹೆಣ್ಣು-ಗಂಡು ಇಬ್ಬರಲ್ಲೂ ಲೈಂಗಿಕ ಆಸಕ್ತಿ ಇರುತ್ತದೆ. ತೃತೀಯ ಲಿಂಗಿಗಳು ಅಂತ ಕರೆಸಿಕೊಳ್ಳುವವರಲ್ಲಿ ದೇಹದ ಹೊರಭಾಗದಲ್ಲಿ ಪುರುಷ ಅಂಗವಿದ್ದು, ದೇಹದ ಒಳಗೆ ಹೆಣ್ಣಿನ ಅಂಗದಲ್ಲಿ ಇರುವಂಥದ್ದು ಇರುತ್ತದೆ. ಅದೇ ಅಂಶವು ಉಲ್ಟಾ ಕೂಡ ಆಗಿರಬಹುದು. ಆರಂಭದಲ್ಲೇ ಆ ಆಸಕ್ತಿಗಳನ್ನು ಗುರುತಿಸುವುದು ಹಾಗೂ ಅ ವ್ಯಕ್ತಿಗಳನ್ನೇ ಸಮಾಜ ಅವರಂತೆಯೇ ಸ್ವೀಕರಿಸುವುದು ಬಹಳ ಮುಖ್ಯ. ಆದರೆ ಪೋಷಕರು, ಸಂಬಂಧಿಕರು, ಸ್ನೇಹಿತರು ಹಾಗೂ ಸಮಾಜ ಇಂಥವರನ್ನು ನಿರ್ಲಕ್ಷ್ಯ-ತಿರಸ್ಕಾರ, ಗಾಬರಿಯಿಂದ ನೋಡಲು ಆರಂಭವಾಗುತ್ತದೆ.
ಗಂಡು-ಗಂಡಿನ ಮಧ್ಯದ ಲೈಂಗಿಕ ಸಂಪರ್ಕ ಹೆಚ್ಚು ಅಪಾಯಕಾರಿ
ಬಹುಪಾಲು ಪ್ರಕರಣಗಳಲ್ಲಿ ಸಲಿಂಗಿಗಳು ಅವರ ಲೈಂಗಿಕ ವಾಂಛೆ ತೀರಿಸಿಕೊಳ್ಳಲು ಬಯಸುತ್ತಾರೆ ವಿನಾ ಮದುವೆ ಆಗಬೇಕು ಎಂಬ ಉದ್ದೇಶವೇ ಇರುವುದಿಲ್ಲ. ಇಂಥವರು ಪ್ಯಾಸಿವ್ ಪಾರ್ಟನರ್ ನಂತೆ ವರ್ತಿಸುತ್ತಾರೆ. ತಮಗಿಂತ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಿಷ್ಠವಾದವರನ್ನು ಆರಿಸಿಕೊಂಡು, ಲೈಂಗಿಕ ಸುಖ ಪಡೆಯಲು ಬಯಸುತ್ತಾರೆ. ಗಂಡು-ಗಂಡಿನ ಮಧ್ಯೆ ನಡೆಯುವ ಲೈಂಗಿಕ ಸಂಬಂಧವು ಹೆಣ್ಣು ಹಾಗೂ ಹೆಣ್ಣಿನ ಮಧ್ಯದ ಸಂಪರ್ಕಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಏಕೆಂದರೆ, ಗಂಡಸರಲ್ಲಿ ಲೈಂಗಿಕ ಕಾಯಿಲೆಗಳನ್ನು ಹೊರತು ಪಡಿಸಿ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಆ ಗಾಯದ ಪರಿಣಾಮವು ಹೆಚ್ಚಾಗಿರುತ್ತದೆ. ಇನ್ನೊಮ್ಮೆ ಸ್ಪಷ್ಟಪಡಿಸಬೇಕು ಅಂದರೆ, ಸಲಿಂಗಕಾಮದಲ್ಲಿ ಮದುವೆ ಅಂತ ಯೋಚಿಸುವ ಜೋಡಿ ಬಹಳ ಕಡಿಮೆ. ಪೊಸೆಸಿವ್ ನೆಸ್ ಇರಬಹುದು. ಆದರೆ ಅದು ಮದುವೆ ಆಗಬೇಕು ಎಂದು ಬಯಸುವ ಮನಸ್ಥಿತಿ ಇಲ್ಲ.
ಸಲಿಂಗಕಾಮ ಹೋರಾಟಗಾರರಿಗೆ ಕೊನೆಗೂ ಸಿಕ್ಕ ಜಯ
ಆ ಭಾವನೆಯಿಂದ ಹೊರತರಬೇಕು ಎಂಬುದು ತಂದೆ-ತಾಯಿ ನಿರೀಕ್ಷೆ
ಜಾರ್ಖಂಡ್ ನ ರಾಂಚಿಯಲ್ಲಿ ಕೇರಳ ಮೂಲದ ದಂಪತಿಯೊಬ್ಬರು ತಮ್ಮ ಹದಿಮೂರು ವರ್ಷದ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರು. ಅವನಿಗೆ ಹುಡುಗರ ಮೇಲೆ ಹೆಚ್ಚಿನ ಆಸಕ್ತಿ. ಅವರಿಗೆ ತೀರಾ ಹತ್ತಿರ ಹೋಗಿ ನಿಲ್ಲುತ್ತಾನೆ. ನೋಡಿದ ತಕ್ಷಣ ಅವನ ನಡವಳಿಕೆಯಲ್ಲಿ ವ್ಯತ್ಯಾಸ ಗುರುತಿಸಬಹುದು ಎಂದು ಹೇಳಿದರು. ಆದರೆ ಅವನ ಜತೆಗೆ ಮಾತನಾಡುವುದೇ ಕಷ್ಟವಾಗುತ್ತಿತ್ತು. ಏಕೆಂದರೆ, ಅವನು ನಮ್ಮನ್ನು (ವೈದ್ಯರನ್ನು) ನಂಬುತ್ತಿರಲಿಲ್ಲ. ಒಂದು ವೇಳೆ ನಂಬಿಕೆ ಮೂಡಿಸಲು ಆಪ್ತವಾಗಲು ಪ್ರಯತ್ನ ಪಟ್ಟರೆ ಆ ಪುರುಷ ವೈದ್ಯರನ್ನೇ ತನ್ನ ಸಂಗಾತಿಯಂತೆ ಮಾತನಾಡಿಸಲು ಶುರು ಮಾಡುತ್ತಿದ್ದ. ಕೊನೆಗೆ ತಿಂಗಳುಗಟ್ಟಲೆ ಸಮಯ ಹಿಡಿದು, ಅವನಿಗಾಗಿ ಮಹಿಳೆಯೊಬ್ಬರಿಂದ ಕೌನ್ಸೆಲಿಂಗ್ ಕೊಡಿಸಿದೆವು. ಅವನಲ್ಲಿನ ಭಾವನೆ ಬದಲಾಯಿಸಿದೆವು ಅಂತಲ್ಲ. ಅವನಿಗೆ ಅನಿಸಿದ್ದನ್ನು ತನ್ನ ತಂದೆ-ತಾಯಿಗೆ ಧೈರ್ಯವಾಗಿ ಹೇಳುವಂತೆ ಸಾಧ್ಯವಾಗುವಂತೆ ಮಾಡಿದೆವು. ಆ ಪೋಷಕರಿಗೆ ತಮ್ಮ ಮಗನನ್ನು ಆ ಭಾವನೆಯಿಂದ ಬದಲಾವಣೆ ಮಾಡಬೇಕು ಅನ್ನೋ ಆಸೆ. ಆದರೆ ಅದು ಸಾಧ್ಯವಿಲ್ಲ ಅಂತ ಅರ್ಥ ಮಾಡಿಸುವುದಕ್ಕೂ ಸಮಯ ಹಿಡಿಯಿತು ಎನ್ನುತ್ತಾರೆ ಸಂಜಯ್ ರಾಜ್.
ತುಮಕೂರು ಹಳ್ಳಿಯೊಂದರಲ್ಲಿ ನಡೆದಿದ್ದ ಘಟನೆ
ತುಮಕೂರು ಜಿಲ್ಲೆಯ ಹಳ್ಳಿಯೊಂದರಿಂದ ಒಬ್ಬ ವ್ಯಕ್ತಿಯನ್ನು ಕರೆತಂದಿದ್ದರು. ಆತ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಆ ಕಾರಣಕ್ಕೆ ಕೌನ್ಸಿಲಿಂಗ್ ಗಾಗಿ ಕರೆದುಕೊಂಡು ಬಂದಿದ್ದರು. ಆ ಸಣ್ಣ ಊರಿನಲ್ಲಿ ಅವನಿಗೆ ನಾಲ್ಕೈದು ಮಂದಿ ಸಲಿಂಗ ಸಂಗಾತಿಗಳು ಸಿಕ್ಕಿದ್ದರು. ಈ ವಿಚಾರ ಬಹಿರಂಗವಾಗಿತ್ತು. ಇದರಿಂದ ಕೋಪಗೊಂಡವರು ನಮ್ಮ ಮಕ್ಕಳನ್ನು ಇವನು ಹಾಳು ಮಾಡುತ್ತಿದ್ದಾನೆ ಅಂತ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದರು. ಇದರಿಂದ ಅವಮಾನ ಆಯಿತು ಎಂದು ಆತ್ಮಹತ್ಯೆಗೆ ಯತ್ನಿಸಿದ್ದ. ಇಷ್ಟು ಹೇಳಿಕೊಂಡ ಮೇಲೆ ಅವನ ತಂದೆ-ತಾಯಿಗೆ ತಿಳಿಸಿ ಹೇಳಲು ನಾವು ಪ್ರಯತ್ನ ಪಟ್ಟರೂ ಅದನ್ನು ಕೇಳುವ ಸ್ಥಿತಿಯಲ್ಲಿ ಪೋಷಕರು ಇರಲಿಲ್ಲ.
'ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?'
ಆಕೆಗೆ ಗಂಡನಿಗಿಂತ ನಾದಿನಿಯರನ್ನು ನೋಡಿದರೆ ಲೈಂಗಿಕ ಆಸಕ್ತಿ
ಬೆಂಗಳೂರಿನ ದಂಪತಿಯೊಬ್ಬರು ಚಿಕಿತ್ಸೆಗಾಗಿ ಬಂದಿದ್ದರು. ಅವರಿಗೆ ಮದುವೆಯಾಗಿ ಮೂರು ವರ್ಷವಾಗಿತ್ತು. ಇಷ್ಟು ಸಮಯದಲ್ಲಿ ಎರಡು-ಮೂರು ಬಾರಿ ಬಲವಂತವಾಗಿ ಸೇರಿದ್ದರು ಎಂಬುದನ್ನು ಬಿಟ್ಟರೆ, ಆ ಮಹಿಳೆಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇರಲಿಲ್ಲ. ಆಗ ಮಹಿಳೆಯನ್ನು ಪ್ರತ್ಯೇಕವಾಗಿ ಮಾತನಾಡಿಸಿದಾಗ, ನನ್ನ ಗಂಡ ಮಾತ್ರವಲ್ಲ, ಯಾವ ಪುರುಷನನ್ನು ನೋಡಿದರೂ ನನಗೆ ಲೈಂಗಿಕ ಆಸಕ್ತಿ ಬರುವುದಿಲ್ಲ. ಆದರೆ ನನ್ನ ನಾದಿನಿಯರು ಸೇರಿದಂತೆ ಬೇರೆ ಮಹಿಳೆಯರನ್ನು ನೋಡಿದಾಗ ಆಸಕ್ತಿ ಮೂಡುತ್ತದೆ. ಈ ವಿಚಾರವನ್ನು ಯಾರಿಗೂ ತಿಳಿಸಬೇಡಿ. ಈಗ ಮಕ್ಕಳು ಪಡೆಯಬೇಕು ಅನ್ನೋ ಒತ್ತಡ ಹೆಚ್ಚಾಗಿದ್ದರಿಂದ ಇಲ್ಲಿಗೆ ಬಂದಿದ್ದೇವೆ ಎಂದಿದ್ದರು.
ನಾಲ್ಕು ಗೋಡೆ ನಡುವೆ ನಡೆವ ಆ ಕ್ರಿಯೆ ಅಪರಾಧವಲ್ಲ: RJ ಪ್ರಿಯಾಂಕಾ ಸಂದರ್ಶನ
ಅಂಥ ಗಂಡು-ಹೆಣ್ಣು ಮದುವೆಯಾಗುವ ಉದಾಹರಣೆಯೂ ಉಂಟು
ಇನ್ನೊಂದು ಬಗೆಯ ಉದಾಹರಣೆ ಇದೆ. ತಾವು ಸಲಿಂಗಿಗಳು ಅಂತ ಗೊತ್ತಾದ ಗಂಡು-ಹೆಣ್ಣು ಮದುವೆ ಆಗುತ್ತಾರೆ. ಆ ನಂತರ ಬೇರೆ ಗಂಡಸು ಹಾಗೂ ಹೆಂಗಸರೊಂದಿಗೆ ಪರಸ್ಪರರಿಗೆ ಲೈಂಗಿಕ ವಾಂಛೆ ತೀರಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ಸಮಾಜದ ಕಣ್ಣಿಗೆ ಇವರಿಬ್ಬರು ಗಂಡ-ಹೆಂಡತಿಯರಾಗಿಯೇ ಇರುತ್ತಾರೆ. ಆದರೆ ಅವರಿಬ್ಬರು ಕೋಣೆಯೊಳಗೆ ಗಂಡ-ಹೆಂಡತಿಯಂತೆ ಇರುವುದಿಲ್ಲ. ಇನ್ನು ಕೆಲವು ಸಂದರ್ಭದಲ್ಲಿ ಉದಾಹರಣೆಗೆ ಮನೆಯನ್ನು ಬಿಟ್ಟು ದಿವಸಾನುಗಟ್ಟಲೆ, ತಿಂಗಳಾನುಗಟ್ಟಲೆ ಅಥವಾ ವರ್ಷಾನುಗಟ್ಟಲೆ ಕೆಲಸ ಮಾಡುವವರಲ್ಲಿ ಸಲಿಂಗಕಾಮ ತಾತ್ಕಾಲಿಕವಾಗಿ ಏರ್ಪಡುವ ಸಾಧ್ಯತೆ ಹೆಚ್ಚಿರುತ್ತದೆ. ಅಪರೂಪವಾಗಿ ಅದೇ ಮುಂದುವರಿಯುವ ಅವಕಾಶವೂ ಇರುತ್ತದೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಲೈಂಗಿಕತೆ ಹಾಗೂ ಅದರ ಸುತ್ತ ಇರುವ ವಿಚಾರಗಳ ಬಗ್ಗೆ ಭಾರತೀಯ ಸಮಾಜದಲ್ಲಿ ತಿಳಿವಳಿಕೆ ಮೂಡಬೇಕಿದೆ ಎನ್ನುತ್ತಾರೆ ಡಾ.ಸಂಜಯ್ ರಾಜ್.