ವಿಶೇಷ ಲೇಖನ: ಬೇಸಿಗೆಯಲ್ಲಿ ಈ ಹಣ್ಣು-ತರಕಾರಿಗೆ ಆದ್ಯತೆ ನೀಡಿ
ಕಳೆದೊಂದು ವರ್ಷದಿಂದ ನಾವ್ಯಾರು ನೆಮ್ಮದಿಯಾಗಿಲ್ಲ. ಕೊರೊನಾದ ಭಯವಂತೂ ಇನ್ನಿಲ್ಲದೆ ಕಾಡುತ್ತಿದೆ. ಒಂದಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ ಮತ್ತೆ ಹೆಚ್ಚಲಾರಂಭಿಸಿವೆ. ಇದು ಆತಂಕಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು.
ಕಳೆದ ವರ್ಷದ ಬೇಸಿಗೆ ಲಾಕ್ ಡೌನ್ ನಲ್ಲಿ ಕಳೆದು ಹೋಯಿತು. ಜತೆಗೆ ಅಗತ್ಯವಿರುವವರು ಹೊರತುಪಡಿಸಿ ಹೆಚ್ಚಿನವರು ಮನೆಯಿಂದ ಹೊರಗೆ ಬರಲಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಕಾಡುವಂತಹ ಇತರೆ ಸಾಂಕ್ರಾಮಿಕ ರೋಗಗಳಾಗಲೀ, ಸಮಸ್ಯೆಗಳಾಗಲೀ ನಮ್ಮನ್ನು ಹೆಚ್ಚು ಬಾಧಿಸಲಿಲ್ಲ.
ಈ ಬಾರಿಯ ಬೇಸಿಗೆಯನ್ನು ಕೂಡ ಕೊರೊನಾ ಭಯದಲ್ಲಿಯೇ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿದೆ. ಒಂದು ವರ್ಷದ ಅವಧಿಯಲ್ಲಿ ಹಲವಷ್ಟು ಸಮಸ್ಯೆಯನ್ನು ಎದುರಿಸಿದ್ದೇವೆ. ಇದೀಗ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸುತ್ತಿದ್ದಾಗಲೇ ಕೊರೊನಾ ಎರಡನೇ ಅಲೆಯ ಭಯ ಶುರುವಾಗಿದೆ. ಇದಕ್ಕೆ ನಮ್ಮ ನಿರ್ಲಕ್ಷ್ಯವೇ ಕಾರಣವಾಗಿದೆ.
ಸಾಮಾಜಿಕ ಅಂತರವಂತೂ ಇಲ್ಲ
ಇವತ್ತಿನ ಮಟ್ಟಿಗೆ ನಾವೆಲ್ಲರೂ ಹೊರಗೆ ಹೋಗಿ ದುಡಿಯಲೇ ಬೇಕಾಗಿದೆ. ಕಾರಣ ದುಡಿಮೆಯನ್ನು ಅವಲಂಬಿಸಿ ಒಂದಷ್ಟು ವ್ಯವಹಾರವನ್ನು ಮಾಡಿಕೊಂಡಿದ್ದೇವೆ. ಅವೆಲ್ಲವೂ ಸಾಂಗವಾಗಿ ನಡೆಯಬೇಕಾದರೆ ನಾವು ದುಡಿಯಲೇ ಬೇಕಾಗಿದೆ. ಹೀಗಿರುವಾಗ ಒಂದಷ್ಟು ಮುಂಜಾಗ್ರತೆಯನ್ನು ವಹಿಸುವುದು ಅಗತ್ಯವಾಗಿದೆ. ಆದರೆ ಬಹಳಷ್ಟು ಮಂದಿ ಸ್ಯಾನಿಟೈಸರ್, ಮಾಸ್ಕ್ ಎಲ್ಲವನ್ನು ಮರೆತು ಬಿಟ್ಟಿದ್ದಾರೆ. ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲದಾಗಿದೆ.
ಆಹಾರ ಸೇವನೆಯಲ್ಲಿನ ಅಶಿಸ್ತು ಆರೋಗ್ಯಕ್ಕೆ ಮಾರಕ!
ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗ ಜಾಸ್ತಿ
ಕೊರೊನಾವನ್ನು ಬದಿಗಿಟ್ಟು ನೋಡಿದರೆ ಈ ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿಯೇ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದು ಸಹಜವಾಗಿದೆ. ಹೀಗಾಗಿ ಕೊರೊನಾದ ಜಾಗ್ರತೆಯೊಂದಿಗೆ ಇತರೆ ರೋಗಗಳ ಬಗ್ಗೆಯೂ ಎಚ್ಚರಿಕೆ ವಹಿಸುವುದು ಮತ್ತು ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಗಮನಹರಿಸಬೇಕಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹವಾಮಾನ ಬದಲಾಗಿ ಉಷ್ಣಾಂಶ ಹೆಚ್ಚುತ್ತಿದ್ದಂತೆಯೇ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಇದಕ್ಕೆ ಕಾರಣಗಳನ್ನು ಹುಡುಕಿ ನಾವು ಸೇವಿಸುವ ಪದಾರ್ಥಗಳ ಮೂಲಕವೇ ಪರಿಹಾರವನ್ನು ಕಂಡು ಕೊಳ್ಳವುದು ಜಾಣತನವಾಗಿದೆ.
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಹಾಗಾದರೆ ಬೇಸಿಗೆಯಲ್ಲಿ ಏನು ಮಾಡಬೇಕು ಮತ್ತು ಹೇಗಿರಬೇಕು ಎಂಬುದನ್ನು ನೋಡುವುದಾದರೆ ಒಂದಷ್ಟು ಸಲಹೆಗಳನ್ನು ತಜ್ಞರು ನೀಡುತ್ತಾರೆ. ಅದನ್ನು ಸ್ವಲ್ಪ ಮಟ್ಟಿಗೆ ನಾವು ಅನುಸರಣೆ ಮಾಡಿದರೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಬೇಸಿಗೆ ದಿನಗಳಲ್ಲಿ ಮಾಂಸಹಾರವನ್ನು ಆದಷ್ಟು ಕಡಿಮೆ ಮಾಡಿ ಸಸ್ಯಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮೇಲಿಂದ ಮೇಲೆ ದಾಳಿ ಮಾಡುವ ರೋಗಗಳನ್ನು ತಡೆಯಬೇಕಾದರೆ ದೈಹಿಕವಾಗಿ ನಾವು ಸಮರ್ಥರಿರಬೇಕು. ಉತ್ತಮ ಆರೋಗ್ಯ ದೊರೆಯಬೇಕಾದರೆ ನಾವು ಹೆಚ್ಚಾಗಿ ಹಣ್ಣು-ತರಕಾರಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇವು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತವೆ. ಇದರಲ್ಲಿರುವ ಲವಣಗಳು, ವಿಟಮಿನ್ ಗಳಂತಹ ಪೌಷ್ಠಿಕ ಪದಾರ್ಥಗಳು ಶರೀರಕ್ಕೆ ಪೋಷಕ ಶಕ್ತಿಯನ್ನು ನೀಡುತ್ತವೆ. ನಮ್ಮ ಆಹಾರದೊಂದಿಗೆ ಕನಿಷ್ಠ ಒಂದು ರೀತಿಯ ಹಣ್ಣನ್ನಾದರೂ ಸೇವಿಸುವುದು ಒಳ್ಳೆಯದು. ಕೆಲವು ಹಣ್ಣುಗಳನ್ನು ನಿಯಮಬದ್ಧವಾಗಿ ಸೇವಿಸುತ್ತಾ ಬಂದರೆ ಮಧುಮೇಹ, ಬೊಜ್ಜು, ಎದೆನೋವು ಮತ್ತಿತರ ಕಾಯಿಲೆಗಳು ದೂರವಾಗುವುವು.
ಬದುಕಿನಲ್ಲಿ ನೆಮ್ಮದಿಯಾಗಿರಬೇಕಾದರೆ ಏನು ಮಾಡಬೇಕು?
ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಿ
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಏಕೆಂದರೆ ಈ ಹಣ್ಣು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೇರಳವಾದ ಲವಣಗಳು ಹಾಗೂ ವಿಟಮಿನ್ ಗಳಿವೆ. ಅಷ್ಟೇ ಅಲ್ಲ ದ್ರವ ಪದಾರ್ಥವೂ ಇದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ಗಳು ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವನ್ನು ವೃದ್ಧಿಸುವ ಪೌಷ್ಠಿಕಾಂಶಗಳು ಹಣ್ಣು, ತರಕಾರಿಯಲ್ಲಿವೆ. ಇವು ಶರೀರದೊಳಗೆ ಸೇರಿರುವ ವಿಷ ಪದಾರ್ಥಗಳನ್ನು ಹೊರ ಹಾಕುತ್ತವೆ. ತಾಜಾ ಸೊಪ್ಪು, ಹಸಿಬಟಾಣಿ, ಆಲೂಗೆಡ್ಡೆ, ಟೊಮ್ಯಾಟೊದೊಂದಿಗೆ ಕೂಡಿದ ಸಲಾಡ್ ಶರೀರದ ಆರೋಗ್ಯವನ್ನು ಕಾಪಾಡುತ್ತದೆ.
ಬೇಸಿಗೆಯ ಸಮಯದಲ್ಲಿ ಹೆಚ್ಚು ಖಾರ, ಮಸಾಲೆ ಪದಾರ್ಥಗಳನ್ನು ಸೇವಿಸಬಾರದು ಅದರಲ್ಲೂ ಮಲಬದ್ಧತೆ ಇನ್ನಿತರ ತೊಂದರೆಗಳಿಂದ ಬಳಲುವವರು ನಾರು ಅಂಶ ಹೊಂದಿರುವ ಸೊಪ್ಪು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
ಮಾರುಕಟ್ಟೆಯ ತಂಪು ಪಾನೀಯ ದೂರವಿಡಿ
ಎಳನೀರನ್ನು ಹೆಚ್ಚಾಗಿ ಕುಡಿಯಿರಿ. ಇದರಲ್ಲಿ ಅಗಾಧವಾದ ಔಷಧೀಯ ಗುಣವಿದೆ. ಇನ್ನು ಹಣ್ಣುಗಳನ್ನು ನೇರವಾಗಿ ಅಥವಾ ಜ್ಯೂಸ್, ಮಿಲ್ಕ್ ಶೇಕ್ ಮಾಡಿಯೂ ಸೇವಿಸಬಹುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ತರಕಾರಿಗಳನ್ನು ಸೇವಿಸುತ್ತಾ ಬಂದರೆ ನಮ್ಮ ಆರೋಗ್ಯದಲ್ಲಿ ಒಂದಷ್ಟು ಬದಲಾವಣೆ ಕಾಣಲು ಸಾಧ್ಯವಿದೆ. ಆದರೆ ಒಂದು ನೆನಪಿರಲಿ ಹೊರಗಿನಿಂದ ತರುವ ಹಣ್ಣು ತರಕಾರಿಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಬಳಿಕ ಉಪಯೋಗಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು.
ಇನ್ನು ಬಾಯಾರಿಕೆಯಾಯಿತೆಂದು ಮಾರುಕಟ್ಟೆಯಲ್ಲಿ ದೊರೆಯುವ ತಂಪು ಪಾನೀಯಗಳಿಗೆ ಮೊರೆ ಹೋಗದೆ, ಕುದಿಸಿ ಆರಿಸಿದ ನೀರು ಅಥವಾ ಶುದ್ಧ ನೀರಿನಲ್ಲಿ ಮಾಡಿದ ನಿಂಬೆ ಜ್ಯೂಸ್, ತಿಳಿ ಮಜ್ಜಿಗೆ ಸೇವಿಸುವುದು ಒಳ್ಳೆಯದು ಇದು ಬಾಯಾರಿಕೆಯನ್ನು ತಡೆಯುವುದು ಮಾತ್ರವಲ್ಲದೆ, ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತದೆ. ಬಿಸಿಲಲ್ಲಿ ಕೆಲಸ ಮಾಡುವವರು ಜತೆಗೆ ನೀರನ್ನು ಇಟ್ಟುಕೊಳ್ಳಿ. ಆದಷ್ಟು ಶಾಖ ಹೀರುವಂತಹ ಹತ್ತಿ ಬಟ್ಟೆಯನ್ನು ಧರಿಸಿದರೆ ಸಹಕಾರಿಯಾಗುತ್ತದೆ.