ಅಮ್ಮನಿಂದ ಅಕ್ಷಯ್ ಕುಮಾರ್ ಸಂಸಾರದ ತನಕ ಮೋದಿ ಸೊಗಸಾದ ಮಾತು
ಲೋಕಸಭೆ ಚುನಾವಣೆಯ ವೇಳೆ ನೀನಾ-ನಾನಾ ಎಂಬ ಪ್ರಶ್ನೆಗಳ ಕೂರುಂಬುಗಳು ವಿನಿಮಯ ಆಗುತ್ತಿರುವ ವೇಳೆಯಲ್ಲಿ ಅಪರೂಪದ ರಾಜಕೀಯಕ್ಕೆ ಹೊರತಾದ ಸಂದರ್ಶನವೊಂದಕ್ಕೆ ಎದುರಾಗಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ಈ ಸಂದರ್ಶನವನ್ನು ಮಾಡಿರುವವರು ಹಿಂದಿ ಚಿತ್ರರಂಗದ ಖ್ಯಾತ ನಟ ಅಕ್ಷಯ್ ಕುಮಾರ್.
ರಾಜಕಾರಣಕ್ಕೆ ಹೊರತಾಗಿ ಬಹಳ ಆಸಕ್ತಿಕರ ಅನಿಸುವಂಥ ವಿಷಯಗಳನ್ನು ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ತಾವು ಎಂದಿಗಾದರೂ ಪ್ರಧಾನಿ ಆಗಬಹುದು ಎಂದು ಕನಸು ಕೂಡ ಕಂಡಿರಲಿಲ್ಲ. ಅಮ್ಮನಿಗಾಗಿ ಮೀಸಲಿಡಲು ಸಮಯವೇ ಸಿಗಲಿಲ್ಲ. ವೃತ್ತಿ ಜೀವನದ ಆರಂಭದಿಂದ ತಮ್ಮ ಕೋಪ ತೋರಿಸಲು ಅವಕಾಶವೇ ಸಿಗಲಿಲ್ಲ ಹೀಗೆ ನಾನಾ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ನರೇಂದ್ರ ಮೋದಿ ಸನ್ಯಾಸಿಯಾಗದೆ, ಪ್ರಧಾನಿಯಾಗಿದ್ದು ಹೇಗೆ?
ಸುದೀರ್ಘವಾದ ಸಂದರ್ಶನವಾದರೂ ಆ ಪೈಕಿ ಆಸಕ್ತಿಕರ ಎನಿಸಿದ, ನಿಮಗೂ ಇಷ್ಟ ಆಗಬಹುದಾದ ವಿಷಯಗಳನ್ನು ಹೆಕ್ಕಿ ನಿಮ್ಮೆದುರು ಇಡಲಾಗುತ್ತಿದೆ. ನರೇಂದ್ರ ಮೋದಿ ಅವರೆಂದರೆ ರೋಷಾವೇಶದ ಭಾಷಣ ಮಾಡುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಗ್ಗೆಯಂತೂ ತೀರಾ ಅಚ್ಚರಿ ಎನಿಸುವ ಸಂಗತಿಯೊಂದನ್ನು ಮೋದಿ ಬಯಲು ಮಾಡಿದ್ದಾರೆ. ಅವೆಲ್ಲ ನಿಮ್ಮೆದುರಿಗಿದೆ.
ಸಾಮಾನ್ಯ ಉದ್ಯೋಗ ಸಿಕ್ಕಿದ್ದರೂ ಅಮ್ಮ ಲಡ್ಡು ಹಂಚುತ್ತಿದ್ದರು
ನಾನು ಯಾವತ್ತಿಗೂ ಪ್ರಧಾನಮಂತ್ರಿ ಆಗ್ತೀನಿ ಎಂದು ಯೋಚಿಸಿದವನಲ್ಲ. ಒಬ್ಬ ಸಾಮಾನ್ಯ ಮನುಷ್ಯ ಹಾಗೆ ಯೋಚಿಸಿಲ್ಲ. ನಾನು ಬಂದ ಹಿನ್ನೆಲೆಯಿಂದ ಹೇಳುವುದಾದರೆ, ನನಗೊಂದು ಸಾಮಾನ್ಯ ಉದ್ಯೋಗ ಸಿಕ್ಕಿದ್ದರೂ ನನ್ನ ತಾಯಿ ಅಕ್ಕ-ಪಕ್ಕದ ಮನೆಯವರಿಗೆ ಲಾಡು ಹಂಚಿರುತ್ತಿದ್ದರು.
ಪ್ರಧಾನಿ ಮೋದಿ ತಮ್ಮ ವೇತನದಲ್ಲಿ ತಾಯಿಗೆ ಹಣ ಕೊಡುತ್ತಾರಾ?
ಅಗತ್ಯ ಇರುವವರಿಗೆ ಇಪ್ಪತ್ತೊಂದು ಲಕ್ಷ ಕೊಡಲು ಹೇಳಿದ್ದೆ
ಈ ಮುಂಚೆ ನನ್ನ ಬಳಿ ಬ್ಯಾಂಕ್ ಖಾತೆ ಇರಲಿಲ್ಲ. ನಾನು ಶಾಲೆಯಲ್ಲಿ ಓದುವಾಗ ದೇನಾ ಬ್ಯಾಂಕ್ ನಿಂದ ಬಂದವರು ನಮಗೆ 'ಪಿಗ್ಗಿ ಬ್ಯಾಂಕ್' ನೀಡಿದ್ದರು. ನನ್ನ ಹತ್ತಿರ ಹಣ ಇರುತ್ತಿರಲಿಲ್ಲ. ಆ ನಂತರ ಬ್ಯಾಂಕ್ ಸಿಬ್ಬಂದಿ ನನ್ನನ್ನು ಹುಡುಕಿ, ಖಾತೆ ಸ್ಥಗಿತ ಮಾಡಿಸಬೇಕು ಅಂತಿದ್ದರು. ಏಕೆಂದರೆ ಆ ಅಕೌಂಟ್ ಸಕ್ರಿಯವಾಗಿರಲಿಲ್ಲ. ಮೂವತ್ತೆರಡು ವರ್ಷಗಳ ನಂತರ ನನಗೆ ಹೇಳಿದರು: ಬಾಲ್ಯದಿಂದಲೂ ನನ್ನ ಖಾತೆ ಇದೆ ಎಂಬ ಸಂಗತಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಖಾತೆಗೆ ವೇತನ ಹೋಗುತ್ತಿತ್ತು. ನಾನು ಆ ಹಣ ಕೊಡಬೇಕು ಅಂದುಕೊಂಡಿದ್ದಾಗಿ ಹೇಳಿದೆ. ಇಲ್ಲ, ನಿಮ್ಮ ಮೇಲೆ ಕೇಸುಗಳು ಇವೆ. ಆ ಹಣ ಅಗತ್ಯ ಬರುತ್ತೆ ಅಂದರು. ಆದರೆ ಹಣದ ಅಗತ್ಯ ಇರುವವರಿಗೆ ನನ್ನ ಖಾತೆಯಲ್ಲಿರುವ ಇಪ್ಪತ್ತೊಂದು ಲಕ್ಷ ಕೊಡಿ ಎಂದು ಸೂಚಿಸಿದ್ದೆ.
ಗೊತ್ತು-ಗುರಿ ಇಲ್ಲದೆ ಸುತ್ತಾಡುವ ಮನುಷ್ಯ
ನಾನು ಗೊತ್ತು-ಗುರಿ ಇಲ್ಲದೆ ಸುತ್ತಾಡುವ ಮನುಷ್ಯ. ನನ್ನ ಪ್ರಶ್ನೆಗಳಿಗೆ ನಾನೇ ಉತ್ತರ ಕಂಡುಕೊಂಡೆ. ಸಣ್ಣ ವಯಸ್ಸಿನಿಂದಲೇ ನಾನು ಸ್ವಾವಲಂಬಿ. ಆ ಕಾರಣಕ್ಕೆ ನನ್ನಲ್ಲಿ ಏಕಾಂತದ ಭಾವವನ್ನು ಬೆಳೆಸಿತು. ಆ ನಂತರ ನನ್ನ ಜತೆಗೆ ಬಂದು ಇರುವಂತೆ ಅಮ್ಮನನ್ನು ಕರೆದಿದ್ದೇನೆ. ಆಕೆಗೆ ಹಳ್ಳಿಯಲ್ಲಿ ಸಮಯ ಕಳೆಯುವುದರಲ್ಲೇ ಪ್ರೀತಿ. ಜತೆಗೆ ಅವರಿಗಾಗಿ ಅಗತ್ಯ ಇರುವಷ್ಟು ಸಮಯ ಮೀಸಲಿಡುವುದು ಸಾಧ್ಯವಿರಲಿಲ್ಲ.
ಸಿಟ್ಟಿಗೂ ಶಿಸ್ತಿಗೂ ವ್ಯತ್ಯಾಸ ಇದೆ
ನನಗೆ ಸುಲಭಕ್ಕೆ ಕೋಪ ಬರುವುದಿಲ್ಲ. ಆದರೆ ಇದು ಮನುಷ್ಯನ ಸ್ವಭಾವ. ಇವೆಲ್ಲ ಭಾವನೆಗಳು ನಕಾರಾತ್ಮಕತೆಯನ್ನು ಪಸರಿಸುತ್ತವೆ. ನನ್ನ ವೃತ್ತಿ ಆರಂಭಿಸಿದ ಸಮಯದಿಂದ ನನ್ನ ಸಿಟ್ಟನ್ನು ವ್ಯಕ್ತಪಡಿಸುವುದಕ್ಕೆ ಅವಕಾಶ ಸಿಕ್ಕಿಲ್ಲ. ಕೋಪಕ್ಕೂ ಮತ್ತು ಕಠಿಣವಾಗಿ ಇರುವುದಕ್ಕೂ ವ್ಯತ್ಯಾಸ ಇದೆ. ಸಮಯಕ್ಕೆ ನೀವು ಶಿಸ್ತಿನಿಂದ ಇದ್ದೀರಿ ಎಂಬುದು ಖಾತ್ರಿ ಮಾಡಿಕೊಳ್ಳಬೇಕು, ಅಷ್ಟೇ.
ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ?
ಪೇಪರ್ ಮೇಲೆ ಅನಿಸಿದ್ದೆಲ್ಲ ಬರೆಯುತ್ತೀನಿ
ಯಾವಾಗೆಲ್ಲ ಭಾವನೆಗಳಿಂದ ತುಂಬಿಹೋಗಿದ್ದೀನಿ ಎನಿಸುತ್ತದೋ ಆಗ ಎಲ್ಲವನ್ನೂ ಒಂದು ಪೇಪರ್ ಮೇಲೆ ಬರೆಯುತ್ತೀನಿ. ಆ ನಂತರ ವಿಶ್ಲೇಷಣೆ ಮಾಡ್ತೀನಿ. ಇದರಿಂದ ನನ್ನ ತಪ್ಪುಗಳನ್ನು ಅರಿಯಲು ಸಹಾಯವಾಗಿದೆ. ಆದರೆ ನನಗೆ ಅಷ್ಟೆಲ್ಲ ಸಮಯ ಸಿಗಲ್ಲ. ಪರಿಸ್ಥಿತಿಗೆ ಹೇಗೆ ಸ್ಪಂದಿಸಬೇಕು ಎಂದು ನನ್ನನ್ನು ನಾನು ಹುರಿಗೊಳಿಸಿದ್ದು ಹೀಗೆ.
ಟ್ವಿಂಕಲ್ ಖನ್ನಾ ಎಲ್ಲ್ ಸಿಟ್ಟನ್ನು ನನ್ನ ಮೇಲೆ ತೋರಿಸ್ತಾರೆ
ಜನರು ಅಚ್ಚರಿ ಪಡುತ್ತಾರೆ ಮತ್ತು ಚುನಾವಣೆ ವೇಳೆ ನಾನು ಇದನ್ನು ಹೇಳಬಾರದು. ಆದರೆ ಮಮತಾ ದೀದಿ ನನಗೆ ಪ್ರತಿ ವರ್ಷ ಉಡುಗೊರೆ ಕಳುಹಿಸುತ್ತಾರೆ. ಆಕೆ ಈಗಲೂ ಒಂದು ಅಥವಾ ಎರಡು ಕುರ್ತಾವನ್ನು ಕಳುಹಿಸುತ್ತಾರೆ. ನಾನು ಟ್ವಿಟ್ಟರ್ ನಲ್ಲಿ ನಿಮ್ಮನ್ನು (ಅಕ್ಷಯ್ ಕುಮಾರ್) ಹಾಗೂ ಟ್ವಿಂಕಲ್ ಖನ್ನಾ ಜೀಯನ್ನು ಫಾಲೋ ಮಾಡ್ತೀನಿ. ಅವರು ನನ್ನನ್ನು ಟಾರ್ಗೆಟ್ ಮಾಡುವ ರೀತಿ ಇದೆಯಲ್ಲಾ, ನಿಮ್ಮ ಕುಟುಂಬದಲ್ಲಿ ಶಾಂತಿ ಇದೆ ಅನ್ನೋದು ಅರ್ಥವಾಗುತ್ತದೆ. ಅವರ ಎಲ್ಲ ಕೋಪವನ್ನು ನನ್ನ ಮೇಲೆ ಹಾಕುತ್ತಾರೆ. ಆದ್ದರಿಂದ ನೀವು ನೆಮ್ಮದಿಯಿಂದ ಇರಬಹುದು.
ಜನ ಸಾಮಾನ್ಯರ ಆಲೋಚನೆ ಸಾಮಾಜಿಕ ಮಾಧ್ಯಮದಲ್ಲಿ
ನಾನು ಯಾವಾಗಲೂ ಮಹಾತ್ಮ ಗಾಂಧಿಜೀಯಿಂದ ಸ್ಫೂರ್ತಿ ಪಡೆಯುತ್ತೀನಿ. ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ವಚ್ಛತೆ ಕೂಡ ಮುಖ್ಯ. ಜತೆಗೆ ಒಂಬತ್ತು ಕೋಟಿ ಶೌಚಾಲಯ ನಿರ್ಮಾಣ ಮಾಡುವುದು ದೇಶದ ಸಾಧನೆಯೇ ಹೊರತು ನನ್ನದಲ್ಲ. ನಾನು ಟ್ವಿಟ್ಟರ್ ಪೋಸ್ಟ್ ಗಳನ್ನು ಓದ್ತೀನಿ ಮತ್ತು ಖುಷಿ ಪಡುತ್ತೀನಿ. ಮೋದಿ ಬಗ್ಗೆ ಏನಿದೆ ಅನ್ನೋದಕ್ಕಿಂತ ಅವು ಎಷ್ಟು ಕ್ರಿಯೇಟಿವ್ ಅಂತ ನೋಡ್ತೀನಿ. ಸಾಮಾಜಿಕ ಮಾಧ್ಯಮದಿಂದ ನನಗೆ ಅತಿ ದೊಡ್ಡ ಲಾಭ ಏನೆಂದರೆ, ಜನ ಸಾಮಾನ್ಯರ ಆಲೋಚನೆ ಏನು ಅಂತ ಗೊತ್ತಾಗುತ್ತದೆ.