ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್
Recommended Video
ಸುಷ್ಮಾ ಸ್ವರಾಜ್ ಜನಿಸಿದ್ದು ಪಂಜಾಬ್ ನ ಅಂಬಾಲ ಕಂಟೋನ್ಮೆಂಟ್ ನಲ್ಲಿ (ಅದೀಗ ಹರಿಯಾಣದಲ್ಲಿ ಇದೆ). ಅವರಿಗೆ ಅರವತ್ತಾರು ವರ್ಷ ವಯಸ್ಸಾಗಿತ್ತು (ಫೆಬ್ರವರಿ 14, 1953 ಜನನ). ತಂದೆ ಹೆಸರು ಹರ್ ದೇವ್ ಶರ್ಮಾ, ತಾಯಿ ಲಕ್ಷ್ಮೀ ದೇವಿ. ಸುಷ್ಮಾ ಅವರ ತಂದೆ ಹರ್ ದೇವ್ ಕೂಡ ಆರೆಸ್ಸೆಸ್ ನ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದವರು.
ಸುಷ್ಮಾರ ಪೋಷಕರು ಮೂಲತಃ ಪಾಕಿಸ್ತಾನದ ಲಾಹೋರ್ ನ ಧರಂಪುರ್ ನವರು. ಸುಷ್ಮಾರ ವಿದ್ಯಾಭ್ಯಾಸ ಆಗಿದ್ದು ಅಂಬಾಲ ಕಂಟೋನ್ಮೆಂಟ್ ನ ಸನಾತನ ಧರ್ಮ ಕಾಲೇಜಿನಲ್ಲಿ. ಸಂಸ್ಕೃತ ಹಾಗೂ ಪೊಲಿಟಿಕಲ್ ಸೈನ್ಸ್ ಮುಖ್ಯ ವಿಷಯವಾಗಿ ತೆಗೆದುಕೊಂಡು ಪದವಿ ಪೂರ್ಣಗೊಳಿಸಿದ ಅವರು, ಚಂಡೀಗಢದಲ್ಲಿನ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು.
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ
ಸುಷ್ಮಾ ಸ್ವರಾಜ್ ಎಂಥ ಪ್ರಖರ ವಾಗ್ಮಿ ಆಗಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಭಾಷಾ ವಿಭಾಗದಿಂದ ನಡೆಸಿದ್ದ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳ ಕಾಲ ಹಿಂದಿ ಭಾಷಣಗಾರ್ತಿ ಆಗಿ ಅವರಿಗೆ ಬಹುಮಾನ ಬಂದಿದ್ದ ವಿಚಾರ ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ.
1973ರಲ್ಲಿ ಸುಷ್ಮಾ ಸ್ವರಾಜ್ ಸುಪ್ರೀಂ ಕೋರ್ಟ್ ವಕೀಲೆಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆಂದಹಾಗೆ ಸುಷ್ಮಾ ರಾಜಕೀಯ ಜೀವನ ಶುರುವಾದದ್ದು 1970ರ ದಶಕದಲ್ಲಿ; ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ನಿಂದ. ಅವರ ಪತಿ ಸ್ವರಾಜ್ ಕೌಶಲ್ ಅವರು ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಹತ್ತಿರದಲ್ಲಿದ್ದರು. ಫರ್ನಾಂಡಿಸ್ ರ ಕಾನೂನು ತಂಡದಲ್ಲಿ ಸುಷ್ಮಾ ಹಾಗೂ ಸ್ವರಾಜ್ ಇಬ್ಬರೂ 1975ರಲ್ಲಿ ಇದ್ದರು.
ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು
ಸುಷ್ಮಾ ಅವರು ಜಯಪ್ರಕಾಶ್ ನಾರಾಯಣ್ ರ ಸಂಪೂರ್ಣ ಕ್ರಾಂತಿ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತುರ್ತು ಪರಿಸ್ಥಿತಿಯ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆದರು. ಆ ನಂತರ ಆಕೆ ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕಿಯಾಗಿ ಬೆಳೆದರು. ಹರಿಯಾಣದ ಶಾಸಕಿಯಾಗಿ 1977ರಿಂದ 1982ರ ತನಕ ಕಾರ್ಯ ನಿರ್ವಹಿಸಿದರು. ತಮ್ಮ 25ನೇ ವಯಸ್ಸಿನಲ್ಲಿ ಅಂಬಾಲ ಕಂಟೋನ್ಮೆಂಟ್ ಕ್ಷೇತ್ರದಿಂದ ಗೆದ್ದರು.
ಬಳ್ಳಾರಿಯಲ್ಲಿ ಕಮಲ ಅರಳಲು ನೀರೆದಿದ್ದ ಸುಷ್ಮಾ ಸ್ವರಾಜ್
ಆ ನಂತರ 1987ರಿಂದ 1990ರ ತನಕ ಮತ್ತೆ ಆಯ್ಕೆ ಆದರು. 1977ರ ಜುಲೈನಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಹರಿಯಾಣದ ಸಚಿವೆ ಆದರು. ಆಗ ದೇವಿಲಾಲ್ ಹರಿಯಾಣ ಮುಖ್ಯಮಂತ್ರಿ ಆಗಿದ್ದರು. 1979ರಲ್ಲಿ ಹರಿಯಾಣ ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಆಗಿದ್ದರು. ಆಗ ಅವರಿಗೆ ಕೇವಲ 27 ವರ್ಷ. 1987ರಿಂದ 1990ರ ಮಧ್ಯೆ ಹರಿಯಾಣದಲ್ಲಿ ರಚನೆಯಾದ ಬಿಜೆಪಿ- ಲೋಕದಳ ಮೈತ್ರಿ ಸರಕಾರದಲ್ಲಿ ಶಿಕ್ಷಣ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು.
ರಾಷ್ಟ್ರೀಯ ರಾಜಕಾರಣದಲ್ಲಿ ಕಾಣಿಸಿಕೊಂಡ ನಂತರ ಕೇಂದ್ರ ಸಚಿವೆ ಸ್ಥಾನಕ್ಕೆ ಅವರು 1998ರ ಅಕ್ಟೋಬರ್ ನಲ್ಲಿ ರಾಜೀನಾಮೆ ನೀಡಿದರು. ಆ ನಂತರ ದೆಹಲಿ ಮುಖ್ಯಮಂತ್ರಿ ಗದ್ದುಗೆಗೆ ಏರಿದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಶ್ರೇಯ ಅವರ ಪಾಲಿಗೆ ದೊರೆಯಿತು. ಆದರೆ ಬಿಜೆಪಿಯು ವಿಧಾನಸಭಾ ಚುನಾವಣೆ ಸೋತಿತು. ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ರಾಷ್ಟ್ರ ರಾಜಕಾರಣಕ್ಕೆ ಮರಳಿದರು.
ಮೋದಿಗೆ ಥ್ಯಾಂಕ್ಸ್,'ಜೀವಮಾನದಲ್ಲಿ ಈ ದಿನಕ್ಕಾಗಿ ಕಾದಿದ್ದೆ': ಸುಷ್ಮಾ ಕೊನೆ ಟ್ವೀಟ್
1990ರ ಏಪ್ರಿಲ್ ನಲ್ಲಿ ಸುಷ್ಮಾ ಅವರು ರಾಜ್ಯಸಭೆಗೆ ಆಯ್ಕೆಯಾದರು. 11ನೇ ಲೋಕಸಭೆಗೆ ಆಯ್ಕೆಯಾಗುವ ತನಕ ಅದೇ ಹುದ್ದೆಯಲ್ಲಿದ್ದರು. ಆ ನಂತರ 1996ರಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1996ರಲ್ಲಿ 13 ದಿನಗಳ ಕಾಲ ಅಸ್ತಿತ್ವದಲ್ಲಿ ಇದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ಕೇಂದ್ರ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು.
ಆ ನಂತರ 12ನೇ ಲೋಕಸಭೆಗೆ ಮಾರ್ಚ್ 1998ರಲ್ಲಿ ದಕ್ಷಿಣ ದೆಹಲಿಯಿಂದ ಎರಡನೇ ಅವಧಿಗೆ ಮರು ಆಯ್ಕೆಯಾದರು. ಮಾರ್ಚ್ 19, 1998ರಿಂದ ಅಕ್ಟೋಬರ್ 12, 1998ರ ತನಕ ಸಚಿವೆ ಆಗಿದ್ದರು. ಭಾರತೀಯ ಸಿನಿಮಾಗಳಿಗೆ ಬ್ಯಾಂಕ್ ಗಳಲ್ಲಿ ಸಾಲ ದೊರೆಯುವಂತೆ ಮಾಡಿದ ಶ್ರೇಯ ಆಕೆಗೆ ಸಿಗಬೇಕು.
1999ರ ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್ ನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿ ಬಳ್ಳಾರಿಯಿಂದ ಕಣಕ್ಕೆ ಇಳಿಸಿತು. ಕೇವಲ 12 ದಿನ ಮಾತ್ರ ಚುನಾವಣೆ ಪ್ರಚಾರ ಮಾಡಿದ್ದ ಅವರು 3,58,000 ಮತಗಳನ್ನು ಪಡೆದರು. ಬಿಜೆಪಿಗೆ ಅಸ್ತಿತ್ವವೇ ಇಲ್ಲದ ನೆಲದಲ್ಲಿ ಕೇವಲ 7 ಪರ್ಸೆಂಟ್ ಅಂತರದಿಂದ ಸೋತರು. ಆದರೆ ಆ ನಂತರ ಅಲ್ಲಿ ಬಿಜೆಪಿ ತಲೆ ಎತ್ತಿ ನಿಂತಿದ್ದು ಈಗ ಇತಿಹಾಸ.
ಕೇಂದ್ರದಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ, ಸಂಸದೀಯ ವ್ಯವಹಾರ, ವಿದೇಶಾಂಗ ಖಾತೆ ಹೀಗೆ ನಾನಾ ಖಾತೆಗಳನ್ನು ನಿರ್ವಹಿಸಿದ ಗಟ್ಟಿಗಿತ್ತಿ ಸುಷ್ಮಾ ಸ್ವರಾಜ್. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಅವಧಿಗೆ ಪ್ರಧಾನಿ ಆಗಿದ್ದಾಗ ವಿದೇಶಾಂಗ ಖಾತೆ ಸಚಿವೆಯಾಗಿ ಅದ್ಭುತವಾಗಿ ಕಾರ್ಯ ನಿರ್ವಹಿಸಿದರು.
ಸುಷ್ಮಾ ಸ್ವರಾಜ್ ಅಗಲಿಕೆಗೆ ನರೇಂದ್ರ ಮೋದಿ ಭಾವುಕ ಟ್ವೀಟ್
ಜುಲೈ, 1975ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಸ್ವರಾಜ್ ಕೌಶಲ್ ಅವರನ್ನು ಸುಷ್ಮಾ ವಿವಾಹ ಆದರು. ಈ ದಂಪತಿಗೆ ಬಾನ್ಸುರಿ ಎಂಬ ಮಗಳಿದ್ದಾಳೆ. ಡಿಸೆಂಬರ್ 10, 2016ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು ಸುಷ್ಮಾ ಸ್ವರಾಜ್. ಆ ನಂತರ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ಅವರೇ ನಿರ್ಧರಿಸಿದ್ದರು.
ಮುಂಚೆಯೇ ಗೊತ್ತಿತ್ತು ಎಂಬಂತೆ: ಜೀವನದುದ್ದಕ್ಕೂ ಹೋರಾಟ ಮಾಡುತ್ತಾ ಬಂದಿದ್ದ ಹೆಣ್ಣುಮಗಳು ಸುಷ್ಮಾ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿಲ್ಲ. ಹಣೆಯಲ್ಲಿ ಅಗಲವಾದ ಕುಂಕುಮ, ಕನ್ನಡಕದ ಹಿಂದಿನ ಮಿನುಗು ಕಣ್ಣುಗಳು, ಗಲಗಲಿಸುವ ನಗು, ದೇಶದ ವಿಚಾರ ಬಂದಾಗ ಹರಿಸುತ್ತಿದ್ದ ವಾಗ್ಝರಿ... ಸುಷ್ಮಾ ಈ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಂಪು ಹೊತ್ತಿನಲ್ಲಿ ಎದ್ದು ಹೋದ ಅವರ ಜೀವವನ್ನು ನೆನೆದು ಕಣ್ಣಂಚಿನಲ್ಲಿ ನೀರು ತಾನಾಗಿಯೇ ಬರುತ್ತದೆ.