ಚಾಮರಾಜನಗರದ ರಾಮಾಪುರ ಆನೆ ಶಿಬಿರದಲ್ಲಿ ಗಜಪಡೆ ಚೆಂಡಾಟ...
ಚಾಮರಾಜನಗರ, ಅಕ್ಟೋಬರ್ 1: ಕಾಡಿನಿಂದ ನಾಡಿಗೆ ಬಂದು ಕೃಷಿ ಬೆಳೆಗಳನ್ನು ನಾಶ ಮಾಡುತ್ತಾ ರೈತರಲ್ಲಿ ಭಯ ಹುಟ್ಟಿಸುತ್ತಿದ್ದ ಪುಂಡಾನೆಗಳು ಇದೀಗ ಸಾಕಾನೆಗಳಾಗಿ ಚೆಂಡಾಟ ಆಡುತ್ತಾ ಮಾವುತರು, ಕಾವಾಡಿಗಳು ಹೇಳಿದಂತೆ ಕೇಳುತ್ತಾ ಮಂಡಿಯೂರಿ ಎರಡು ಕಾಲಿನಲ್ಲಿ ನಡೆಯುವಂತಾಗಿವೆ ಎಂದರೆ ಅಚ್ಚರಿಯಾಗುತ್ತದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಡಿಯಾಲ ಉಪ ವಿಭಾಗದಲ್ಲಿನ ಕಲ್ಕರೆ ವಲಯದಲ್ಲಿರುವ ರಾಮಾಪುರ ಆನೆಶಿಬಿರ ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸುವುದಕ್ಕೆ ಫೇಮಸ್. ಇಲ್ಲಿ ತರಬೇತಿ ಪಡೆದ ಸಾಕಾನೆಗಳು ಹಲವು ರೀತಿಯ ಸಾಮರ್ಥ್ಯಗಳನ್ನು ಮೆರೆಯುತ್ತಿವೆ. ಅರಣ್ಯದಿಂದ ಬಂದು ನಾಡಿಗೆ ನುಗ್ಗಿ ರೈತರು ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನೆಲ್ಲ ನಾಶ ಮಾಡುತ್ತಿದ್ದಲ್ಲದೆ ಪ್ರಾಣ ಹಾನಿಗೂ ಕಾರಣವಾಗುತ್ತಾ ಜನರಲ್ಲಿ ಭಯಹುಟ್ಟಿಸಿದ್ದ ಆನೆಗಳು ಈಗ ಸಾಧುಸ್ವಭಾವದ ಆನೆಗಳಾಗಿ ಮಾವುತರು ಹೇಳಿದಕ್ಕೆ ತಲೆ ಆಡಿಸುತ್ತಾ ಚೆಂಡಾಟ ಆಡುತ್ತಿರುವುದು ಗಮನ ಸೆಳೆಯುತ್ತವೆ. ಈ ಕುರಿತ ಇನ್ನಷ್ಟು ವಿವರ ಇಲ್ಲಿದೆ...
ಪುಂಡಾನೆಗಳೀಗ ಸಾಕಾನೆಗಳು
ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಕಾಡಂಚಿನಲ್ಲಿ ವಾಸಿಸುವ ರೈತರು ಕಾಡಾನೆಗಳ ದಾಳಿಯಿಂದ ಸಂಕಷ್ಟ ಅನುಭವಿಸುತ್ತಲೇ ಇರುತ್ತಾರೆ. ಇನ್ನು ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 1600ಕ್ಕೂ ಹೆಚ್ಚು ಆನೆಗಳಿವೆ ಎಂದು ಹೇಳಲಾಗುತ್ತಿದ್ದು, ಇಲ್ಲಿಂದ ಹೊರಗೆ ಬರುವ ಆನೆಗಳು ಪುಂಡಾಟಿಕೆ ನಡೆಸುತ್ತಿರುತ್ತವೆ. ಇಂತಹ ಆನೆಗಳನ್ನು ಸಾಕಾನೆಗಳ ಮೂಲಕ ಸೆರೆ ಹಿಡಿದು ರಾಮಾಪುರ ಆನೆ ಶಿಬಿರಕ್ಕೆ ತಂದು ಪಳಗಿಸಲಾಗುತ್ತದೆ. ಅವುಗಳು ಮಾವುತರ ಮಾತುಗಳಿಗೆ ತಕ್ಕಂತೆ ವರ್ತಿಸುವುದನ್ನು ಕಲಿಯುವ ತನಕ, ಅಷ್ಟೇ ಅಲ್ಲದೆ ಚೆಂಡಾಟ, ಎರಡು ಕಾಲಿನಲ್ಲಿ ನಡೆಯೋದು, ನಮಿಸೋದು ಹೀಗೆ ಎಲ್ಲವನ್ನು ಅವುಗಳಿಗೆ ಕಲಿಸಲಾಗುತ್ತದೆ.
ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಸಿದ್ಧವಾಗಲಿದೆ ಆನೆ ಶಿಬಿರ
ಮಾವುತರ ಮಾತಿಗೆ ತಲೆದೂಗುವ ಗಜಪಡೆ
ಇದೀಗ ರಾಮಾಪುರ ಆನೆ ಶಿಬಿರದಲ್ಲಿ ಹದಿನಾರು ಆನೆಗಳಿದ್ದು, ಇವುಗಳನ್ನು ವಿವಿಧೆಡೆಗಳಲ್ಲಿ ಸೆರೆ ಹಿಡಿದು ತಂದು ಪಳಗಿಸಲಾಗಿದೆ. ಇದೀಗ ಪಳಗಿ ಮಾವುತರ ಮಾತಿಗೆ ತಕ್ಕಂತೆ ವರ್ತಿಸುತ್ತಿರುವ ಗಜಪಡೆಗಳ ಕುರಿತಂತೆ ಮಾಹಿತಿ ನೀಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳನ್ನು ಹಿಡಿದು ರಾಮಾಪುರ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ಶಿಬಿರದಲ್ಲಿರುವ ಸಾಕಾನೆಗಳಿಗೆ ಮಾವುತರಿಂದ ವಿಶೇಷ ತರಬೇತಿ ನೀಡಲಾಗಿದೆ. ಇಲ್ಲಿರುವ ಸಾಕಾನೆಗಳು ಮಾವುತ ಹೇಳಿದಂತೆ ವರ್ತಿಸತ್ತಾ ಮನುಷ್ಯರಂತೆ ಆಟೋಟದಲ್ಲಿ ಭಾಗಿಯಾಗುತ್ತಿದ್ದು, ಎರಡು ಆನೆಗಳು ಕಾಲಿನಲ್ಲಿ ಫುಟ್ಭಾಲ್ ಆಡುವುದನ್ನು ಕಲಿತಿವೆ. ಮನುಷ್ಯನ ರೀತಿಯಲ್ಲಿ ವಿವಿಧ ಭಂಗಿಯಲ್ಲಿ ವರ್ತಿಸುತ್ತಿವೆ ಎಂದು ಮಾಹಿತಿ ನೀಡಿದರು.
ಸಾಕಾನೆಗಳಿಗೆ ಬೇವಿನ ಎಣ್ಣೆಯ ಮಜ್ಜನ
ರಾಮಾಪುರ ಶಿಬಿರದಲ್ಲಿ ಈ ಸಾಕಾನೆಗಳನ್ನು ಕೂಡ ಜತನದಿಂದ ನೋಡಿಕೊಳ್ಳಲಾಗುತ್ತಿದೆ. ಮಾವುತರು ಮತ್ತು ಕಾವಾಡಿಗರು ಪ್ರತಿದಿನ ಬೆಳಿಗ್ಗೆ ಸಾಕಾನೆಗಳನ್ನು ಕರೆದೊಯ್ದು ಪಕ್ಕದಲ್ಲೇ ಹರಿಯುವ ಮೂಲೆಹೊಳೆ ನೀರಿನಲ್ಲಿ ಸ್ನಾನ ಮಾಡಿಸಿ ನಂತರ ಅವುಗಳ ದೇಹಕ್ಕೆ ಬೇವಿನ ಎಣ್ಣೆ ಸವರಿ ನಂತರ ಪಶುವೈದ್ಯರು ಸೂಚಿಸಿದ ಪ್ರಮಾಣದದಲ್ಲಿ ಆಹಾರ ನೀಡಲಾಗುತ್ತದೆ. ಇದಾದ ಬಳಿಕ ಅವುಗಳನ್ನು ಕಾಡಿನಲ್ಲಿ ಸುತ್ತಾಡಿಸಿ ಕರೆತರಲಾಗುತ್ತಿದೆ. ಆಮೇಲೆ ಆಟೋಟ ಪ್ರದರ್ಶನದ ತರಬೇತಿ ನಡೆಯುತ್ತದೆ.
ಪ್ರಾಣಿಗಳಿಗೂ ಕೊರೊನಾ; ರಾಮಾಪುರ ಆನೆ ಶಿಬಿರದತ್ತ ಅರಣ್ಯ ಇಲಾಖೆ ನಿಗಾ
ರಾಮಾಪುರ ಆನೆ ಶಿಬಿರದಲ್ಲಿ ಕಠಿಣ ಕ್ರಮ
ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಎಲ್ಲ ಕಡೆಯೂ ಹರಡುತ್ತಿರುವುದರಿಂದ ರಾಮಾಪುರ ಆನೆ ಶಿಬಿರದಲ್ಲಿ ಕಠಿಣ ಕ್ರಮಕೈಗೊಳ್ಳಲಾಗಿದೆ. ಆನೆಗಳ ಸುರಕ್ಷತೆಗೆ ಇಲ್ಲಿ ಒತ್ತು ನೀಡಲಾಗಿದೆ. ಈ ಕಾರಣಕ್ಕೆ ಆನೆಶಿಬಿರವನ್ನು ಆಗಾಗ್ಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ರಾಮಾಪುರ ಆನೆ ಶಿಬಿರ ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ.