ಭಾರತೀಯರ ಬದುಕೇ ಹಂಡಾವರಣ; ಇದು 16 ತಿಂಗಳಿನಲ್ಲೇ ಗರಿಷ್ಠ ಹಣದುಬ್ಬರ ಕೊಟ್ಟ ಹೊಡೆತ!
ನವದೆಹಲಿ, ಏಪ್ರಿಲ್ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮುಗೀತು. ಲಾಕ್ ಡೌನ್ ನಿಯಮಗಳಿಂದ ಜನರು ಹೊರಗೆ ಬಂದಿದ್ದು ಆಯಿತು. ಭಾರತೀಯರಿಗೆ ಈಗ ಬೆಲೆ ಏರಿಕೆಯ ಆಘಾತ ಬೆನ್ನಿಗೆ ಬಿದ್ದಿದೆ. ದೇಶದ ಚಿಲ್ಲರೇ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರ ಕೈಗೆ ಸಿಗದಷ್ಟು ಮಟ್ಟಕ್ಕೆ ಏರಿಕೆ ಆಗಿವೆ.
ದೇಶದಲ್ಲಿ ಆಹಾರ, ತರಕಾರಿ ಮತ್ತು ಇಂಧನಗಳ ಬೆಲೆ ಏರಿಕೆಗೆ ಏನು ಕಾರಣ ಎಂಬ ಪ್ರಶ್ನೆಗೆ ಈಗ ರಷ್ಯಾ-ಉಕ್ರೇನ್ ಯುದ್ಧದ ಕಡೆಗೆ ಬೊಟ್ಟು ಮಾಡಿ ತೋರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಕಳೆದ ಮಾರ್ಚ್ ತಿಂಗಳಿದಲ್ಲಿ ಮಾರುಕಟ್ಟೆಯ ಹಣದುಬ್ಬರವು 16 ತಿಂಗಳಿನಲ್ಲೇ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ರಾಯಟರ್ಸ್ ವರದಿ ಮಾಡಿದೆ.
ಉತ್ತರಾಖಂಡದಲ್ಲೂ ಹಣದುಬ್ಬರದ ಬಿಸಿ: ಕರೆಂಟ್ ಮತ್ತು ನೀರು ದುಬಾರಿ
ಭಾರತದ ಚಿಲ್ಲರೇ ಮಾರುಕಟ್ಟೆಯಲ್ಲಿ ಹಣದುಬ್ಬರ ಪ್ರಮಾಣವು ಮಾರ್ಚ್ ತಿಂಗಳೊಂದರಲ್ಲೇ ಶೇ.6.35ರಷ್ಟಿದೆ. ಇದು ಈ ಹಿಂದಿನ 16 ತಿಂಗಳ ದಾಖಲೆಯನ್ನು ಹಿಂದಿಕ್ಕಿದೆ. ಆ ಮೂಲಕ ಉದ್ಯೋಗವಿಲ್ಲದೇ, ಕೈಯಲ್ಲಿ ಕಾಸಿಲ್ಲದೇ, ದಿನದ ದುಡಿಮೆಯಲ್ಲಿ ಬದುಕುತ್ತಿರುವ ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರ ಗಾಯದ ಮೇಲೆ ಬರೆ ಎಳೆಯುವಂತಹ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಭಾರತೀಯರ ಬೆನ್ನಿಗೆ ಬಿದ್ದಿರುವ ಈ ಹಣದುಬ್ಬರ ಮತ್ತು ಮಾರುಕಟ್ಟೆಯ ಮೇಲೆ ಅದರ ಪರಿಣಾಮದ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಬೆಲೆ ಏರಿಕೆ ಬಿಸಿ ನಡುವೆ ಕರೆಂಟ್ ಶಾಕ್: ದರ ಏರಿಕೆಗೆ ಕಾರಣಗಳೇನು?
ಕಚ್ಚಾತೈಲ ಬೆಲೆ ಏರಿಕೆಗೆ ಕಾರಣವಾದ ರಷ್ಯಾ-ಉಕ್ರೇನ್ ವಾರ್
ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ದೈತ್ಯ ರಷ್ಯಾ ಸೇನೆಯು ಯುದ್ಧವನ್ನು ಘೋಷಿಸಿತು. ಉಕ್ರೇನ್ ನೆಲದಲ್ಲಿ ರಷ್ಯಾ ಸೇನೆಯು ಮದ್ದು ಗುಂಡುಗಳ ದಾಳಿ ನಡೆಸುತ್ತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಕಚ್ಚಾತೈಲದ ಬೆಲೆಯು ಆಕಾಶದತ್ತ ಮುಖ ಮಾಡಿತು. ಇಂಧನದ ಜೊತೆ ಅನಿಲದ ಬೆಲೆಯು ಏರಿಕೆ ಆಯಿತು.
ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಹಣದುಬ್ಬರ
ರಾಯಟರ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ, 48 ಆರ್ಥಿಕ ತಜ್ಞರು ದೇಶದ ಹಣದುಬ್ಬರದ ಬಗ್ಗೆ ಸಲಹೆ ನೀಡಿದ್ದಾರೆ. ಗ್ರಾಹಕರ ಬೆಲೆ ಸೂಚ್ಯಂಕವು ಮಾರ್ಚ್ ತಿಂಗಳಿನಲ್ಲಿ ಶೇ.6.35ರಷ್ಟು ಏರಿಕೆಯಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಇದೇ ಗ್ರಾಹಕರ ಬೆಲೆ ಸೂಚ್ಯಂಕವು ಶೇ.6.07ರಷ್ಟಿದ್ದು, ಇದು 2020ರ ನವೆಂಬರ್ ತಿಂಗಳ ನಂತರದಲ್ಲಿ ಗರಿಷ್ಠ ಮಟ್ಟದ ಪ್ರಮಾಣ ಎಂದು ಹೇಳಿದೆ. ಏಪ್ರಿಲ್ 12ರ ವೇಳೆಗೆ ಗ್ರಾಹಕರ ಬೆಲೆ ಸೂಚ್ಯಂಕದ ಪ್ರಮಾಣವು ಶೇ.6.06 ರಿಂದ ಶೇ.6.50ರಷ್ಟಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಪ್ರಮಾಣವು ಶೇ.6ಕ್ಕಿಂತ ಕಡಿಮೆ ಆಗಿರುವುದಿಲ್ಲ ಎಂದು ವರದಿ ತಿಳಿಸಿದೆ.
ದೇಶದ ಹಣದುಬ್ಬರದ ಏರಿಕೆ ಕುರಿತು ಉಲ್ಲೇಖ
ಭಾರತದಲ್ಲಿ ಫೆಬ್ರವರಿ ತಿಂಗಳವರೆಗೂ ನಿಯಂತ್ರಣದಲ್ಲಿದ್ದ ಅಗತ್ಯ ವಸ್ತುಗಳ ಬೆಲೆಯು ಗಗನಮುಖಿಯಾಗಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಗ್ರಾಹಕರ ಬೆಲೆ ಸೂಚ್ಯಂಕವನ್ನು ಶೇ.6.30ರಷ್ಟಕ್ಕೆ ಸ್ಥಿಮಿತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ಎಂದು ಆರ್ಥಿಕ ಶಾಸ್ತ್ರಜ್ಞ ಧೀರಜ್ ನಿಮ್ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಪೂರೈಕೆ ಸರಪಳಿ ಸಮಸ್ಯೆಗಳು ಜಾಗತಿಕ ಆಹಾರ ಉತ್ಪಾದನೆ, ಖಾದ್ಯ ತೈಲಗಳ ಪೂರೈಕೆ ಮತ್ತು ರಸಗೊಬ್ಬರ ರಫ್ತುಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆ ಆಹಾರದ ಬೆಲೆಗಳು ಡಬಲ್ ಆಗುವ ನಿರೀಕ್ಷೆಯಿದೆ.
ಉದ್ಯೋಗ ಕಳೆದುಕೊಂಡವರಿಗೆ ಗಾಯದ ಮೇಲೆ ಬರೆ
ಕೊವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಲಾಕ್ ಡೌನ್ ನಿರ್ಬಂಧಗಳ ನಡುವೆ ಲಕ್ಷ ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬೆಲೆ ಏರಿಕೆಯು ಆಘಾತವನ್ನು ಉಂಟು ಮಾಡಿದೆ. ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಪಾಮ್ ಆಯಿಲ್ ಬೆಲೆಗಳು ಈ ವರ್ಷ ಸುಮಾರು ಶೇ. 50ರಷ್ಟು ಏರಿಕೆಯಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಉದ್ಯೋಗ ಮತ್ತು ಆದಾಯದ ಮೇಲೆ ಹೊಡೆತ ಬಿದ್ದಿದೆ. ಬಡತನ ರೇಖೆಯ ಕೆಳಗಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರದ ಬೆಲೆ ಏರಿಕೆಯು ಗಾಯ ಮೇಲೆ ಬರೆ ಏಳೆದಂತೆ ಆಗಿದೆ.
ಪಂಚರಾಜ್ಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬೆಲೆ ಏರಿಕೆ
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗಿತ್ತು. ಮಾರ್ಚ್ 10ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಹೊರ ಬೀಳುತ್ತಿದ್ದಂತೆ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರ ನೆತ್ತಿ ಸುಡುವುದಕ್ಕೆ ಶುರುವಾಯಿತು. ಮಾರ್ಚ್ ತಿಂಗಳ 17 ದಿನಗಳಲ್ಲಿ 14 ಬಾರಿ ಏರಿಕೆ ಆಗಿರುವ ಪೆಟ್ರೋಲ್ ಡೀಸೆಲ್ ದರಲ್ಲಿ ಬರೋಬ್ಬರಿ 10 ರೂಪಾಯಿ ಏರಿಕೆ ಆಯಿತು.
ರಿಸರ್ವ್ ಬ್ಯಾಂಕಿನಿಂದ ರೆಪೋ ದರದಲ್ಲಿ ಬದಲಾವಣೆ ಇಲ್ಲ
ಒಂದು ದಿಕ್ಕಿನಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಜೊತೆಗೆ ಇಂಧನ ಮತ್ತು ಅನಿಲದ ಬೆಲೆ ಏರಿಕೆ ಆಗುತ್ತಿದೆ. ಇದರ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಶುಕ್ರವಾರ ರೆಪೋ ದರವನ್ನು ಘೋಷಿಸಿದ ಆರ್ಬಿಐ ಶೇ.4.0ರಷ್ಟಕ್ಕೆ ಸ್ಥಿರವಾಗಿರಿಸಿದೆ.
Recommended Video