ಎಚ್ಚರ.. ಕೊರೊನಾ ಸುಲಭವಾಗಿ ಸಾಯಲ್ಲ..! ಸೂತಕದ ನಡುವೆ ಆಹಾರಕ್ಕೂ ಹಾಹಾಕಾರ..!
ಅದೆಲ್ಲಿಂದ ವಕ್ಕರಿಸಿತೋ, ಅದ್ಯಾವ ಘಳಿಗೆಯಲ್ಲಿ ಮಾನವರ ಸಂತತಿ ನಾಶ ಮಾಡೋಕೆ ಅಬ್ಬರಿಸಲು ಶುರು ಮಾಡಿತೋ ಈ ಕೊರೊನಾ. ಅಂದಿನಿಂದ ಇಂದಿನವರೆಗೂ ಮನುಷ್ಯರಿಗೆ ನೆಮ್ಮದಿಯೇ ಇಲ್ಲ, ಮನುಷ್ಯ ಜೊತೆ ಪ್ರಾಣಿಗಳಿಗು ಇದೇ ಪರಿಸ್ಥಿತಿ ಎದುರಾಗಿದೆ. ನೆಮ್ಮದಿಯಾಗಿದ್ದ ಜಗತ್ತಿಗೆ ಉಗ್ರನಂತೆ ಬಂದಪ್ಪಳಿಸಿದ ಕೊರೊನಾ ಎಲ್ಲವನ್ನೂ ನಾಶ ಮಾಡಿದೆ. ಲಕ್ಷಾಂತರ ಜೀವಗಳನ್ನ ಬಲಿ ಪಡೆದಿದೆ.
ಈ ನಡುವೆ ಆಹಾರಕ್ಕೂ ಹಾಹಾಕಾರ ಉಂಟಾಗಿದ್ದು, ಆಹಾರ ಪದಾರ್ಥಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಅದರಲ್ಲೂ ಕೊರೊನಾ ಕಂಟಕ ಶುರುವಾದ ಬಳಿಕ, ಕಳೆದ 10-20 ವರ್ಷಗಳಲ್ಲೇ ಕಾಣದಷ್ಟು ಆಹಾರ ಹಣದುಬ್ಬರ ಇಡೀ ಜಗತ್ತನ್ನೇ ಕಾಡುತ್ತಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದೆ ವಿಶ್ವಸಂಸ್ಥೆ. ಈಗಾಗಲೇ ಜಗತ್ತಿನಾದ್ಯಂತ ಕೋಟ್ಯಂತರ ಜನ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ಇಂತಹ ಪರಿಸ್ಥಿತಿಯಲ್ಲೇ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಹಸಿವು ಎಂಬ ಮಹಾಮಾರಿ ಬಡ ರಾಷ್ಟ್ರಗಳಿಗೆ ಸೀಮಿತವಾಗಿಲ್ಲ, ಶ್ರೀಮಂತ ರಾಷ್ಟ್ರಗಳಲ್ಲೂ ಆಹಾರ ಪದಾರ್ಥ ದುಪ್ಪಟ್ಟಾಗಿದೆ. ಸದ್ಯಕ್ಕಂತೂ ಈ ಕಂಟಕ ಹಿಡಿತಕ್ಕೆ ಸಿಗುವ ಯಾವುದೇ ಲಕ್ಷಣಗಳಿಲ್ಲ.
ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣ
ಕೊರೊನಾ ಸೋಂಕು ಜಗತ್ತನ್ನು ಆವರಿಸಿದ ಬಳಿಕ, ವೈರಸ್ ಹರಡದಂತೆ ತಡೆಯಲು ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಮೊರೆ ಹೋದವು. ಇದು ಕೂಡ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಮೊದಲನೇ ಅಲೆ ಸಾಲದು ಎಂಬಂತೆ, 2ನೇ ಅಲೆ ಹಾಗೂ 3ನೇ ಅಲೆಯೂ ಜಗತ್ತಿನ ಬಹುತೇಕ ರಾಷ್ಟ್ರಗಳನ್ನ ಕಾಡಿದೆ. ಈ ಸಂದರ್ಭದಲ್ಲಿ ಲಾಕ್ಡೌನ್ ಹೇರಿದ ಪರಿಣಾಮ ಅಗತ್ಯ ವಸ್ತು ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಅಲ್ಲದೆ ಉತ್ಪಾದನೆಯಲ್ಲಿ ಉಂಟಾದ ಏರಿಳಿತ ಬೆಲೆ ಏರಿಕೆಗೆ ಕಾರಣ ಎನ್ನುತ್ತಿದೆ ವಿಶ್ವಸಂಸ್ಥೆಯ ಅಂಕಿ-ಅಂಶ.
ಕೊರೊನಾ 3ನೇ ಅಲೆಯ ಕಂಟಕ
ಕೊರೊನಾ ಕಂಟಕದ ಬಳಿಕ ಭಾರತದಲ್ಲೂ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಈಗಾಗಲೇ ಭಾರತದಲ್ಲಿ ಸುಮಾರು 2 ಕೋಟಿ 87 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಕನ್ಫರ್ಮ್ ಆಗಿದ್ದು, 3 ಲಕ್ಷ 44 ಸಾವಿರಕ್ಕೂ ಹೆಚ್ಚು ಸೋಂಕಿತರು ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಇಷ್ಟೆಲ್ಲಾ ಕಷ್ಟದ ಮಧ್ಯೆ ಬೆಲೆ ಏರಿಕೆ ಮತ್ತೊಂದು ಸಮಸ್ಯೆ ತಂದೊಡ್ಡುವ ಅಪಾಯವಿದೆ. ಅದರಲ್ಲೂ ಕೊರೊನಾ 3ನೇ ಅಲೆಯ ಕಂಟಕ ಭಾರತಕ್ಕೆ ಕಾಡುತ್ತಿದ್ದು, ಯಾವಾಗ ಈ ವೈರಸ್ ಜಗತ್ತು ಬಿಟ್ಟು ತೊಲಗುತ್ತೋ ಎಂಬಂತಾಗಿದೆ.
ಅಕ್ಟೋಬರ್ನಲ್ಲಿ ವಿಜ್ಞಾನಿಗಳು ಆಘಾತಕಾರಿ ಸುದ್ದಿ ನೀಡಿದ್ದರು
ಇಷ್ಟೆಲ್ಲಾ ಸಂಕಷ್ಟಗಳಿಗೆ ಕಾರಣವಾಗಿರುವ 'ಕೊರೊನಾ' ಯಾವಾಗ ಭೂಮಿ ಬಿಟ್ಟು ತೊಲಗುತ್ತೆ ಎಂದು ಜಗತ್ತು ಕಾಯುತ್ತಿದೆ. ಆದರೆ ಕಳೆದ ಅಕ್ಟೋಬರ್ನಲ್ಲಿ ವಿಜ್ಞಾನಿಗಳು ಆಘಾತಕಾರಿ ಸುದ್ದಿ ನೀಡಿದ್ದರು. ಕೊರೊನಾ ಅಷ್ಟು ಸುಲಭವಾಗಿ ಭೂಮಿ ಬಿಟ್ಟು ತೊಲುಗುವುದಿಲ್ಲ ಎಂದಿದ್ದರು. ಬ್ರಿಟನ್ ಮೂಲದ ವಿಜ್ಞಾನಿಗಳ ಈ ಅಭಿಪ್ರಾಯ ತೀವ್ರ ಸಂಚಲನ ಸೃಷ್ಟಿಸಿತ್ತು.
ಏಕೈಕ ಮಾರ್ಗ ವ್ಯಾಕ್ಸಿನ್
ವಿಜ್ಞಾನಿಗಳು ಇಂತಹ ವರದಿ ನೀಡಿ ಹಲವು ತಿಂಗಳು ಕಳೆದರೂ ಪರಿಸ್ಥಿತಿ ಇನ್ನೂ ಹಾಗೇ ಇದೆ. ಇದು ಕೊರೊನಾ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆದ್ರೆ ಡೆಡ್ಲಿ ವೈರಸ್ ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ವ್ಯಾಕ್ಸಿನ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಯೊಂದು ರಾಷ್ಟ್ರವೂ ವ್ಯಾಕ್ಸಿನ್ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಅಂತಿದ್ದಾರೆ ತಜ್ಞರು.