Flashback 2019: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪುಗಳು
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಪ್ರಮುಖ ಮತ್ತು ಮಹತ್ವದ ತೀರ್ಪುಗಳಿಗೆ 2019 ಸಾಕ್ಷಿಯಾಗಿದೆ. ಸುಪ್ರೀಂಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್ಗಳು ಅನೇಕ ಪ್ರಮುಖ ಪ್ರಕರಣಗಳ ಕಾನೂನು ಸಮರಗಳನ್ನು ಅಂತ್ಯಗೊಳಿಸಿದೆ. ಇನ್ನು ಕೆಲವು ಪ್ರಕರಣಗಳ ತೀರ್ಪುಗಳ ಮರುಪರಿಶೀಲನೆಯ ಮನವಿಗಳು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿವೆ.
2019ರ ಬಹುತೇಕ ಪ್ರಮುಖ ತೀರ್ಪುಗಳು ಹಿಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಅಧಿಕಾರಾವಧಿಯಲ್ಲಿ ಹೊರಬಂದಿವೆ. ಮುಖ್ಯವಾಗಿ ಗೊಗೊಯ್ ಅವರು ನಿವೃತ್ತರಾಗುವ ದಿನಗಳು ಸಮೀಪಿಸಿದ ಸಂದರ್ಭದಲ್ಲಿ ಪ್ರಕಟವಾಗಿವೆ. ನ. 17ರಂದು ರಂಜನ್ ಗೊಗೊಯ್ ನಿವೃತ್ತರಾಗಿದ್ದರು. ಅವರ ಸ್ಥಾನಕ್ಕೆ ಶರದ್ ಅರವಿಂದ್ ಬೊಬ್ಡೆ ನೇಮಕವಾಗಿದ್ದರು.
Flashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳು
ತಮ್ಮ ನಿವೃತ್ತಿಗೂ ಮುನ್ನ ನ್ಯಾ. ರಂಜನ್ ಗೊಗೊಯ್ ಅವರು ಅನೇಕ ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ್ದರು. ಅಯೋಧ್ಯಾ ವಿವಾದ, ರಫೇಲ್ ಹಗರಣ, ಶಬರಿಮಲೆ ದೇವಾಲಯ, ಕರ್ನಾಟಕದ ಅನರ್ಹ ಶಾಸಕರ ಪ್ರಕರಣ ಮುಂತಾದವು 2019ರಲ್ಲಿ ಸುಪ್ರೀಂಕೋರ್ಟ್ ನೀಡಿದ ಮೈಲುಗಲ್ಲಿನ ತೀರ್ಪುಗಳಾಗಿವೆ.
ಅಯೋಧ್ಯಾ ವಿವಾದಕ್ಕೆ ಕೊನೆಗೂ ತೆರೆ
ಶತಮಾನಗಳ ವಿವಾದ ಮತ್ತು ಹಲವು ದಶಕಗಳಿಂದ ಕಾನೂನು ಸಮರಕ್ಕೆ ಒಳಗಾಗಿದ್ದ ಅಯೋಧ್ಯಾದಲ್ಲಿನ ರಾಮ ಜನ್ಮಭೂಮಿ ವಿವಾದದ ಕುರಿತು ಸುಪ್ರೀಂಕೋರ್ಟ್ ನ.9ರಂದು ಅಂತಿಮ ತೀರ್ಪು ಪ್ರಕಟಿಸಿತು. ಈ ಮೂಲಕ ರಾಜಕೀಯ ಸ್ವರೂಪ ಪಡೆದುಕೊಂಡಿದ್ದ ಅಯೋಧ್ಯಾ ವಿವಾದದ ಕಾನೂನು ಹೋರಾಟ ಅಂತ್ಯಗೊಂಡಿತು. ಜತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ದಾರಿ ಸುಗಮವಾಗಿದೆ. ಮಂದಿರ ನಿರ್ಮಾಣದ ಕುರಿತು ನಿರ್ಧಾರ ತೆಗೆದುಕೊಳ್ಳಲು ಮೂರು ತಿಂಗಳ ಒಳಗಾಗಿ ಟ್ರಸ್ಟ್ ಒಂದನ್ನು ರಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಲ್ಲದೆ, ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯವಾಗಿ ಐದು ಎಕರೆ ಭೂಮಿ ನೀಡುವಂತೆ ಆದೇಶಿಸಿತ್ತು. ಇದರ ವಿರುದ್ಧ ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳು ಮರುಪರಿಶೀಲನಾ ಅರ್ಜಿ ಸಲ್ಲಿದ್ದರು. ಆದರೆ ಅವುಗಳನ್ನು ನ್ಯಾಯಾಲಯ ತಿರಸ್ಕರಿಸಿತು.
ರಫೇಲ್ ಒಪ್ಪಂದದಲ್ಲಿ ಕೇಂದ್ರಕ್ಕೆ ಬೆಂಬಲ
ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಯುಪಿಎ ಅವಧಿಯಲ್ಲಿ 126 ರಫೇಲ್ ಜೆಟ್ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯುದ್ಧ ವಿಮಾನಗಳ ಸಂಖ್ಯೆಯಲ್ಲಿ 36ಕ್ಕೆ ಇಳಿಸಲಾಗಿತ್ತು.
ಈ ಒಪ್ಪಂದದಲ್ಲಿ ಎನ್ಡಿಎ ಸರ್ಕಾರವು ಕೆಲವು ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಹೊರಡಿದೆ ಎಂದು ಆರೋಪಿಸಲಾಗಿತ್ತು. 2018ರ ಡಿಸೆಂಬರ್ನಲ್ಲಿ ಈ ಆರೋಪಗಳನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಮೋದಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು. ಈ ತೀರ್ಪಿನ ಪರಾಮರ್ಶನಾ ಅರ್ಜಿಗಳನ್ನು ನ. 14ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತು. ಇದರ ತನಿಖೆಗೆ ಸಮಿತಿ ರಚಿಸಬೇಕು, ಎಫ್ಐಆರ್ ದಾಖಲಿಸಬೇಕು ಎಂಬ ಬೇಡಿಕೆಗಳನ್ನು ಅದು ತಳ್ಳಿ ಹಾಕಿತು.
2019 ಗೂಗಲ್ ಸರ್ಚ್: ವಿಂಗ್ ಕಮ್ಯಾಂಡರ್ ಅಭಿನಂದನ್ ಹೆಚ್ಚು ಹುಡುಕಾಟ
ರಾಹುಲ್ ಗಾಂಧಿ ನ್ಯಾಯಾಂಗ ನಿಂದನೆ
ಸುಪ್ರೀಂಕೋರ್ಟ್, ರಫೇಲ್ ಒಪ್ಪಂದದ ಕುರಿತಾದ ಪ್ರಕರಣದ ವಿಚಾರಣೆ ವೇಳೆ 'ಚೌಕಿದಾರ್ ಚೋರ್ ಹೈ' ಎಂದು ಹೇಳಿದೆ ಎಂಬುದಾಗಿ ಹೇಳಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಬಿಜೆಪಿ ದೂರು ದಾಖಲಿಸಿತ್ತು. ತಾನು ಹಾಗೆ ಹೇಳದೆ ಇದ್ದರೂ, ಸುಪ್ರೀಂಕೋರ್ಟ್ ಹೇಳಿದೆ ಎಂದು ಉಲ್ಲೇಖಿಸಿರುವುದಕ್ಕೆ ಉಚ್ಚ ನ್ಯಾಯಾಲಯವು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿತ್ತು. ತಮ್ಮ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಿದ ಬಳಿಕ ಭವಿಷ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿ ಅವರ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿತು.
ಶಬರಿಮಲೆ ಪರಾಮರ್ಶನ ಅರ್ಜಿ
2018ರ ಸೆ. 28ರಂದು ಸುಪ್ರೀಂಕೋರ್ಟ್, ಎಲ್ಲ ವಯಸ್ಸಿನ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಬಹುದು ಎಂದು ಆದೇಶ ನೀಡಿತ್ತು. ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ 66 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳು ನ.14ರಂದು ಸುಪ್ರೀಂಕೋರ್ಟ್ನ ಐವರು ನ್ಯಾಯಾಧೀಶರನ್ನು ಒಳಗೊಂಡ ಪಂಚ ಸದಸ್ಯ ಪೀಠವು 3:2ರ ಮತದೊಂದಿಗೆ ಏಳು ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.
ಆರ್ಟಿಐ ವ್ಯಾಪ್ತಿಗೆ ಸಿಜೆಐ
ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ಸಾರ್ವಜನಿಕ ಇಲಾಖೆಯಾಗಿದ್ದು, ಅದು ಕೂಡ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಬರುತ್ತದೆ ಎಂದು ನ. 13ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಆದರೆ ಗೋಪ್ಯತಾ ನಿಯಮದಡಿ ನ್ಯಾಯಮೂರ್ತಿಗಳಿಗೆ ರಕ್ಷಣೆ ನೀಡಬೇಕು ಎಂದು ಸಹ ಸುಪ್ರೀಂಕೋರ್ಟ್ ಹೇಳಿತು.
Best of 2019: ಟಿಕ್ ಟಾಕ್ ಟಾಪ್ 10 ಕ್ರೇಜಿ ವಿಡಿಯೋಗಳು
ಕರ್ನಾಟಕ ರಾಜಕೀಯ ನಾಟಕ
ರಾಜ್ಯದಲ್ಲಿ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದ 17 ಶಾಸಕರನ್ನು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಇದನ್ನು ಶಾಸಕರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಇದರ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ನ. 13ರಂದು ತೀರ್ಪು ನೀಡಿತ್ತು. ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್, ಅವರಿಗೆ ಡಿಸೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು.
ಆರೋಪ ಹೊತ್ತಿದ್ದ ಸಿಜೆಐ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ಅವರ ವಿರುದ್ಧ ಸುಪ್ರೀಂಕೋರ್ಟ್ನ ಮಾಜಿ ಉದ್ಯೋಗಿಯೊಬ್ಬರು ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಭಾರಿ ಸದ್ದು ಮಾಡಿತ್ತು. ನ್ಯಾ. ರಂಜನ್ ಗೊಗೊಯ್ ಅವರು ತಮ್ಮ ಬಳಿ ಲೈಂಗಿಕ ಸುಖದ ಬಯಕೆ ವ್ಯಕ್ತಪಡಿಸಿದ್ದರು. ಅದಕ್ಕೆ ನಿರಾಕರಿಸಿದ್ದರಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಆಂತರಿಕ ತನಿಖೆ ನಡೆದು, ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.