Flashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳು
2019 ಮುಗಿಯುತ್ತಾ ಬಂದಿದೆ. ಹೊಸ ಕನಸು, ಹೊಸ ನಿರೀಕ್ಷೆಗಳ ಜೊತೆ 2020 ಅನ್ನು ಸ್ವಾಗತಿಸಬೇಕು. ಹೊಸ ವರ್ಷದ ಆರಂಭದಲ್ಲಿ ಈ ವರ್ಷ ಎಲ್ಲಾ ಒಳ್ಳೆಯದು ಆಗಲಿ ಎಂದು ಅಂದುಕೊಳ್ಳುತ್ತೇವೆ. ಅಂದು ಕೊಂಡಂತೆ ಎಲ್ಲವೂ ನಡೆಯುವುದಿಲ್ಲ ಎಂಬುದು ಬೇರೆ ಮಾತು.
ಕಳೆದ ವರ್ಷದತ್ತ ಒಮ್ಮೆ ತಿರುಗಿ ನೋಡಿದರೆ ಹಲವು ಘಟನಾವಳಿಗಳು ಕಣ್ಣ ಮುಂದೆ ಬರುತ್ತವೆ. ಇವುಗಳಲ್ಲಿ ಒಳ್ಳೆಯ ವಿಚಾರಗಳು ಇವೆ. ಜನರ ಮನಸ್ಸಿನಲ್ಲಿ ಎಂದಿಗೂ ಅಳಿಸಿ ಹೋಗದಂತೆ ಪ್ರಭಾವ ಬೀರಿದ ಕೆಟ್ಟ ಘಟನೆಗಳು ಇವೆ.
2019 ಗೂಗಲ್ ಸರ್ಚ್: ವಿಂಗ್ ಕಮ್ಯಾಂಡರ್ ಅಭಿನಂದನ್ ಹೆಚ್ಚು ಹುಡುಕಾಟ
ದೇಶದಲ್ಲಿ 2019ರಲ್ಲಿ ಹಲವಾರು ಕಹಿ ಘಟನೆಗಳು ನಡೆದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ಯಾರೂ ಮರೆಯುವಂತಿಲ್ಲ. ಈ ವರ್ಷ ಮಳೆ ದೇಶದ ಹಲವು ರಾಜ್ಯಗಳ ಜನರನ್ನು ಇನ್ನಿಲ್ಲದಂತೆ ಕಾಡಿತ್ತು.
ದೇಶದ ಜನರಲ್ಲಿ ಆತಂಕ ಮೂಡಿಸಿದ ಈ ವರ್ಷದ ಘಟನೆಗಳ ಸಂಕ್ಷಿಪ್ತ ನೋಟ ಇಲ್ಲಿದೆ. ಹೈದರಾಬಾದ್ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರದಂತಹ ಘಟನೆಗಳು ದೇಶದಲ್ಲಿ ಆಕ್ರೋಶದ ಕಿಚ್ಚನ್ನು ಹೊತ್ತಿಸಿದ್ದವು.
* ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯ ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ಉಗ್ರರು ಆತ್ಮಾಹುತಿ ದಾಳಿ ಮಾಡಿದರು. 40ಕ್ಕೂ ಯೋಧರಿದ್ದ ಬಸ್ಗೆ ಸ್ಫೋಟಕ ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಲಾಗಿತ್ತು. ಈ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿತು, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುವಂತೆ ಮಾಡಿತು.
Best of 2019: ಟಿಕ್ ಟಾಕ್ ಟಾಪ್ 10 ಕ್ರೇಜಿ ವಿಡಿಯೋಗಳು
* ಫೆಬ್ರವರಿ ಅಂತ್ಯದಲ್ಲಿ ಭಾರತೀಯ ವಾಯುಪಡೆ ಪೈಲೆಟ್ ಅಭಿನಂದನ್ ವರ್ಥಮಾನ್ ಪಾಕಿಸ್ತಾನ ಸೇನೆಯ ಕೈಗೆ ಸಿಕ್ಕಿ ಬಿದ್ದರು. ಪಾಕಿಸ್ತಾನ ಪ್ರವೇಶಿಸಿದ್ದ ಮಿಗ್ 21 ಯುದ್ಧ ವಿಮಾನ ಹೊಡೆದು ಉರುಳಿಸಿದ ಪಾಕ್ ಪೈಲೆಟ್ ವಶಕ್ಕೆ ಪಡೆದುಕೊಂಡಿತು. ಅಭಿನಂದನ್ ಸುರಕ್ಷಿತವಾಗಿ ಮರಳಿ ಬರಲಿ ಎಂದು ದೇಶದ ಜನರು ಪ್ರಾರ್ಥನೆ ಮಾಡಿದರು.
* ಮೇ 24ರಂದು ಗುಜರಾತ್ ರಾಜ್ಯದ ವಾಣಿಜ್ಯ ಸಂಕೀರ್ಣವೊಂದರಲ್ಲಿ ಅಗ್ನಿ ದುರಂತ ಸಂಭವಿಸಿತು. ಸಂಕೀರ್ಣದ 3ನೇ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ನಿಂದ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಕೆಳಗೆ ಜಿಗಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಈ ಅಗ್ನಿ ದುರಂತದಲ್ಲಿ 15ವ ವಿದ್ಯಾರ್ಥಿಗಳು ಮೃತಪಟ್ಟರು.
* ಆಗಸ್ಟ್ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತಿದೆ? ಎಂದು ದೇಶದ ಜನರು ಆತಂಕಗೊಂಡರು. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿ ಹಾಗೂ 35 (ಎ) ರದ್ದುಗೊಳಿಸಿತು. ಇದಕ್ಕೂ ಮೊದಲು ಕಾಶ್ಮೀರದಲ್ಲಿ ಭಾರಿ ಸಂಖ್ಯೆಯಲ್ಲಿ ಸೇನಾ ಜಮಾವಣೆ ಮಾಡಲಾಯಿತು. ರಾಜ್ಯದಲ್ಲಿ ಇಂಟರ್ ನೆಟ್ ಸಂಪರ್ಕ ಸ್ಥಗಿತಗೊಳಿಸಲಾಯಿತು. ಇಡೀ ರಾಜ್ಯವನ್ನು ಸೇನಾಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದವು.
* ಸೆಪ್ಟೆಂಬರ್ 7ರಂದು ಇಡೀ ವಿಶ್ವವೇ ಭಾರತದತ್ತ ಗಮನವಿಟ್ಟಿತ್ತು. ಇಸ್ರೋದ ಮಹತ್ವದ ಚಂದ್ರಯಾನ 2 ಯೋಜನೆ ಅಂದು ವಿಫಲವಾಯಿತು. ಮುಂಜಾನೆ 1.55ಕ್ಕೆ ಚಂದ್ರನ ದಕ್ಷಿಣ ಭಾಗದ ಮೇಲೆ ಇಳಿಯುವ ಕೊನೆ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಇಸ್ರೋ ಕಚೇರಿಯಲ್ಲಿ ಕುಳಿತು ಚಂದ್ರಯಾನವನ್ನು ವೀಕ್ಷಣೆ ಮಾಡುತ್ತಿದ್ದರು. ಇಸ್ರೋ ಅಧ್ಯಕ್ಷ ಕೆ. ಶಿವನ್ 2.17ಕ್ಕೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
* ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದರು. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಯಿತು. ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದರು. ಮುಂಗಾರು ಋತುವಿನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ 10ರಷ್ಟು ಮಳೆ ಸುರಿಯಿತು. ರೈತರು ಬೆಳೆಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿದರು.
* ಮುಂಗಾರು ಮಳೆಯಿಂದಾಗಿ ಕಂಗೆಟ್ಟಿದ್ದ ಜನರು ಅಕ್ಟೋಬರ್ ತಿಂಗಳಿನಲ್ಲಿ ಕ್ಯಾರ್ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಮತ್ತಷ್ಟು ಸಂಕಷ್ಟ ಅನುಭವಿಸಿದರು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರೂಪಗೊಂಡ ಚಂಡಮಾರುತಕ್ಕೆ ಕ್ಯಾರ್ ಎಂದು ನಾಮಕರಣ ಮಾಡಲಾಯಿತು. 12 ವರ್ಷಗಳಲ್ಲೇ ಅತ್ಯಂತ ಪ್ರಬಲ ಚಂಡಮಾರುತ ಎಂಬ ಕುಖ್ಯಾತಿಗೆ ಕ್ಯಾರ್ ಪಾತ್ರವಾಯಿತು. ದೇಶದ ವಿವಿಧ ಭಾಗಗಳಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆ ಆಯಿತು.
* ನವೆಂಬರ್ 27ರಂದು ನಾಲ್ವರು ಹೈದರಾಬಾದ್ ಹೊರವಲಯದಲ್ಲಿ 27 ವರ್ಷದ ಪಶುವೈದ್ಯೆಯನ್ನು ಅಪಹಣರಣ ಮಾಡಿದರು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪೆಟ್ರೋಲ್ ಹಾಕಿ ಜೀವಂತ ಸುಟ್ಟು ಹಾಕಿದರು. ನವೆಂಬರ್ 28ರಂದು ಘಟನೆ ಬೆಳಕಿಗೆ ಬಂದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತು. ಅತ್ಯಾಚಾರ ಮತ್ತು ಕೊಲೆ ಮಾಡಿದ್ದ ನಾಲ್ವರು ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟರು.
* ಡಿಸೆಂಬರ್ 5ರಂದು ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಮೇಲೆ ಐವರು ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಶೇ 90ರಷ್ಟು ಸುಟ್ಟಗಾಯಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಎರಡು ದಿನಗಳ ಬಳಿಕ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
* ಡಿಸೆಂಬರ್ 8ರಂದು ನವದೆಹಲಿಯ ಝಾನ್ಸಿ ರಸ್ತೆಯ ಕಾರ್ಖನೆಯೊಂದಲ್ಲಿ ಅಗ್ನಿ ದುರಂತ ನಡೆಯಿತು. 43 ಜನರು ಇದರಲ್ಲಿ ಸಾವನ್ನಪ್ಪಿದರು. ಸುಮಾರು 30 ಅಗ್ನಿಶಾಮಕ ವಾಹನಗಳು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದವು.