2018ರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳು
Recommended Video
ಬೆಂಗಳೂರು, ಡಿಸೆಂಬರ್ 17 : 2018ನೇ ವರ್ಷಕ್ಕೆ ವಿದಾಯ ಹೇಳಲು ದಿನಗಣನೆ ಆರಂಭವಾಗಿದೆ. ಕರ್ನಾಟಕದ ರಾಜಕೀಯದ ಈ ವರ್ಷ ರೋಚಕ ತಿರುವುಗಳನ್ನು ಪಡೆದುಕೊಂಡು ದೇಶವೇ ತಿರುಗಿ ನೋಡುವಂತೆ ಮಾಡಿತು.
ಕರ್ನಾಟಕದ ಪಾಲಿಗೆ 2018 ಚುನಾವಣಾ ವರ್ಷ. ಹೌದು...ಇಡೀ ದೇಶವೇ ಕರ್ನಾಟಕ ವಿಧಾಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿತ್ತು. ಅತಂತ್ರ ಫಲಿತಾಂಶ ಬಂದು, ನಿರೀಕ್ಷೆ ಮಾಡದ ಬೆಳವಣಿಗೆಗಳಿಗೆ ರಾಜ್ಯ ರಾಜಕೀಯ ಸಾಕ್ಷಿ ಆಯಿತು.
ಹೊಸ ಮೈಲಿಗಲ್ಲು ನಿರ್ಮಿಸಿದ 2018 ರ ಸುಪ್ರೀಂ ಐತಿಹಾಸಿಕ ತೀರ್ಪುಗಳು
ಒಮ್ಮೆ ಸರ್ಕಾರ ರಚನೆಯಾಗಿ, ಬಹುಮತ ಕಳೆದುಕೊಂಡು ಅದು ಪತನಗೊಂಡಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದವು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಕರ್ನಾಟಕದ ನೆಲದಲ್ಲಿಯೇ ವೇದಿಕೆ ಸಿದ್ಧವಾಯಿತು.
2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು
ಕರ್ನಾಟಕದಲ್ಲಿ 2018ರಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ಹೊಸ ವರ್ಷವನ್ನು ಸ್ವಾಗತಿಸುತ್ತಿರುವ ಸಂದರ್ಭದಲ್ಲಿ ಹಿಂದಿನ ವರ್ಷದಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಬಗ್ಗೆ ಒಮ್ಮೆ ಗಮನ ಹರಿಸೋಣ....
ಗೂಗಲ್ ಟಾಪ್ ಸರ್ಚ್: ಫೀಫಾ ವಿಶ್ವಕಪ್, ಪ್ರಿಯಾ ವಾರಿಯರ್ ಗೆ ಅಗ್ರಸ್ಥಾನ
ಕರ್ನಾಟಕ ಬಜೆಟ್ 2018-19
2018ರ ಫೆಬ್ರವರಿ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2,09,181 ಕೋಟಿ ವೆಚ್ಚದ 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಈ ಮೂಲಕ 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ದಾಖಲೆ ನಿರ್ಮಿಸಿದರು. ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ನಲ್ಲಿ ಹಲವು ಘೋಷಣೆಗಳನ್ನು ಮಾಡಿದರು.
ವಿಧಾನಸಭೆ ಚುನಾವಣೆ ಘೋಷಣೆ
ಕೇಂದ್ರ ಚುನಾವಣಾ ಆಯೋಗ ಮಾರ್ಚ್ 27ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆ ಮಾಡಿತು. 224 ಕ್ಷೇತ್ರಗಳಿಗೆ ಮೇ 12ರಂದು ಚುನಾವಣೆ, ಮೇ 15ರಂದು ಫಲಿತಾಂಶ ಪ್ರಕಟಿಸುವುದಾಗಿ ದಿನಾಂಕ ಘೋಷಣೆ ಮಾಡಲಾಯಿತು. ಆದರೆ, ಮೇ 12ರಂದು 222 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಿತು. ಬೆಂಗಳೂರಿನ ಜಯನಗರ, ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾನದ ದಿನಾಂಕವನ್ನು ಬದಲಾವಣೆ ಮಾಡಲಾಯಿತು.
ಬಿ.ಎನ್.ವಿಜಯ್ ಕುಮಾರ್ ವಿಧಿವಶ
ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಎನ್.ವಿಜಯ್ ಕುಮಾರ್ (60) ಅವರು ಹೃದಯಾಘಾತದಿಂದ ಮೇ 4ರಂದು ವಿಧಿವಶರಾದರು. 2018ರ ಚುನಾವಣೆಗೂ ಅವರೇ ಅಭ್ಯರ್ಥಿಯಾಗಿದ್ದರು. ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಮೃತಪಟ್ಟ ಹಿನ್ನಲೆಯಲ್ಲಿ ಜಯನಗರ ಚುನಾವಣೆಯನ್ನು ಜೂನ್ 11ಕ್ಕೆ ಮುಂದೂಡಲಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್ನ ಸೌಮ್ಯಾ ರೆಡ್ಡಿ ಅವರು ಜಯಗಳಿಸಿದರು.
ನಕಲಿ ಮತದಾರರ ಚೀಟಿ ಪತ್ತೆ
ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಕಾವು ಏರಿತ್ತು. ಮೇ 9ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮನೆಯಲ್ಲಿ 20 ಸಾವಿರಕ್ಕೂ ಅಧಿಕ ಮತದಾರರ ಚೀಟಿಗಳು ಪತ್ತೆಯಾದವು. ಜಾಲಹಳ್ಳಿಯ ಎಸ್ಎಲ್ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಯಿತು. ಈ ಪ್ರಕರಣದ ಹಿನ್ನಲೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್ನ ಮುನಿರತ್ನ ಅವರು ಆಯ್ಕೆಯಾಗಿದ್ದಾರೆ.
ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆ
ಮೇ 12ರಂದು ಕರ್ನಾಟಕ ವಿಧಾನಸಭೆಯ 222 ಕ್ಷೇತ್ರಗಳಿಗೆ ಮತದಾನ ನಡೆಯಿತು. ಮೇ 15ರಂದು ಫಲಿತಾಂಶ ಪ್ರಕಟಗೊಂಡಿತು. ಬಿಜೆಪಿ 104, ಕಾಂಗ್ರೆಸ್ 76, ಜೆಡಿಎಸ್ 37 ಸ್ಥಾನಗಳಲ್ಲಿ ಜಯಗಳಿಸಿದವು. 4 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದರು. ರಾಮನಗರ, ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಜಯಗಳಿಸಿದರು. ಬಳಿಕ ಅವರು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ರಾಮನಗರ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ಕರ್ನಾಟಕ ವಿಧಾಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತು. 104 ಸ್ಥಾನಗಳನ್ನು ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರ್ಕಾರ ರಚನೆ ಮಾಡಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಅತ್ತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದವು. ಹಲವು ಸುತ್ತಿನ ಹಗ್ಗ ಜಗ್ಗಾಟದ ಬಳಿಕ ರಾಜ್ಯಪಾಲರು ಬಿಜೆಪಿಗೆ ಮೊದಲು ಅವಕಾಶ ನೀಡಿದರು.
ಯಡಿಯೂರಪ್ಪ ಪ್ರಮಾಣ ವಚನ
ಬಹುಮತವಿಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಅವರು ಮೇ 17, 2018ರಂದು ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 15 ದಿನದಲ್ಲಿ ಬಹುಮತ ಸಾಬೀತು ಮಾಡಲು ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದರು. ಯಾವುದೇ ಸಚಿವರು ಸಹ ಯಡಿಯೂರಪ್ಪ ಅವರ ಜೊತೆ ಪ್ರಮಾಣ ವಚನ ಸ್ವೀಕಾರ ಮಾಡಲಿಲ್ಲ.
ಸುಪ್ರೀಂಕೋರ್ಟ್ಗೆ ಅರ್ಜಿ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ತಮ್ಮ ಬಳಿ ಬಹುಮತವಿದೆ ಆದರೆ, ರಾಜ್ಯಪಾಲರು ಬಹುಮತವಿಲ್ಲದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದರು. 16/5/2018ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭಕ್ಕೆ ತಡೆ ನೀಡಲು ನಿರಾಕರಿಸಿತು. ಆದರೆ, ಮೇ 19ರಂದು ಅವರು ಬಹುಮತ ಸಾಬೀತು ಮಾಡಬೇಕು ಎಂದು ಸೂಚನೆ ನೀಡಿತು.
ಯಡಿಯೂರಪ್ಪ ಸರ್ಕಾರ ಪತನ
ಮೇ 19ರಂದು ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಬೇಕಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರೆಸಾರ್ಟ್ ರಾಜಕೀಯ ಮಾಡಿ, ಯಾವುದೇ ಶಾಸಕರು ಬಿಜೆಪಿಗೆ ಹೋಗದಂತೆ ತಡೆದರು. ವಿಧಾನಸಭೆಯಲ್ಲಿ ಸೋಲಾಗುವ ಸುಳಿವು ಅರಿತ ಯಡಿಯೂರಪ್ಪ ವಿಶ್ವಾಸ ಮತವನ್ನು ಕೋರದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ
ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಒಪ್ಪಿಗೆ ನೀಡಿದರು. ಮೇ 23, 2018ರಂದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ, ಡಾ.ಜಿ.ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು.
ವಿಶ್ವಾಸ ಮತ ಸಾಬೀತು
ಮೇ 25ರಂದು ವಿಧಾನಸಭೆ ಸ್ಪೀಕರ್ ಆಯ್ಕೆ ನಡೆಯಿತು. ಬಿಜೆಪಿಯ ಸುರೇಶ್ ಕುಮಾರ್ ನಾಮಪತ್ರವನ್ನು ವಾಪಸ್ ಪಡೆದಿದ್ದರಿಂದ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಸ್ಪೀಕರ್ ಆಯ್ಕೆ ನಡೆದ ಕೂಡಲೇ ವಿಶ್ವಾಸಮತ ಯಾಚನೆ ನಡೆಯಿತು. ಧ್ವನಿ ಮತದ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬಹುಮತವಿದೆ ಎಂದು ವಿಧಾಸಭೆಯಲ್ಲಿ ಘೋಷಣೆ ಮಾಡಲಾಯಿತು.
ಶಾಸಕ ಸಿದ್ದು ನ್ಯಾಮಗೌಡ ನಿಧನ
ಮೇ 28ರಂದು ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ದೆಹಲಿಯಿಂದ ಸ್ವ ಕ್ಷೇತ್ರ ಜಮಖಂಡಿಗೆ ಬರುವಾಗ ಕಾರಿನ ಟೈರ್ ಸ್ಫೋಟಗೊಂಡು ನಡೆದ ಅಪಘಾತದಲ್ಲಿ ಅವರು ನಿಧನರಾದರು. ಜಮಖಂಡಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮಂತ್ರಿ ಮಂಡಲ ರಚನೆ
6/6/2018ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆ ಮಾಡಿದರು. ಕಾಂಗ್ರೆಸ್ನಿಂದ 15, ಜೆಡಿಎಸ್ನ 8, ಕೆಪಿಜೆಪಿ ಮತ್ತು ಬಿಎಸ್ಪಿಯ ಒಬ್ಬರು ಶಾಸಕರು ಸಂಪುಟವನ್ನು ಸೇರಿದರು.
ಬಜೆಟ್ ಮಂಡನೆ
ಮುಖ್ಯಮಂತ್ರಿ, ಹಣಕಾಸು ಸಚಿವರು ಆದ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 5ರಂದು 2,18,488 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದರು. ಮೈತ್ರಿ ಸರ್ಕಾರದ ಮೊದಲ ಬಜೆಟ್ ಇದಾಗಿತ್ತು. ಬಜೆಟ್ನಲ್ಲಿ ಎಲ್ಲಾ ಜಿಲ್ಲೆಗಳಿಗೂ ಆದ್ಯತೆ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬಂದವು.
ವಿಧಾಸಸಭೆ ಉಪ ಚುನಾವಣೆ
ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ರಾಮನಗರ, ಸಿದ್ದು ನ್ಯಾಮಗೌಡ ಅವರು ವಿಧಿವಶರಾಗಿದ್ದರಿಂದ ತೆರವಾದ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಿತು. ನವೆಂಬರ್ 6ರಂದು ಫಲಿತಾಂಶ ಪ್ರಕಟವಾಯಿತು. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಜಮಖಂಡಿಯಲ್ಲಿ ಆನಂದ್ ನ್ಯಾಮಗೌಡ ಅವರು ಜಯಗಳಿಸಿದರು.
ಲೋಕಸಭಾ ಉಪ ಚುನಾವಣೆ
ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಯಡಿಯೂರಪ್ಪ (ಶಿವಮೊಗ್ಗ), ಬಿ.ಶ್ರೀರಾಮುಲು (ಬಳ್ಳಾರಿ), ಸಿ.ಎಸ್.ಪುಟ್ಟರಾಜು (ಮಂಡ್ಯ) ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಆದ್ದರಿಂದ, ನವೆಂಬರ್ 3ರಂದು ಉಪ ಚುನಾವಣೆ ನಡೆಯಿತು. ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ, ಬಳ್ಳಾರಿಯಲ್ಲಿ ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ, ಮಂಡ್ಯದಲ್ಲಿ ಜೆಡಿಎಸ್ನ ಎಲ್.ಆರ್.ಶಿವರಾಮೇಗೌಡ ಅವರು ಗೆಲುವು ಸಾಧಿಸಿದರು.