ಪಂಜಾಬ್ನಲ್ಲಿ ಇವಿಎಂ 'ನಮ್ಮವ', ಯುಪಿಯಲ್ಲಿ 'ಇವನಾರವ'!
ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಕೆಲವು ವಾಹಿನಿಗಳು ನೀಡಿದ ಫಲಿತಾಂಶ ಬಹುತೇಕ ಹತ್ತಿರವಾಗುತ್ತಿದೆ. ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದತ್ತ ದಾಪುಗಾಲು ಹಾಕುತ್ತಿದೆ. ಬಹು ನಿರೀಕ್ಷಿತ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದೆ.
ಇವಿಎಂ/ವಿವಿಪ್ಯಾಟ್ ಮೂಲಕ ನಡೆಯುವ ಚುನಾವಣಾ ಪದ್ದತಿಗೆ ವಿರೋಧ ಪಕ್ಷಗಳು ವಿರೋಧಿಸುತ್ತಲೇ ಬರುತ್ತಿವೆ. ಯಾವಾಗ ಬಿಜೆಪಿ ಗೆಲುವನ್ನು ಸಾಧಿಸುತ್ತೋ ಆವಾಗೆಲ್ಲಾ ಇವಿಎಂ ಮತ್ತು ಚುನಾವಣಾ ಆಯೋಗದ ಮೇಲೆ ಮುಗಿಬೀಳುತ್ತಾರೆ.
ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಪದ್ದತಿಯನ್ನು ಹಿಂದೆಯೂ ಒಮ್ಮೆ ಜಾರಿಗೆ ತಂದಿದ್ದರೂ, ಅಧಿಕೃತವಾಗಿ 1998ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ಆಯ್ದ 25 ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಯೋಗಿಸಲಾಯಿತು.
1999ರಲ್ಲಿ ಆಯ್ದ 45 ಲೋಕಸಭಾ ಕ್ಷೇತ್ರದಲ್ಲಿ ಇವಿಎಂ ಮೂಲಕ ಮತದಾನ ನಡೆಯಿತು. 2001ರಲ್ಲಿ ತಮಿಳುನಾಡು, ಕೇರಳ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಇವಿಎಂ ಬಳಸಲಾಯಿತು. ಅಲ್ಲಿಗೆ, ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಚುನಾವಣೆ ಇತಿಹಾಸದ ಪುಟಕ್ಕೆ ಸೇರಿತ್ತು. ಇಂತಿಷ್ಟು ಇವಿಎಂ ಮೇಲಿನ ಅತಿ ಸಂಕ್ಷಿಪ್ತ ವರದಿ. ಈ ಇವಿಎಂ ಮೇಲೆ, ಫಲಿತಾಂಶಾಧಾರಿತವಾಗಿ ರಾಜಕೀಯ ಪಕ್ಷಗಳಿಗೆ ಅನುಮಾನ ಹುಟ್ಟುತ್ತದೆ.
|
ಹಸ್ತಿನಾಪುರ ಕ್ಷೇತ್ರದ ಎಸ್ಪಿ ಅಭ್ಯರ್ಥಿ ಯೋಗೇಶ್ ಶರ್ಮಾ
ಈಗ, ಚುನಾವಣಾ ಫಲಿತಾಂಶಕ್ಕು ಮುನ್ನವೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಇವಿಎಂ ಮೇಲೆ ಸಂಶಯ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿಯವರು ಪ್ರತಿನಿಧಿಸುವ ವಾರಣಾಸಿಯಲ್ಲಿ ಟೆಂಪೋದಲ್ಲಿ ಇವಿಎಂ ಸಾಗಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ಟ್ವೀಟ್ ಮಾಡಿರುವ ಅಖಿಲೇಶ್, ಚುನಾವಣಾ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಇನ್ನು, ಮೀರಠ್ ಜಿಲ್ಲಾ ವ್ಯಾಪ್ತಿಯ ಹಸ್ತಿನಾಪುರ ಕ್ಷೇತ್ರದ ಎಸ್ಪಿ ಅಭ್ಯರ್ಥಿ ಯೋಗೇಶ್ ಶರ್ಮಾ, ಬೈನಾಕ್ಯುಲರ್ ಮೂಲಕ ಇವಿಎಂ ಸ್ಟ್ರಾಂಗ್ ರೂಂ ಅವಲೋಕಿಸುವ ದೃಶ್ಯವೂ ವೈರಲ್ ಆಗಿದೆ.
ಚುನಾವಣಾ ಆಯೋಗ ಇವಿಎಂ ಟ್ಯಾಂಪರ್ ಸಾಧ್ಯವಿಲ್ಲ ಎಂದು ತೋರಿಸಿತ್ತು
ಎಕ್ಸಿಟ್ ಪೋಲ್ ಫಲಿತಾಂಶ ನೋಡಿ ಅಖಿಲೇಶ್ ಯಾದವ್ ಇವಿಎಂ ಮೂಲೆ ಗೂಬೆ ಕೂರಿಸಲು ಆರಂಭಿಸಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡುತ್ತಿದೆ. ಇವಿಎಂ ಅನ್ನು ಹೇಗೆ ತಿರುಚಬಹುದು ಎಂದು ಅಣಕು ದೃಶ್ಯದ ಮೂಲಕ ಆಮ್ ಆದ್ಮಿ ಪಕ್ಷ ದೇಶವನ್ನು ನಂಬಿಸುವ ಪ್ರಯತ್ನವನ್ನು ಮಾಡಿತ್ತು. ಅದಕ್ಕೆ ಅಷ್ಟೇ ಕ್ರಮಬದ್ದವಾಗಿ ಚುನಾವಣಾ ಆಯೋಗ ಇವಿಎಂ ಟ್ಯಾಂಪರ್ ಸಾಧ್ಯವಿಲ್ಲ ಎಂದು ತೋರಿಸಿತ್ತು. ಈಗ, ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ. ಹಿಂದೆ ಇವಿಎಂ ಅನ್ನು ಅನುಮಾನದಿಂದ ಅವಮಾನಿಸಿದ್ದ ಕೇಜ್ರಿವಾಲ್ ಪಕ್ಷ ಈಗ ಪಂಜಾಬ್ ಚುನಾವಣಾ ಪ್ರಕ್ರಿಯೆಯನ್ನು ದೂರುತ್ತಾ ಎನ್ನುವ ಪ್ರಶ್ನೆ ಎದುರಾಗದೇ ಇರದು.
ಭಾರೀ ಕುತೂಹಲವನ್ನು ಮೂಡಿಸಿದ್ದ ಪಶ್ಚಿಮ ಬಂಗಾಳ ಚುನಾವಣೆ
ಉತ್ತರ ಪ್ರದೇಶದಂತೆ ದೇಶಾದ್ಯಂತ ಭಾರೀ ಕುತೂಹಲವನ್ನು ಮೂಡಿಸಿದ್ದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಕೆಲವೊಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯವನ್ನು ನುಡಿದಿದ್ದವು. ಆದರೆ, ಬಿಜೆಪಿ ನೂರರ ಗಡಿಯನ್ನು ದಾಟಲಿಲ್ಲ. ದಶಕಗಳ ಕಾಲ ರಾಜ್ಯವನ್ನು ಆಳಿದ್ದ ಎಡಪಕ್ಷಗಳು ಹೇಳ ಹೆಸರಿಲ್ಲದಂತೇ ನಿರ್ನಾಮವಾಗಿದ್ದವು, ಕಾಂಗ್ರೆಸ್ ಕಥೆ ಕೂಡಾ ಅದೇ ಆಗಿತ್ತು. ಆಗ, ಯಾವ ಪಕ್ಷಗಳೂ ಇವಿಎಂ ಅನ್ನು ದೂರಿರಲಿಲ್ಲ.
ವಿರೋಧ ಪಕ್ಷದವರಿಗೆ ಬಿಜೆಪಿ ಸೋತಾಗ ಇವಿಎಂ ಸರಿಯಿದೆ
ಇನ್ನು, ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡಿರಲಿಲ್ಲ, ತಮಿಳುನಾಡಿನಲ್ಲೂ ಕೇವಲ ನಾಲ್ಕು ಸ್ಥಾನವನ್ನು ಗೆಲ್ಲಲು ಮಾತ್ರ ಸಾಧ್ಯವಾಯಿತು. ಅಲ್ಲಿ, ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ ಮತ್ತು ಮೋದಿ/ಅಮಿತ್ ಶಾ ಮಾತಿಗೆ ಗೆರೆದಾಟದ ಎಐಎಡಿಎಂಕೆ 66ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಆಗಲೂ, ಯಾರಿಂದಲೂ ಇವಿಎಂ ಟ್ಯಾಂಪರ್ ಬಗ್ಗೆ ತಕರಾರು ಎದ್ದಿರಲಿಲ್ಲ. ಹಾಗಾಗಿ, ಬಿಜೆಪಿ ಬೆಂಬಲಿಗರು ಆಡುಭಾಷೆಯಲ್ಲಿ ಹೇಳುವ ಹಾಗೇ, ವಿರೋಧ ಪಕ್ಷದವರಿಗೆ ಬಿಜೆಪಿ ಸೋತಾಗ ಇವಿಎಂ ಸರಿಯಿದೆ, ಗೆದ್ದಾಗ ಸರಿಯಿಲ್ಲ ಎಂದು.
ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?
ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.
Recommended Video