ಮಹಾಮಾರಿ ಕೋವಿಡ್ 'ಗೆದ್ದ' ಕರ್ನಾಟಕದ ಮೊದಲ ಜಿಲ್ಲೆ
ದೇಶದಲ್ಲಿ ಒಟ್ಟಾರೆಯಾಗಿ ಕೊರೊನಾ ಹೊಸ ಪ್ರಕರಣಗಳು ಏರಿಳಿಕೆಯಾಗುತ್ತಿದೆ. ದೇಶದಲ್ಲಿ ದಾಖಲಾಗುವ ಹೊಸ ಪ್ರಕರಣಗಳಲ್ಲಿ ಶೇ. 68ರಷ್ಟು ಪಾಲು ಪಕ್ಕದ ಕೇರಳ ರಾಜ್ಯದ್ದು. ಸೆಪ್ಟಂಬರ್ ಎರಡರಂದೂ ದೇಶದಲ್ಲಿ 47 ಸಾವಿರ ಪ್ರಕರಣಗಳು ದಾಖಲಾಗಿವೆ, ಇದರಲ್ಲಿ ಕೇರಳವೊಂದರಿಂದಲೇ 32ಸಾವಿರ ಕೇಸುಗಳು.
ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಗುರುವಾರ (ಸೆ 2) 1,240 ಹೊಸ ಪ್ರಕರಣ ದಾಖಲಾಗಿದ್ದರೆ, ಬಿಡುಗಡೆಯಾದವರ ಸಂಖ್ಯೆ 1,252. ಹಾಗಾಗಿ, ಒಟ್ಟಾರೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 18,378ಕ್ಕೆ ಇಳಿದಿದೆ. ಇನ್ನು, ಗಣೇಶ ಹಬ್ಬದ ನಂತರ, ರಾಜ್ಯದಲ್ಲಿನ ಪರಿಸ್ಥಿತಿ ಹೇಗಿರಲಿದೆ ಎನ್ನುವುದು ಎಚ್ಚರಿಕೆಯಿಂದ ಇರಬೇಕಾದ ವಿಚಾರ.
ಕರ್ನಾಟಕ; ಲಸಿಕೆ ನೀಡುವುದರಲ್ಲಿ ಹಿಂದೆ ಬಿದ್ದ 9 ಜಿಲ್ಲೆಗಳು
ವಾರಾಂತ್ಯದ ಕರ್ಫ್ಯೂವನ್ನು ಹಲವು ಜಿಲ್ಲೆಗಳಲ್ಲಿ ಸಡಿಲಿಸಲಾಗಿದೆ. ಆದರೆ, ಹೊಸ ಪ್ರಕರಣಗಳು ಮತ್ತು ಪಾಸಿಟಿವಿಟಿ ರೇಟ್ ಇನ್ನೂ ಹತೋಟಿಗೆ ಬರಬೇಕಾಗಿರುವುದರಿಂದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂವನ್ನು ವಿಧಿಸಲಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆಯ ಗುರುವಾರದ ಬುಲೆಟಿನ್ ಪ್ರಕಾರ, ರಾಜ್ಯದ ಗಡಿ ಭಾಗದ ಒಂದು ಜಿಲ್ಲೆಯಲ್ಲಿ ಒಂದೇ ಒಂದು ಸಕ್ರಿಯ ಪ್ರಕರಣವಿಲ್ಲ. ಆ ಮೂಲಕ, ಸುಮಾರು ಹದಿನಾರು ತಿಂಗಳ ಕೋವಿಡ್ ಮಹಾಮಾರಿಯಿಂದ ಆ ಜಿಲ್ಲೆ ಮುಕ್ತವಾಗಿದೆ.
ಭಾರತದಲ್ಲಿ ಒಂದೇ ದಿನ 64 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆ
ರಾಜ್ಯದ 19 ಜಿಲ್ಲೆಗಳಲ್ಲಿ ಗುರುವಾರದಂದು ಒಂದೇ ಒಂದು ಸಾವು ವರದಿಯಾಗದಿರುವುದು
ಹೆಲ್ತ್ ಬುಲೆಟಿನ್ ಪ್ರಕಾರ ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ರಾಜ್ಯದ ಹತ್ತೊಂಬತ್ತು ಜಿಲ್ಲೆಗಳಲ್ಲಿ ಗುರುವಾರದಂದು ಒಂದೇ ಒಂದು ಸಾವು ವರದಿಯಾಗದೇ ಇರುವುದು. ಇನ್ನು, ಬೀದರ್, ಹಾವೇರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಸೊನ್ನೆ ಎನ್ನುವುದು ನೆಮ್ಮದಿ ಪಡುವಂತಹ ವಿಚಾರ. ಇನ್ನು, ಹತ್ತು ಜಿಲ್ಲೆಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಎರಡಂಕಿ ದಾಟದಿರುವುದು ನಿಟ್ಟುಸಿರು ಬಿಡುವ ವಿಚಾರ.
ಮಹಾಮಾರಿ ಕೋವಿಡ್ ಗೆದ್ದ ಕರ್ನಾಟಕದ ಮೊದಲ ಜಿಲ್ಲೆ - ಬೀದರ್
ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯ ಪ್ರಭಾವ ಹೆಚ್ಚಾಗಿದ್ದಾಗ ಬೀದರ್ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಭಯಪಡುವ ರೀತಿಯಲ್ಲಿತ್ತು. ಆದರೆ, ಜಿಲ್ಲಾಡಳಿತದ ಸೂಕ್ತ ಕ್ರಮ, ಜನರ ಸಹಕಾರದಿಂದಾಗಿ, ಬೀದರ್ ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸೊನ್ನೆಯಾಗಿದೆ. ಆ ಮೂಲಕ, ಕೊರೊನಾ ಗೆದ್ದ ಮೊದಲ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಬೀದರ್ ಜಿಲ್ಲೆ ಪಾತ್ರವಾಗಿದೆ. ಜಿಲ್ಲೆಯಲ್ಲಿ 24,300 ಒಟ್ಟು ಪ್ರಕರಣಗಳು ದಾಖಲಾಗಿದ್ದವು.
ಬೀದರ್ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜನರಲ್ಲಿ ಮನವಿ ಮಾಡಿದ್ದಾರೆ
ಬೀದರ್ ನಲ್ಲಿ 398 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದರು. ಒಂದು ದಿನದ ಹಿಂದೆ ಎರಡು ಸಕ್ರಿಯ ಪ್ರಕರಣಗಳು ಇದ್ದವು, ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ, ಸದ್ಯದ ಮಟ್ಟಿಗೆ ಬೀದರ್ ಕೊರೊನಾ ಮುಕ್ತವಾಗಿದೆ. "ಕೋವಿಡ್ ನಿಯಂತ್ರಣಕ್ಕೆ ಬಂದಿರುವುದು ಹೌದು, ಆದರೆ, ಜನರು ಮೈಮರೆಯಬಾರದು. ಕೊರೊನಾ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಿ, ಮಹಾಮಾರಿ ಮತ್ತೆ ನಮ್ಮ ಜಿಲ್ಲೆಗೆ ಬರದಂತೆ ನೋಡಿಕೊಳ್ಳೋಣ" ಎಂದು ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್. ಆರ್ ಜನರಲ್ಲಿ ಮನವಿ ಮಾಡಿದ್ದಾರೆ. (ಚಿತ್ರದಲ್ಲಿ: ಜಿಲ್ಲಾಧಿಕಾರಿ ರಾಮಚಂದ್ರನ್)
ಸದ್ಯದ ಮಟ್ಟಿಗೆ, ಸಕ್ರಿಯ ಪ್ರಕರಣ ಸೊನ್ನೆ ಇರುವ ಜಿಲ್ಲೆಯೆಂದರೆ ಅದು ಬೀದರ್
ಕೊರೊನಾ ಎರಡನೇ ಅಲೆಯ ಆರಂಭದಲ್ಲಿ ಬೀದರ್ ಜಿಲ್ಲೆ ತೀವ್ರವಾಗಿ ಇದರಿಂದ ಬಾಧಿತವಾಗಿತ್ತು. ಆದರೆ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ, ದಿನದಿಂದ ದಿನಕ್ಕೆ ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಸದ್ಯದ ಮಟ್ಟಿಗೆ, ಸಕ್ರಿಯ ಪ್ರಕರಣ ಸೊನ್ನೆ ಇರುವ ಜಿಲ್ಲೆಯೆಂದರೆ ಅದು ಬೀದರ್ ಮಾತ್ರ. ಇನ್ನು, ಸಕ್ರಿಯ ಪ್ರಕರಣ ಒಂದಂಕಿಗಿಂತ ಕಮ್ಮಿ ರಾಯಚೂರು ಜಿಲ್ಲೆ ಕೂಡಾ ಇದ್ದು, ಇದೂ ಬೇಗ ಕೊರೊನಾ ಮುಕ್ತ ಜಿಲ್ಲೆಯಾಗಲಿ.