ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮನೆ ಬಿಡುತ್ತಿರುವ ಜನ, ಪ್ರವಾಸಿಗರೂ ಇಲ್ಲದ ದಿನ
ಖಾಲಿ ರಸ್ತೆಗಳು, ಅಂಗಡಿಗಳಲ್ಲಿ ಗ್ರಾಹಕರಿಲ್ಲದೆ ಬಿಕೋ ಎನ್ನುವ ವಾತಾವರಣ, ಜನರೇ ಕಾಣದ ಹೋಟೆಲ್ ಗಳು... ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿರುವ ಕಾಶ್ಮೀರದಲ್ಲಿ ಮಂಗಳವಾರ ಕಂಡುಬಂದ ದೃಶ್ಯಗಳಿವು. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಭಾರತ ಹಾಗೂ ಪಾಕಿಸ್ತಾನದ ಪಾಲಿಗೆ ಗಡಿಯಂತೆ ಇರುವ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಇದೆ.
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆಯುವ ನಿರ್ಧಾರವನ್ನು ಭಾರತ ಸರಕಾರವು ತೆಗೆದುಕೊಂಡಿದ್ದರಿಂದ ಉದ್ಭವಿಸಿರುವ ಸನ್ನಿವೇಶ ಇದು. ಪಾಕಿಸ್ತಾನ ಕಡೆಗಿನ ಕಾಶ್ಮೀರದ ಉದ್ದಕ್ಕೂ ಆತಂಕ ಎದ್ದುಕಾಣುತ್ತಿದೆ. ಎರಡು ದೇಶಗಳ ಮಧ್ಯೆ ಏನೋ ಆಗಿಬಿಡಬಹುದು ಎಂಬ ಭಯ ಜನರಲ್ಲಿ ಮನೆ ಮಾಡಿದೆ.
"ನನ್ನ ಸೋದರ ಶ್ರೀನಗರ್ (ಭಾರತದ ಕಡೆಯ ಕಾಶ್ಮೀರ)ನಲ್ಲಿ ಇದ್ದಾನೆ. ಅವನಿಗೆ ಸಣ್ಣ ಮಕ್ಕಳಿವೆ. ಕಳೆದ ಮೂರು ದಿನದಿಂದ ಆ ಕಡೆ ಏನಾಗುತ್ತಿದೆ ಎಂಬುದೇ ನಮಗೆ ಗೊತ್ತಾಗಿಲ್ಲ. ಅವನ ಕಡೆಯಿಂದ ಫೋನ್ ಕರೆ ಕೂಡ ಬಂದಿಲ್ಲ. ಅವರು ಬದುಕಿದ್ದಾರೋ ಇಲ್ಲವೋ ಎಂಬುದೂ ಗೊತ್ತಾಗಿಲ್ಲ" ಎಂದು ಪಾಕಿಸ್ತಾನದ ನೀಲಂ ಕಣಿವೆಯಲ್ಲಿ ಮಳಿಗೆಯೊಂದನ್ನು ನಡೆಸುವ ಶಫೀಕ್ ಬಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಿಡಿಯೋ: ಪಾಕಿಸ್ತಾನದಲ್ಲೂ 'ಅಖಂಡ ಭಾರತ'ದ ಪೋಸ್ಟರ್ಗಳು!
ಇನ್ನು ಮಂಗಳವಾರ ಪಾಕಿಸ್ತಾನದ ಸಂಸತ್ ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಎದುರಿಗೆ ಇಡುವುದಾಗಿ ಹೇಳಿದ್ದಾರೆ. ಭಾರತ ಸರಕಾರ ತೆಗೆದುಕೊಂಡು ಈಗಿನ ನಿರ್ಧಾರದಿಂದ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರಕ್ಕೆ ಕಾರಣ ಆಗಬಹುದು ಎಂದು ಕೂಡ ಹೇಳಿದ್ದಾರೆ.
ಮನೆ ಬಿಟ್ಟು ಹೊರಡುತ್ತಿರುವ ಸ್ಥಳೀಯರು
"ಇಲ್ಲಿನ ಜನರು ಮನೆ ಬಿಟ್ಟು ಹೊರಡುತ್ತಿದ್ದಾರೆ. ಆದರೆ ಬೇರೆ ಎಲ್ಲೇ ಹೋಗುವುದಕ್ಕೆ ನನಗೆ ಅವಕಾಶ ಇಲ್ಲ. ನಾನೊಬ್ಬಳು ವಿಧವೆ. ನನಗೆ ನಾಲ್ವರು ಮಕ್ಕಳಿದ್ದಾರೆ. ಬೇರೆ ಆದಾಯ ಮೂಲಗಳೂ ಇಲ್ಲ. ಇನ್ನು ಭಾರತೀಯ ಸೇನೆಯ ಶೆಲ್ಲಿಂಗ್ ದಾಳಿಯಲ್ಲಿ ನನ್ನ ಮನೆಗೆ ಹಾನಿ ಕೂಡ ಆಗಿರುವುದರಿಂದ ಭಯ ಶುರುವಾಗಿದೆ" ಎಂದು ಪಿಒಕೆಯಲ್ಲಿ ವಾಸ ಇರುವ ಖುರ್ಷಿದಾ ಬೇಗಂ ಎಂಬ ಮಹಿಳೆ ಮಾಧ್ಯಮವೊಂದರ ಜತೆ ತನ್ನ ಸ್ಥಿತಿ ಹೇಳಿಕೊಂಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರವಾಸಿಗರಿಲ್ಲ
ಪಾಕಿಸ್ತಾನದ ಕಡೆಯ ಕಾಶ್ಮೀರದಲ್ಲಿ ಈಗ ಬೇಸಿಗೆ ಕಾಲ. ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಸಮಯ ಇದು. ಆದರೆ ಅಧಿಕಾರಿಗಳು ಹೇಳುವ ಪ್ರಕಾರ: ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಹೋಟೆಲ್ ಗಳು, ಅತಿಥಿಗೃಹಗಳು ಖಾಲಿ ಖಾಲಿ ಇವೆ. ಏಕೆಂದರೆ ಈ ಭಾಗವನ್ನು ಪ್ರವೇಶಿಸುವುದನ್ನೇ ಜನರು ನಿಲ್ಲಿಸಿಬಿಟ್ಟಿದ್ದಾರೆ.
ಮುನ್ನೂರು ಅತಿಥಿಗೃಹದಲ್ಲಿ ಒಬ್ಬರೂ ಇಲ್ಲ
"ಕಾಶ್ಮೀರ ಕಣಿವೆಯಲ್ಲಿ ಮುನ್ನೂರರಷ್ಟು ಅತಿಥಿಗೃಹಗಳು ಇರಬಹುದು. ಈ ದಿನ ಇವುಗಳೆಲ್ಲವನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಒಬ್ಬೇ ಒಬ್ಬ ಅತಿಥಿ ಇಲ್ಲ. ನೀಲಂ ಕಣಿವೆಯ ಪ್ರವಾಸೋದ್ಯಮದ ಸ್ಥಿತಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ" ಎಂದು ಈ ಪ್ರದೇಶದ ಡೆಪ್ಯೂಟಿ ಕಮಿಷನರ್ ರಾಜಾ ಶಾಹಿದ್ ಮೆಹ್ಮೂದ್ ಹೇಳಿದ್ದಾರೆ.
ಫೆಬ್ರವರಿಯಿಂದ ಈಚೆಗೆ ಪರಿಸ್ಥಿತಿ ಬಿಗಡಾಯಿಸಿದೆ
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ತೆಗೆದು ಹಾಕಿದಾಗಿನಿಂದ ಕಣಿವೆ ರಾಜ್ಯದಲ್ಲಿ ಏನಾಗಬಹುದೋ ಎಂಬ ಆತಂಕ ಇದ್ದೇ ಇದೆ. ಆದರೆ ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಉಗ್ರ ದಾಳಿ, ಅದಕ್ಕೆ ಪ್ರತಿಯಾಗಿ ಭಾರತೀಯ ವಾಯು ಸೇನೆ ನಡೆಸಿದ ದಾಳಿ... ಆಗಿಂದಲೇ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಪಿಒಕೆ ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಸದ್ಯಕ್ಕಂತೂ ಸನ್ನಿವೇಶ ಸುಧಾರಿಸುವಂತೆ ಅನ್ನಿಸುವುದಿಲ್ಲ
ಸಾಮಾನ್ಯವಾಗಿ ಎರಡು ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ಕೆಲವು ದಿನಗಳ ಮಟ್ಟಿಗೆ ಮಾತ್ರ ಇರುತ್ತಿದೆ. ಆದರೆ ಈ ಸಾಲ ಗಡಿ ನಿಯಂತ್ರಣ ರೇಖೆಯಲ್ಲಿ ಇಂಥ ಪರಿಸ್ಥಿತಿ ಬಹಳ ದೀರ್ಘ ಕಾಲದಿಂದ ಹಾಗೇ ಉಳಿದಿದೆ. ಈ ತಕ್ಷಣದಲ್ಲೇ ಪರಿಸ್ಥಿತಿ ಮೊದಲಿನಂತೆ ಆಗಬಹುದು ಎಂದು ನನಗಂತೂ ಅನ್ನಿಸುವುದಿಲ್ಲ ಎಂದು ಪಿಒಕೆ ಮತ್ತೊಬ್ಬ ನಿವಾಸಿ ರಾಜಾ ಅಕೀಲ್ ಹೇಳಿದ್ದಾರೆ.