ಯಾರಿದು ದೀಪ್ ಸಿಧು? ರೈತ ಹೋರಾಟದಲ್ಲಿ ಹೇಗೆ, ಏಕೆ ಭಾಗಿ?
ನವದೆಹಲಿ, ಜನವರಿ 26: ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದವರು ರೈತರಲ್ಲ, ನಮ್ಮ ಹೋರಾಟದಲ್ಲಿ ಹಲವು ದುಷ್ಕರ್ಮಿಗಳು ಸೇರ್ಪಡೆಗೊಂಡು ಹಿಂಸಾಚಾರದಲ್ಲಿ ತೊಡಗಿದ್ದಾರೆ ರೈತ ಸಂಘಟನೆಗಳು ಸ್ಪಷ್ಟನೆ ನೀಡಿವೆ. ಜೊತೆಗೆ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಗೊಂದಲಕ್ಕೆ ನಟ ದೀಪ್ ಸಿಧು ಮೇಲೆ ಆರೋಪ ಮಾಡಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಧು ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿತ್ತು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿಲ್ಲ, ನಿಶಾನ್ ಸಾಹಿಬ್ ಧ್ವಜ ಹಾರಾಟ ಮಾಡಿದ್ದು ನಿಜ ಎಂದಿದ್ದಾರೆ.
ಕೆಂಪುಕೋಟೆಯಲ್ಲಿ ಸಿಖ್ ಧರ್ಮದ ಧ್ವಜ ಹಾರಿಸಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ತಂಡದಲ್ಲಿ ಪಂಜಾಬ್ ಚಿತ್ರನಟ ದೀಪ್ ಸಿಧು ಉಪಸ್ಥಿತರಿದ್ದರು. ಬಿಜೆಪಿ ಸಂಸದ ಸನ್ನಿ ಡಿಯೋಲ್ ಪರ ಈ ಹಿಂದೆ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದ ದೀಪ್ ಸಿಧು ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದರು. ಈಗ ಈ ಫೋಟೋ ಕೂಡಾ ವೈರಲ್ ಆಗುತ್ತಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಂಪು ಕೋಟೆ ಬಳಿ ನಡೆದ ದುರ್ಘಟನೆಯಲ್ಲಿ ದೀಪ್ ಸಿಧು ಕೈವಾಡವಿದೆ. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸದಸ್ಯರಾಗಿರುವ ದೀಪ್ ಸಿಧು ಅವರು ಪ್ರಚೋದಿತ ಭಾಷಣ ಮಾಡಿ, ಗುಂಪನ್ನು ಕೆಂಪು ಕೋಟೆಗೆ ಕರೆದೊಯ್ದರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ರೈತ ನಾಯಕ ಗುರ್ನಾಮ್ ಸಿಂಗ್ ಚಾಡುನಿ ಆಗ್ರಹಿಸಿದ್ದಾರೆ.
ದೀಪ್ ಸಿಧು ಪ್ರತಿಕ್ರಿಯೆ ಏನು?
ಈ ಬಗ್ಗೆ ಸ್ಪಷ್ಟನೆ ನೀಡಲು ದೀಪ್ ಸಿಧು ಫೇಸ್ಬುಕ್ ಲೈವ್ ವಿಡಿಯೋ(https://www.facebook.com/imdeepsidhu /videos/434876944379881/) ಮಾಡಿದ್ದು, ನಾವು ಕೆಂಪುಕೋಟೆ ಮೇಲೆ ನಿಶಾನ್ ಸಾಹಿಬ್(ಧಾರ್ಮಿಕ ಧ್ವಜ) ಹಾರಿಸಿದೆವು, ಹೋರಾಟ, ಪ್ರತಿಭಟನೆ ನಮ್ಮ ಪ್ರಜಾಪ್ರಭುತ್ವ ಹಕ್ಕು, ಭಾರತ ತ್ರಿವರ್ಣಧ್ವಜವನ್ನು ತೆಗೆದು ಹಾಕಿಲ್ಲ ಎಂದಿದ್ದಾರೆ.
ಆದರೆ, ಸಿಂಘು ಗಡಿಯಲ್ಲಿ ದೀಪ್ ಸಿಧು ಅಲ್ಲದೆ ಮಾಜಿ ಗ್ಯಾಂಗ್ ಸ್ಟರ್ ಕಮ್ ರಾಜಕಾರಣಿ ಲಖಾ ಸಿಧಾನ ಅವರು ಪ್ರಚೋದನಕಾರಿ ಘೋಷಣೆ ಕೂಗುತ್ತಾ, ಕೆಂಪು ಕೋಟೆ ಕಡೆಗೆ ಗುಂಪನ್ನು ಕರೆದೊಯ್ದಿದ್ದಾರೆ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಕೂಡಾ ಆರೋಪಿಸಿದ್ದಾರೆ.
ದೀಪ್ ಸಿಧು ಬಗ್ಗೆ ಒಂದಿಷ್ಟು ಮಾಹಿತಿ
1984ರಲ್ಲಿ ಪಂಜಾಬ್ ರಾಜ್ಯದ ಮಕ್ತ್ ಸರ್ ಜಿಲ್ಲೆಯಲಿ ಜನಿಸಿದ ದೀಪ್ ಸಿಧು ಕಾನೂನು ಪದವಿಧರರಾಗಿದ್ದಾರೆ. ಕಿಂಗ್ ಫಿಷರ್ ಮಾಡೆಲ್ ಹಂಟ್ ಪ್ರಶಸ್ತಿ ಗೆದ್ದಿದ್ದಾರೆ.
2015ರಲ್ಲಿ ದೀಪ್ ಸಿಧು ಮೊದಲ ಪಂಜಾಬಿ ಚಿತ್ರ ರಮ್ತಾ ಜೋಗಿ ಬಿಡುಗಡೆಯಾಗಿತ್ತು. 2018ರಲ್ಲಿ ಜೋರಾ ದಸ್ ನಂಬರಿಯಾದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಮಿಂಚಿದ್ದರು. 2019ರಲ್ಲಿ ಸನ್ನಿಡಿಯೋಲ್ ಪರ ಪ್ರಚಾರ ಮಾಡಿದರು.
ರೈತ ಹೋರಾಟದಲ್ಲಿ ಸಿಧು ಭಾಗಿಯಾಗಿದ್ದು ಹೇಗೆ?
ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸದಸ್ಯರಾಗಿರುವ ದೀಪ್ ಸಿಧು ಅವರು ದೆಹಲಿ ಹರ್ಯಾಣ ಗಡಿ ಷಂಬುವಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾ ನಿರತ ಕಲಾವಿದರು, ಸಾಮಾಜಿಕ ಕಾರ್ಯಕರ್ತರಿಗೆ ಬೆಂಬಲ ನೀಡಲು ಬಂದಿದ್ದರು.
ಪ್ರತಿಭಟನಾಕಾರರ ಪರ ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಬಲ ನೀಡುತ್ತಾ ಭಾಷಣ ಮಾಡುತ್ತಿದ್ದ ದೀಪ್ ಸಿಧು ಬಗ್ಗೆ ರೈತ ಸಮೂಹದಲ್ಲಿ ಒಮ್ಮತವಿರಲಿಲ್ಲ. ಹಲವರು ಮಂದಿ ಈತ ಬಿಜೆಪಿ ಆರೆಸ್ಸೆಸ್ ಏಜೆಂಟ್ ಎಂದೇ ಕರೆದಿದ್ದರು.
|
ಸಿಂಘು ಗಡಿಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆ
ಸಿಂಘು ಗಡಿಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಬಳಿ ಬಂದ ದೀಪ್ ಸಿಧು ಭಾರತೀಯ ಕಿಸಾನ್ ಯೂನಿಯನ್ (ಸಿಧುಪುರ್) ಸೇರ್ಪಡೆಯಾಗಿ ರೈತ ಪರ ಎಂದು ತೋರಿಸಿಕೊಳ್ಳಲು ಯತ್ನಿಸಿದರೂ ಹಲವಾರು ರೈತ ಸಂಘಟನೆಗಳು ದೂರ ಇಟ್ಟಿದ್ದವು. ಆದರೆ, ಸಿಧುಪುರ್ ರೈತರ ಗುಂಪನ್ನು ಪ್ರಚೋದಿಸಿ ಬ್ಯಾರಿಕೇಡ್ ತೆಗೆದು ಹಾಕಲು ಪ್ರಚೋದಿಸಿದ ಸಿಧು ನಂತರ ಕೆಂಪುಕೋಟೆಗೆ ಕರೆದೊಯ್ದ ಎಂದು ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.