ರೈತ ಪ್ರತಿಭಟನೆಯ ನಾಯಕ: ಯಾರು ಈ ರಾಕೇಶ್ ಟಿಕಾಯತ್?
ರೈತರ ಪ್ರತಿಭಟನೆ ನಡುವೆ ಹೆಚ್ಚು ಸುದ್ದಿಯಾಗುತ್ತಿರುವ ವ್ಯಕ್ತಿಯೆಂದರೆ ರಾಕೇಶ್ ಟಿಕಾಯತ್. ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯ ಬಹುತೇಕ ನಡೆ, ಟಿಕಾಯತ್ ಅವರ ನಿರ್ಧಾರಕ್ಕೆ ಅನುಗುಣವಾಗಿರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ. ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ವಕ್ತಾರರಾಗಿರುವ ರಾಕೇಶ್ ಟಿಕಾಯತ್, ಒಂದು ಕಾಲದಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಆಗಿದ್ದವರು. ಅಷ್ಟೇ ಅಲ್ಲ, ವಿವಿಧ ರೈತ ಪ್ರತಿಭಟನೆಗಳಲ್ಲಿ 44 ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ.
ಭೂ ಸ್ವಾಧೀನ ಕಾಯ್ದೆ ವಿರುದ್ಧದ ಹೋರಾಟದ ವೇಳೆ ಮಧ್ಯಪ್ರದೇಶದಲ್ಲಿ 39 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ದೆಹಲಿಯ ಸಂಸತ್ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಮತ್ತೊಂದು ಪ್ರತಿಭಟನಾ ಪ್ರಕರಣದಲ್ಲಿ ಅವರನ್ನು ಜೈಪುರದ ಜೈಲಿಗೂ ಹಾಕಲಾಗಿತ್ತು.
ಶಶಿ ತರೂರ್, ಆರು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ
ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆಯ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ದಾಖಲಾದ ಅನೇಕ ಎಫ್ಐಆರ್ಗಳಲ್ಲಿ ರಾಕೇಶ್ ಟಿಕಾಯತ್ ಅವರ ಹೆಸರನ್ನು ಸೇರಿಸಲಾಗಿದೆ. ಏನೇ ಆದರೂ ತಾವು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ. ಸ್ಥಳದಿಂದ ನಿರ್ಗಮಿಸುವುದಕ್ಕಿಂತ ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳುತ್ತೇನೆ ಎಂದು ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಮುಂದೆ ಓದಿ.
ಉತ್ತರ ಪ್ರದೇಶದ ಮುಜಫ್ಫರಪುರ
ರಾಕೇಶ್ ಟಿಕಾಯತ್, ಉತ್ತರ ಪ್ರದೇಶದ ಮುಜಫ್ಫರ್ ನಗರ ಜಿಲ್ಲೆಯ ಸಿಸೌಲಿ ಎಂಬ ಗ್ರಾಮದವರು. ಅವರು ಜನಿಸಿದ್ದು 1969ರ ಜೂನ್ 4ರಂದು. ಅವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷರಾಗಿದ್ದರು.
ರೈತ ಚಳವಳಿಯಲ್ಲಿ ಗೋಲಿಬಾರ್
1987ರಲ್ಲಿ ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯ ಕರ್ಮುಖೇರಿ ಎಂಬಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ನೇತೃತ್ವದಲ್ಲಿ ನಡೆದ ರೈತ ಚಳವಳಿಯೊಂದು ಭಾರತೀಯ ಕಿಸಾನ್ ಒಕ್ಕೂಟದ ಸ್ಥಾಪನೆಗೆ ಬುನಾದಿ ಬಿದ್ದಿತು. ಆ ಚಳವಳಿ ವೇಳೆ ಪೊಲೀಸರ ಗೋಲಿಬಾರ್ಗೆ ಇಬ್ಬರು ರೈತರು ಬಲಿಯಾಗಿದ್ದರು.
ದೆಹಲಿ-ಯುಪಿ ಗಡಿಯಿಂದ ರೈತರನ್ನು ಓಡಿಸುವ ಯತ್ನದಲ್ಲಿ ಪೊಲೀಸರು!
ದೆಹಲಿಯಲ್ಲಿ ಕಾನ್ಸ್ಟೆಬಲ್
ಈ ಗೋಲಿಬಾರ್ ನಂತರ ಭಾರತೀಯ ರೈತ ಒಕ್ಕೂಟ ಸ್ಥಾಪನೆಯಾಯಿತು. ಚೌಧರಿ ಮಹೇಂದ್ರ ಸಿಂಗ್ ಟಿಕಾಯತ್ ಅದರ ಅಧ್ಯಕ್ಷರಾದರು. ರಾಜ್ಯದ ಪ್ರಮುಖ ರೈತ ಮುಖಂಡರಾಗಿ ಅವರು ಗುರುತಿಸಿಕೊಂಡರು. ಅವರ ಮಗ ರಾಕೇಶ್ ಟಿಕಾಯತ್ ಎಲ್ಎಲ್ಬಿ ಓದಿದವರು. 1985ರಲ್ಲಿ ಸುನಿತಾ ದೇವಿ ಎಂಬುವವರೊಂದಿಗೆ ಮದುವೆಯಾಯಿತು. ಅದೇ ವರ್ಷ ಅವರು ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಕೆಲಸಕ್ಕೆ ಸೇರಿಕೊಂಡರು.
ರಾಜೀನಾಮೆ, ರೈತ ಹೋರಾಟ
90ರ ದಶಕದಲ್ಲಿ ದೆಹಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆ ತೊರೆದ ಟಿಕಾಯತ್, ದೆಹಲಿಯ ಕೆಂಪುಕೋಟೆಯಲ್ಲಿ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದಲ್ಲಿ ನಡೆದ ರೈತ ಚಳವಳಿಯನ್ನು ಸೇರಿಕೊಂಡರು. ಅಂದಿನಿಂದಲೂ ರಾಕೇಶ್, ಸತತವಾಗಿ ರೈತ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.
ದೆಹಲಿ ಹಿಂಸಾಚಾರ: 37 ರೈತ ಮುಖಂಡರ ವಿರುದ್ಧ ಎಫ್ಐಆರ್
ರಾಕೇಶ್ ಹಿಡಿತದಲ್ಲಿ ಒಕ್ಕೂಟ
ಮಹೇಂದ್ರ ಸಿಂಗ್ ಟಿಕಾಯತ್ ಅವರ ನಿಧನದ ಬಳಿಕ ಭಾರತೀಯ ರೈತ ಒಕ್ಕೂಟದ ವಕ್ತಾರರನ್ನಾಗಿ ರಾಕೇಶ್ ಅವರನ್ನು ಆಯ್ಕೆ ಮಾಡಲಾಯಿತು. ಒಕ್ಕೂಟದಲ್ಲಿ ನಿರಂತರ ತೊಡಗಿಸಿಕೊಂಡಿದ್ದ ಅವರ ಸಹೋದರ ನರೇಶ್ ಟಿಕಾಯತ್ ಅಧ್ಯಕ್ಷರಾದರು. ನರೇಶ್ ಅಧ್ಯಕ್ಷರಾಗಿದ್ದರೂ, ಒಕ್ಕೂಟವು ರಾಕೇಶ್ ಹಿಡಿತದಲ್ಲಿದ್ದು, ಅವರೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು.
ಎರಡು ಬಾರಿ ಚುನಾವಣೆ ಸೋಲು
ರಾಕೇಶ್ ಅವರು ಎರಡು ಬಾರಿ ರಾಜಕೀಯ ಅದೃಷ್ಟವನ್ನೂ ಪರೀಕ್ಷಿಸಿಕೊಂಡಿದ್ದಾರೆ. 2007ರಲ್ಲಿ ಮುಜಫ್ಫರಪುರದ ಖಾಟೌಲಿ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಅಮ್ರೋಹ ಜಿಲ್ಲೆಯಿಂದ ರಾಷ್ಟ್ರೀಯ ಲೋಕದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಎರಡೂ ಬಾರಿ ಸೋಲು ಅನುಭವಿಸಿದ್ದರು.