ಮೂರು ಗಡಿ ಕಲ್ಲು ಸೇರುವಲ್ಲಿದೆ ಇತಿಹಾಸ ಪ್ರಸಿದ್ಧ ತ್ರ್ಯಂಬಕೇಶ್ವರ ದೇಗುಲ
ನಮ್ಮ ನೆಲದಲ್ಲಿ ಅದೆಷ್ಟೋ ರಾಜವಂಶಗಳು ಆಳಿ ಹೋಗಿದ್ದಾರೆ. ಅವರ ಕಾಲದ ವೈಭವಕ್ಕೆ ಸಾಕ್ಷಿಯಾಗಿ ಇಂದು ನಮ್ಮ ಮುಂದೆ ನೂರಾರು ದೇಗುಲಗಳು, ಕೋಟೆ, ಅರಮನೆಗಳು, ಶಾಸನಗಳು, ಗೋರಿಗಳು ಇವೆ.
ಇತಿಹಾಸ ತಿಳಿಸುವ ಇಂಥ ದೇಗುಲಗಳ ಪೈಕಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತೆರಕಣಾಂಬಿ ಹೋಬಳಿ ತ್ರಿಯಂಬಕಪುರ ಗ್ರಾಮದಲ್ಲಿರುವ ತ್ರ್ಯಂಬಕೇಶ್ವರ ದೇಗುಲವೂ ಒಂದು. ಈ ದೇಗಲದ ನಿರ್ಮಾಣ, ವಾಸ್ತುಶಿಲ್ಪ, ವಿಗ್ರಹ, ಕಲ್ಲಿನಲ್ಲಿ ಕೆತ್ತಿರುವ ಲಿಪಿಗಳನ್ನೆಲ್ಲ ಶೋಧಿಸಿರುವ ಸಂಶೋಧಕರು ಈ ದೇಗುಲವನ್ನು ಚೋಳರ ಕಾಲದ್ದು ಎಂದು ದೃಢಪಡಿಸಿದ್ದಾರೆ.
"ಕನಕನ ಬಂಡೆ"; ಕನಕನ ಕಥೆ ಹೇಳುವ ಮಹದೇವಪುರದ ದೇಗುಲ
ದೇಗುಲದಲ್ಲಿರುವ ಕಲ್ಲಿನ ಮೇಲೆ ಕೆತ್ತಿರುವ ಹಳೆಗನ್ನಡ, ಲಿಂಗಗಳು ಹಾಗೂ ಕಲ್ಲಿನಿಂದ ಮಾಡಿದ ದೊಡ್ಡ ಪಾತ್ರೆಯಾಕಾರದ ಕಲ್ಲು, ನಂದಿ ವಿಗ್ರಹ ಹಾಗೂ ದೇವಾಲಯದ ಸಭಾಮಂಟಪ, ಮತ್ತೊಂದು ಭಾಗದಲ್ಲಿ ನಿರ್ಮಿಸಿರುವ ಅಡುಗೆ ಕೋಣೆ ಎಲ್ಲವೂ ವಿಭಿನ್ನ ಮತ್ತು ವಿಶಿಷ್ಟ. ಇಲ್ಲಿರುವ ಏಕಶಿಲಾ ಸ್ತಂಭವಂತು ಆಕರ್ಷಣೀಯ.
ದೇವಾಲಯವು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಿಂದ ಸುಮಾರು ಐದು ಕಿ.ಮೀ ದೂರದಲ್ಲಿದೆ. ತ್ರ್ಯಂಬಕೇಶ್ವರ ಗ್ರಾಮವು ಕೇರಳ ಮತ್ತು ತಮಿಳುನಾಡಿನ ಮೂರು ಗಡಿ ಕಲ್ಲುಗಳು ಸೇರುವ ಸ್ಥಳವಾಗಿದ್ದು, ಲಂಬಕರ್ಣರಾಯ ಎಂಬಾತ ತ್ರಿಕಂದಬೇಶ್ವರನನ್ನು ಸ್ಥಾಪಿಸಿದನೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಆದ್ದರಿಂದ ಈ ಗ್ರಾಮಕ್ಕೆ ತ್ರಿಕದಂಬಪುರ ಎಂದು ಕರೆಯಲಾಗಿದ್ದು ಸ್ಥಳೀಯರು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರನಪುರ ಎಂದು ಕರೆಯುತ್ತಾರೆ.
ಈ ದೇವಾಲಯವು ವಿಶಾಲ ಸ್ಥಳದಲ್ಲಿ ನಿರ್ಮಾಣವಾಗಿದ್ದು, ಇದರ ಸುತ್ತಲೂ ಕುದುರೆಗಳ ಮಾಲೆಯನ್ನು ಕೆತ್ತನೆ ಮಾಡಲಾಗಿದೆ. ಗರ್ಭಗೃಹ ಮತ್ತು ಸುಖನಾಸಿಗಳು ಹೊಯ್ಸಳರ ಕಾಲಕ್ಕೆ ಸೇರಿದ್ದು, ಪೂರ್ವದ್ವಾರ ಮತ್ತು ಮಹಾದ್ವಾರಗಳು ವಿಜಯನಗರ ದೇವಾಲಯದ ಪ್ರಕಾರದ ಹೋಲಿಕೆಯಾಗಿದೆ.
ಅಯೋಧ್ಯೆ ಕುರಿತ ದಶರಥ ರಾಮೇಶ್ವರನ ಭವಿಷ್ಯ ನಿಜವಾಯ್ತ? ಅಯೋಧ್ಯೆಗೂ, ಚಿತ್ರದುರ್ಗಕ್ಕೂ ಏನಿದು ನಂಟು?
ದೇಗುಲದಲ್ಲಿರುವ ಪಾರ್ವತಿ ದೇವಿಯ ಮೂರ್ತಿ ಸುಮಾರು ಐದು ಅಡಿ ಎತ್ತರವಿದ್ದು, ಗರ್ಭಗುಡಿಯ ಉತ್ತರ ಭಾಗದಲ್ಲಿದೆ. ನಿಂತ ಭಂಗಿಯಲ್ಲಿರುವ ಈ ದೇವಿ ಮೂರ್ತಿಯು ಅಭಯ ಪದ್ಮ ಮತ್ತು ದಾನಮುದ್ರೆಗಳನ್ನು ಹೊಂದಿದೆ. ವಿಗ್ರಹ ಸುಂದರವಾಗಿ ಮತ್ತು ಎತ್ತರವಾಗಿದ್ದು ಇಂತಹ ದೇವರ ಮೂರ್ತಿಯನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ತ್ರ್ಯಂಬಕೇಶ್ವರ ದೇಗುಲದ ಮುಂಭಾಗದಲ್ಲಿ ಸುಮಾರು 40 ಅಡಿ ಎತ್ತರದ ಏಕಶಿಲಾ ಕಂಬವಿದೆ. ಇದರ ತಳಭಾಗದ ವ್ಯಾಸವು ಸುಮಾರು ಎರಡು ಅಡಿಗಳಷ್ಟಿದೆ. ಇದರ ಸುತ್ತಲೂ ಸುಮಾರು ನಾಲ್ಕರಿಂದ ಐದು ಅಡಿಗಳಷ್ಟು ಎತ್ತರ ಹಾಗೂ ಹತ್ತು ಅಡಿ ಅಗಲದ ಮಂಟಪವನ್ನು ನಿರ್ಮಿಸಲಾಗಿದೆ.
ಇಷ್ಟೇ ಅಲ್ಲದೆ ಮುಖ್ಯ ದೇಗುಲದ ಪಶ್ಚಿಮ ಭಾಗಕ್ಕೆ ಸುಂದರವಾದ ಐದು ಪಂಚಲಿಂಗಗಳಿದ್ದು, ಈ ಎಲ್ಲ ಲಿಂಗಗಳನ್ನು ಹಿಟ್ಟುಕಲ್ಲು, ಕಗ್ಗಲ್ಲು, ಬೆಣಚುಕಲ್ಲು, ಕಪ್ಪುಕಲ್ಲು ಹೀಗೆ ಬೇರೆ ಬೇರೆ ಕಲ್ಲುಗಳಿಂದ ನಿರ್ಮಿಸಲಾಗಿದೆ ಎನ್ನುವುದೇ ಇಲ್ಲಿನ ವಿಶೇಷ. ಇನ್ನು ಈ ದೇಗುಲದಲ್ಲಿ ಸುಬ್ರಹ್ಮಣ್ಯೇಶ್ವರ ವಿಗ್ರಹವೂ ಇದ್ದು, ದಿನ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಪುರಾಣ ಮತ್ತು ಇತಿಹಾಸ ಪ್ರಸಿದ್ಧವಾಗಿರುವ ಈ ದೇವಾಲಯವು ಪ್ರಶಾಂತ ವಾತಾವರಣದಲ್ಲಿ ನಿರ್ಮಾಣವಾಗಿರುವ ಕಾರಣ ಭಕ್ತರಲ್ಲದೆ, ಪ್ರವಾಸಿಗರು ಕೂಡ ಇಲ್ಲಿಗೆ ಬಂದು ಒಂದಷ್ಟು ಸಮಯ ಕಳೆದು ತೆರಳುತ್ತಾರೆ.