ಸೋಲು ಎದುರಾದರೆ ಜೀವನವೇ ಮುಗಿಯಲ್ಲ!
ಯಾರೋ ಹೇಗೆಗೋ ಬದುಕುತ್ತಾರೆ ಅಂಥ ನಮಗೆ ಅವರಂತೆ ಬದುಕೋದಕ್ಕೆ ಆಗುವುದಿಲ್ಲ. ಏಕೆಂದರೆ ನಮಗೆಲ್ಲರಿಗೂ ನಮ್ಮದೇ ಆದ ಬದುಕಿದೆ. ಆ ಬದುಕಿನ ಮೇಲೆಯೇ ನಾವು ಸಮಾಜದಲ್ಲಿ ಗುರುತಿಸಿಕೊಳ್ಳುತ್ತೇವೆ.
ಈ ಭೂಮಿ ಮೇಲೆ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆದರೆ ಆ ಹುಟ್ಟು ಮತ್ತು ಸಾವಿನ ನಡುವೆ ಹೇಗೆ ಬದುಕಿದ್ದ ಎಂಬುದು ಮುಖ್ಯವಾಗುತ್ತದೆ. ಹಾಗಾಗಿಯೇ ನಾವೆಲ್ಲರೂ ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.
ಹಿರಿಯರ, ಜ್ಞಾನಿಗಳ, ಸಾಧಕರ ತತ್ವ, ಆದರ್ಶಗಳನ್ನು ಪಾಲಿಸುತ್ತಾ ಅವರ ಮಾರ್ಗದಲ್ಲಿ ಬದುಕಿನ ಹಾದಿಯನ್ನು ಸವೆಸುವ ಪ್ರಯತ್ನ ಮಾಡಬೇಕು. ಆ ಮೂಲಕ ಸಮಾಜಕ್ಕೆ ನಾವು ಕೊಡುಗೆಯಾಗುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ನಾವು ಒಬ್ಬ ವ್ಯಕ್ತಿಯನ್ನು ಆತನ ಸಾಧನೆ ಮತ್ತು ಒಳ್ಳೆಯತನದ ವೃದ್ಧಿಯನ್ನು ಪರಿಗಣಿಸದೆ ಆತ ಸಂಪಾದಿಸಿದ ಆಸ್ತಿ ಮತ್ತು ಅಧಿಕಾರದಿಂದ ಅಳೆಯುತ್ತೇವೆ. ಆದರ್ಶ, ಪ್ರಾಮಾಣಿಕತೆ ಬದಿಗೊತ್ತಿ ಹಣ ಸಂಪಾದನೆಯಷ್ಟೆ ಗುರಿ ಎಂಬಂತೆ ಬದುಕುವುದು ಈಗ ಸಾಮಾನ್ಯವಾಗಿದೆ.
ಪ್ರತಿಯೊಬ್ಬರದು ಈಗ ಒತ್ತಡದ ಬದುಕು. ಎಲ್ಲವೂ ಲೆಕ್ಕಚಾರದಲ್ಲಿಯೇ ನಡೆಯುತ್ತಿದೆ. ಜತೆಗೆ ಪೈಪೋಟಿಯೂ ಇರುವುದರಿಂದ ನಿತ್ಯದ ಬದುಕಿನಲ್ಲಿ ಹಲವು ರೀತಿಯ ಸ್ಪರ್ಧೆಗಳನ್ನು ಎದುರಿಸಲೇ ಬೇಕಾಗಿದೆ. ನಮ್ಮ ನಾಳಿನ ಬದುಕಿನ ಕುರಿತಂತೆ ಹಲವು ನಿರೀಕ್ಷೆಗಳು ಇದ್ದರೂ ಅವು ಅಂದುಕೊಂಡಂತೆ ಆಗುತ್ತವೆ ಎನ್ನಲಾಗುವುದಿಲ್ಲ.
ನಾವು ಮಾಡುವ ಕೆಲಸಗಳು, ತೆಗೆದುಕೊಳ್ಳುವ ನಿರ್ಣಯಗಳ ಮೇಲೆಯೇ ಜೀವನದ ಯಶಸ್ಸು ನಿರ್ಣಯಿಸಲ್ಪಡುತ್ತದೆ ಎಂಬುವುದನ್ನು ತಳ್ಳಿಹಾಕುವಂತಿಲ್ಲ. ಇವತ್ತು ಮತ್ತೊಬ್ಬರ ಏಳಿಗೆ ನೋಡಿ ಹಲಬುವವರ ಸಂಖ್ಯೆ ಹೆಚ್ಚಿದೆ.
ನಮ್ಮ ಸೋಲಿಗೆ ಕಾರಣ ಹುಡುಕಿ ಸರಿಪಡಿಸಿಕೊಳ್ಳುವ ಬದಲಿಗೆ ಯಶಸ್ಸು ಕಂಡವರ ಕುರಿತಂತೆ ಅವರ ಅದೃಷ್ಟ ಚೆನ್ನಾಗಿತ್ತು. ಹಾಗಾಗಿ ಆತ ಏಳ್ಗೆಯಾದ ಎಂದು ಸಮಾಧಾನವನ್ನು ಮಾಡಿಕೊಳ್ಳುತ್ತೇವೆ. ಬದಲಾಗಿ ಆತ ಆ ರೀತಿಯಾಗಲು ಎಷ್ಟು ಕಷ್ಟಪಟ್ಟಿದ್ದಾನೆ. ಅದೆಷ್ಟು ದಿನ ನಿದ್ದೆಗೆಟ್ಟು ದುಡಿದಿದ್ದಾನೆ ಎಂಬುವುದರ ಬಗ್ಗೆ ಯೋಚಿಸುವುದೇ ಇಲ್ಲ. ಅವನಂತೆ ನಾವು ಕೂಡ ಕಷ್ಟಪಡಲು ತಯಾರಿರುವುದಿಲ್ಲ.
ಮಳೆಬಿಟ್ಟ ನಂತರ ಬಿಸಿಲು ಬರುತ್ತದೆ; ನಾವೆಲ್ಲರೂ ಯಶಸ್ಸು ಕಂಡವರ ಬಗ್ಗೆ ಹೆಚ್ಚು ತಿಳಿಯುವ ಕಾಳಜಿ ವಹಿಸುತ್ತೇವೆ. ಆದರೆ ಸೋಲು ಕಂಡವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಸೋತವರ ಬಗ್ಗೆಯೂ ಗಮನಿಸಬೇಕು. ಆಗ ಸೋಲಿಗೆ ಕಾರಣಗಳು ಸಿಗುತ್ತವೆ.
ಬೇರೆಯವರ ಸೋಲು ಕೆಲವೊಮ್ಮೆ ನಮ್ಮ ಜೀವನಕ್ಕೆ ಪಾಠವಾದರೂ ಆಗಬಹುದು. ಜೀವನದಲ್ಲಿ ಸೋಲು, ಕಷ್ಟ ಎಲ್ಲವೂ ಇದ್ದದ್ದೇ. ಒಮ್ಮೆ ಸೋಲು ಎದುರಾಯಿತೆಂದರೆ ಜೀವನವೇ ಮುಗಿಯಿತು ಎಂದುಕೊಳ್ಳುವುದು ದಡ್ಡತನ. ಮಳೆಬಿಟ್ಟ ನಂತರ ಬಿಸಿಲು ಬಂದೇ ಬರುತ್ತದೆ.
ಹಾಗೆಯೇ ಕಷ್ಟಗಳು ಕೂಡ. ಒಮ್ಮೆ ಸೋತ ಮಾತ್ರಕ್ಕೆ ನಾವು ಕಳೆದುಕೊಳ್ಳುವಂತಹದ್ದೇನಿಲ್ಲ. ಸೋಲಿನಿಂದ ತಕ್ಕ ಪಾಠ ಕಲಿತುಕೊಂಡು ಮೇಲೇರಲು ಪ್ರಯತ್ನ ಮಾಡಬೇಕು. ಸೋಲಿಗೆ ಭಯಪಡದೆ ಅವು ಸಹಜವಾಗಿ ಎದುರಾಗುವ ಅಡೆತಡೆಗಳಲ್ಲೊಂದು ಎಂದು ಭಾವಿಸಿ ಅವುಗಳನ್ನು ಧೈರ್ಯವಾಗಿ ಎದುರಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು.
ಗುರಿಯಿಲ್ಲದ ಬದುಕು ಬದುಕೇ ಅಲ್ಲ; ನಮ್ಮ ಬದುಕಿಗೊಂದು ಗುರಿ ಅಗತ್ಯ. ಗುರಿಯಿಲ್ಲದ ಬದುಕು ಬದುಕೇ ಅಲ್ಲ. ಆದುದರಿಂದ ಬದುಕಿಗೊಂದು ಗುರಿಯಿಟ್ಟುಕೊಂಡು ಮುನ್ನಡೆಯಬೇಕು. ಗುರಿಯನ್ನು ತಲುಪಬೇಕಾದರೆ ಅವಿರತ ಶ್ರಮ ಅಗತ್ಯ. ಶ್ರಮ ಪಡದೆ ಗುರಿಯನ್ನು ತಲುಪಲಾಗದು. ನೆನಪಿರಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನ್ಯಾಯಯುತವಾಗಿರಲಿ. ಅದು ನಮ್ಮಲ್ಲಿ ಸದಾ ಸಂತೋಷ ನೆಮ್ಮದಿ ನೆಲೆಸಿರುವಂತೆ ನೋಡಿಕೊಳ್ಳುತ್ತದೆ.