Explained: ಭಾರತದಲ್ಲಿ ಕೇಂದ್ರ ಸಂಪುಟ ಸಚಿವರ ಬಂಧನಕ್ಕೆ ನಿಯಮಗಳೇನು?
ನವದೆಹಲಿ, ಆಗಸ್ಟ್ 24: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ನಾರಾಯಣ್ ರಾಣೆ ಅವರನ್ನು ರತ್ನಗಿರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ರಾಯಗಢದಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಮೂರು ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ರಾಣೆ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರು ವಿಶೇಷ ತಂಡವೊಂದನ್ನು ಕಳುಹಿಸಿದ್ದರು. ರಾಜ್ಯ ಪೊಲೀಸರ ಈ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಪ್ರಶ್ನೆ ಮಾಡಿದ್ದಾರೆ. ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ನಾರಾಯಣ ರಾಣೆ ಬಂಧಿಸುವಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವ ನಾರಾಯಣ್ ರಾಣೆ ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು
ಕೇಂದ್ರ ಸಚಿವರನ್ನು ಯಾವುದೇ ಒಂದು ಆರೋಪ ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಬೇಕಾದಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಹಾಗಿದ್ದಲ್ಲಿ ಕೇಂದ್ರ ಸಚಿವರ ಬಂಧನದ ಶಿಷ್ಟಾಚಾರಗಳೇನು?, ನಾರಾಯಣ ರಾಣೆ ಬಂಧನದಲ್ಲಿ ಶಿಷ್ಟಾಚಾರ ಪಾಲನೆ ಮಾಡಲಾಗುತ್ತಿದೆಯೇ?, ಕೇಂದ್ರ ಸಚಿವರು ನೀಡಿದ ವಿವಾದಾತ್ಮಕ ಹೇಳಿಕೆ ಏನು ಹಾಗೂ ಅದರ ಹಿನ್ನೆಲೆ ಏನು ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.
ಕೇಂದ್ರ ಸಚಿವರನ್ನು ಬಂಧಿಸಲು ಶಿಷ್ಟಾಚಾರ ಪಾಲನೆ ಕಡ್ಡಾಯ
ಸಂಸತ್ ಕಲಾಪ ನಡೆಯದ ವೇಳೆಯಲ್ಲಿ ಕೇಂದ್ರ ಸಂಪುಟ ದರ್ಜೆ ಸಚಿವರ ವಿರುದ್ಧ ಅಪರಾಧ ಪ್ರಕರಣವೊಂದು ದಾಖಲಾದಲ್ಲಿ ಕಾನೂನು ಜಾರಿ ಸಂಸ್ಥೆಯು ಸಚಿವರನ್ನು ಬಂಧಿಸುವುದಕ್ಕೆ ಅವಕಾಶವಿದೆ. ರಾಜ್ಯಸಭೆಯ ಕಾರ್ಯವಿಧಾನಗಳು ಮತ್ತು ವರ್ತನೆಯ ನಿಯಮಗಳ ಸೆಕ್ಷನ್ 22 ಎ ಪ್ರಕಾರ, ಪೊಲೀಸರು, ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್ ಅವರು ಬಂಧನಕ್ಕೆ ಕಾರಣ, ಬಂಧನದ ಸ್ಥಳ ಅಥವಾ ಸ್ಥಳದ ಬಗ್ಗೆ ರಾಜ್ಯ ಸಭೆಯ ಅಧ್ಯಕ್ಷರಿಗೆ ಮಾಹಿತಿ ನೀಡಬೇಕು.
ಸಚಿವರ ಬಂಧನ ವೇಳೆ ಮೇಲ್ಮನೆ ಸಭಾಪತಿ ಅನುಸರಿಸುವ ವಿಧಾನ
ರಾಜ್ಯಸಭೆ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಒಬ್ಬ ಸಚಿವರನ್ನು ಬಂಧಿಸಿದರೆ ಅದನ್ನು ಕಲಾಪದ ಎದುರು ಅಧ್ಯಕ್ಷರು ಮಂಡಿಸುತ್ತಾರೆ. ಕಲಾಪಗಳು ನಡೆಯದ ಸಂದರ್ಭಗಳಲ್ಲಿ ಸಚಿವರನ್ನು ಬಂಧಿಸಿದರೆ ಅದರ ಕುರಿತು ಸದಸ್ಯರ ಮಾಹಿತಿಗಾಗಿ ಬುಲೆಟಿನ್ ಬಿಡುಗಡೆಗೊಳಿಸುವ ನಿರೀಕ್ಷೆಯಿರುತ್ತದೆ.
ರಾಜ್ಯಸಭೆ ಸದಸ್ಯರ ಬಂಧನದ ಕುರಿತು ಮಾಹಿತಿ
ಸಂಸತ್ತಿನ ಮುಖ್ಯ ಸವಲತ್ತುಗಳ ಪ್ರಕಾರ, ಸಿವಿಲ್ ಪ್ರಕರಣಗಳಲ್ಲಿ, ಸಿವಿಲ್ ಪ್ರೊಸೀಜರ್ ಕೋಡ್ ಸೆಕ್ಷನ್ 135ರ ಪ್ರಕಾರ, ಸದನದ ಮುಂದುವರಿಕೆಯ ಸಮಯದಲ್ಲಿ ಮತ್ತು ಅದರ ಪ್ರಾರಂಭದ 40 ದಿನಗಳ ಮೊದಲು ಮತ್ತು ಅದರ ಮುಕ್ತಾಯದ 40 ದಿನಗಳ ನಂತರ ಬಂಧನದಿಂದ ಅವರಿಗೆ ಸ್ವಾತಂತ್ರ್ಯವಿರುತ್ತದೆ. ಆದರೆ ಕ್ರಿಮಿನಲ್ ಅಪರಾಧಗಳು ಅಥವಾ ಸಾಕ್ಷಿಗಳನ್ನು ತಡೆಗಟ್ಟುವ ಬಂಧನದ ಅಡಿಯಲ್ಲಿ ಬಂಧಿಸಿದ ಪ್ರಕರಣಗಳಲ್ಲಿ ಈ ಸ್ವಾತಂತ್ರ್ಯದ ಸವಲತ್ತು ಇರುವುದಿಲ್ಲ.
ಕಲಾಪದ ಆವರಣದಲ್ಲೇ ಬಂಧಿಸಲು ಅವಕಾಶವಿದೆಯೇ?
ಸಂಸತ್ ಸದಸ್ಯರೇ ಆಗಲಿ ಅಥವಾ ಅಪರಿಚಿತರು ಯಾರೇ ಆಗಲಿ, ಸಭಾಪತಿಗಳ ಪೂರ್ವಾನುಮತಿಯಿಲ್ಲದೆ ಕಲಾಪದ ಆವರಣದಲ್ಲಿ ಯಾರನ್ನೂ ಬಂಧಿಸುವಂತಿಲ್ಲ. ಈ ನಿಟ್ಟಿನಲ್ಲಿ ಗೃಹ ಸಚಿವಾಲಯವು ನಿಗದಿಪಡಿಸಿದ ಕಾರ್ಯವಿಧಾನಕ್ಕೆ ಅನುಗುಣವಾಗಿ ಬಂಧಿಸಬೇಕಾಗುತ್ತದೆ. ಅದೇ ರೀತಿ ಸಂಸತ್ ಕಲಾಪ ನಡೆಯುತ್ತಿರುವ ಅಥವಾ ನಡೆಯದ ಸಂದರ್ಭದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ಯಾವುದೇ ಕಾನೂನು ಪ್ರಕ್ರಿಯೆಯನ್ನು ಸಭಾಪತಿಗಳ ಪೂರ್ವಾನುಮತಿ ಇಲ್ಲದೇ ಅಧಿವೇಶನದ ಆವರಣದಲ್ಲಿ ನಡೆಸುವಂತೆ ಇರುವುದಿಲ್ಲ.
ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧಿಸಿದ್ದು ಏಕೆ?
ಕಳೆದ ಸೋಮವಾರ ರಾಯಗಢದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ ಕೇಂದ್ರ ಸಚಿವ ನಾರಾಯಣ್ ರಾಣೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಆಗಸ್ಟ್ 15ರಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿರುವ ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಬಗ್ಗೆ ಮಾಹಿತಿಯಿಲ್ಲ, ಪಕ್ಕದವರನ್ನು ಕೇಳಿ ಹೇಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷ ಗೊತ್ತಿಲ್ಲದ ಸಿಎಂ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವರನ್ನು ಬಂಧಿಸುವಂತೆ ಆಗ್ರಹಿಸಿತ್ತು.