ಕೊರೊನಾ ನಮ್ಮಿಂದ ದೂರವಾಗುತ್ತಿದೆಯಾ: ಡಾ. ಸಿ.ಎನ್.ಮಂಜುನಾಥ್ ಸಂದರ್ಶನ
ಕೊರೊನಾ ಎರಡನೇ ಅಲೆಯ ತೀವ್ರತೆ ಕರ್ನಾಟಕದಲ್ಲಿ ಕಮ್ಮಿಯಾಗುತ್ತಾ ಬರುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದರೂ, ಪಾಸಿಟಿವಿಟಿ ರೇಟ್ ಎರಡು ಜಿಲ್ಲೆಗಳನ್ನು ಹೊರತು ಪಡಿಸಿ ಹತೋಟಿಯಲ್ಲಿದೆ. ಇನ್ನು, ಮೃತ ಪಡುತ್ತಿರುವವರ ಸಂಖ್ಯೆಯೂ ಕಮ್ಮಿಯಾಗುತ್ತಿರುವುದು ನೆಮ್ಮದಿಯ ವಿಚಾರ.
ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳು, ಒಂದು ದಿನದ ಹಿಂದೆ ಮೂರಂಕಿಯಲ್ಲಿ ಇತ್ತು, ಆದರೆ, ಇದರ ಮರುದಿನ ಅದು ಹೆಚ್ಚಾಗಿದೆ. ಆದರೂ, ಲಸಿಕೆ ನೀಡುವ ವಿಚಾರ ಭಾರೀ ವೇಗವನ್ನು ಪಡೆದುಕೊಂಡಿದೆ. ಜನರಿಗೆ ವ್ಯಾಕ್ಸಿನ್ ಮೇಲಿರುವ ಅಪನಂಬಿಕೆ ದಿನದಿಂದ ದಿನಕ್ಕೆ ದೂರವಾಗುತ್ತಿದೆ ಎನ್ನುವುದು ವೈದ್ಯರ ಮಾತುಗಳು.
ಒನ್ ಇಂಡಿಯಾ ಕನ್ನಡ ನಡೆಸುತ್ತಿರುವ ಫೇಸ್ ಬುಕ್ ಸಂವಾದದ ಭಾಗವಾಗಿ, 83ನೇ ಸರಣಿಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿರುವಂತಹ ಡಾ.ಸಿ.ಎನ್.ಮಂಜುನಾಥ್ ಭಾಗವಹಿಸಿದ್ದರು.
ಭಾರತದಲ್ಲಿ ಒಂದೇ ದಿನ 1 ಕೋಟಿಗೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆ
ಸಂವಾದದಲ್ಲಿ ಡಾ.ಮಂಜುನಾಥ್ ಅವರು ಹಲವು ಉಪಯುಕ್ತ ಮಾಹಿತಿ/ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಸರಳ ನಡೆ, ಜನಸ್ನೇಹಿ, ಅಚ್ಚ ಕನ್ನಡದ ಸಂಭಾಷಣೆಯ ಮೂಲಕ 'ಜನಪರ ಡಾಕ್ಟರ್'ಎಂದೇ ಹೆಸರಾಗಿರುವ ಇವರು ಸಂದರ್ಶನದಲ್ಲಿ ನೀಡಿದ ಟಿಪ್ಸಿನ ಪ್ರಮುಖಾಂಶ ಹೀಗಿದೆ:
ಮೂರು ವಾರದ ಸೋಂಕಿತರ ಸಂಖ್ಯೆಯನ್ನು ನೋಡುತ್ತಿದ್ದರೆ ಇದು ಕಮ್ಮಿಯಾಗುತ್ತಿದೆ
ಪ್ರಶ್ನೆ: ಕೊರೊನಾ ಎರಡನೇ ಅಲೆ ನಮ್ಮಿಂದ ದೂರವಾಗಿದೆ ಎಂದು ಖಚಿತ ವಿಶ್ವಾಸದಿಂದ ಹೇಳಬಹುದಾ?
ಡಾ.ಮಂಜುನಾಥ್: ಎರಡನೇ ಅಲೆ ಕಮ್ಮಿಯಾಗುತ್ತಿರುವುದು ಹೌದು, ಆದರೆ ನಾವು ಮೂರನೇ ಅಲೆಯ ಆತಂಕದಲ್ಲಿದ್ದೇವೆ. ಕಳೆದ ಮೂರು ವಾರದ ಸೋಂಕಿತರ ಸಂಖ್ಯೆಯನ್ನು ನೋಡುತ್ತಿದ್ದರೆ ಇದು ಕಮ್ಮಿಯಾಗುತ್ತಿರುವುದು ಹೌದು. ರಾಜ್ಯದಲ್ಲಿ ಒಟ್ಟಾರೆಯಾಗಿ ಸುಮಾರು ಒಂದೂವರೆ ಸಾವಿರ ಹೊಸ ಕೇಸುಗಳು ಬರುತ್ತಿವೆ. ಇದೊಂದು, ಸಮಾಧಾನಕಾರ ಅಂಶ, ಜೊತೆಗೆ ಕೇರಳದಲ್ಲಿ ಹೆಚ್ಚುತ್ತಿರುವ ಸಂಖ್ಯೆಯನ್ನು ನೋಡಿದರೆ ಆತಂಕ ಕೂಡಾ ಇದೆ. ಕರಾವಳಿ ಭಾಗದಲ್ಲಿ ಕೇರಳದ ಜೊತೆಗೆ ಹೆಚ್ಚಿನ ವಹಿವಾಟು ಇರುವುದರಿಂದ ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಲಬೇಕಿದೆ.ಜಿಲ್ಲಾಡಳಿತ ಸೇರಿದಂತೆ ಹದಿನಾರು ಇಲಾಖೆಗಳು ಇದರಲ್ಲಿ ಕೆಲಸ ಮಾಡುತ್ತದೆ
ಪ್ರಶ್ನೆ: ಬೊಮ್ಮಾಯಿ ಸರಕಾರ ಕೋವಿಡ್ ಟಾಸ್ಕ್ ಫೋರ್ಸ್ ನೀಡುವ ಸಲಹೆಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾ?
ಡಾ.ಮಂಜುನಾಥ್: ಹೌದು, ಟೆಕ್ನಿಕಲ್ ಕಮಿಟಿ ನೀಡುವ ಸಲಹೆಗಳನ್ನು ಹೊಸ ಸರಕಾರ ಬಹುತೇಕ ಪಾಲಿಸುತ್ತಿದೆ. ಇದು ಬರೀ ಆರೋಗ್ಯ ಇಲಾಖೆಯ ಜವಾಬ್ದಾರಿ ಆಗಿರುವುದಿಲ್ಲ, ರೆವೆನ್ಯೂ, ಬಿಬಿಎಂಪಿ, ಜಿಲ್ಲಾಡಳಿತ ಸೇರಿದಂತೆ ಹದಿನಾರು ಇಲಾಖೆಗಳು ಇದರಲ್ಲಿ ಕೆಲಸ ಮಾಡುತ್ತದೆ. ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಲಬೇಕಾದರೆ ನಮ್ಮ ಸಲಹೆಗಳನ್ನು ರಾಜ್ಯ ಸರಕಾರ ಕೇಳುತ್ತದೆ.
ಐವತ್ತು ಸಾವಿರ ಹೊಸ ಕೇಸುಗಳನ್ನು ನಾವು ನೋಡಿದ್ದೇವೆ
ಪ್ರಶ್ನೆ: ಕೊರೊನಾ ತಳಿ ರೂಪಾಂತರಿಯಾಗಲಿದೆಯಾ, ಅದರ ಪರಿಣಾಮ ಹೇಗಿರುತ್ತದೆ?
ಡಾ.ಮಂಜುನಾಥ್: ಕೊರೊನಾ ವೈರಸಿಗೆ ಮೂಲ ಕಾರಣ ಡೆಲ್ಟಾ, ಇದರ ಬಗ್ಗೆ ಅನುಮಾನವಿಲ್ಲ. ಹರಡುವಿಕೆ ಮತ್ತು ತೀವ್ರತೆ ಮೊದಲು ಜಾಸ್ತಿಯಾಗಿತ್ತು. ಕರ್ನಾಟಕದಲ್ಲಿ ಒಂದು ಹಂತದಲ್ಲಿ ಐವತ್ತು ಸಾವಿರ ಹೊಸ ಕೇಸುಗಳನ್ನು ನಾವು ನೋಡಿದ್ದೇವೆ. ಈಗಿರುವ ತಳಿ ಒಂದು ವೇಳೆ ಮೂರನೇ ಅಲೆಗೆ ಬಂದಿದ್ದೇ ಆದಲ್ಲಿ, ಅದರ ತೀವ್ರತೆ ಕಮ್ಮಿಯಿರುತ್ತೆ ಎನ್ನುವುದನ್ನು ಖಚಿತವಾಗಿ ಹೇಳಬಹುದು. ಆದರೆ, ಆಗಸ್ಟ್ ಕೊನೆಯ ವಾರದಿಂದ ಮುಂದಿನ ಎರಡು ತಿಂಗಳಲ್ಲಿ ಹೊಸ ತಳಿ ಬಂದರೆ ಏನು ಎನ್ನುವುದು ನಮಗೂ ಖಚಿತತೆಯಿಲ್ಲ. ಹಾಗಾಗಿ, ಮುಂದಿನ ಎರಡು ತಿಂಗಳು ಎಚ್ಚರಿಕೆಯಿಂದ ಇರುವುದು ಸೂಕ್ತ.Recommended Video
ಮಕ್ಕಳಿಗೆ ಇದರ ಪ್ರಭಾವ ಕಮ್ಮಿಯಿರಬಹುದು, ಪೋಷಕರು ಎಚ್ಚರಿಕೆಯಿಂದ ಇರಬೇಕು
ಪ್ರಶ್ನೆ: ಸಾರ್ವಜನಿಕ ಗಣೇಶೋತ್ಸವ ವಿಚಾರದಲ್ಲಿ ಟಾಸ್ಕ್ ಫೋರ್ಸ್ ನೀಡಿದ ಸಲಹೆ ಮತ್ತು ಮೂರನೇ ಅಲೆ ಮಕ್ಕಳಿಗೆ ಕಾಡಲಿದೆಯಾ?
ಡಾ.ಮಂಜುನಾಥ್: ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದರೂ ಅದನ್ನು ಪಾಲಿಸಬೇಕಾದವರು ಸಾರ್ವಜನಿಕರು. ಜನರ ಸಹಕಾರವಿಲ್ಲದಿದ್ದರೆ ಯಾವ ವೈರಸ್ ಅನ್ನು ತಡೆಗಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಅರಿತುಕೊಳ್ಲಬೇಕು ಎನ್ನುವುದು ನನ್ನ ನಿವೇದನೆ. ಕೊರೊನಾ ಎನ್ನುವುದು ಗುಪ್ತಗಾಮಿನಿ, ಏರಿದರೇ ಏರುತ್ತಲೇ ಇರುತ್ತದೆ. ಮಕ್ಕಳಿಗೆ ಲಸಿಕೆ ಇನ್ನೂ ಬಂದಿಲ್ಲ. ಆದರೂ, ಮಕ್ಕಳಿಗೆ ಇದರ ಪ್ರಭಾವ ಸ್ವಲ್ಪ ಕಮ್ಮಿಯಿರಬಹುದು, ಆದರೆ ಪೋಷಕರು ಎಚ್ಚರಿಕೆಯಿಂದ ಇರುವುದು ಸೂಕ್ತ. ಟೆಸ್ಟಿಂಗ್ ಮುಂದುವರಿಯಬೇಕು, ಲಸಿಕೆ ಅಭಿಯಾನ ಹೆಚ್ಚಾಗಬೇಕು.