11 ಸೀಟು ಗೆದ್ದರೂ ಕಾಂಗ್ರೆಸ್ ನಲ್ಲಿ ಆಂತರಿಕ ಕೊತಕೊತ ಬೂದಿಮುಚ್ಚಿದ ಕೆಂಡ!
25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಕಮ್ಮಿ ಸೀಟು ಬಂದಿದ್ದರೆ, ಕಾಂಗ್ರೆಸ್ಸಿಗೆ ನಿರೀಕ್ಷೆಗಿಂತ ಹೆಚ್ಚು ಸೀಟುಗಳು ಬಂದಿದ್ದವು. ಆದರೂ, ಕಾಂಗ್ರೆಸ್ಸಿನಲ್ಲಿ ಆಂತರಿಕ ಕಿತ್ತಾಟ, ಪರಸ್ಪರ ದೋಷಾರೂಪಣೆಗೆ ಫುಲ್ ಸ್ಟಾಪ್ ಬೀಳುತ್ತಿಲ್ಲ.
ಕಾಂಗ್ರೆಸ್ಸಿನಲ್ಲಿ ಎಷ್ಟು ಬಣಗಳಿವೆ ಎಂದು ಕೇಳಿದರೆ ಯಾವ ಕಾಂಗ್ರೆಸ್ಸಿಗರೂ ಬಹಿರಂಗವಾಗಿ ಸತ್ಯ ಹೇಳಲಾರರು. ಆದರೂ, ಬಿಜೆಪಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮೂಲೆಗುಂಪು ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳುತ್ತಲೇ ಬರುತ್ತಿದೆ.
ವಾರಣಾಸಿಯಿಂದ ಬರುತ್ತಲೇ ಮೂವರು ಸಚಿವರಿಗೆ ಸಿಎಂ ಫುಲ್ ಕ್ಲಾಸ್
ವಿಧಾನ ಪರಿಷತ್ತಿನ ರಿಸಲ್ಟ್ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂದಾಗ ಎಲ್ಲರೂ ನನ್ನದೂ ಇರಲಿ ಎಂದು ಹೇಳುವುದು ಸ್ವಾಭಾವಿಕ. ಹಾಗಾಗಿಯೇ, ಇಲ್ಲಿ ಮತ್ತೆ ಕಾಂಗ್ರೆಸ್ಸಿನಲ್ಲಿ ಇದೆ ಎಂದು ಹೇಳಲಾಗುತ್ತಿರುವ ಎರಡೂ, ಮೂರೋ ಬಣಗಳಲ್ಲಿ ಗೆಲುವು ಯಾರಿಂದಾಗಿ ಎನ್ನುವ ಚರ್ಚೆ ಕೆಪಿಸಿಸಿ ಪಡಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ.
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎಷ್ಟು ಬಣಗಳಿವೆಯೋ, ಆದರೆ ಕೋಲಾರ ಕಾಂಗ್ರೆಸ್ಸಿನಲ್ಲಿ ಎರಡು ಬಣಗಳು ಇರುವುದು ಅತ್ಯಂತ ಸ್ಪಷ್ಟ ಮತ್ತು ಜಗಜ್ಜಾಹೀರು. ಈಗ, ಕೋಲಾರದಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ಕೂಡಾ, ಜಿಲ್ಲೆಯ ರಾಜಕೀಯ ವಿಚಾರ ಪಕ್ಷದಲ್ಲಿ ವೈಮನಸ್ಸಿನ ಗೂಡಾಗಿ ಕೂತಿದೆ.
ಪಕ್ಷದ ಇಬ್ಬರು ಹಿರಿಯ ಮುಖಂಡರ ಮೇಲೆ ಬಿಜೆಪಿ ಶಿಸ್ತುಕ್ರಮದ 'ಕೆಚ್ಚೆದೆ' ತೋರುವುದೇ?
ಡಾ.ಸುಧಾಕರ್ ಅವರು ಕೋಲಾರ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇನೆಂದು ಶಪಥ
ಕೋಲಾರದಲ್ಲಿ ಬಿಜೆಪಿಯ ಪ್ರಾಬಲ್ಯ ಅಷ್ಟಕಷ್ಟೇ, ಆದರೂ, ವಿಧಾನ ಪರಿಷತ್ ಚುನಾವಣೆಗೆ ಮುನ್ನ ನಡೆದ ಮುಖಂಡರ ಪಕ್ಷ ನಿಯತ್ತು ಬದಲಾವಣೆಯಿಂದಾಗಿ ಕಾಂಗ್ರೆಸ್ಸಿಗೆ ದೊಡ್ಡ ತಲೆನೋವಾಗಿ ಕೂತಿತ್ತು. ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತು ಹಾಲೀ ಆರೋಗ್ಯ ಸಚಿವರಾಗಿರುವ ಡಾ.ಸುಧಾಕರ್ ಅವರು ಕೋಲಾರ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇನೆಂದು ಶಪಥ ಮಾಡಿದ್ದರು. ಜಿಲ್ಲೆಯ ಕೆಲವು ಪ್ರಭಾವೀ ಮುಖಂಡರನ್ನು ಬಿಜೆಪಿಯತ್ತ ಸೆಳೆದಿದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆಗದೇ ಕಾಂಗ್ರೆಸ್ ಇಲ್ಲಿ ಜಯಭೇರಿ ಬಾರಿಸಿತ್ತು. ಆದರೂ, ಕಾಂಗ್ರೆಸ್ಸಿನಲ್ಲಿ ಆಂತರಿಕ ಕೊತಕೊತ ಸ್ಪೋಟಗೊಂಡಿದೆ.
ಕೋಲಾರದಲ್ಲಿ ಎರಡು ಬಣ, ಒಂದು ರಮೇಶ್ ಕುಮಾರ್ ಅವರದ್ದು ಇನ್ನೊಂದು ಮುನಿಯಪ್ಪನವರದ್ದು
ಕೋಲಾರದಲ್ಲಿ ದಶಕಗಳಿಂದಲೂ ಕಾಂಗ್ರೆಸ್ಸಿನಲ್ಲಿ ಎರಡು ಬಣಗಳಿವೆ. ಒಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರದ್ದು ಇನ್ನೊಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪನವರದ್ದು. ಇವರಿಬ್ಬರಿಗೆ ಆಗಿಬರುವುದಿಲ್ಲ ಎನ್ನುವುದು ಊರಿಗೆಲ್ಲಾ ಗೊತ್ತಿರುವ ವಿಚಾರ. ಅವರು ಇವರ ಮೇಲೆ, ಇವರು ಅವರ ಮೇಲೆ ಹೈಕಮಾಂಡ್ ತನಕ ದೂರು ಕೊಟ್ಟ ಉದಾಹರಣೆಗಳಿವೆ. ರಮೇಶ್ ಕುಮಾರ್ ಅವರು ಸಿದ್ದರಾಮಯ್ಯನವರ ಆಪ್ತರಾಗಿರುವುದು ಮುನಿಯಪ್ಪಗೆ ಇತ್ತೀಚಿನ ದಿನಗಳಲ್ಲಿ ಹಿನ್ನಡೆಯಾಗುತ್ತಿರುವುದಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸಭೆಯೊಂದರಲ್ಲಿ ಮುನಿಯಪ್ಪ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದು ಗೌಪ್ಯವಾಗಿಯೇನೂ ಉಳಿದಿರಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದರು
ಕೋಲಾರ ಕ್ಷೇತ್ರದಲ್ಲಿ ಎಲ್ಲರ ಲೆಕ್ಕಾಚಾರವನ್ನು ಮೀರಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನದ ಮಧ್ಯೆಯೂ ಅನಿಲ್ ಕುಮಾರ್ ಗೆದ್ದಿದ್ದರು. ಒಟ್ಟು 5,587 ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ಗೆ 2,340, ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ಗೆ 1,899 ಮತ್ತು ಜೆಡಿಎಸ್ ಅಭ್ಯರ್ಥಿ ವಿ.ರಾಮಚಂದ್ರಗೆ 1,438 ಮತಗಳು ಬಿದ್ದಿದ್ದವು. ಆದರೂ, ಇದು ಜಿಲ್ಲೆಯ ರಮೇಶ್ ಕುಮಾರ್ ಬಣದ ಸಿಟ್ಟಿಗೆ ಕಾರಣವಾಗಿದೆ. ಮುನಿಯಪ್ಪ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳಬೇಕೆನ್ನುವ ಒತ್ತಡ ಹೆಚ್ಚಾಗುತ್ತಿದೆ.
ಕೋಲಾರ ರಾಜಕೀಯ ಕಾಂಗ್ರೆಸ್ಸಿಗೆ ಬೂದಿಮುಚ್ಚಿದ ಕೆಂಡದಂತಾಗಿದೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನತೆಗೆ ಗೊತ್ತಿರುವಂತೆ ಮುನಿಯಪ್ಪ ಮತ್ತು ಡಾ.ಸುಧಾಕರ್ ಒಂದೇ. ಕೋಲಾರದ ಚುನಾವಣೆಯನ್ನು ಸುಧಾಕರ್ ಪ್ರತಿಷ್ಠೆಗೆ ತೆಗೆದುಕೊಂಡಿದ್ದರಿಂದ, ಮುನಿಯಪ್ಪನವರು ಕಾಂಗ್ರೆಸ್ ಅಭ್ಯರ್ಥಿ ಪರ ಕಾಟಾಚಾರಕ್ಕೂ ಪ್ರಚಾರ ನಡೆಸಿರಲಿಲ್ಲ. ಪ್ರಚಾರ ಬಿಟ್ಟಾಕಿ, ಬಿಜೆಪಿಗೆ ಮತ ಚಲಾಯಿಸಿ ಎಂದು ಪರೋಕ್ಷ ಪ್ರಚಾರ ನಡೆಸಿದ್ದರು ಎನ್ನುವ ನೇರ ಆರೋಪವನ್ನು ರಮೇಶ್ ಕುಮಾರ್ ಮಾಡುತ್ತಿದ್ದಾರೆ. ಮುನಿಯಪ್ಪ ವಿರುದ್ದ ಆಕ್ಷನ್ ತೆಗೆದುಕೊಳ್ಳಲೇ ಬೇಕು ಎಂದು ಪಟ್ಟು ಹಿಡಿದಿದ್ದವರಿಗೆ, ಅಧಿವೇಶನ ಮುಗಿಯಲಿ, ಸುಮ್ಮನೆ ಬಿಜೆಪಿಗೆ ಆಹಾರವಾಗುವುದು ಬೇಡ ಎಂದು ಸದ್ಯಕ್ಕೆ ಸುಮ್ಮನಿರಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ, ಕೋಲಾರ ರಾಜಕೀಯ ಕಾಂಗ್ರೆಸ್ಸಿಗೆ ಬೂದಿಮುಚ್ಚಿದ ಕೆಂಡದಂತಿದೆ.
Recommended Video