UP Election Results 2022: ಪ್ರಿಯಾಂಕ ಗಾಂಧಿ 209 ರ್ಯಾಲಿ, 24 ತಿಂಗಳ ಶ್ರಮ: ಫಲಿತಾಂಶ ಮುಖಭಂಗ
ಎಐಸಿಸಿಯ ಚಟುವಟಿಕೆಗಳ ಮೇಲೆ ಪರದೆಯ ಹಿಂದೆ ಹಿಡಿತ ಸಾಧಿಸುತ್ತಾ ಬರುತ್ತಿದ್ದ ಪ್ರಿಯಾಂಕ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ನೇಮಕಗೊಂಡಿದ್ದು ಜನವರಿ 23, 2019ರಂದು. ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯಾಗಿ ಪ್ರಿಯಾಂಕ ನೇಮಕಗೊಂಡಿದ್ದರು.
2019ರ ಮೇ ತಿಂಗಳಲ್ಲಿನ ಲೋಕಸಭಾ ಚುನಾವಣೆಗೆ ಮುನ್ನ ಪ್ರಿಯಾಂಕ ಗಾಂಧಿಯವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿತ್ತು. ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಭಾಷ್ಯ ಬರೆಯುವ ಪೂರ್ವ ಉತ್ತರ ಪ್ರದೇಶ 35 ಲೋಕಸಭಾ ಕ್ಷೇತ್ರವನ್ನು ಹೊಂದಿದೆ. ಆದರೆ, ಎಂಬತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದ್ದದ್ದು ಕೇವಲ ಒಂದು ಕ್ಷೇತ್ರದಲ್ಲಿ. ಅದೂ, ಸೋನಿಯಾ ಗಾಂಧಿಯ ಮೂಲಕ.
ಪಂಜಾಬ್ನಲ್ಲಿ ಇವಿಎಂ 'ನಮ್ಮವ', ಯುಪಿಯಲ್ಲಿ 'ಇವನಾರವ'!
ಕಾಂಗ್ರೆಸ್ಸಿಗೆ ಆ ಚುನಾವಣೆ ಎಷ್ಟು ಹಿನ್ನಡೆ ತಂದಿತ್ತು ಅಂದರೆ, ರಾಹುಲ್ ಗಾಂಧಿಯವರೇ ಪರಾಭವಗೊಂಡಿದ್ದರು. ಪ್ರಿಯಾಂಕ ಗಾಂಧಿ ಉಸ್ತುವಾರಿಯ ಪೂರ್ವ ಭಾಗದಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲಲಾಗಲಿಲ್ಲ. ಅದು, ಪ್ರಿಯಾಂಕ ಗಾಂಧಿಗಾದ ಮೊದಲ ಹಿನ್ನಡೆಯಾಗಿತ್ತು.
ಅಲ್ಲಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡು, ಅಂದರೆ ಸುಮಾರು ಎರಡು ವರ್ಷದಿಂದ ಬಹುತೇಕ ಉತ್ತರ ಪ್ರದೇಶದಲ್ಲೇ ಬೀಡು ಬಿಟ್ಟು ಪಕ್ಷದ ಪ್ರಚಾರದ ಉಸ್ತುವಾರಿಯನ್ನು ನೋಡಿಕೊಂಡಿದ್ದ ಪ್ರಿಯಾಂಕ ಗಾಂಧಿ, ಅಸೆಂಬ್ಲಿ ಚುನಾವಣೆಯಲ್ಲಿ ಈ ಬಾರಿ ಮ್ಯಾಜಿಕ್ ಮಾಡಿಯಾರು ಎಂದು ಕಾಂಗ್ರೆಸ್ಸಿನವರು ನಿರೀಕ್ಷಿಸಿದ್ದರು.
ಸಕ್ರಿಯ ರಾಜಕಾರಣದತ್ತ ರಾಬರ್ಟ್ ವಾದ್ರಾ: ಉ.ಪ್ರದೇಶದ ಈ ಕ್ಷೇತ್ರದಿಂದ ಕಣಕ್ಕೆ?
ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಪ್ರಿಯಾಂಕ
ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಪ್ರಿಯಾಂಕ ಗಾಂಧಿ, ಹೆಚ್ಚಿನ ಅಸೆಂಬ್ಲಿ ಕ್ಷೇತ್ರದಲ್ಲಿ ಸಂಚರಿಸಿ ಜನರ ನಾಡಿಮಿಡಿತ ಅರಿಯುವ ಕೆಲಸವನ್ನು ಮಾಡಿದ್ದರು. ದಣಿವಿಲ್ಲದೇ ಪ್ರಯಾಣಿಸುತ್ತಾ ಜನರ ಜೊತೆ ಬೆರೆಯುತ್ತಾ ಸಾಗಿದ್ದ ಪ್ರಿಯಾಂಕ ಅವರ ವಿಭಿನ್ನ ಪ್ರಚಾರ ಕಾಂಗ್ರೆಸ್ಸಿಗೆ ಲಾಭ ತಂದು ಕೊಡಬಹುದು ಎನ್ನುವ ಲೆಕ್ಕಾಚಾರವನ್ನು ರಾಜಕೀಯ ಪಂಡಿತರೂ ಆಡಿದ್ದರು. ಜನರನ್ನು ಸೆಳೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಪ್ರಿಯಾಂಕ ಮೇಲೆ ಪಕ್ಷ ಭರವಸೆಯನ್ನು ಇಟ್ಟುಕೊಂಡಿತ್ತು. (ಚಿತ್ರ : ಪಿಟಿಐ)
ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಾಡಿದ್ದ ಪ್ರಿಯಾಂಕ
ಏಳು ಹಂತದ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಾಡಿದ್ದ ಪ್ರಿಯಾಂಕ, ರಾಜ್ಯ ಮತ್ತು ದೇಶದ ಯಾವ ಪಕ್ಷದ ನಾಯಕರೂ ಮಾಡದಷ್ಟು ರೋಡ್ ಶೋ, ರ್ಯಾಲಿ, ಪ್ರಚಾರ ಸಭೆಯನ್ನು ನಡೆಸಿದ್ದರು. 56 ದಿನಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 203 ರ್ಯಾಲಿ ನಡೆಸಿದ್ದರೆ, ಪ್ರಿಯಾಂಕ ಗಾಂಧಿ ಒಟ್ಟಾರೆಯಾಗಿ 209 ಸಭೆಯನ್ನು ನಡೆಸಿದ್ದರು. ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್, ಮಾಯಾವತಿಗಿಂತಲೂ ಹೆಚ್ಚಿನ ಪ್ರಚಾರ ಸಭೆಯನ್ನು ಪ್ರಿಯಾಂಕ ನಡೆಸಿದ್ದರು. (ಚಿತ್ರ : ಪಿಟಿಐ)
ಮಹಿಳೆಯರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಪ್ರಾಮುಖ್ಯತೆ
ಮಹಿಳೆಯರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಪ್ರಾಮುಖ್ಯತೆಯನ್ನು ನೀಡಿದ್ದ ಪ್ರಿಯಾಂಕ ಗಾಂಧಿಯವರ ಮೊದಲ ಟಾರ್ಗೆಟ್ ಬಿಜೆಪಿ ಆನಂತರ ಸಮಾಜವಾದಿ ಪಕ್ಷವಾಗಿತ್ತು. ಆದರೆ, ಸತತ 24ತಿಂಗಳು ರಾಜ್ಯದಲ್ಲಿ ಬೀಡುಬಿಟ್ಟು ಪಕ್ಷದ ಪರವಾಗಿ ಸತತ ಸಭೆಯನ್ನು ನಡೆಸಿದ್ದ ಪ್ರಿಯಾಂಕ ಅವರ ಅವಿರತ ಪರಿಶ್ರಮ ವರ್ಕೌಟ್ ಆಗಲಿಲ್ಲ. ಪ್ರಿಯಾಂಕ ಗಾಂಧಿಯ ಸಭೆಗೆ ಜನರು ಸೇರುತ್ತಿದ್ದರೇ ಹೊರತು, ಅದು ಮತವಾಗಿ ಪರಿವರ್ತನೆಗೊಂಡಿಲ್ಲ ಎನ್ನುವುದು ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಸಾರಿಸಾರಿ ಹೇಳುತ್ತಿದೆ. (ಚಿತ್ರ : ಪಿಟಿಐ)
ಉತ್ತರ ಪ್ರದೇಶದಲ್ಲಿ ಎರಡಂಕಿ ದಾಟಲೂ ಕಾಂಗ್ರೆಸ್
ಬಿಜೆಪಿ-ಎಸ್ಪಿ-ಬಿಎಸ್ಪಿ-ಕಾಂಗ್ರೆಸ್ ನಡುವೆ ಚತುಸ್ಕೋನ ಸ್ಪರ್ಧೆಯಿರಲಿದೆ ಎನ್ನುವ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಹೊಡೆದಿದೆ. ಬಹುತೇಕ ಹೆಚ್ಚಿನ ಕಡೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಸ್ಪರ್ಧೆ ಏರ್ಪಟ್ಟು ಬಿಜೆಪಿ ಮತ್ತೆ ಅಧಿಕಾರ ಹಿಡಿಯುವಲ್ಲಿ ದಾಪುಗಾಲು ಹಾಕುತ್ತಿದೆ. ಕಾಂಗ್ರೆಸ್ ಯಾವ ರೀತಿ ಮುಖಭಂಗ ಅನುಭವಿಸಿದೆ ಎಂದರೆ 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಎರಡಂಕಿ ದಾಟಲೂ ಕಾಂಗ್ರೆಸ್ ವಿಫಲಗೊಂಡಿದೆ, ಈಗಿನ ಟ್ರೆಂಡ್ ಪ್ರಕಾರ. (ಚಿತ್ರ : ಪಿಟಿಐ)
ಪ್ಲ್ಯಾನ್ ಬಿ ಏನಾದರೂ ರೂಪಿಸಿದ್ದರೆ ಅದನ್ನು ಜಾರಿಗೆ ತರುವ ಕಾಲ
ಆ ಮೂಲಕ, ಹನ್ನೊಂದು ಬಾರಿ ಉತ್ತರ ಪ್ರದೇಶದ ಇತಿಹಾಸದಲ್ಲಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಪ್ರದರ್ಶನವನ್ನು ನೀಡಿದೆ. ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ಮುಂದೆ ಸ್ಪರ್ಧಿಸಲಾಗದೇ ಕಾಂಗ್ರೆಸ್ ಮತ್ತೊಮ್ಮೆ ಕಮರಿದೆ. ಮುಂಬರುವ ಲೋಕಸಭಾ ಚುನಾವಣೆಯ ಆಧಾರದ ಮೇಲೆ ಈ ಅಸೆಂಬ್ಲಿ ಚುನಾವಣೆ ಕಾಂಗ್ರೆಸ್ ಪಾಲಿಗೆ ಅತ್ಯಂತ ಮಹತ್ವದಾಗಿತ್ತು. ಆದರೆ, ಪ್ರಿಯಾಂಕ ಗಾಂಧಿಯ ತೀವ್ರ ಪ್ರಯತ್ನದ ನಂತರವೂ ಕಾಂಗ್ರೆಸ್ ಮೇಲೇಳಲಿಲ್ಲ. ಹಾಗಾಗಿ, ಪಕ್ಷ ಪ್ಲ್ಯಾನ್ ಬಿ ಏನಾದರೂ ರೂಪಿಸಿದ್ದರೆ ಅದನ್ನು ಜಾರಿಗೆ ತರುವ ಕಾಲ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. (ಚಿತ್ರ : ಪಿಟಿಐ)