ಅಟಲ್ ಕಳೆದುಕೊಂಡ ಭಾರತ ಶೋಕ ಸಾಗರದಲ್ಲಿ ಮುಳುಗಿದೆ
ವಾಕ್ಪಟುತ್ವ ಮಾತ್ರವಲ್ಲ, ಕವಿತೆಯ ಮೇಲೆ ಅವರಿಗಿದ್ದ ಪ್ರಭುತ್ವಕ್ಕೂ ಅಲ್ಲ, ಭ್ರಷ್ಟತೆಯ ಸೋಂಕು ಕೂಡ ಇಲ್ಲದ ತಮ್ಮ ನಿಷ್ಕಳಂಕ ವ್ಯಕ್ತಿತ್ವದಿಂದಾಗಿ ವಿರೋಧ ಪಕ್ಷದಿಂದಲೂ ಬೆನ್ನು ತಟ್ಟಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಬದುಕಿಲ್ಲ ಎಂಬುದು ನಂಬಲಸಾಧ್ಯವಾದ ಸಂಗತಿ.
ಪಕ್ಷಾತೀತರಾಗಿ, ದೇಶಾತೀತರಾಗಿ, ಜಾತ್ಯಾತೀತರಾಗಿ ಕೋಟ್ಯಂತರ ಅಭಿಮಾನಿ ಬಳಗವನ್ನು ಗಳಿಸಿದ್ದ ಅಟಲ್ ಅವರ ಏಕೈಕ ಆಸ್ತಿಯೇ ಅದು. ರಾಜಕೀಯ ಚದುರಂಗದಾಟದಲ್ಲಿ ಅವರ ವಿರೋಧಿಗಳಿದ್ದಿರಬಹುದು, ಆದರೆ ಅವರು ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳದ ಅಜಾತಶತ್ರುವಾಗಿದ್ದರು.
ಅಗಲಿದ ನಾಯಕನಿಗೆ ಕಂಬನಿ ಸುರಿಸಿದ ರಾಜಕೀಯ ದಿಗ್ಗಜರು
ಇಂಥ ರಾಜಕೀಯ ಮುತ್ಸದ್ದಿ, ಜೀವನೋತ್ಸಾಹಿ, ಅದ್ಭುತ ವಾಗ್ಮಿ, ಭಾರತದ ಶಕ್ತಿ ಏನೆಂದು ಇಡೀ ಜಗತ್ತಿಗೆ ತೋರಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಳೆದುಕೊಂಡ ಇಡೀ ದೇಶ ಇಂದು ಶೋಕಸಾಗರದಲ್ಲಿ ಮುಳುಗಿದೆ. ಅವರ ಕಡು ವಿರೋಧಿಗಳೂ ಕಂಬನಿ ಮಿಡಿಯುತ್ತಿದ್ದಾರೆ.
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ
ಹಲವರ ಮನದಾಂತರಾಳದಿಂದ ಎಲ್ಲ ಬಗೆಯ ಭಾವನೆಗಳು ಈ ಸಂದರ್ಭದಲ್ಲಿ ಹೊರಬರುತ್ತಿವೆ. ಇದು ಸಾಧ್ಯವಾಗಿದ್ದ ಅಟಲ್ ಅವರ ಅಚಲವಾದ ವ್ಯಕ್ತಿತ್ವದಿಂದ ಮಾತ್ರ. ಅಟಲ್ ಬಿಹಾರಿ ವಾಜಪೇಯಿ ಅಂಥವರು ಎಂದೂ ಸಾಯುವುದಿಲ್ಲ. ಅವರೆಂದಿಗೂ ಅಮರರಾಗಿರುತ್ತಾರೆ ಎಂದು ಅಶ್ರುತರ್ಪಣ ನೀಡುತ್ತಿದ್ದಾರೆ.
ಅಂಥ ನಾಯಕರನ್ನು ಪಡೆಯಲು ನಮಗೆ ಅರ್ಹತೆಯಿಲ್ಲ
2004ರಲ್ಲಿ ನಮ್ಮ ಸ್ವಾರ್ಥಕ್ಕಾಗಿ ನಾವು ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದೆವು. ಪ್ರಾಮಾಣಿಕವಾಗಿ ಹೇಳುತ್ತೇನೆ ನಾವು ಮೋಸಗಾರರಲ್ಲವೆ? ನಾವು ಕುಟುಂಬ ರಾಜಕಾರಣ ಮಾಡುತ್ತಿರುವ ಮೋಸಗಾರರನ್ನು ಸಲಹುತ್ತೇವೆ. ಆದರೆ, ಅಟಲ್ ಬಿಹಾರಿ ವಾಜಪೇಯಿಯಂಥ ಅನರ್ಘ್ಯ ರತ್ನವನ್ನು ನಮ್ಮ ಸ್ವಾರ್ಥಕ್ಕಾಗಿ ತಿರಸ್ಕರಿಸುತ್ತೇವೆ. ಅವರಂಥ ನಾಯಕನನ್ನು ಪಡೆಯಲು ನಮಗೆ ಯಾವುದೇ ಅರ್ಹತೆಯಿಲ್ಲ ಎಂದು ರೇಣುಕಾ ಜೈನ್ ಎಂಬುವವರು ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.
ಅಟಲ್ ನಿಧನಕ್ಕೆ ಕಾಂಗ್ರೆಸ್ ಕಂಬನಿ
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ಕೃಷ್ಟ ನಾಯಕರಾಗಿದ್ದರು. ಭಾರತ ತನ್ನ ಅದ್ಭುತ ವ್ಯಕ್ತಿತ್ವದ ಮಗನನ್ನು ಕಳೆದುಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೋಟ್ಯಂತರ ಜನರು ಗೌರವಿಸುತ್ತಿದ್ದರು. ಅವರ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ಸಾಂತ್ವನವಿದೆ. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿಯವರು ಸಂದೇಶ ನೀಡಿದ್ದಾರೆ. ಇಂಥ ಸಂದೇಶ ನೀಡಿದ್ದು ಕಾಂಗ್ರೆಸ್ ನಾಯಕರಾ ಎಂದು ಕೆಲವರು ಹುಬ್ಬೇರಿಸಿರುವುದು ಅಟಲ್ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ಮನೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ ಅಟಲ್
ಸರಾಳಾತಿ ಸರಳ ವ್ಯಕ್ತಿತ್ವದವರಾಗಿದ್ದ 'ಭಾರತ ರತ್ನ' ಅಟಲ್ ಅವರು ಪ್ರಧಾನಿಯಾಗಿದ್ದಾಗಲೂ ತಮ್ಮ ಸರಳತನವನ್ನು ಎಂದೂ ಮರೆತಿರಲಿಲ್ಲ. ಅಖಂಡ ಬ್ರಹ್ಮಚಾರಿಯಾಗಿದ್ದ ಅವರು ತಮ್ಮ ಮನೆಯಲ್ಲಿ ಆಗಾಗ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಭಾರತದ ರಾಜಕೀಯದ ಭೀಷ್ಮ ಪಿತಾಮಹ ಎಂದೇ ಕರೆಯಿಸಿಕೊಳ್ಳುತ್ತಿದ್ದ ಅವರು, ಅಧಿಕಾರಕ್ಕಾಗಿ ಪ್ರಾಮಾಣಿಕತೆಯನ್ನು, ಮೌಲ್ಯಗಳನ್ನು ಎಂದೂ ಬಲಿಕೊಡಲಿಲ್ಲ. ಅವರು ದೇಶದ ಜನತೆಗೆ ಬಿಟ್ಟುಹೋಗಿದ್ದು ಮಾತ್ರ ದೇಶಭಕ್ತಿ ಮಾತ್ರ.
ಒಬ್ಬರು ಅಬ್ದುಲ್ ಕಲಾಂ, ಮತ್ತೊಬ್ಬರು ಅಟಲ್
ಇಲ್ಲಿಯವರೆಗೆ ಭಾರತ ಇಬ್ಬರೇ ಮುತ್ಸದ್ದಿಗಳನ್ನು ಕಂಡಿದೆ. ಒಬ್ಬರು ಭಾರತ ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿದ್ದ, ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಭಾರತದ ನ್ಯೂಕ್ಲಿಯರ್ ಮ್ಯಾನ್ ಎಂದು ಹೆಸರು ಗಳಿಸಿದ್ದ, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು. ಇವರಿಬ್ಬರು ಭಾರತ ರತ್ನಗಳ ಅಭೂತಪೂರ್ವ ಸಾಧನೆಯೆಂದರೆ ಪೋಖ್ರಾನ್ ನಲ್ಲಿ 1998ರಲ್ಲಿ ಅಟಲ್ ಅವರ ನಾಯಕತ್ವದಲ್ಲಿ 2ನೇ ಬಾರಿ ನ್ಯೂಕ್ಲಿಯರ್ ಪರೀಕ್ಷೆ ಮಾಡಿ ಭಾರತದ ಶಕ್ತಿ ಏನೆಂದು ತೋರಿಸಿದ್ದರು.