ಲಕ್ಷ ಸಂಬಳದ ನೌಕರಿ ತೊರೆದು, ಗಾಣ ನಿರ್ಮಿಸಿ ಕೋಟಿ ಆದಾಯ ಕಂಡ ಎಂಜಿನಿಯರ್ ಸ್ನೇಹಿತರು
ರಾಮನಗರ, ನವೆಂಬರ್ 24: ಮೂವರು ಸ್ನೇಹಿತರು ಇಂಜಿನಿಯರಿಂಗ್ ಮಾಡಿ ಒಂದೇ ಐಟಿ, ಬಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಲಕ್ಷ ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು. ಆದರೆ ಅಷ್ಟಕ್ಕೆ ಸೀಮಿತವಾಗಿದ್ದ ಅವರು, ಇದೀಗ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿಸಲು ಪಣ ತೊಟ್ಟಿದ್ದಾರೆ. ದೇಸಿ ಹಸುಗಳನ್ನು ಬಳಸಿ ಆ ಸ್ನೇಹಿತರು ಇದೀಗ ಕೋಟಿ ಕೋಟಿ ಆದಾಯ ಪಡೆಯುತ್ತಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ರಾಜಪುರ ಗ್ರಾಮದಲ್ಲಿ ಮಹೇಶ್, ಯೋಗೇಶ್ ಮತ್ತು ಚರಣ ಎಂಬುವವರು ನಾಲ್ಕು ಎಕರೆ ಜಮೀನು ಖರೀದಿ ಮಾಡಿ, ದೇಸಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮೂರು ಜನ ಸ್ನೇಹಿತರು ಮುಂದಾಗಿದ್ದಾರೆ.
ಬಿಡದಿಯಲ್ಲಿ "ನನ್ನ ಮನೆ" ಯೋಜನೆಯಡಿ 264 ಮನೆಗಳ ವಿತರಣೆ; ವಿ.ಸೋಮಣ್ಣ
ಆಹಾರ ಕಲಬೆರಕೆ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಕಂಡು ಬೇಸತ್ತಿದ್ದ ಯುವಕರಿಗೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನಿಸಿತು. ಇನ್ನೊಂದೆಡೆ ದೇಸಿ ತಳಿಗಳು, ಸಾಂಪ್ರದಾಯಿಕ ಕೃಷಿ ವಿಧಾನಗಳು ಅಳಿವಿನಂಚಿಗೆ ಸರಿಯುತ್ತಿದ್ದದು ಮತ್ತಷ್ಟು ಕಾಡಿತು.
ಗಾಣದಿಂದ ಎಣ್ಣೆ ತೆಗೆಯುವ ಘಟಕ
ಎರಡು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ಅವರು, ಪ್ರತಿಷ್ಠಿತ ಕಂಪನಿಗಳಲ್ಲಿ ಮಾಡುತ್ತಿದ್ದ ಉದ್ಯೋಗ ಬಿಟ್ಟು, ಆಹಾರ ಜಾಗೃತಿ ಮೂಡಿಸುತ್ತಾ, ದೇಸಿ ಆಹಾರ ಉತ್ಪಾದನೆಗೆ ಮುಂದಾದರು. ಅದರ ಮೊದಲ ಪ್ರಯತ್ನವಾಗಿ ಗಾಣದಿಂದ ಎಣ್ಣೆ ತೆಗೆಯುವ ಘಟಕ ಆರಂಭಿಸಿದರು. ಗಾಣದಿಂದ ತಯಾರು ಮಾಡುವ ಎಣ್ಣೆಯನ್ನು ದೇಶದ 22 ರಾಜ್ಯಗಳಿಗೆ ಸದ್ಯಕ್ಕೆ ಸರಬರಾಜು ಮಾಡಲಾಗುತ್ತಿದೆ. ಇನ್ನೆರೆಡು ತಿಂಗಳಲ್ಲಿ ದೇಶ-ವಿದೇಶಗಳಿಗೂ ತಲುಪಿಸುವುದಾಗಿ ಕನಸು ಕಂಡಿದ್ದಾರೆ.
10 ಗಾಣಗಳನ್ನು ಇಟ್ಟುಕೊಂಡರೆ 30 ಜನರಿಗೆ ಕೆಲಸ
ಅಂದಹಾಗೆ, ಒಂದು ಗಾಣದಲ್ಲಿ ಮೂರು ಮಂದಿ ಕೆಲಸ ಮಾಡುತ್ತಾರೆ. 10 ಗಾಣಗಳನ್ನು ಇಟ್ಟುಕೊಂಡರೆ 30 ಜನರಿಗೆ ಕೆಲಸ ಸಿಗುತ್ತದೆ ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಐದು ರೀತಿಯ ಎಣ್ಣೆ ತೆಗೆಯುವ ಗಾಣಕ್ಕೆ ಹಸುವನ್ನು ಬಳಿಸಿಕೊಂಡು ಗಾಣದಲ್ಲಿ ಎಣ್ಣೆ ತಯಾರು ಮಾಡುತ್ತಿದ್ದಾರೆ.
ಕೆ.ಆರ್ ಪೇಟೆಯಲ್ಲಿ ಮೊದಲ ಹಂತ
ಕಡಲೇ ಎಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆ, ಕಸುಬೆ ಎಣ್ಣೆ, ಎಳ್ಳೆಣ್ಣೆ ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ಸಾಕಷ್ಟು ಶ್ರಮಪಟ್ಟಿದ್ದ ಅವರು, ಮೈಸೂರು ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಮೊದಲ ಹಂತವಾಗಿ ಘಟಕ ಶುರು ಮಾಡಿ ಯಶಸ್ವಿ ಕಂಡ ಬೆನ್ನಲ್ಲೇ ಇದೀಗ ರಾಮನಗರ ಜಿಲ್ಲೆಯಲ್ಲಿ ಎರಡನೇ ಘಟಕ ಶುರು ಮಾಡಿದ್ದಾರೆ.
ಕೃಷಿ ಚಟುವಟಿಕೆಗಳು ಕಣ್ಮರೆ
ಮೊದಮೊದಲು ಅನುಭವಿಸಿದ ಕಷ್ಟಗಳನ್ನು ನೋಡಿ ಈ ಕೆಲಸ ಬೇಡ ಎಂದಿದ್ದ ಕುಟುಂಬಸ್ಥರು, ಇದೀಗ ಸಂತಸ ವ್ಯಕ್ತಪಡಿಸುತ್ತಾರೆ. ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಕಣ್ಮರೆಯಾದ ಹಿನ್ನೆಲೆಯಲ್ಲಿ ಈ ಮೂರು ಸ್ನೇಹಿತರು ಸಾಂಸ್ಕೃತಿಕ ಚಟುವಟಿಕೆಗೆ ಮರು ಜೀವ ಕೊಡಲು ಮುಂದಾಗಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯ ಜತೆಗೆ, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ ಎಂಬುದು ಎಲ್ಲರ ಆಶಯವಾಗಿದೆ.