ಅತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಸಜ್ಜನವರ ಯಾರು?
ಬೆಂಗಳೂರು, ಡಿಸೆಂಬರ್ 6; ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ತೆಲಂಗಾಣದ ಪಶುವೈದ್ಯೆ ಅವರ ಹತ್ಯಾಚಾರ ಮಾಡಿದವರನ್ನು ಯಮಪುರಿಗೆ ಅಟ್ಟಿದ ಸೈಬರಾಬಾದ್ ಪೊಲೀಸರ ನಡೆ ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಒಳಗಾಗುತ್ತಿದೆ.
ಬೆಳ್ಳಂಬೆಳಗ್ಗೆ ಇಡೀ ದೇಶಕ್ಕೆ ಸಿಹಿ ಸುದ್ದಿ ನೀಡಿದ ಸೈಬರಾಬಾದ್ ಪೊಲೀಸರು, ಎನ್ಕೌಟರನಲ್ಲಿ ಪ್ರಿಯಾಂಕ್ ರೆಡ್ಡಿಯನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳಾದ ಮಹಮ್ಮದ್, ಜೊಲ್ಲು ಶಿವು, ಜೊಲ್ಲು ನವೀನ ಹಾಗೂ ಕೇಶವ ಎನ್ನುವ ಕಾಮಕ್ರಿಮಿಗಳ ಜೊತೆ ಸ್ಥಳ ಮಹಜರು ಮಾಡಲು ಹೋಗಿದ್ದರು. ಇದೇ ವೇಳೆ ಕಾಮಕ್ರಿಮಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಪೊಲೀಸರು ಎನ್ಕೌಂಟರ್ ಮಾಡಿ ಪ್ರಕರಣಕ್ಕೆ ಮುಕ್ತಿ ಹಾಡಿದ್ದಾರೆ. ದೇಶವೇ ಹಾಡಿ ಹೊಗಳುತ್ತಿರುವ ಈ ಸಂಗತಿಯ ರೂವಾರಿ ಕನ್ನಡಿಗ ಹುಬ್ಬಳಿಯ ವಿ.ಸಿ.ಸಜ್ಜನವರ.
ವಿ.ಸಿ.ಸಜ್ಜನವರ ಯಾರು?
ತೆಲಂಗಾಣದಲ್ಲಿ 1996 ರ ಐಪಿಎಸ್ ಬ್ಯಾಚ್ ನ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ವಿಶ್ವನಾಥ್ ಚನ್ನಪ್ಪ ಸಜ್ಜನವರ ಅವರು, ಸದ್ಯ ಸೈಬರಾಬಾದ್ ಪೊಲೀಸ್ ಕಮೀಷನರೇಟ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನವರಾದ ಅವರು ಹುಟ್ಟಿ ಬೆಳದಿದ್ದು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ. ತಂದೆ ಚನ್ನಪ್ಪ ಸಜ್ಜನರ, ತಾಯಿ ಗಿರಿಜಮ್ಮ ಸಜ್ಜನವರ. ಇಬ್ಬರು ಸಹೋದರು ಇವರಿಗೆ ಇದ್ದಾರೆ.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್ ಕೌಂಟರ್
ಹುಬ್ಬಳ್ಳಿಯಲ್ಲೇ ಶಿಕ್ಷಣ
ವಿಶ್ವನಾಥ ಸಜ್ಜನವರ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಲಯನ್ಸ ಶಾಲೆಯಲ್ಲಿ ಮುಗಿಸಿದ್ದಾರೆ. ಪಿಯುಸಿ ಹಾಗೂ ಪದವಿಯನ್ನು ಹುಬ್ಬಳ್ಳಿಯ ಕೆಎಲ್ಇ ಜಗದ್ಗುರು ಗಂಗಾಧರ ಕಾಲೇಜಿನಲ್ಲಿ ಪೂರೈಸಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಆ ನಂತರ ಅವರು 1996 ರಲ್ಲಿ ಯುಪಿಎಸಸಿ ಪರೀಕ್ಷೆ ತೇರ್ಗಡೆ ಹೊಂದಿ ಆಂದ್ರ ಕೇಡರ್ ನ ಐಪಿಎಸ್ ಅಧಿಕಾರಿಯಾದರು. ಆಂದ್ರದಲ್ಲಿ ಪುಲಿವೆಂದಲು ಡಿವೈಎಸ್ಪಿ ಆಗಿ ವೃತ್ತಿ ಆರಂಭ ಮಾಡಿದ್ದರು.
ಬಾಲ್ಯದಲ್ಲೇ ತಾಯಿ ಕಳೆದುಕೊಂಡಿದ್ದರು
ವಿ.ಸಿ.ಸಜ್ಜನವರ ಅವರು ಬಾಲ್ಯದಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಅವರು ಹುಬ್ಬಳ್ಳಿಯಲ್ಲಿ ತಮ್ಮ ಚಿಕ್ಕಮ್ಮ ಮಲ್ಲಮ್ಮರ ಬಳಿ ಬೆಳದಿದ್ದರು. ಶಾಲಾ ಕಾಲೇಜುಗಳಲ್ಲಿ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೆ ಅವರು ಅರ್ಥಶಾಸ್ತ್ರದಲ್ಲಿ ಪಿಎಚ್ ಡಿ ಪದವಿಯನ್ನೂ ಸಹ ಪೂರೈಸಿದ್ದಾರೆ. ಇಂದಿಗೂ ಅವರು ಹುಬ್ಬಳಿಯ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?
ಸಂತಸ ಹಂಚಿಕೊಂಡ ಸಹೋದರ
ವಿ.ಸಿ.ಸಜ್ಜನವರ ಅವರ ಸಹೋದರ ಮಲ್ಲಿಕಾರ್ಜುನ ಸಜ್ಜನವರ ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ. ಶುಕ್ರವಾರ ಬೆಳಿಗ್ಗೆ ಸುದ್ದಿ ತಿಳಿದು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಹಾಗೂ ಕೊಲೆ ಘಟನೆ ನಡೆದ ನಂತರ ನಾನೂ ಕೂಡ ತುಂಬ ಮರುಗಿದ್ದೆ. ನನ್ನ ಸಹೋದರ ಘಟನೆಯ ತನಿಖೆಯನ್ನು ಸರಿಯಾಗಿ ನಡೆಸುತ್ತಾರೆ ಎನ್ನುವ ವಿಶ್ವಾಸವಿತ್ತು. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಗ ಎನ್ಕೌಂಟರ್ ನಡೆದಿರುವುದು ಸರಿಯಾಗಿದೆ. ಸಂತ್ರಸ್ತೆಗೆ ನ್ಯಾಯ ದೊರಕಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಪಶುವೈದ್ಯೆ ಕೊಂದವರನ್ನು ಎನ್ ಕೌಂಟರ್ ಮಾಡಿದ್ದು ಕನ್ನಡಿಗ
ಟ್ರೆಂಡಿಂಗ್ ನಲ್ಲಿ ಸಜ್ಜನವರ
ಬೆಳ್ಳಂಬೆಳಗ್ಗೆ ಇಡೀ ದೇಶದ ಜನರಿಗೆ ಸಿಹಿ ಸುದ್ದಿ ನೋಡಿರುವ ಸೈಬರಾಬಾದ್ ಪೊಲೀಸರು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಅದರಲ್ಲೂ ಪೊಲೀಸ್ ಕಮೀಷನರ್ ವಿ.ಸಿ.ಸಜ್ಜನವರ ಕ್ರಮದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.