ಭೂಮಿಗೆ ಎದುರಾಯ್ತಾ ಮಹಾ ಆಪತ್ತು? ಇನ್ನೆಷ್ಟು ದಿನ ನಡೆಯಲಿದೆ ಮನುಷ್ಯರ ಆಟ?
ಬೇಡ ಬೇಡ ಅಂದರೂ ಕೇಳಲಿಲ್ಲ, ಕಡೆಗೆ ವಿಜ್ಞಾನಿಗಳೆಲ್ಲಾ ಒಗ್ಗಟ್ಟಾಗಿ ಬೇಡಿಕೊಂಡರೂ ಸುಮ್ಮನಾಗಲೇ ಇಲ್ಲ. ಭೂತಾಯಿ ಒಡಲನ್ನು ಬಗೆದು, ಪ್ರಕೃತಿಯನ್ನೇ ನಾಶ ಮಾಡಿ, ಜಗತ್ತನ್ನು ವಿನಾಶದ ಅಂಚಿಗೆ ದೂಡಿಬಿಟ್ಟಿದ್ದಾನೆ ಮಾನವ. ಮಾಡಿದ ಪಾಪ ಸುಮ್ಮನೆ ಬಿಡುತ್ತಾ ಹೇಳಿ..? ಖಂಡತಾ ಇಲ್ಲ, ಮಾನವರು ಮಾಡಿದ ತಪ್ಪಿಗೆ ಈಗ ಅದೇ ಮಾನವ ದುರಂತದ ದಿನಗಳನ್ನ ಎಣಿಸುವಂತಾಗಿದೆ. ಇಡೀ ಮಾನವ ಸಂತತಿ ಬೆಚ್ಚಿಬೀಳುವಂತಹ ಸುದ್ದಿ ಕೊಟ್ಟಿದ್ದಾರೆ ವಿಜ್ಞಾನಿಗಳು.
Recommended Video
ಕಳೆದ 14 ವರ್ಷಗಳಲ್ಲಿ ಭೂ ವಾತಾವರಣ ರಿಪೇರಿ ಮಾಡಲು ಆಗದಷ್ಟು ಹಾಳಾಗಿ ಹೋಗಿದೆಯಂತೆ. ಇದರ ಪರಿಣಾಮ ಭೂ ತಾಪಮಾನ ಏರಿಕೆ ಪ್ರಮಾಣ 14 ವರ್ಷಗಳಲ್ಲಿ ಡಬಲ್ ಆಗಿದ್ದು, ದೊಡ್ಡ ಕಂಟಕ ಎದುರಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ ವಿಜ್ಞಾನಿಗಳು. ಹೌದು, ಅಮೆರಿಕದ ನಾಸಾ ಸಂಸ್ಥೆ ನೇತೃತ್ವದಲ್ಲಿ ನಡೆದಿರುವ ಅಧ್ಯಯನದಲ್ಲಿ ಈ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ದಿನದಿಂದ ದಿನಕ್ಕೆ ಮಾನವ ಪ್ರಕೃತಿ ಮೇಲೆ ನೆಸುತ್ತಿರುವ ದೌರ್ಜನ್ಯ ಹೆಚ್ಚಿಸುತ್ತಿದ್ದು, ಇದು ದೊಡ್ಡ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಭೂಮಿ ವಾತಾವರಣದಲ್ಲಿ ಏರುಪೇರು ಎದುರಾಗಲು ಮಾನವನ ದುರಾಸೆಯೇ ಕಾರಣವಾಗುತ್ತಿದೆ.
ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!
ಏಕೆ ಹೀಗಾಯ್ತೋ ‘ಮಾನವ’?
‘ಭೂಮಿ' ಜೀವಿಗಳ ವಾಸಕ್ಕೆ ಯೋಗ್ಯವಾದ ಗ್ರಹ. ಆದ್ರೆ ಹೀಗೆ ಭೂಮಿ ರೂಪುಗೊಳ್ಳಲು ಕೋಟ್ಯಂತರ ವರ್ಷ ಬೇಕಾಯಿತು. ಈ ಪರಿಶ್ರಮವನ್ನ ಮನುಷ್ಯ ಕೆಲವೇ ಕೆಲವು ವರ್ಷಗಳಲ್ಲಿ ಹಾಳು ಮಾಡಿದ್ದಾನೆ. ಕೈಗಾರಿಕೆಗಳೂ ಸೇರಿದಂತೆ ಮನುಷ್ಯರು ದಿನನಿತ್ಯ ಲಕ್ಷಾಂತರ ಟನ್ ಕಾರ್ಬನ್ ಹಾಗೂ ಕಾರ್ಬನ್ ಸಂಯುಕ್ತಗಳನ್ನು ಭೂಮಿ ವಾತಾವರಣಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ಭೂಮಿ ತನ್ನ ಮೊದಲಿನ ಶಕ್ತಿ-ಸಾಮರ್ಥ್ಯ ಕಳೆದುಕೊಂಡಿದೆ. ಈ ಹಿಂದೆ ಸೂರ್ಯನಿಂದ ಬರುವ ವಿಕಿರಣ ಹಾಗೂ ಬಿಸಿಯನ್ನ ಬಾಹ್ಯಾಕಾಶಕ್ಕೆ ಬಿಡುತ್ತಿತ್ತು ಭೂಮಿ. ಜೀವಿಗಳಿಗೆ ಈ ಪ್ರಕ್ರಿಯೆ ಶ್ರೀರಕ್ಷೆಯಾಗಿತ್ತು. ಆದ್ರೆ ಈಗ ಎಲ್ಲಾ ಉಲ್ಟಾ ಆಗಿದೆ, ವಾತಾವರಣದಲ್ಲಿ ಅತಿಯಾದ ಕಾರ್ಬನ್ ಸಂಯುಕ್ತಗಳು ಸೇರಿರುವ ಪರಿಣಾಮ, ಸೂರ್ಯನಿಂದ ಬರುವ ಅಷ್ಟೂ ಬಿಸಿಯನ್ನ ಭೂಮಿ ಹೀರಿಕೊಳ್ಳುತ್ತಿದೆ. ಇದರಿಂದ ಭೂಮಿಯ ವಾತಾವರಣದಲ್ಲಿ ಅಪಾಯಕಾರಿ ವಿಕಿರಣಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ.
2005-2019ರ ಮಧ್ಯೆ ಸರ್ವನಾಶ
ಅಮೆರಿಕ ವಿಜ್ಞಾನಿಗಳು ನಡೆಸಿರುವ ಅಧ್ಯಯನಕ್ಕೆ 2005-2019ರ ಅಂಕಿ-ಅಂಶ ಬಳಸಿಕೊಳ್ಳಲಾಗಿದೆ. ಹಾಗೇ ಹಿಂದಿನ ಪರಿಸ್ಥಿತಿಗೆ ಇದನ್ನು ತಾಳೆಹಾಕಿ ನೋಡಿದ್ದಾರೆ. ಆಗಲೇ ನೋಡಿ ಬೆಚ್ಚಿಬೀಳಿಸುವ ಸಂಗತಿ ಗೊತ್ತಾಗಿದ್ದು. ಭೂ ವಾತಾವರಣ ನಾವು ಅಂದುಕೊಂಡಷ್ಟು ನಿಧಾನವಾಗಿ ಹಾಳಾಗ್ತಿಲ್ಲ, ಈಗಾಗಲೇ ಭೂಮಿ ವಾತಾವರಣಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂಬ ಸುದ್ದಿ ರಿವೀಲ್ ಆಗಿದೆ. ಇದೇ ರೀತಿ ಇನ್ನೂ ಕೆಲವು ವರ್ಷಗಳ ಕಾಲ ಭೂಮಿಯ ವಾತಾವರಣ ಹಾಳಾಗುತ್ತಾ ಹೋಗಿದ್ದೆ ಆದರೆ, ಮನುಷ್ಯ ಸಂತತಿಗೆ ಕಂಟಕ ಗ್ಯಾರಂಟಿ. ಹೀಗಾಗಿಯೇ ತಕ್ಷಣ ಎಚ್ಚೆತ್ತುಕೊಳ್ಳಿ ಎಂದು ವರದಿಯಲ್ಲಿ ವಾರ್ನಿಂಗ್ ಕೊಡಲಾಗಿದೆ.
ಸಂಕಷ್ಟಕ್ಕೆ ಕೊನೆಯೇ ಇಲ್ವಾ..?
ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನ ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.
ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ..!
ಭೂಮಿ ಮೇಲೆ ತಾಪಮಾನ ಏರಿಕೆ ಹಾಗೂ ವಾತಾವರಣ ಬದಲಾವಣೆ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ. ವಿಜ್ಞಾನಿಗಳು ಅದೆಷ್ಟು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾಯಕನ ಸ್ಥಾನದಲ್ಲಿ ನಿಂತು, ಈ ಸಮಸ್ಯೆ ಬಗೆಹರಿಸಲು ಬಲಾಢ್ಯ ರಾಷ್ಟ್ರಗಳು ಮುಂದಾಗಬೇಕಿದೆ. ಅದರಲ್ಲೂ ಜಾಗತಿಕ ಶಕ್ತಿಗಳು ಎಂದೇ ಗುರುತಿಸಿಕೊಂಡಿರುವ ಅಮೆರಿಕ-ಚೀನಾ ಭೂಮಿ ತಾಪಮಾನ ನಿಯಂತ್ರಣಕ್ಕೆ ತರುವ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ. ಆದರೆ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ. ಈಗ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.