ಕಳೆದುಹೋಗಿಲ್ಲ ಇಮ್ರಾನ್; ಪಂಜಾಬ್ನಲ್ಲಿ ತಾಕತ್ತು ತೋರಿಸಿದ ಖಾನ್!
ಬಹುಮತ ಸಾಬೀತುಪಡಿಸಲಾಗದೇ ಅಧಿಕಾರ ಕಳೆದುಕೊಂಡಿದ್ದ ಇಮ್ರಾನ್ ಖಾನ್ ರಾಜಕೀಯ ಜೀವನ ಮುಗಿಯಿತು ಎಂದು ಭಾವಿಸಿದ್ದವರಿಗೆ ಅಚ್ಚರಿ ಎದುರಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಪ್ರಾಂತೀಯ ಉಪಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಬಹುತೇಕ ಕ್ಲೀನ್ ಸ್ವೀಪ್ ಮಾಡಿದೆ. 20 ಸ್ಥಾನಗಳಿಗೆ ನಡೆದ ಉಪಚನಾವಣೆಯಲ್ಲಿ ಪಿಟಿಐ ಬರೋಬ್ಬರಿ 15 ಸ್ಥಾನಗಳನ್ನು ಗೆದ್ದಿದೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಈ ಉಪಚುನಾವಣೆಯಲ್ಲಿ ಸಾಧಿಸಿದ ಗೆಲುವನ್ನು ಸಾಮಾನ್ಯವೆಂದು ಪರಿಗಣಿಸಲಾಗದು. ಪಂಜಾಬ್ ಪ್ರಾಂತ್ಯ ಷರೀಫ್ ಕುಟುಂಬದ ಭದ್ರಕೋಟೆ. ಮಾಜಿ ಪ್ರಧಾನಿ ನವಾಜ್ ಷರೀಫ್, ಹಾಲಿ ಪ್ರಧಾನಿ ಶಹಬಾಜ್ ಷರೀಫ್ ಅವರ ಪ್ರಾಬಲ್ಯ ಇರುವ ಪ್ರದೇಶ. ಇಲ್ಲಿ ಇಮ್ರಾನ್ ಖಾನ್ ಗೆದ್ದಿರುವುದು ಐತಿಹಾಸಿಕವಾದುದು.
ದಿವಾಳಿ ಅಂಚಿನಲ್ಲಿ ಪಾಕಿಸ್ತಾನ ಸೇರಿದಂತೆ 12 ದೇಶಗಳು
20 ಸ್ಥಾನಗಳ ಪೈಕಿ ಪಿಟಿಐ 15 ಸ್ಥಾನಗಳನ್ನು ಗೆದ್ದಿದೆ. ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷ ಕೇವಲ 4 ಸ್ಥಾನ ಗೆದ್ದಿದೆ. ಉಳಿದ 1 ಸ್ಥಾನ ಪಕ್ಷೇತರನ ಪಾಲಾಗಿದೆ. ಇದರೊಂದಿಗೆ ಶಹಬಾಜ್ ಷರೀಫ್ ಮಗ ಹಮ್ಜಾ ಷರೀಫ್ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಪಿಟಿಐ ಮತ್ತೊಮ್ಮೆ ಇಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಉಪಚುನಾವಣೆ ನಡೆದದ್ದು ಯಾಕೆ?
371 ಸದಸ್ಯ ಬಲದ ಪಂಜಾಬ್ ಪ್ರಾಂತ್ಯಕ್ಕೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ 159 ಸ್ಥಾನ ಗೆದ್ದಿತು. ನವಾಜ್ ಷರೀಫ್ ಬಣದ ಪಾಕಿಸ್ತಾನ್ ಮುಸ್ಲಿಮ್ ಲೀಗ್ ಪಕ್ಷ 164 ಸ್ಥಾನಗಳನ್ನು ಜಯಿಸಿತು. ಸರಕಾರ ರಚಿಸಲು ಬೇಕಿದ್ದದ್ದು 186 ಸ್ಥಾನ. ಹೀಗಾಗಿ ಅತಂತ್ರ ಸಭೆ ನಿರ್ಮಾಣವಾಯಿತು.
30 ಪಕ್ಷೇತರರ ಪೈಕಿ 25 ಮಂದಿ ಪಿಟಿಐಗೆ ಬೆಂಬಲ ಕೊಟ್ಟರು. ಪಿಟಿಐಗೆ ಸಂಖ್ಯೆ 184ಕ್ಕೆ ಏರಿತು. ನಂತರ ಪಿಎಂಎಲ್(ಕ್ಯೂ) ಪಕ್ಷದ 10 ಶಾಸಕರು ಬೆಂಬಲ ಕೊಟ್ಟರು. ಇದರೊಂದಿಗೆ ಪಿಟಿಐ ಸರಕಾರ ರಚಿಸಿತು.
ಇದೇ 2022 ಏಪ್ರಿಲ್ 30ರಂದು ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಿಟಿಐನಿಂದ 25 ಮಂದಿ ಶಾಸಕರು ಬಂಡಾಯ ಎದ್ದು ಹಮ್ಜಾ ಶಹಬಾಜ್ ಷರೀಫ್ರಿಗೆ ಬೆಂಬಲ ಕೊಟ್ಟರು.
ಆದರೆ, ಈ 25 ಬಂಡಾಯ ಶಾಸಕರನ್ನು ಪಾಕಿಸ್ತಾನದ ಚುನಾವಣಾ ಆಯೋಗ ಅನರ್ಹಗೊಳಿಸಿತು. ಇವರ ಪೈಕಿ 20 ಶಾಸಕರು ಸಾಮಾನ್ಯ ಸ್ಥಾನಗಳಿಂದ ಆಯ್ಕೆಯಾಗಿದ್ದರಿಂದ ಈ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಯಿತು.
ಬೆಂಗಳೂರಿಗೆ ಬಂದು ಐಎಸ್ಐ ಪರ ಗೂಢಚಾರಿಕೆ; ಪಾಕಿಸ್ತಾನೀ ಬಿಚ್ಚಿಟ್ಟ ರಹಸ್ಯ
ಇಮ್ರಾನ್ ಕೈಗೆ ಅಸ್ತ್ರ
ಪಂಜಾಬ್ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಭರ್ಜರಿ ಗೆಲುವು ಕಂಡಿರುವುದು ಇಮ್ರಾನ್ ಖಾನ್ ಅವರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಈಗ ಅವರು ಶೀಘ್ರ ಚುನಾವಣೆ ನಡೆಯಬೇಕೆಂದು ಮತ್ತೊಮ್ಮೆ ಕೂಗು ಹುಟ್ಟುಹಾಕುತ್ತಿದ್ದಾರೆ.
ಎದುರಾಳಿಗಳ ಭದ್ರಕೋಟೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಿರುವಾಗ ಪಾಕಿಸ್ತಾನದ ಇತರೆಡೆಯಲ್ಲಿ ಅಪಾರ ಜನಬೆಂಬಲ ತಮಗಿರಬಹುದು ಎಂಬ ಎಣಿಕೆ ಇಮ್ರಾನ್ ಖಾನ್ ಅವರದ್ದು. ತಾನು ಪಿಎಂ ಸ್ಥಾನದಿಂದ ಕೆಳಗಿಳಿಯುವಾಗಲೂ ಇಮ್ರಾನ್ ಖಾನ್ ಶೀಘ್ರ ಚುನಾವಣೆಗೆ ಒತ್ತಾಯ ಮಾಡಿದ್ದರು. ಇದೀಗ ಪಂಜಾಬ್ನಲ್ಲಿ ಗೆಲುವು ಕಂಡ ಬಳಿಕ ಅವರ ಧ್ವನಿ ಇನ್ನೂ ಗಟ್ಟಿಯಾಗಿದೆ.
ಇಕ್ಕಟ್ಟಿನಲ್ಲಿ ಷರೀಫ್ ಸರಕಾರ
ಶಾಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರಕಾರ ಈಗಾಗಲೇ ಸಾಕಷ್ಟು ಸಮಸ್ಯೆಗಳಿಂದ ನಲುಗಿ ಹೋಗುತ್ತಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಶ್ರೀಲಂಕಾದಂತೆ ಪಾಕಿಸ್ತಾನ ಕೂಡ ಯಾವಾಗ ಬೇಕಾದರೂ ದಿವಾಳಿಯಾಗುವ ಹಂತದಲ್ಲಿದೆ. ಶಾಹಬಾಜ್ ಷರೀಫ್ಗೆ ಇರುವ ಬಹುಮತ ಕೂಡ ಬಹಳ ಅಲ್ಪ. ಹೀಗಾಗಿ, ದುರ್ಬಲ ಪರಿಸ್ಥಿತಿಯಲ್ಲಿ ಸರಕಾರ ಚಾಲನೆಯಲ್ಲಿದೆ. ಇದು ಹೆಚ್ಚು ದಿನ ಮುಂದುವರಿಯುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಪಾಕಿಸ್ತಾನಿಗರು.
ಚುನಾವಣೆ ಸಾಧ್ಯತೆ ದಟ್ಟ
ಪಂಜಾಬ್ ಪ್ರಾಂತ್ಯದಲ್ಲಿ ಪಿಟಿಐ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ಪಿಎಂಎಲ್-ಎನ್ ಪಕ್ಷ ನಾಯಕ ರಾಣಾ ಸನಾವುಲ್ಲಾ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಇರುವುದು 2023ರ ನವೆಂಬರ್ ತಿಂಗಳಲ್ಲಿ. ಪ್ರಸಕ್ತ ವರ್ಷಾಂತ್ಯದೊಳಗೆಯೇ ಚುನಾವಣೆ ನಡೆಯಬಹುದು ಎಂದೆನ್ನಲಾಗುತ್ತಿದೆ.
ಲಾಹೋರ್ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಗೃಹ ಸಚಿವರೂ ಆದ ಸನಾವುಲ್ಲಾ, "ಪಾಕಿಸ್ತಾನದಲ್ಲಿ ಅವಧಿಗೆ ಮುನ್ನವೇ ಚುನಾವಣೆ ನಡೆಸಬೇಕಾ ಬೇಡವಾ ಎಂಬ ನಿರ್ಧಾರವನ್ನು ವಿವಿಧ ಪಕ್ಷಗಳೊಂದಿಗೆ ಸಮಾಲೋಚಿಸಿದ ಬಳಿಕ ಕೈಗೊಳ್ಳಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ಅನಿಶ್ಚಿತ ಸ್ಥಿತಿ
ಪಂಜಾಬ್ ಪ್ರಾಂತ್ಯದ ಸಿಎಂ ಸ್ಥಾನಕ್ಕೆ ಜುಲೈ 22ರಂದು ಚುನಾವಣೆ ನಡೆಯಲಿದೆ. ಇದೇ ವೇಳೆ ಪಂಜಾಬ್ನ ಉಪಚುನಾವಣೆಯಲ್ಲಿ ಪಿಟಿಐ ಪಕ್ಷ ಗೆದ್ದಿರುವುದು ಕೇಂದ್ರೀಯ ಚುನಾವಣೆಯ ಫಲಿತಾಂಶಕ್ಕೆ ದಿಗ್ಸೂಚಿಯಲ್ಲ ಎಂದು ಅಲ್ಲಿನ ರಾಜಕೀಯ ತಜ್ಞರು ಹೇಳುತ್ತಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಜನರ ಒಲವು ಎತ್ತ ಇದೆ ಎಂದು ಈಗಲೇ ಹೇಳುವುದು ಕಷ್ಟ ಎಂದೆನ್ನುವ ಇವರು, ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಯಾವ ಪಕ್ಷ ಬಂದರೂ ಬದಲಾಗದಂತೆ ಇದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ಪಾಕಿಸ್ತಾನಕ್ಕೆ ಐಎಂಎಫ್ ಸಾಲದ ಅಗತ್ಯತೆ ಇದೆ. ಅದಕ್ಕಾಗಿ ತೆರಿಗೆ ಏರಿಕೆ ಇತ್ಯಾದಿ ಕ್ರಮಗಳನ್ನು ಷರೀಫ್ ಸರಕಾರ ಕೈಗೊಂಡಿತು. ಇದೀಗ ಪಿಟಿಐ ಪಕ್ಷ ಪುಟಿದೆದ್ದು ನಿಲ್ಲುತ್ತಿರುವಂತೆಯೇ ಪಾಕಿಸ್ತಾನ ಸರಕಾರದ ಸುಧಾರಣಾ ಕ್ರಮಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಕಾಣಿಸುತ್ತಿದೆ.
(ಒನ್ಇಂಡಿಯಾ ಸುದ್ದಿ)